Site icon Vistara News

BBK Season 10 : ಸಂಗೀತಾ ಯು ಆರ್‌ ರಾಂಗ್;‌ ಡಾಮಿನೆನ್ಸ್‌ ಕ್ವೀನ್‌ ಕಿವಿ ಹಿಂಡಿದ ಕಿಚ್ಚ

Sangeetha Shringeri and Kiccha Sudeep

ಬೆಂಗಳೂರು: ಫ್ಲಿಪ್‌ ಎಂಬ ಪದವನ್ನು ಇಟ್ಟುಕೊಂಡು ಎರಡು ದಿನಗಳ ಕಾಲ ತನಿಷಾ (Tanisha Kuppanda) ಮತ್ತು ಕಾರ್ತಿಕ್‌ (Kartik Mahesh) ಅವರನ್ನು ಕಾಡಿದ, ಇಬ್ಬರೂ ಕಣ್ಣೀರು ಹಾಕುವಂತೆ ಮಾಡಿ ಕೊನೆಗೆ ತಾನು ಮಾತ್ರ ಸೇಫ್‌ ಆಗಿ ಸಂಭ್ರಮಿಸಿದ ಸಂಗೀತಾ ಶೃಂಗೇರಿ (Sangeeta Shringeri) ಅವರಿಗೆ ಕಿಚ್ಚ ಸುದೀಪ್‌ (Kiccha Sudeep) ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀವು ಮೂವರೂ ಹೊರಗಡೆ ತುಂಬ ಕೆಟ್ಟದಾಗಿ ಕಾಣಿಸುತ್ತಿದ್ದೀರಿ. ಒಬ್ಬರು ಓವರ್ ಡಾಮಿನೆಂಟ್‌ ಆಗಿ ಕಾಣಿಸುತ್ತಿದ್ದೀರಿ. ಒಬ್ಬರು ತುಂಬಾ ವೀಕ್ ಆಗಿ ಕಾಣಿಸುತ್ತಿದ್ದೀರಿ. ಇನ್ನೊಬ್ಬರು ವಿಧಿನೇ ಇಲ್ಲದೆ, ತಲೆ ಇಲ್ಲದೆ ಆಡ್ತಿರೋರ ಹಾಗೆ ಕಾಣಿಸುತ್ತಿದ್ದೀರಿ. ಹೀಗೆ ಮಾಡಿದರೆ ಡೆಡ್‌ ಎಂಡ್‌ಗೆ ಹೋಗುವುದು ಮೂವರಿಗೂ ಕಷ್ಟ ಆಗುತ್ತದೆ. ಆ ದಿನ ನೀವು ನನ್ನ ಮಾತು ನೆನಪಿಸಿಕೊಳ್ತೀರಿ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

‘ಬಿಗ್ ಬಾಸ್‌ ಕನ್ನಡ ಸೀಸನ್‌ 10’ (BBK Season 10) ಇದರ ಆರನೇ ವಾರದ ʻವಾರದ ಕಥೆ ಕಿಚ್ಚನ ಜತೆʼ ಸಂಚಿಕೆಯಲ್ಲಿ ತುಂಬಾ ಹೊತ್ತು ಸಂಗೀತಾ – ಕಾರ್ತಿಕ್ – ತನಿಷಾ ನಡುವಿನ ಸ್ನೇಹ ಮತ್ತು ವಾದ ವಿವಾದಗಳ ಚರ್ಚೆ ನಡೆಯಿತು. ‘’ಫ್ರೆಂಡ್‌ ಆಗಿ ಅವಕಾಶವಿದ್ದರೂ ನನ್ನನ್ನ ಸೇಫ್‌ ಮಾಡಲಿಲ್ಲ’’ ಎಂದು ಪದೇಪದೆ ಕಾರ್ತಿಕ್ ಮತ್ತು ತನಿಷಾ ಅವರನ್ನು ಚುಚ್ಚಿದ ಸಂಗೀತಾ ಅವರನ್ನು ಕಿಚ್ಚ ಸುದೀಪ್‌ ʻಯೂ ಆರ್‌ ರಾಂಗ್‌ʼ ಅಂತ ನೇರವಾಗಿಯೇ ಹೇಳಿದರು. ಏನೇ ಹೇಳಿದರೂ ಕೇಳದೆ ವಾದವನ್ನೇ ಮುಂದುವರಿಸಿದ ಸಂಗೀತಾ ಅವರಿಗೆ ಕಿಚ್ಚ ಚೆನ್ನಾಗಿಯೇ ಕ್ಲಾಸ್‌ ತೆಗೆದುಕೊಂಡರು. ಫ್ರೆಂಡ್‌ಷಿಪ್‌ ಅಂತ ಹೇಳ್ತಾ ಉಳಿದವರ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಡಾಮಿನೆನ್ಸ್‌ ಮಾಡುವ ನೀವು ಫ್ರೆಂಡ್‌ ಆಗಿ 100% ಕೊಟ್ಟಿದ್ದೀರಾ ಎಂದು ನೇರವಾಗಿಯೇ ಕೇಳಿದರು.

ಕಳೆದ ವಾರದ ಲುಡೋ ಟಾಸ್ಕ್‌ನಲ್ಲಿ ಸಂಗೀತಾ, ಕಾರ್ತಿಕ್‌ ಮತ್ತು ತನಿಷಾ ಒಂದು ಗ್ರೂಪ್‌ ಆಗಿದ್ದರು. ಆಟದ ನಡುವೆ ಈ ಗ್ರೂಪ್‌ಗೆ SWAP ಎನ್ನುವ ಆಪ್ಶನ್‌ ಸಿಕ್ಕಾಗ ಅತಿ ಹೆಚ್ಚು ಸೇಫ್‌ ಆಗಿದ್ದ, HOMEಗೆ ಹೋಗಲು ಕೇವಲ ಎರಡನೇ ನಂಬರ್‌ ಅಗತ್ಯವಿದ್ದ ವರ್ತೂರು ಸಂತೋಷ್‌ ಅವರ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆಗ ಸಂಗೀತಾ ತಾನು ಹೋಗುವುದಾಗಿ ಹೇಳಿದ್ದರು. ತನಿಷಾ ಮತ್ತು ಕಾರ್ತಿಕ್‌ ಯಾವ ಮಾತೂ ಇಲ್ಲದೆ ಒಪ್ಪಿ ಸಂಗೀತಾರನ್ನು ಕಳುಹಿಸಿಕೊಟ್ಟಿದ್ದರು. ವರ್ತೂರು ಬಂದು ತನಿಷಾ ಮತ್ತು ಕಾರ್ತಿಕ್‌ ಜತೆ ಸೇರಿದ್ದರು.

ಮುಂದಿನ ಹಂತದಲ್ಲಿ ಈ ಗ್ರೂಪ್‌ಗೆ ಒಬ್ಬರನ್ನು ಸೇವ್‌ ಮಾಡುವ ಅವಕಾಶ ಸಿಕ್ಕಾಗ ಕಾರ್ತಿಕ್‌ ಮತ್ತು ತನಿಷಾ ಸಂಗೀತಾ ಅವರ ಹೆಸರು ಎತ್ತಿಕೊಳ್ಳಲು ಮುಂದಾದರಾದರೂ ವರ್ತೂರು ಸಂತೋಷ್‌ ಅವರು ಈ ವಿಚಾರದಲ್ಲಿ ನನ್ನ ಜತೆಗೂ ಚರ್ಚೆ ಮಾಡಿ ಎಂದು ಸೂಚಿಸಿದರು. ಆದರೆ, ಮೂವರ ಚರ್ಚೆಯ ಹಂತದಲ್ಲಿ ಸಂಗೀತಾ ಹೆಸರು ಬರಲಿಲ್ಲ. ಬದಲಾಗಿ ನೀತು ಮತ್ತು ಸಿರಿ ಅವರ ಹೆಸರು ಬಂದು ಸಿರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆಗ ಸಂಗೀತಾ ʻಫ್ಲಿಪ್‌ʼ ಎಂಬ ಪದವನ್ನು ಬಳಸಿ ಕಾರ್ತಿಕ್‌ ಮತ್ತು ತನಿಷಾ ಅವರನ್ನು ಛೇಡಿಸಿದ್ದರು. ಮುಂದೆಯೂ ಬೆಂಬಿಡದೆ ಕಾಡಿದ್ದರು. ಫ್ರೆಂಡ್‌ ಆಗಿ ನೀವು ನನ್ನನ್ನು ಸೇಫ್‌ ಮಾಡದೆ ಸಿರಿ ಅವರನ್ನು ಆಯ್ಕೆ ಮಾಡುವ ಮೂಲಕ ಬಣ್ಣ ಬದಲಿಸಿದಿರಿ ಎಂದು ಹೇಳಿದ್ದರು. ಕಾರ್ತಿಕ್‌ ಮತ್ತು ತನಿಷಾ ಹೇಗೆ ಹೇಗೆ ವಿವರಿಸಿದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಇದೆಲ್ಲ ವಿಚಾರಗಳು ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಗೆ ಬಂತು.

ನಿಮಗೂ ಅವಕಾಶ ಸಿಕ್ಕಿತ್ತು, ನೀವ್ಯಾಕೆ ನಿಮ್ಮ ಫ್ರೆಂಡ್ಸ್‌ ಹೆಸರು ತೆಗೆದುಕೊಂಡಿಲ್ಲ!

ಲೂಡೋ ಆಟದ ವೇಳೆ ಸಂತೋಷ್‌ ಅವರ ಜತೆ ಪ್ಲೇಸ್‌ ಸ್ವಾಪ್‌ ಮಾಡುವ ಹಂತದಲ್ಲಿ ನಾನು ಹೋಗ್ತೀನಿ ಅಂತ ಸಂಗೀತಾ ಮುಂದಾಗಿದ್ದನ್ನು ಉಲ್ಲೇಖಿಸಿದ ಸುದೀಪ್‌, ಆ ಜಾಗಕ್ಕೆ ಹೋಗುವ ವಿಚಾರದಲ್ಲಿ ನೀವು ಕಾರ್ತಿಕ್‌ ಮತ್ತು ತನಿಷಾ ಜತೆ ಚರ್ಚೆ ಮಾಡಿದ್ರಾ ಎಂದು ಕೇಳಿದರು. ಆಗ ಸಂಗೀತಾ ʻಅವರೂ ಕೇಳಬಹುದಿತ್ತುʼ ಎಂದರು. ಆಗ ಸುದೀಪ್‌, ವಾರವಿಡೀ ‘ನೀನೂ ಕೇಳಬಹುದಿತ್ತು’ ಅಂತ ನೀವು ತುಂಬಾ ಸಲ ಹೇಳಿದ್ದೀರಿ. ಆದ್ರೆ ನೀವ್ಯಾಕೆ ಕೇಳಲಿಲ್ಲ? ಎಂದು ಪ್ರಶ್ನಿಸಿದರು.

ಆಗ ಸಂಗೀತ- ‘ನೀನು ಹೋಗು’ ಅಂದ್ಮೇಲೆ ನಾನು ಇನ್ನೇನು ಕೇಳಲಿ? ಎಂದು ಪ್ರಶ್ನಿಸಿದರು. ನೀವು ಹೋಗ್ತೀನಿ ಎಂದಾಗ ‘’ಹೋಗಬೇಡ’’ ಅನ್ನೋಕೆ ಅವರಿಗೆ ಮನಸ್ಸಾಗಲಿಲ್ಲ. ಒಬ್ಬ ಫ್ರೆಂಡ್‌ ಹೋಗಲು ಇಷ್ಟಪಟ್ಟರು. ಬಾಕಿ ಇಬ್ಬರು ಅದಕ್ಕೆ ಸ್ಪಂದಿಸಿದರು. ‘’ನಾನೂ ಹೋಗಬೇಕು’’ ಅಂತ ಹೇಳುವ ಮನಸ್ಸು ಇಬ್ಬರಿಗೂ ಇರಲಿಲ್ಲ ಎಂದು ವಿವರಿಸಿದರು.

ಕಾರ್ತಿಕ್‌ ಮತ್ತು ತನಿಷಾ ತಮಗೂ ಅಲ್ಲಿಗೆ ಹೋಗಬೇಕು ಅನ್ನೋ ಮನಸಿತ್ತು. ಆದರೆ, ಸಂಗೀತಾ ಆಸಕ್ತಿ ತೋರಿಸಿದಾಗ ಬೇಡ ಅನ್ನಲಾಗಲಿಲ್ಲ. ಅದಕ್ಕೆ ಬಿಟ್ಟುಕೊಟ್ಟೆವು ಎಂದರು.

ಲುಡೋ ಆಟದಲ್ಲಿ ನಿಮಗೂ ಒಬ್ಬರನ್ನು ಸೇಫ್‌ ಮಾಡುವ ಅವಕಾಶ ಸಿಕ್ಕಿತ್ತು. ಆಗ ನೀವ್ಯಾಕೆ ನಿಮ್ಮ ಫ್ರೆಂಡ್ಸ್ ಹೆಸರು ತೆಗೆದುಕೊಂಡಿಲ್ಲ, ಎಥಿಕ್ಸ್‌ ಹೆಸರಲ್ಲಿ ವರ್ತೂರು ಸಂತೋಷ್‌ ಹೆಸರು ತೆಗೆದುಕೊಂಡಿರಿ. ಆಗ ನಿಮಗೆ ಫ್ರೆಂಡ್‌ಷಿಪ್‌ ಯಾಕೆ ನೆನಪಾಗಲಿಲ್ಲ ಎಂದು ಸುದೀಪ್‌ ನೇರವಾಗಿ ಸಂಗೀತಾ ಅವರನ್ನು ಕೇಳಿದರು.

ಆಗ ಸಂಗೀತಾ, ವರ್ತೂರು ಸಂತೋಷ್ ಅವರ ಮನೆಗೆ ನಾನು ಬಂದಿದ್ದೆ. ಅಲ್ಲಿಗೆ ಬರದೇ ಹೋಗಿದ್ದರೆ ನನಗೆ ಗೆಲ್ಲುವ ಚಾನ್ಸಸ್ ಇರ್ತಿರ್ಲಿಲ್ಲ ಎಂದರು. ಆಗ ಸುದೀಪ್‌, ʻʻಇಲ್ಲ ಸಂಗೀತಾ ಅವರೇ, ಅವರಿಬ್ಬರು ನಿಮ್ಮನ್ನು ಅಲ್ಲಿಗೆ ಕಳುಹಿಸಲಿಲ್ಲ ಅಂದಿದ್ದರೆ ನೀವು ಗೆಲ್ಲೋಕೆ ಸಾಧ್ಯ ಆಗುತ್ತಿರಲಿಲ್ಲʼʼ ಎಂದರು.

ಅದಕ್ಕೆ ಮೊಂಡುವಾದ ಮಾಡಿದ ಸಂಗೀತಾ, ಅಲ್ಲಿ ಪ್ರಾಬಬಿಲಿಟಿ ಆಫ್‌ ವಿನ್ನಿಂಗ್ ⅙ ಇತ್ತು, ಅಲ್ಲಿ ಲಕ್ ಇತ್ತು… ಹೀಗಾಗಿ ಕ್ರೆಡಿಟ್‌ ಅನ್ನು ಕಾರ್ತಿಕ್‌ ಮತ್ತು ತನಿಷಾಗೆ ಕೊಡುವುದಿಲ್ಲ ಎಂದರು.

ಆಗ ಸುದೀಪ್‌- ವರ್ತೂರು ಸಂತೋಷ್ ಅವರ ಜಾಗದಲ್ಲಿ ನೀವೇ ಬರಬೇಕು ಅನ್ನೋದು ವರ್ತೂರು ಸಂತೋಷ್ ಅವರ ಆಯ್ಕೆ ಅಲ್ಲ. ನಿಮ್ಮ ಆಸೆ ಪ್ರಕಾರ.. ಕಾರ್ತಿಕ್, ತನಿಷಾ ಹಿಂದೆ ಮುಂದೆ ನೋಡದೆ ಸ್ಪಂದಿಸಿದರು. ಆಟ ಅಲ್ಲಿ ನೋಡಬೇಕಾದರೆ, ಸೇಫೆಸ್ಟ್ ಇದ್ದದ್ದು ಅದೇ ಮನೆ. ಏನು ಬೇಕಾದರೂ ಆಗಬಹುದಿತ್ತು ಅನ್ನೋದು ಆಮೇಲೆ. ಆದರೆ, ಸರ್‌ಫೇಸ್‌ ಲೆವೆಲ್‌ನಲ್ಲಿ ನಿಮ್ಮ ಪರವಾಗಿ ನಿಂತವರು ಕಾರ್ತಿಕ್, ತನಿಷಾ. ಆಟದ ರೂಲ್ಸ್ ಪ್ರಕಾರ ವರ್ತೂರು ಸಂತೋಷ್ ಶಿಫ್ಟ್ ಆದರು ಅನ್ನೋದು ಬಿಟ್ಟರೆ ದೊಡ್ಡತನದಲ್ಲಿ ಅಲ್ಲ. ಆ ಟ್ವಿಸ್ಟ್ ಬರಲಿಲ್ಲ ಅಂದಿದ್ದರೆ ವರ್ತೂರು ಸಂತೋಷ್ ಅಲ್ಲೇ ಇರುತ್ತಿದ್ದರು ಎಂದು ನೆನಪಿಸಿದರು.

ಇಷ್ಟೆಲ್ಲ ವಾದ ಮಾಡಿ, ಜಗಳವಾಡಿದ ನೀವೇ ಸೇಫ್‌ ಆಗಿ ಕುಳಿತಿದ್ದೀರಿ.. ಎಲ್ಲವನ್ನೂ ಕೇಳಿಸಿಕೊಂಡ ತನಿಷಾ ಮತ್ತು ಕಾರ್ತಿಕ್‌ ನಾಮಿನೇಷನ್‌ ಸೀಟ್‌ ನಲ್ಲಿ ಕುಳಿತಿದ್ದಾರೆ ಎಂದು ನೆನಪಿಸಿದರು ಕಿಚ್ಚ ಸುದೀಪ್‌.

ಸಂಗೀತಾ ಸ್ನೇಹದಲ್ಲಿ 100% ಕೊಟ್ಟಿಲ್ಲ ಎಂದ ಕಾರ್ತಿಕ್‌, ತನಿಷಾ

ಸಂಗೀತಾ ನೀವು ಪದೇಪದೆ ನೀವ್ಯಾಕೇ ಕೇಳಲಿಲ್ಲ, ನೀವು ಕೇಳಬೇಕಿತ್ತು ಅಂತ ಹೇಳುತ್ತಲೇ ಇದ್ರಿ. ಏನೂ ಯೋಚನೆ ಮಾಡದೆ.. ನಿಮ್ಮ ಮಾತನ್ನ ಕೇಳಿದ ತಕ್ಷಣ ಆಕಡೆಗೆ ಕಳುಹಿಸಿಕೊಟ್ರಲ್ಲ. ಅದಾದ್ಮೇಲೂ ಅನ್ನಿಸಿಕೊಂಡ್ರಲ್ಲ. ಅದರ ವಾಲ್ಯೂ ಏನು? ಇದೇನಾ ನಿಮ್ಮ ಫ್ರೆಂಡ್‌ಶಿಪ್‌? ಈ ಫ್ರೆಂಡ್‌ಶಿಪ್‌ನಲ್ಲಿ ನೀವು 100% ಗಿವಿಂಗ್ ಆಗಿದ್ದೀರಾ? ಎಂದು ಕಿಚ್ಚ ಕೇಳಿದರು. ಇಲ್ಲಿವರೆಗೂ ಕೊಟ್ಟಿದ್ದೀನಿ ಅಂತ ಸಂಗೀತಾ ಹೇಳಿದರು. ಆದರೆ, ಕಾರ್ತಿಕ್‌ ಮತ್ತು ತನಿಷಾ ಇಲ್ಲ ಎಂದರು. ʻʻಫ್ರೆಂಡ್‌ಶಿಪ್ ಹಾಳಾಗಬಾರದು ಅಂತ ಸ್ವಲ್ಪ ಜಾಸ್ತಿನೇ ಅಡ್ಜಸ್ಟ್ ಮಾಡಿಕೊಳ್ತಿದ್ದೀವಿ ಅನ್ಸತ್ತೆ ಸರ್.ʼʼ ಎಂದು ತನಿಷಾ ಹೇಳಿದರು.

ಈ ನಡುವೆ ಕಿಚ್ಚ ಅವರು ನಮೃತಾ ಬಳಿ ಕಾರ್ತಿಕ್‌, ಸಂಗೀತಾ, ತನಿಷಾ ಸಂಬಂಧದ ಬಗ್ಗೆ ಕೇಳುತ್ತಾರೆ. ಆಗ ನಮೃತಾ ʻʻಮೂವರ ಮಧ್ಯೆಯೇ ಬೇರೆ ಬೇರೆ ಗ್ರೂಪ್ ಇದೆ ಅನ್ಸುತ್ತೆ. ಅಂದ್ರೆ.. ಕಾರ್ತಿಕ್ – ಸಂಗೀತಾ, ಕಾರ್ತಿಕ್ – ತನಿಷಾ ಅಂತ. ಫ್ರೆಂಡ್‌ಶಿಪ್‌ನಿಂದ ಸಂಗೀತಾ ಬೇರೆ ಏನೋ ಎಕ್ಸ್‌ಪೆಕ್ಟ್ ಮಾಡ್ತಾರೆ. ತನಿಷಾ ಏನೂ ಎಕ್ಸ್‌ಪೆಕ್ಟ್ ಮಾಡ್ತಿಲ್ಲ. ಕಾರ್ತಿಕ್ ಇಬ್ಬರ ಮಧ್ಯೆ ಒಳ್ಳೆಯ ಈಕ್ವೇಷನ್ ಇಟ್ಟುಕೊಂಡಿದ್ದಾರೆ ಅಂತ ಅನ್ಸುತ್ತೆ ಸರ್ʼʼ ಎಂದು ವಾಸ್ತವ ಹೇಳಿದರು.

ತ್ಯಾಗ ಮಾಡೋದೂ ಮುಖ್ಯ ಅಲ್ಲ, ತಾಯಿ ಆಗೋದೂ ಮುಖ್ಯ ಅಲ್ಲ

ಸಂಗೀತಾ ವಿಷಯದಲ್ಲಿ ತಾನು ತುಂಬ ತ್ಯಾಗ ಮಾಡುತ್ತಿದ್ದೇನೆ, ಕಾಂಪ್ರೊಮೈಸ್‌ ಮಾಡಿಕೊಳ್ಳುತ್ತಿದ್ದೇನೆ ಅನಿಸುತ್ತಿದೆ ಎಂದು ಕಾರ್ತಿಕ್‌ ಹೇಳಿದರೆ, ನಾನು ಸಂಗೀತಾಳನ್ನು ಪುಟ್ಟ ಹುಡುಗಿ ಅಂದುಕೊಂಡು ತಾಯಿ ಹಾಗೆ ನೋಡಿಕೊಂಡೆ ಎಂದು ತನಿಷಾ ಹೇಳಿದರು. ಆದರೆ ನಂಬಿಕೆ ಇಲ್ಲ ಅಂತ ಸಂಗೀತಾ ಹೇಳುವಾಗ ಬೇಜಾರಾಯ್ತು ಅಂದರು.

ಆಗ ಸುದೀಪ್‌, ʻʻನಿಮ್ಮ ಫ್ರೆಂಡ್‌ಶಿಪ್‌ನ ನೀವೇನು ಮೇನ್‌ಟೇನ್ ಮಾಡೋಕೆ ಹೋಗ್ತೀರೋ.. ತ್ಯಾಗ ಮಾಡೋಕೆ ಹೋಗ್ತೀರೋ.. ಗೊತ್ತಿಲ್ಲ. ಹೊರಗಡೆ ಅಗ್ಲಿ ಆಗಿ ಕಾಣಬೇಡಿ. ಅಗ್ಲಿ ಹಾಗೇ ಕಾಣಿಸುತ್ತಿದೆ. ನಿಮ್ಮ ನಿಮ್ಮಲ್ಲಿ ನೀವು ಸ್ಟ್ರಾಂಗ್ ಸ್ಪರ್ಧಿಗಳು ಅಂದುಕೊಂಡರೆ, ಅದಕ್ಕೆ ತಕ್ಕ ಹಾಗೆ ಬಾಳಿ ಬದುಕಬೇಕೇ ಹೊರತು ಎಕ್ಸ್‌ಪೆಕ್ಟ್ ಮಾಡೋದು, ತ್ಯಾಗ ಮಾಡೋದು, ತಾಯಿ ಆಗೋದು ಮುಖ್ಯನಾ? ಎಂದು ಕೇಳಿದರು.

ಇದನ್ನೂ ಓದಿ: BBK Season 10: ಆರನೇ ವಾರ ಬಿಗ್‌ ಬಾಸ್‌ ಮನೆಯಿಂದ ಇಶಾನಿ ಔಟ್‌

ಅಂದು ನಡೆದಿದ್ದೇನು? ಕ್ಲಾರಿಟಿ ಕೊಟ್ಟ ಸುದೀಪ್‌

ಲುಡೋ ಆಟದ ವೇಳೆ ಒಬ್ಬರನ್ನು ಸೇವ್‌ ಮಾಡಬೇಕು ಅಂತ ಬಂದಾಗ ಸಂಗೀತಾ ಹೇಗಿದ್ದರೂ ಸೇಫ್ ಆಗ್ತಾಳೆ ಈಗ ಅಂತ ಕಾರ್ತಿಕ್, ತನಿಷಾ ಮಾತನಾಡಿಕೊಂಡರು. ಅದು ವರ್ತೂರು ಸಂತೋಷ್‌ಗೆ ಕೇಳಿಸಲಿಲ್ಲ. ವರ್ತೂರು ಸಂತೋಷ್ ಬಂದ್ಮೇಲೆ ಸಿರಿ ಹೆಸರನ್ನು ತೆಗೆದುಕೊಂಡರು. ದುರದೃಷ್ಟ ಏನಂದರೆ.. ಸಂಗೀತಾ ಅವರೇ.. ತಾವು ಸೇಫ್ ಆದ್ಮೇಲೂ ಇಷ್ಟೆಲ್ಲಾ ಮಾಡಿದ್ದು ಸರಿ ಅಲ್ಲ ಎಂದು ಕಿಚ್ಚ ಸುದೀಪ್‌ ಸ್ಪಷ್ಟವಾಗಿ ಹೇಳಿದರು.

ನೀವು ಮೂರೂ ಜನ ಆಡೋಕೆ ಹೋಗಿದ್ದೀರಾ.. ಅಥವಾ ಸಂಗೀತಾನ ಗೆಲ್ಲಿಸೋಕೆ ನೀವಿಬ್ಬರೂ ಹೋಗಿದ್ದೀರಾ ಅಂತ ಹೊರಗಡೆ ಡೌಟ್‌ ಇದೆ. ಫ್ರೆಂಡ್‌ಶಿಪ್‌ ತಪ್ಪು ಅಂತ ಹೇಳುತ್ತಿಲ್ಲ. ಡೋಂಟ್‌ ಮೇಕ್‌ ಇಟ್‌ ಟಾಕ್ಸಿಕ್. ಹೊರಗಡೆ ನೋಡುತ್ತಿರುವವರಿಗೆ ಟಾಕ್ಸಿಕ್ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು. ಇಷ್ಟಾದರೂ ಮಾತು ಮುಂದುವರಿಸಿದ ಸಂಗೀತಾ ಅವರಿಗೆ ಯೂ ಆರ್‌ ರಾಂಗ್‌ ಅಂತ ಕಿಚ್ಚ ಸ್ಪಷ್ಟವಾಗಿಯೇ ಹೇಳಿದರು. ಹೀಗೇ ಮುಂದುವರಿದರೆ ಮುಂದಿನ ದಾರಿ ಕಷ್ಟ ಆಗುತ್ತದೆ ಎಂದು ಎಚ್ಚರಿಸಿದರು.

Exit mobile version