Site icon Vistara News

Vistara News Polling Booth: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸತತ 9ನೇ ಬಾರಿಯೂ ಅರಳಲಿದೆ ಕಮಲ!

Bangalore south vistara News polling booth

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ (Vistara News) ಶುಕ್ರವಾರ (ಮಾ. 22) ನಡೆಸಿದ ಪೋಲಿಂಗ್‌ ಬೂತ್‌ (Vistara news polling booth) ಜನಮತಗಣನೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ‌ ಮತ್ತೊಮ್ಮೆ ಬಿಜೆಪಿ ಮೇಲುಗೈ ಸಾಧಿಸಿದೆ. ಕ್ಷೇತ್ರದಿಂದ ಸಾವಿರಾರು ಕರೆಗಳು ಬಂದಿದ್ದು, ಇವುಗಳ ಪೈಕಿ ಒಟ್ಟು 5594 ಕರೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಶೇ. 58ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಶೇ.42ರಷ್ಟು ಜನರು ಕಾಂಗ್ರೆಸ್‌ ಪರ ಒಲವು ತೋರಿದ್ದಾರೆ.

ವಿಸ್ತಾರ ನ್ಯೂಸ್‌ ನಡೆಸಿದ ಈ ಸಮೀಕ್ಷೆಗೆ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಸಾವಿರಾರು ಕರೆಗಳು ಬಂದಿವೆ. ಅದರಲ್ಲಿ ಸ್ವೀಕರಿಸಿದ ಒಟ್ಟು 5594 ಕರೆಗಳ ಪೈಕಿ ಬಿಜೆಪಿಗೆ 3245 ಮತ, ಕಾಂಗ್ರೆಸ್‌ಗೆ 2349 ಮತ ಬಂದಿವೆ. ಇದರಿಂದ ಇಲ್ಲಿ ಮತ್ತೊಮ್ಮೆ ಬಿಜೆಪಿಯೇ ವಿಜಯಭೇರಿ ಮೊಳಗಿಸಲಿದೆ ಎಂಬುವುದು ಹೆಚ್ಚಿನ ಜನರ ಅಭಿಪ್ರಾಯವಾಗಿದೆ.

ಕರೆಗಳ ಶೇಕಡಾವಾರು ವಿವರ

ಸ್ವೀಕರಿಸಿದ ಕರೆಗಳು : 5594
ಬಿಜೆಪಿ : 3245 (ಶೇ.58)
ಕಾಂಗ್ರೆಸ್ : 2349 (ಶೇ.42)
ಇತರೆ : 00

ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ತೇಜಸ್ವಿ ಸೂರ್ಯ ಕಣಕ್ಕಿಳಿಯುತ್ತಿದ್ದು, ಕಾಂಗ್ರೆಸ್‌ನಿಂದ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, 1991ರಿಂದ 2019ರವರೆಗೆ ಸತತವಾಗಿ 8 ಬಾರಿ ಬಿಜೆಪಿ ಜಯಭೇರಿ ಮೊಳಗಿಸಿದೆ.

ಬಿಜೆಪಿ ಮಾಜಿ ಸಚಿವ ದಿವಗಂತ ಅನಂತ್ ಕುಮಾರ್ ಅವರು ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಹಿಡಿತವನ್ನು ಹೊಂದಿದ್ದರು. ಅವರ ಜನಪ್ರಿಯತೆ ಹಾಗೂ ಮೋದಿ ಅವರ ನಾಮಬಲದ ಮೇಲೆ ಕಳೆದ ಎರಡು ಬಾರಿಯೂ ಕ್ಷೇತ್ರದಲ್ಲಿ ಕಮಲ ಅರಳಿತ್ತು. ಸತತ 6 ಬಾರಿ ಅನಂತ ಕುಮಾರ್‌ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಲೋಕಸಭೆಗೆ ಆಯ್ಕೆಯಾಗಿದ್ದರು. 2019ರಲ್ಲಿ ಸಂಸದ ತೇಜಸ್ವಿ ಸೂರ್ಯ ಗೆಲುವು ಕಂಡಿದ್ದರು.

ಕ್ಷೇತ್ರದಲ್ಲಿ ಬ್ರಾಹ್ಮಣ ಮತ-3,50,000, ಒಕ್ಕಲಿಗ ಮತ-5,00,000, ಎಸ್ ಸಿ, ಎಸ್ ಟಿ 6,00,000, ಮುಸ್ಲಿಂ 3,00,000, ಕ್ರಿಶ್ಚಿಯನ್ 2,00,000, ಇತರೆ 2 ಲಕ್ಷ ಮತದಾರರಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ ಬಿಜೆಪಿಯೇತರ ಅಭ್ಯರ್ಥಿ ಗೆಲುವು ಸಾಧಿಸಬೇಕಿತ್ತಲ್ಲವೇ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ ಇಲ್ಲಿ ನಗರ ಕೇಂದ್ರಿತ ಮತದಾರರು ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದ್ದಾರೆ.

1977ರಿಂದ 2019ರವರೆಗೆ ನಡೆದಿರುವ 12 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಬಾರಿ ಮಾತ್ರ ಗೆಲುವು ಕಂಡಿದ್ದು, ಇತರ ಪಕ್ಷಗಳು ಮೂರು ಬಾರಿ ಹಾಗೂ ಬಿಜೆಪಿ 8 ಬಾರಿ ಗೆಲುವು ಕಂಡಿವೆ. ಇದೀಗ ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ ಸಮೀಕ್ಷೆ ಪ್ರಕಾರ ಈ ಬಾರಿಯೂ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ | Vistara News Polling Booth: ಚಿತ್ರದುರ್ಗದಲ್ಲಿ ಮತ್ತೆ ಬಿಜೆಪಿ ಮೇಲುಗೈ; ಕಾಂಗ್ರೆಸ್‌ಗೆ ಹಿನ್ನಡೆ

ಮಾರ್ಚ್‌ 23, ಶನಿವಾರ ಯಾವ ಕ್ಷೇತ್ರ?

ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಚಿಕ್ಕೋಡಿ ಮತ್ತು ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ವಿಜಯಪುರ ಕ್ಷೇತ್ರದ ಜನ ಫೋನ್‌ ಮಾಡಿ ಓಟ್‌ ಮಾಡಬಹುದು. ಮಧ್ಯಾಹ್ನ 2 ಮತ್ತು ರಾತ್ರಿ 8 ಗಂಟೆಗೆ ಎರಡೂ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ಏನಿದು ಪೋಲಿಂಗ್‌ ಬೂತ್‌?

ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್‌ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್‌ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್‌ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.

ಇದನ್ನೂ ಓದಿ: Vistara news polling booth : ಬೀದರ್‌ನಲ್ಲಿ ಹೆಚ್ಚಿದ ಕಾಂಗ್ರೆಸ್‌ ಖದರ್‌; ಹಾಲಿ ಸಂಸದ ಖೂಬಾಗೆ ಹಿನ್ನಡೆ?

ಪೋಲಿಂಗ್‌ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್‌ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488

Exit mobile version