Site icon Vistara News

ರಾಜ ಮಾರ್ಗ ಅಂಕಣ | ಆರ್ಕಿಮಿಡೀಸ್‌ನ ಸಾಧನೆ ಗೊತ್ತು, ಯುರೇಕಾದ ಕಥೆ ಗೊತ್ತು, ಜೀವನದ ಅಂತ್ಯ ಹೇಗಾಯ್ತು ಗೊತ್ತಾ?

Archimedes

ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಬದುಕಿದ್ದ ಆತ ಜಗತ್ತಿನ ಅತ್ಯಂತ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬ ಎಂದು ಕರೆದುಕೊಂಡಿದ್ದಾನೆ. ಆತನ ಇಡೀ ಬದುಕು ರೇಖಾಗಣಿತ, ಬಾಹ್ಯಾಕಾಶ ವಿಜ್ಞಾನ, ಭೌತಶಾಸ್ತ್ರಗಳಲ್ಲಿ ಕಳೆದುಹೋಗಿತ್ತು! ಇವತ್ತು ಮೂರು ಕಾರಣಕ್ಕೆ ಆತನ ಸ್ಮರಣೆ ಮಾಡೋಣ.

ಕಾರಣ ಒಂದು – ಸನ್ನೆಗೋಲು, ತಿರುಪು ಕೊಳವೆ
ಯಾವುದೇ ಭಾರವಾದ ವಸ್ತುಗಳನ್ನು ಎತ್ತಲು ಬಳಸುವ ಸನ್ನೆ ಗೋಲು ಮೊದಲು ಕಂಡು ಹಿಡಿದವನು ಆರ್ಕಿಮಿಡೀಸ್! ಅಂದಿನ ದೊರೆಗೆ ಆತ ಹೇಳಿದ ಮಾತು – “ನನಗೆ ನಿಲ್ಲಲು ಜಾಗ ಕೊಡಿ. ಒಂದು ಗಟ್ಟಿಯಾದ ಮೀಟುಗೋಲು ಕೊಡಿ. ನಾನು ಇಡೀ ಭೂಮಿಯನ್ನು ಎತ್ತಿ ಇನ್ನೊಂದು ಕಡೆ ಇಡಬಲ್ಲೆ!”

ಅದು ಅಹಂಕಾರದ ಮಾತಾಗಿರಲಿಲ್ಲ!
ಹಾಗೆಯೇ ಆಳದ ಹಳ್ಳದಲ್ಲಿ ನೀರು ಸಂಗ್ರಹವಾಗಿದ್ದ ಸಂದರ್ಭ ಅದನ್ನು ಮೇಲೆತ್ತಲು ಸಹಾಯ ಮಾಡುವ ತಿರುಪು ಕೊಳವೆಯನ್ನು ಅವನು ಆವಿಷ್ಕಾರ ಮಾಡಿದ. ಅದರಿಂದ 10-12 ಅಡಿಯಷ್ಟು ಆಳದಿಂದ ನೀರನ್ನು ಮೇಲೆತ್ತಲು ಅವನಿಗೆ ಸಾಧ್ಯವಾಯಿತು! ಅಂದಿನ ಇಟೆಲಿ ದೇಶದ ಜನರು ಆತನನ್ನು ಎಂದಿಗೂ ಮರೆಯಲು ಸಾಧ್ಯವೇ ಆಗಲಿಲ್ಲ!

ಕಾರಣ ಎರಡು – ಯುರೇಕಾ ಯುರೇಕಾ!
ಒಮ್ಮೆ ಏನಾಯಿತು ಅಂದರೆ ಸಿರಾಕ್ಯುಸ್ ನಗರದ ಅರಸ ಹೀರಾನನಿಗೆ ಒಬ್ಬ ಅಕ್ಕಸಾಲಿಗನು ಒಂದು ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ಕೊಟ್ಟನು. ಅದರ ಶುದ್ಧತೆಯ ಬಗ್ಗೆ ಅರಸನಿಗೆ ಸಂಶಯ ಆರಂಭ ಆಯಿತು. ಅದನ್ನು ಕರಗಿಸದೆ ಅದರ ಶುದ್ಧತೆಯನ್ನು ಪರಿಶೀಲನೆ ಮಾಡುವ ಸವಾಲು ಎದುರಾದಾಗ ಅರಸನು ಮಹಾ ವಿಜ್ಞಾನಿಯಾದ ಆರ್ಕಿಮಿಡೀಸ್ ಸಲಹೆಯನ್ನು ಕೇಳುತ್ತಾನೆ.

ಆಗ ಆರ್ಕಿಮಿಡೀಸ್ ಅದನ್ನು ಸವಾಲಾಗಿ ಸ್ವೀಕರಿಸಿ ಹಲವು ಪ್ರಯೋಗ ಮಾಡುತ್ತಾನೆ. ನಿದ್ದೆ ಬಿಟ್ಟು ಯೋಚನೆ ಮಾಡುತ್ತಾನೆ. ಆದರೆ ಪರಿಹಾರ ದೊರೆಯುವುದಿಲ್ಲ. ಕೊನೆಗೆ ಮೈಯೆಲ್ಲ ಬೆವರಾಗಿ ಸ್ನಾನ ಮಾಡಲು ಮನಸ್ಸಾಗಿ ಬಟ್ಟೆ ಕಳಚಿ ಬಾತ್ ಟಬ್‌ಗೆ ಇಳಿಯುತ್ತಾನೆ. ಅದರಲ್ಲಿ ತುಂಬಾ ನೀರಿತ್ತು.

ಆತನು ನೀರಿಗೆ ಇಳಿದಾಗ ನೀರು ಹೊರಚೆಲ್ಲುವುದನ್ನು ಗಮನಿಸುತ್ತಾನೆ. ಅಂದರೆ ನನ್ನ ದೇಹದ ಘನ ಅಳತೆಯಷ್ಟೇ ನೀರು ಹೊರಚೆಲ್ಲಿತ್ತು ಎಂದು ಅವನಿಗೆ ಗೊತ್ತಾಯಿತು. ಆಗಿನ ಕಾಲದಲ್ಲಿ ಶುದ್ಧ ಚಿನ್ನದ ಸಾಂದ್ರತೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದ ಕಾರಣ ಅದನ್ನು ನೀರಲ್ಲಿ ಮುಳುಗಿಸಿ ಅದು ಹೊರಗೆ ಚೆಲ್ಲಿದ ನೀರಿನ ಗಾತ್ರವನ್ನು ಅಳತೆ ಮಾಡಿ ಅದು ಶುದ್ಧವೋ ಅಶುದ್ಧವೋ ಎಂದು ಕಂಡು ಹಿಡಿಯಲು ಸಾಧ್ಯ ಇದೆ ಎಂದು ಅವನಿಗೆ ತಟ್ಟನೆ ಗೊತ್ತಾಯ್ತು.

ಆಗ ಉಂಟಾದ ಎಕ್ಸೈಟ್ಮೆಂ‌ಟ್ ಭಾವನೆಗಳನ್ನು ಅವನಿಗೆ ತಡೆದುಕೊಳ್ಳಲು ಸಾಧ್ಯವಾಗದೆ ಅವನು ರಸ್ತೆಗಳಲ್ಲಿ ಯುರೇಕಾ ಯುರೇಕಾ ಎಂದು ಓಡುತ್ತಾನೆ! ಬಟ್ಟೆ ಹಾಕುವುದು ಅವನಿಗೆ ಮರೆತು ಹೋಗುತ್ತದೆ! ಯುರೇಕಾ ಎಂದರೆ ನಾನು ಕಂಡುಹಿಡಿದೆ ಎಂದರ್ಥ ಇತ್ತು. ಈ ಸಂಶೋಧನೆಯಿಂದ ಆರ್ಕಿಮಿಡೀಸ್ ವಿಶ್ವಮಟ್ಟದ ಕೀರ್ತಿ ಪಡೆದುಕೊಂಡನು.

ಕಾರಣ ಮೂರು – ಆತನ ದುರಂತ ಅಂತ್ಯ!
ಮುಂದೆ ಸಿರಾಕ್ಯುಸ್ ಸಾಮ್ರಾಜ್ಯದ ಮೇಲೆ ರೋಮನ್ನರ ಆಕ್ರಮಣ ಆಯಿತು. ಆಗ ಯುದ್ಧವನ್ನು ಗೆಲ್ಲಲು ಆರ್ಕಿಮಿಡೀಸನು ದೊರೆ ಹಿರಾನನಿಗೆ ಸಹಾಯ ಮಾಡಿದ್ದ. ಆದರೂ ರೋಮ್ ಸೈನ್ಯದ ಕೈ ಮೇಲಾಯಿತು. ಆಗ ರೋಮ್ ಸೇನೆಯ ದಳಪತಿ ಆಗಿದ್ದ ಮಾರ್ಸೇಲೆಸ್ ತನ್ನ ಒಬ್ಬ ಸೈನಿಕನಿಗೆ ಆರ್ಕಿಮಿಡೀಸನನ್ನು ಗೌರವದಿಂದ ಕರೆತರಲು ಆಜ್ಞೆ ಮಾಡುತ್ತಾನೆ. ಆತನನ್ನು ಯಾವುದೇ ಕಾರಣಕ್ಕೆ ಬಂಧಿಸದೆ ಗೌರವದಿಂದ ಕರೆತರಬೇಕು ಎಂದು ದಳಪತಿ ಆಜ್ಞೆ ಮಾಡಿದ್ದ.

ಆ ಸೈನಿಕನು ಆರ್ಕಿಮಿಡೀಸ್ ಇದ್ದಲ್ಲಿಗೆ ಬಂದಾಗ ಆತ ನೆಲದ ಮೇಲೆ ಯಾವುದೋ ರೇಖಾಗಣಿತದ ಚಿತ್ರವನ್ನು ಬಿಡಿಸುತ್ತಿದ್ದ. ಆತನಿಗೆ ರೋಮನ್ನರು ಯುದ್ಧ ಗೆದ್ದ ವಿಷಯ ಗೊತ್ತಿರಲಿಲ್ಲ. ಆಗ ಆ ಸೈನಿಕನು ಈಗಲೇ ಬರಲು ಮಾರ್ಸೆಲ್ ಹೇಳಿದ್ದಾನೆ ಎಂದು ಗಟ್ಟಿಯಾಗಿ ಹೇಳಿದ. ಆರ್ಕಿಮಿಡೀಸ್ ತಲೆ ಎತ್ತದೆ ಈ ಆಕೃತಿ ಪೂರ್ತಿ ಆಗದೆ ಎಲ್ಲಿಗೂ ಬರಲಾರೆ ಎಂದು ಗಟ್ಟಿಯಾಗಿ ಹೇಳಿದ. ಸೈನಿಕನಿಗೆ ತುಂಬಾ ಸಿಟ್ಟು ಬಂತು. ಆತನಿಗೆ ಆರ್ಕಿಮಿಡೀಸ್ ಯಾರು? ಆತನ ಸಾಧನೆ ಏನು ಎಂದು ಗೊತ್ತೇ ಇರಲಿಲ್ಲ. ಆತ ಸಿಟ್ಟಿನಿಂದ ಕತ್ತಿ ತೆಗೆದು ಆರ್ಕಿಮಿಡೀಸನನ್ನು ಕೊಂದೇ ಬಿಟ್ಟ!

73 ವರ್ಷ ಬದುಕಿದ್ದ ಆರ್ಕಿಮಿಡೀಸ್ ಸಾಧನೆಯನ್ನು ಉಲ್ಲೇಖ ಮಾಡದೆ ಯಾವ ಪ್ರೌಢಶಾಲೆಯ ವಿದ್ಯಾರ್ಥಿ ಕೂಡ ಮುಂದೆ ಹೋಗಲು ಸಾಧ್ಯವೇ ಇಲ್ಲ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಶಸ್ತ್ರಗಳಿಗೆ ಶಸ್ತ್ರಗಳಿಂದಲೇ ಉತ್ತರ: ಹೂವಿನಷ್ಟು ಮೃದುವಾಗಿದ್ದ ಶಾಸ್ತ್ರೀಜಿ ವಜ್ರದಷ್ಟೇ ಕಠಿಣ!

Exit mobile version