Site icon Vistara News

Citizenship Amendment Act : ಸಿಎಎ ಎಂದರೇನು? ಕಾನೂನು ಜಾರಿ ಮಾಡಿದ್ದು ಯಾಕೆ? ಇಲ್ಲಿದೆ ಎಲ್ಲ ವಿವರ

Amith Shah

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ, 2019 (Citizenship Amendment Act) ನಿಯಮಗಳ ಜಾರಿಗೆ ಕೇಂದ್ರ ಸರ್ಕಾರ ಸೋಮವಾರ ಸಂಜೆ ವೇಳೆಗೆ (ಮಾರ್ಚ್​ 11ರಂದು) ಅಧಿಸೂಚನೆ ಹೊರಡಿಸಿದೆ. 2019 ರಲ್ಲಿ ಅಂಗೀಕರಿಸಲಾದ ಈ ಕಾನೂನನ್ನು ಲೋಕಸಭಾ ಚುನಾವಣೆಗೆ (Lok Sabha Election) ಮೊದಲು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಹೇಳಿದ್ದರು. ಅದಾಗಿ ಕೆಲವೇ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಮೂಲಕ ಬಿಜೆಪಿ ತನ್ನ ಚುನಾವಣಾ ಭರವಸೆಯನ್ನು ಈಡೇರಿಸಿದೆ.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯುವುದನ್ನು ಸಿಎಎ ಜಾರಿಯಿಂದ ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಲಾಗಿರಲಿಲ್ಲ.

ಕಾಯ್ದೆಯ 2019 ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಸಿಎಎ ಜಾರಿ ವಿವರ ಇಲ್ಲಿದೆ

ಸಿಎಎಯನ್ನು 2019 ರ ಡಿಸೆಂಬರ್ 11 ರಂದು ಸಂಸತ್ತು ಅಂಗೀಕರಿಸಿತು. ಅದೇ ವರ್ಷದ ಡಿಸೆಂಬರ್ 12 ರಂದು ಅಧಿಸೂಚನೆ ಹೊರಡಿಸಲಾಯಿತು. ಆದಾಗ್ಯೂ, ನಿಯಮಗಳನ್ನು ಸೂಚಿಸದ ಕಾರಣ ಕಾಯ್ದೆಯನ್ನು ಜಾರಿಗೆ ತರಲು ತಡವಾಯಿತು.

ಇದನ್ನೂ ಓದಿ : Mission Divyastra : ಐತಿಹಾಸಿಕ ಮಿಲಿಟರಿ ಸಾಧನೆ, ದೇಶೀಯವಾಗಿ ನಿರ್ಮಿಸಿದ ಅಗ್ನಿ -5 ಕ್ಷಿಪಣಿ ಸಕ್ಸೆಸ್‌ ಘೋಷಿಸಿದ ಮೋದಿ

ಕಾಯ್ದೆಯನ್ನು ತಿದ್ದುಪಡಿ ಮಾಡಿದ ನಾಲ್ಕು ವರ್ಷಗಳ ನಂತರ, ಕೇಂದ್ರ ಗೃಹ ಸಚಿವಾಲಯವು 2024 ರ ಏಪ್ರಿಲ್-ಮೇ ತಿಂಗಳಲ್ಲಿ ನಿಗದಿಯಾಗಿರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸಿಎಎ ನಿಯಮಗಳನ್ನು ಜಾರಿಗೆ ತಂದಿದೆ.

ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯ ಪ್ರಕಾರ ಏಪ್ರಿಲ್ 1, 2021ರಿಂದ ಡಿಸೆಂಬರ್ 31, 2021 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಈ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಟ್ಟು 1,414 ವಿದೇಶಿಯರಿಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ಜೋರು ಪ್ರತಿಭಟನೆ

ಡಿಸೆಂಬರ್ 2019 ರಿಂದ ಫೆಬ್ರವರಿ 2020 ರವರೆಗೆ ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಗಳ ಅಲೆ ಇತ್ತು. ಇದು ಅಂತಿಮವಾಗಿ ಈಶಾನ್ಯ ದೆಹಲಿ ಗಲಭೆಗಳಿಗೆ ಕಾರಣವಾಯಿತು. ಗಲಭೆಯಲ್ಲಿ 13 ಜನರು ಪ್ರಾಣ ಕಳೆದುಕೊಂಡರು. ಅನೇಕ ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಡಜನ್​​ಗಟ್ಟಲೆ ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಅಂತಿಮವಾಗಿ, ಯುಎನ್ ಹೈಕಮಿಷನ್ ಹಿಂಸಾಚಾರವನ್ನು ಗಮನಿಸಿತು. ಮಾರ್ಚ್ 3, 2020 ರಂದು ಸುಪ್ರೀಂ ಕೋರ್ಟ್​​ನಲ್ಲಿ ಹಸ್ತಕ್ಷೇಪ ಅರ್ಜಿ ಸಲ್ಲಿಸಿತು.

2019 ರಲ್ಲಿ ಕಾನೂನನ್ನು ಅಂಗೀಕರಿಸಿದ ನಂತರ ಕೇಂದ್ರ ಗೃಹ ಸಚಿವಾಲಯವು ಅರ್ಹರಿಗೆ ಪೌರತ್ವ ನೀಡುವ ಅರ್ಜಿಗಳನ್ನು ಸಲ್ಲಿಸಲು ನಿಯಮಗಳನ್ನು ರೂಪಿಸುವ ಸಲುವಾಗಿ ಸಮಯ ತೆಗೆದುಕೊಂಡಿತು.

ನಿಯಮಗಳ ಪ್ರಕಾರ, ಕಾನೂನಿನ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಆನ್​ಲೈನ್ ಮೂಲಕ ಮಾಡಲಾಗುತ್ತದೆ.

ರಾಜ್ಯಗಳ ವಿರೋಧ

ಸಿಎಎ ಜಾರಿಗೆ ತರಲಾಗುವುದು ಎಂಬ ಭರವಸೆಯನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಮತ್ತು ವಿವಿಧ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯ ಪ್ರಮುಖ ಭರವಸೆಯಾಗಿತ್ತು. ಬಂಗಾಳದಲ್ಲಿ 2021 ರ ಚುನಾವಣೆ ವೇಳೆಯೂ ಪ್ರತಿಫಲಿಸಿತ್ತು. ಆದರೆ ಬಿಜೆಪಿಯೇತರ ರಾಜ್ಯಗಳಲ್ಲಿ ಆರಂಭದಿಂದಲೂ ಈ ಕಾಯಿದೆ ಬಗ್ಗೆ ವಿರೋಧ ವ್ಯಕ್ತಗೊಳ್ಳುತ್ತಿವೆ.

ಡಿಸೆಂಬರ್​ನಲ್ಲಿ ಬಂಗಾಳದಲ್ಲಿ ನಡೆದ ರ್ಯಾಲಿಯಲ್ಲಿ, ಅಮಿತ್ ಶಾ ವಿರುದ್ಧ ಇದೇ ವಿಚಾರವಾಗಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು. ನಮ್ಮ ರಾಜ್ಯದಲ್ಲಿ ಅದನ್ನು ಜಾರಿಗೆ ತರುವುದಿಲ್ಲ ಎಂದು ಹೇಳಿದ್ದರು. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಕೂಡ ಇದೇ ರೀತಿ ಹೇಳಿಕೆ ನೀಡಿದ್ದಾರೆ.

ಕೇರಳ ಮತ್ತು ಪಂಜಾಬ್​ನಂಥ ಇತರ ರಾಜ್ಯಗಳು ಮತ್ತು ಆಗ ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್​​ಗಢದಂತ ಇತರ ರಾಜ್ಯಗಳು ಸಹ ಸಿಎಎ ವಿರೋಧಿಸಿ ನಿರ್ಣಯಗಳನ್ನು ಅಂಗೀಕರಿಸಿದವು. ವಾಸ್ತವವಾಗಿ, ಬಂಗಾಳ ಮತ್ತು ಕೇರಳ ಸರ್ಕಾರಗಳು ಇದಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿಲ್ಲಿಸಿವೆ.

ತೆಲಂಗಾಣದಲ್ಲಿ, ಆಗಿನ ಆಡಳಿತಾರೂಢ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ ಕೂಡ ಇದರ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದ್ದರು. ಈಗ ಅಲ್ಲಿ ಕಾಂಗ್ರೆಸ್​ ಸರ್ಕಾರವಿದೆ. ಆ ಪಕ್ಷವೂ ಅದೇ ನಿಲುವು ಹೊಂದಿದೆ.

ಮುಸ್ಲಿಂ ಪ್ರಾಬಲ್ಯದ ದೇಶಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳದಿಂದಾಗಿ ಪಲಾಯನ ಮಾಡಿದರೆ ಪೌರತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯ್ದೆ ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಆದಾಗ್ಯೂ, ಇದು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಕಾನೂನಿನ ವಿರೋಧಿಗಳು ಹೇಳುತ್ತಿದ್ದಾರೆ.

Exit mobile version