Site icon Vistara News

ರಾಜ ಮಾರ್ಗ ಅಂಕಣ | ನಂಬಿಕೆಗಳಿಂದ ಪವಾಡ ನಡೆಯೋದು ನಿಜವಾ? ದೇವರು ದೊಡ್ಡವನಾ, ವಿಜ್ಞಾನವಾ?

science and god

ಜಗತ್ತಿನ ಮಹಾ ವಿಜ್ಞಾನಿಗಳು ಕೂಡ ದೇವರ ಅಸ್ತಿತ್ವವನ್ನು ನಂಬುತ್ತಾರೆ! There is a Super Natural Power which controls the whole world ಎನ್ನುತ್ತಾರೆ ಮಹಾ ವಿಜ್ಞಾನಿ ಐನ್‌ಸ್ಟೀನ್! ಅಂದರೆ ಜಗತ್ತನ್ನು ನಿಯಂತ್ರಿಸುವ ಒಂದು ಅತೀಂದ್ರಿಯ ಶಕ್ತಿ ಇದೆ ಎಂದರ್ಥ! ಆ ಶಕ್ತಿಯು ನಮ್ಮ ಇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ವಿಜ್ಞಾನವು ಎಷ್ಟೋ ಬಾರಿ ಈ ಅತೀಂದ್ರಿಯ ಶಕ್ತಿಗೆ ಶರಣಾಗುತ್ತದೆ!

ವೈದ್ಯಕೀಯ ವಿಜ್ಞಾನವು ಕೂಡ ಈ ಅತೀಂದ್ರಿಯ ಶಕ್ತಿಯನ್ನು ನಂಬುತ್ತದೆ. ಎಷ್ಟೋ ದೊಡ್ಡ ವೈದ್ಯರು ಹತಾಶೆಯಿಂದ ಕೈಬಿಟ್ಟ ಪ್ರಕರಣಗಳು ಕೊನೆಗೆ ಪವಾಡ ಸದೃಶವಾಗಿ ಎದ್ದುಬಂದ ನಿದರ್ಶನಗಳಿವೆ. ಇಂದಿಗೂ ನಡೆಯುತ್ತಿವೆ! ಕಾಲ ಎಷ್ಟು ಮುಂದುವರೆದಿದೆ ಎಂದರೂ ಈ ನಂಬಿಕೆಗಳು ನಡೆಯುತ್ತ ಇರುತ್ತವೆ. ಎಲ್ಲ ಆಸ್ಪತ್ರೆಗಳ ಕ್ಯಾಂಪಸ್‌ಗಳಲ್ಲಿ ಗಣಪತಿಯ ಮೂರ್ತಿಯ ಪ್ರತಿಷ್ಠೆ ಆಗಿರುವುದು ಸುಮ್ಮನೆ ಅಲ್ಲ! ಎಷ್ಟೋ ಪರಿಣತ ವೈದ್ಯರು ಶಸ್ತ್ರಚಿಕಿತ್ಸೆ ಆರಂಭ ಮಾಡುವಾಗ ದೇವರಿಗೆ ಕೈ ಮುಗಿದದ್ದು ನಾನು ನೋಡಿದ್ದೇನೆ.

ಪ್ರಾರ್ಥನೆ ಎಂಬ ಅದ್ಭುತ ಚಿಕಿತ್ಸೆ!
ಅಮೆರಿಕಾದಲ್ಲಿ ವಾಸ ಆಗಿರುವ ಡಾಕ್ಟರ್ ಆನಂದ್ ಅವರು ಒಂದು ವೇದಿಕೆಯಲ್ಲಿ ಹೇಳಿದ ಒಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ. ಅದು ಖಂಡಿತ ಉತ್ಪ್ರೇಕ್ಷೆ ಇರಲಾರದು.

ಒಮ್ಮೆ ಅವರು ಸುದೀರ್ಘವಾದ ವಿದೇಶದ ಪ್ರವಾಸ ಹೋಗಬೇಕಾದ ಪ್ರಸಂಗ ಬಂದಿತ್ತು. ಆಗ ಅವರು ರುಟೀನ್ ಆಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆಗ ಅವರ ಶ್ವಾಸಕೋಶದಲ್ಲಿ ಕ್ಯಾನ್ಸರ್ ಗಡ್ಡೆಗಳು ಪತ್ತೆ ಆದವು! ಅವರು ತನ್ನ ವಿದೇಶದ ಯಾತ್ರೆಯನ್ನು ಮುಂದಕ್ಕೆ ಹಾಕುವ ಹಾಗಿರಲಿಲ್ಲ. ಅವರು ತನ್ನ ಎಲ್ಲ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಒಂದು ಮೇಲ್ ಕಳುಹಿಸುತ್ತಾರೆ.ಅದರಲ್ಲಿ ಎರಡೇ ವಾಕ್ಯ ಇತ್ತು.

“ನನ್ನ ದೇಹದಲ್ಲಿ ಕ್ಯಾನ್ಸರ್ ಟ್ರೇಸ್ ಆಗಿದೆ. ಯಾರೂ ನನಗಾಗಿ ಕಣ್ಣೀರು ಹಾಕಬೇಡಿ. ನನಗಾಗಿ ನೀವು ನಂಬುವ ದೇವರಲ್ಲಿ ಪ್ರಾರ್ಥನೆ ಮಾಡಿ. ಚರ್ಚಲ್ಲಿ ಕ್ಯಾಂಡಲ್ ಹಚ್ಚಿ. ನಿಮ್ಮ ಪ್ರಾರ್ಥನೆಯು ನನ್ನಲ್ಲಿ ಖಂಡಿತ ಶಕ್ತಿ ತುಂಬುತ್ತದೆ” ಎಂದು ಹೇಳಿ, ಅವರೂ ಪ್ರಾರ್ಥನೆ ಮಾಡಿ ವಿದೇಶದ ಪ್ರಯಾಣ ಹೊರಟರು.

ತಮ್ಮ ಎಲ್ಲ ಸೆಮಿನಾರ್ ಮುಗಿಸಿ ಹಿಂದೆ ಬರುವಾಗ ಅವರ ದೇಹದಲ್ಲಿ ಕ್ಯಾನ್ಸರ್ ಟ್ರೇಸಸ್ ಕಡಿಮೆ ಇದ್ದವು ಎಂದು ಅವರು ಹೇಳಿದ್ದಾರೆ! ಅವರು ಈಗಲೂ ತುಂಬಾ ಆರೋಗ್ಯ ಆಗಿದ್ದಾರೆ. ಅವರು ಹೇಳುವ ಪ್ರಕಾರ ಪ್ರಾರ್ಥನೆಯಲ್ಲಿ ತುಂಬಾ ಶಕ್ತಿ ಇದೆ! ಪ್ರಾರ್ಥನೆಯು ಖಂಡಿತ ಮೌಢ್ಯ ಅಲ್ಲ ಅನ್ನುತ್ತಾರೆ ಅವರು!

ಮಹಾ ಮಹಾ ಸಾಧನೆಗಳಿಗೆ ಕೂಡ ಪ್ರೇರಣೆ ಅದೇ ಶಕ್ತಿ!

ಒಂದೇ ಕಾಲಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ ಅವರು ತನ್ನ ಅಂತಿಮ ಘಟ್ಟದಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿ ಆಗಿ ತೊಂದರೆ ಪಟ್ಟಾಗ ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥನೆ ಮಾಡಿ ತನ್ನ ಸಮಸ್ಯೆ ಪರಿಹಾರ ಮಾಡಿಕೊಂಡೆ ಎಂದು ತನ್ನ ಆತ್ಮಚರಿತ್ರೆಯ ಪುಸ್ತಕದಲ್ಲಿ ಬರೆದಿದ್ದಾರೆ! ಅಂದರೆ ಪ್ರಾರ್ಥನೆಯಲ್ಲಿ ಯಾವುದೋ ಒಂದು ಇಂಟೆನ್ಸ್ ಆದ ಶಕ್ತಿ ಇದೆ ಅನ್ನುವುದಕ್ಕೆ ಹಲವಾರು ನಿದರ್ಶನಗಳು ಇವೆ! ಪ್ರಾರ್ಥನೆಯು ನಮಗೆ ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸುತ್ತದೆ ಎಂದಾದರೆ ಅದು ಮೌಢ್ಯ ಆಗುವುದು ಹೇಗೆ?

ದೇಹದ ಒಳಗಿನ ಜೀವಕೋಶಗಳು ಕೂಡ ಪಾಸಿಟಿವ್ ಭಾವನೆಗಳಿಗೆ ಸ್ಪಂದಿಸುತ್ತವೆ!
ನಮಗೆ ಆರೋಗ್ಯ ಸಮಸ್ಯೆ ಬಂದಾಗ ನಾವು ಯಾವುದೋ ವೈದ್ಯರ ಬಳಿ ಹೋಗುವುದಕ್ಕಿಂತ ಕುಟುಂಬದ ವೈದ್ಯರ ಬಳಿ ಹೋಗುವುದು ಯಾಕೆ? ನಮಗೆ ಆ ವೈದ್ಯರ ಮೇಲೆ ಇರುವ ನಂಬಿಕೆಯು ಔಷಧಿಯ ಶಕ್ತಿಯನ್ನು ಹೆಚ್ಚು ಮಾಡದೆ ಇರಬಹುದು! ಆದರೆ ನಮ್ಮ ದೇಹದ ಜೀವಕೋಶಗಳನ್ನು ಆ ಔಷಧಿಯು ಸ್ವೀಕಾರ ಮಾಡಲು ಆ ನಂಬಿಕೆಯು ಹೆಚ್ಚು ತಯಾರು ಮಾಡುತ್ತದೆ! ನಮ್ಮ ದೇಹದ ಜೀವಕೋಶಗಳು ಪಾಸಿಟಿವ್ ಭಾವನೆಗಳಿಗೆ ಸ್ಪಂದನೆ ಕೊಡುತ್ತವೆ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ! ಪ್ರೀತಿ, ನಂಬಿಕೆ, ಭರವಸೆ, ಗೆಳೆತನ, ಸಾಂತ್ವನ, ಕಾಳಜಿ ಮೊದಲಾದ ಪಾಸಿಟಿವ್ ಭಾವನೆಗಳು ಮಿರಾಕಲ್ ಕ್ರಿಯೇಟ್ ಮಾಡುವುದನ್ನು ವೈದ್ಯಕೀಯ ವಿಜ್ಞಾನವು ಅಚ್ಚರಿಯಿಂದ ಗಮನಿಸುತ್ತಿದೆ!

ದೇವರ, ದೈವಗಳ ಮೇಲಿನ ನಂಬಿಕೆಗಳು ವರ್ಕ್ ಆಗ್ತಾವೆ!
ಅದೇ ರೀತಿ ದೇವರ ಮೇಲೆ ಗಾಢವಾದ ನಂಬಿಕೆಯು ಕೂಡ ನಮ್ಮನ್ನು ಒಳಗಿನಿಂದ ಸ್ಟ್ರಾಂಗ್ ಮಾಡುತ್ತಾ ಹೋಗುತ್ತದೆ. ಈ ನಂಬಿಕೆ ನಮಗೆ ನೀಡುವ ಸಾಂತ್ವನ ಮತ್ತು ಧೈರ್ಯಗಳನ್ನು ನಾವು ಕಡೆಗಣಿಸಲು ಸಾಧ್ಯವೆ ಇಲ್ಲ!

ಕರಾವಳಿಯ ಸಿರಿ ಜಾತ್ರೆಗಳಲ್ಲಿ ಭಾಗವಹಿಸಿ ಆವೇಶವನ್ನು ಪಡೆದು ತಮ್ಮ ಒಳಗಿನ ನೋವನ್ನು ಕಳೆದುಕೊಂಡು ಹಗುರಾಗುವ ಸ್ತ್ರೀಯರನ್ನು ನಾನು ನೋಡಿದ್ದೇನೆ! ಉತ್ತರ ಕರ್ನಾಟಕದ ಕೆಲವು ದೇವಸ್ಥಾನಗಳಲ್ಲಿ ದೇವಸ್ಥಾನಗಳ ಜಾತ್ರೆಗಳಲ್ಲಿ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ತೆಗೆಯುವ ಭಕ್ತರನ್ನು ನಾನು ನೋಡಿದ್ದೇನೆ! ಅವರ ಕೈಗಳು ಸುರಕ್ಷಿತವಾಗಿ ಇರುವುದು ಕೇವಲ ಪವಾಡ ಆಗಿರಲಾರದು! ಅದನ್ನು ಭಕ್ತಿಯ ಪರಾಕಾಷ್ಟೆ ಎಂದು ನೀವು ಕರೆದರೂ ಅದರ ಹಿಂದೆ ಯಾವುದೋ ಮನೋವಿಜ್ಞಾನ ಖಂಡಿತ ಕೆಲಸ ಮಾಡುತ್ತಿರಬೇಕು!
ಅದ್ಯಾವ ಶಕ್ತಿ ಇರಬಹುದು ಎನ್ನುವುದು ನನ್ನ, ನಿಮ್ಮ ಊಹೆಗಳನ್ನು ಮೀರಿದೆ ಎಂದು ನಾನು ಖಚಿತವಾಗಿ ಹೇಳಬಹುದು.

ದೈವಾರಾಧನೆಯನ್ನು ಮೌಢ್ಯ ಎನ್ನಲು ಸಾಧ್ಯವೇ?
ಇನ್ನು ಕರಾವಳಿ ಕರ್ನಾಟಕ ಮತ್ತು ಇತರೆಡೆ ಇರುವ ದೈವಾರಾಧನೆಯ ನಂಬಿಕೆಯನ್ನು ಪ್ರಶ್ನೆ ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ ಅದು ಜನರ ರಕ್ತದ ಕಣವನ್ನು ಸೇರಿ ಆಗಿದೆ. ಕಣ್ಣಿಗೆ ಕಾಣದ ದೇವರ ಶಕ್ತಿಗಿಂತ ಕಣ್ಣಿಗೆ ಕಾಣುವ ದೈವದ ಪ್ರಭಾವವನ್ನು ಅವರು ಹೆಚ್ಚು ನಂಬುತ್ತಾರೆ! ನಮಗೆ ಯಾವ ಕಷ್ಟಗಳು ಬಂದರೂ ನಮ್ಮ ಬೆನ್ನಿಗೆ ದೈವಗಳು ನಿಂತು ಕಾಪಾಡುತ್ತವೆ ಎಂಬ ನಂಬಿಕೆಯು ಜನರ ಸುಪ್ತ ಮನಸಿನಲ್ಲಿ ಆಳವಾಗಿ ಬೇರೂರಿ ಬಿಟ್ಟಿದೆ. ಎಷ್ಟೋ ಮನೋದೈಹಿಕ ಸಮಸ್ಯೆಗಳಿಗೆ ದೈವಾರಾಧನೆಯ ಮೂಲಕ ಪರಿಹಾರ ದೊರೆಯುತ್ತ ಇವೆ ನೀವು ನಂಬಲೇಬೇಕು. ಹಾಗೆಯೇ ಹಲವು ಕೌಟುಂಬಿಕ ಸಮಸ್ಯೆಗಳು, ಗ್ರಾಮದ ಹಲವು ಸಮಸ್ಯೆಗಳು, ಊರಿನ ಹತ್ತಾರು ಸಮಸ್ಯೆಗಳು ದೈವಶಕ್ತಿಯಿಂದ ಪರಿಹಾರ ಆಗಿವೆ ಎಂದು ಹೇಳುವುದಕ್ಕಿಂತ ಜನರ ತೀವ್ರವಾದ ನಂಬಿಕೆಯಿಂದ ಪರಿಹಾರ ಆಗಿವೆ ಅನ್ನುವುದು ಹೆಚ್ಚು ಸತ್ಯ! ಅಂದರೆ ದೈವದ ಮೇಲಿನ ನಂಬಿಕೆಯು ದೈವಗಳಿಗಿಂತ ಶಕ್ತಿಶಾಲಿ!

ಹಾಗಿರುವಾಗ ದೈವಾರಾಧನೆಯನ್ನು ಮೌಢ್ಯ ಎಂದು ನೀವು ಕರೆಯುವುದು ಹೇಗೆ? ಅದು ಶತಮಾನಗಳಿಂದ ಬಂದಿರುವ ನಂಬಿಕೆಯ ಭಾಗವೇ ಆಗಿದೆ. ಕಾಂತಾರದಂತಹ ಸಿನೆಮಾಗಳು ಈ ನಂಬಿಕೆಗಳನ್ನು ಇನ್ನಷ್ಟು ಬಲಪಡಿಸುತ್ತವೆ.

ವಿಜ್ಞಾನವು ಅದರಷ್ಟಕ್ಕೆ ಅದು ಪರಿಪೂರ್ಣವಾ?
ಅದರ ಜೊತೆಗೆ ವಿಜ್ಞಾನವು ಅದರಷ್ಟಕ್ಕೆ ಅದು ಪರಿಪೂರ್ಣ ಅಲ್ಲ ಎನ್ನುವುದು ನನ್ನ ಖಚಿತ ಅಭಿಪ್ರಾಯ! ಸಾವಿರಾರು ವರ್ಷಗಳ ಅವಧಿಯಲ್ಲಿ ಜಗತ್ತು ನಂಬಿದ್ದ ‘ಭೂಮಿಯೇ ಸೃಷ್ಟಿಯ ಕೇಂದ್ರ’ ಎಂಬ ಸಿದ್ಧಾಂತವು ಮುಂದೆ ‘ಸೌರಕೇಂದ್ರ ಸಿದ್ಧಾಂತ’ವಾಗಿ ಬದಲಾವಣೆ ಆಯಿತು! ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಣ ಹೊಂದುವ ಕಕ್ಷೆಯು ಎಷ್ಟೋ ಶತಮಾನಗಳ ಕಾಲ ವೃತ್ತಾಕಾರವಾಗಿದೆ ಎನ್ನುತ್ತಿದ್ದ ವಿಜ್ಞಾನವು ಮುಂದೆ ಅದು ದೀರ್ಘ ವೃತ್ತ(ಎಲ್ಲಿಪ್ಸ್) ಆಕಾರದ ಕಕ್ಷೆ ಎಂಬುದನ್ನು ಒಪ್ಪಿಕೊಂಡಿತು! ಪರಮಾಣುವನ್ನು ಒಡೆಯಲು ಸಾಧ್ಯವೇ ಇಲ್ಲ ಎಂಬ ಡಾಲ್ಟನ್ ಸಿದ್ಧಾಂತವು ಮುಂದೆ ತಪ್ಪುಎಂದು ಪ್ರೂವ್ ಆಯಿತು ತಾನೇ? ಹೀಗೆ ಎಷ್ಟೋ ವಿಜ್ಞಾನದ ಒಪ್ಪಿತ ಸಿದ್ಧಾಂತಗಳು ಕೂಡ ಮುಂದೆ ತಪ್ಪು ಎಂದು ಪ್ರೂವ್ ಆದ ಹತ್ತಾರು ಉದಾಹರಣೆಗಳು ಇವೆ. ಅಂದರೆ ವಿಜ್ಞಾನವು ಅದರಷ್ಟಕ್ಕೆ ಅದು ಪರಿಪೂರ್ಣ ಆಗಲು ಸಾಧ್ಯ ಇಲ್ಲ ಎನ್ನುವುದು ನನ್ನ ಅಭಿಪ್ರಾಯ.

ನಂಬಿಕೆ ಮತ್ತು ವಿಜ್ಞಾನ ಎರಡೂ ಒಂದಕ್ಕೊಂದು ಪೂರಕ!
ಅಂದರೆ ನಂಬಿಕೆ ಮೀರಿದ ವಿಜ್ಞಾನ, ವಿಜ್ಞಾನವನ್ನು ಮೀರಿದ ನಂಬಿಕೆ ಎರಡೂ ನನಗೆ ಸಮ್ಮತ ಇವೆ! ಅದಕ್ಕೆ ಕನ್ನಡದ ದೃಷ್ಟಾರರಾದ ಡಿ ವಿ ಜಿ ಅವರ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ ಒಂದು ವಾಕ್ಯವು ಹೆಚ್ಚು ಅರ್ಥಪೂರ್ಣ ಎಂದು ನನಗೆ ಅನ್ನಿಸಿದೆ.
ಋಷಿ ವಾಕ್ಯದೊಡನೆ(ನಂಬಿಕೆ) ವಿಜ್ಞಾನ,ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ. ಏನಂತೀರಿ?

ಇದನ್ನೂ ಓದಿ |ರಾಜ ಮಾರ್ಗ ಅಂಕಣ | ಪೋಲಿಯೋಗೆ ಲಸಿಕೆ ಕಂಡುಹಿಡಿದ ಜೋನಾಸ್‌ ಸಾಲ್ಕ್‌ ಅದನ್ನು ಮಾರಾಟ ಮಾಡಲೇ ಇಲ್ಲ, ಯಾಕೆ?

Exit mobile version