Site icon Vistara News

Karnataka Weather : ಗುಡುಗು ಮಿಂಚು ಸಹಿತ ಮಳೆ; ಹವಾಮಾನ ಇಲಾಖೆ ಸೂಚನೆ

Thunderstorm likely to occur at isolated places over Coastal Karnataka

ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿಯ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka weather Forecast) ನೀಡಿದೆ. ಜತೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಯಾದ್ಯಂತ ಮಳೆಯ ಸಿಂಚನವಾಗಲಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರದಲ್ಲಿ ಶುಷ್ಕ ವಾತಾವರಣ ಇರಲಿದ್ದು, ಈ ಎರಡು ಜಿಲ್ಲೆಗಳನ್ನು ಹೊರೆತುಪಡಿಸಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ತುಮಕೂರು, ಕೋಲಾರ, ದಾವಣಗೆರೆ, ಚಿತ್ರದುರ್ಗದಲ್ಲಿ ಮಳೆಯಾಗುವ ಸಾಧ್ಯತೆಇದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆ ಬೆಳಗಿನ ಜಾವ ದಟ್ಟ ಮಂಜು ಆವರಿಸಲಿದೆ. ಗರಿಷ್ಠ ಉಷ್ಣಾಂಶ 27 ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಇದನ್ನೂ ಓದಿ: Winter Superfoods: ಚಳಿಗಾಲಕ್ಕೆ ಸೂಕ್ತವಾದ ಆಹಾರಗಳು ಯಾವವು?

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 28 ಡಿ.ಸೆ -17 ಡಿ.ಸೆ
ಮಂಗಳೂರು: 34 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 29 ಡಿ.ಸೆ – 16 ಡಿ.ಸೆ
ಗದಗ: 32 ಡಿ.ಸೆ – 14 ಡಿ.ಸೆ
ಹೊನ್ನಾವರ: 36 ಡಿ.ಸೆ- 21 ಡಿ.ಸೆ
ಕಲಬುರಗಿ: 32 ಡಿ.ಸೆ – 18 ಡಿ.ಸೆ
ಬೆಳಗಾವಿ: 32 ಡಿ.ಸೆ – 15 ಡಿ.ಸೆ
ಕಾರವಾರ: 36 ಡಿ.ಸೆ – 22 ಡಿ.ಸೆ

ಕರಾವಳಿ, ಮಲೆನಾಡಿನಲ್ಲಿ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

ಕಾರವಾರ/ ಉಡುಪಿ: ಕರಾವಳಿ ಕರ್ನಾಟಕದ (Coastal Karnataka) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮುಂಜಾನೆಯಿಂದ ಧಾರಾಕಾರ ಮಳೆ (Heavy Rain) ಸುರಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಸ್ತುಶಃ ವರುಣಾರ್ಭಟ (Rain News) ಕಂಡುಬಂದಿದೆ. ಶಿವಮೊಗ್ಗ ಭಾಗದಲ್ಲೂ ಮಳೆ ಸುರಿದಿದೆ.

ಉತ್ತರಕನ್ನಡ ಕರಾವಳಿಯಲ್ಲಿ ದಿಢೀರ್ ವರುಣನ ಆರ್ಭಟ ಕಾಣಿಸಿಕೊಂಡಿದ್ದು ಕಾರವಾರದಲ್ಲಿ ಬೆಳಿಗ್ಗೆಯಿಂದ ಧಾರಾಕಾರವಾಗಿ ಸುರಿಯುತ್ತಿದೆ.

ಬೆಳಗ್ಗೆಯೇ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದು ಒಂದು ಕಡೆಯಾದರೆ, ಶಾಲೆ, ಕೆಲಸಕ್ಕೆ ತೆರಳುವವರಿಗೆ ತೊಂದರೆಯಾಗಿದೆ.

ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಬುಧವಾರದಿಂದಲೇ ಮೋಡ ಕವಿದ ವಾತಾವರಣ ಇತ್ತು. ಘಟ್ಟದ ಮೇಲಿನ ಕೆಲವು ತಾಲೂಕುಗಳಲ್ಲಿ ಮಳೆಯ ಸಿಂಚನವಾಗಿದೆ. ಕಾರವಾರ, ಅಂಕೋಲಾ ಸೇರಿ ಹಲವು ತಾಲ್ಲೂಕುಗಳಲ್ಲಿ ಎಲ್ಲ ಕಡೆ ಮಳೆಯ ವಾತಾವರಣ ಇದೆ.

ಉಡುಪಿ ಉಡುಪಿಯಲ್ಲಿ ರಾತ್ರಿಯಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಉಡುಪಿ, ಬೈಂದೂರು- ಹೆಬ್ರಿಯಲ್ಲಿ ವರ್ಷಧಾರೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲವು ಕಡೆಗಳಲ್ಲಿ ಮಳೆ ಬಿದ್ದಿದೆ. ಭಾರಿ ಪ್ರಮಾಣದ ಗಾಳಿಯೂ ಕಾಣಿಸಿಕೊಂಡಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ಇಲ್ಲಿ ಸ್ವಲ್ಪ ನೆಮ್ಮದಿ ಕಂಡುಬಂದಿದೆ. ಈ ಬಾರಿ ಮಳೆ ಇಲ್ಲದೆ ಈಗಾಗಲೇ ಬಾವಿ ಕೆರೆಗಳಲ್ಲಿ ನೀರು ಕಡಿಮೆಯಾಗಿದೆ, ಅದರ ನಡುವೆ ಮಳೆ ಬಿದ್ದಿರುವುದು ಸ್ವಲ್ಪ ಮಟ್ಟಿಗೆ ನಿರಾಳತೆ ನೀಡಿದೆ. ಅದರಲ್ಲೂ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪಿನ ಅನುಭವವಾಗಿದೆ.

ಮಲೆನಾಡಿನಲ್ಲಿ ಮೊದಲ ಮಳೆ ಹನಿ

ರಿಪ್ಪನ್ ಪೇಟೆ : ಪ್ರಸ್ತುತ ಬೆಳಗಿನಜಾವ ಮೈ ಕೊರೆಯುವಂತೆ ಚಳಿ ಕಾಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಬಿರು ಬಿಸಿಲು ಬರುತ್ತದೆ. ಇದರ ಮಧ್ಯೆ ಬುಧವಾರ ರಾತ್ರಿ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯುವ ಮೂಲಕ ಈ ವರ್ಷದ ಮೊದಲ ಮಳೆ ಹನಿ ಭೂಮಿಯನ್ನು ಸ್ಪರ್ಶಿಸಿ ಅಚ್ಚರಿ ಮೂಡಿಸಿದ್ದು,‌ ಬೇಸಿಗೆಯ ಜಳಕ್ಕೆ ಬೇಸತ್ತಿದ್ದ ಜನರು ಮಳೆ ಸುರಿದು ವಾತಾವರಣ ತಂಪಾದ ಕಾರಣ ಖುಷಿಗೊಂಡಿದ್ದಾರೆ.

ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ತಡರಾತ್ರಿ 2:30ರ ಸುಮಾರಿಗೆ ಹೊಸನಗರ ತಾಲೂಕಿನ ಹಲವೆಡೆ ಆರಂಭವಾದ ಮಳೆ ಹೊಸನಗರ, ನಗರ, ನಿಟ್ಟೂರು, ರಿಪ್ಪನ್‌ಪೇಟೆ, ಹುಂಚ, ಕೋಡೂರು, ಗರ್ತಿಕೆರೆ ಭಾಗಗಳಲ್ಲಿ ಸುರಿದಿದೆ. ಇಂದು ಬೆಳಗ್ಗೆ ಸಹ ಮೋಡ ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆ ಬೀಳುತ್ತಿದೆ‌.

ಇನ್ನೂ ಕಾಫಿ, ಕಾಳುಮೆಣಸು, ಅಡಿಕೆ, ಭತ್ತದ ಫಸಲು ಕಟಾವು ಕಾರ್ಯ ನಡೆಯುತ್ತಿದ್ದು ಒಂದೆಡೆ ಮಳೆ ವರವಾದರೆ ಮತ್ತೊಂದೆಡೆ ಶಾಪವಾಗಿ ಪರಿಣಮಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version