Site icon Vistara News

Child Abduction: ಮಲೆನಾಡಿನ ಗ್ರಾಮದಲ್ಲಿ ಹೆಣ್ಣು ಮಗು ಅಪಹರಣ, ಆತಂಕ

child abduction hasan crime

ಹಾಸನ: ಗುಡಿಸಲಿನಲ್ಲಿ ಮಲಗಿದ್ದ ಮಗುವೊಂದನ್ನು ದುರುಳರು ಅಪಹರಿಸಿದ (Child Abduction) ಆತಂಕಕಾರಿ ಘಟನೆ ಹಾಸನ ಜಿಲ್ಲೆಯ (Hasan news) ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

14 ತಿಂಗಳ ಹೆಣ್ಣು ಮಗುವನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ. ಕಳುವಾದ ಮಗು ಸಂಜು ಮತ್ತು ರೋಹಿತ್ ಎಂಬ ದಂಪತಿಯ ಪುತ್ರಿ. ಸಂಜು ಮತ್ತು ರೋಹಿತ್ ದಂಪತಿ ಮಧ್ಯಪ್ರದೇಶ ರಾಜ್ಯದ ಸತ್ಮ ಜಿಲ್ಲೆಯ ವೀರ್‌ಸಿಂಗ್‌ಪುರ್ ತಾಲ್ಲೂಕಿನವರಾಗಿದ್ದು, ಕಳೆದ ಮೂರು ತಿಂಗಳ ಹಿಂದೆ ಇಟ್ಟಿಗೆ ಕೆಲಸಕ್ಕಾಗಿ ಬಂದಿದ್ದರು.

ದಂಪತಿಗೆ 4 ವರ್ಷದ ಗಂಡು ಮಗುವೂ ಇದೆ. ಸಂಜೆ ಕೆಲಸ ಮುಗಿಸಿ ಬಂದು ಮನೆಯಲ್ಲಿ ಇಬ್ಬರು ಪುಟ್ಟ ಕಂದಮ್ಮಗಳನ್ನು ಮಲಗಿಸಿ ದಂಪತಿ ಸ್ನಾನಕ್ಕೆ ನದಿಗೆ ತೆರಳಿದ್ದರು. ಇಪ್ಪತ್ತು ನಿಮಿಷದ ಬಳಿಕ ದಂಪತಿ ಮನೆಗೆ ವಾಪಸ್ ಆದಾಗ ಹೆಣ್ಣು ಮಗು ಮನೆಯಲ್ಲಿ ಇರಲಿಲ್ಲ. ಮಗುವನ್ನು ಅಪಹರಿಸಿದ ಆರೋಪಿಗಳು ಗಂಡು ಮಗುವನ್ನು ಹಾಗೇ ಬಿಟ್ಟು ಹೋಗಿದ್ದಾರೆ.

ಮಗುವನ್ನು ಹುಡುಕಿ‌ ಕೊಡುವಂತೆ ಪೊಲೀಸ್ ಠಾಣೆಗೆ ದಂಪತಿ ದೂರು ಸಲ್ಲಿಸಿದ್ದಾರೆ. ಹೆಣ್ಣು ಮಗುವನ್ನು ಮಾತ್ರ ಅಪಹರಿಸಿರುವ ಹಿನ್ನೆಲೆಯಲ್ಲಿ ನಾನಾ ಬಗೆಯ ಶಂಕೆಗಳು ವ್ಯಕ್ತವಾಗಿವೆ. ದಂಪತಿ ಹಾಗೂ ಮಕ್ಕಳನ್ನು ಗಮನಿಸುತ್ತಿದ್ದ ವ್ಯಕ್ತಿಗಳು ಈ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

ಕೊಡಗು: ನೇಣು ಬಿಗಿದುಕೊಂಡು‌ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆಯ ಸುವಿದ್ ಲಾಡ್ಜ್‌ನಲ್ಲಿ ನಡೆದಿದೆ. ಎರಡೂವರೆ ತಿಂಗಳಿಂದ ಲಾಡ್ಜ್‌ನಲ್ಲಿದ್ದ ದಂಪತಿ, ಬುಧವಾರ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕಂಡುಬಂದಿದೆ.

ತೆಲಂಗಾಣದ ರಾಜು (55) ಮತ್ತು ಸ್ವಾತಿ (53) ಮೃತ ದಂಪತಿ. ಎರಡೂವರೆ ತಿಂಗಳಿಂದ ನಿತ್ಯವೂ ಲಾಡ್ಜ್ ಬಿಲ್ ಪಾವತಿಸುತ್ತಿದ್ದ ದಂಪತಿ, ಏನೂ ಕೆಲಸ ಮಾಡದೇ ಸುತ್ತಾಡಿಕೊಂಡಿದ್ದರು ಎನ್ನಲಾಗಿದೆ. ಹಣಕಾಸಿನ ಸಮಸ್ಯೆಯಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸೋಮವಾರಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಐದು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆಗೆ ಯತ್ನ

ಚಿಕ್ಕಬಳ್ಳಾಫುರ: ಐದು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದ ಚಿಲಮತ್ತೂರು ಬಳಿಯ ಮರ್ಕತ್‌ಪಲ್ಲಿಯಲ್ಲಿ ನಡೆದಿದೆ. ವಿಷ ಕುಡಿದು ಅಸ್ವಸ್ಥರಾಗಿದ್ದ ಆರು ಮಂದಿಗೆ ಬಾಗೇಪಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿ ಅನಿತಾ, ಮಕ್ಕಳಾದ ಲಾವಣ್ಯ (11), ಧರಣಿ (9), ಕಾವ್ಯ (8), ರಕ್ಷಿತಾ (5), ಶ್ರೀವಲ್ಲಿ (2) ವಿಷ ಸೇವಿಸಿದವರು. ತಾಯಿ ಅನಿತಾ ಸ್ಥಿತಿ ಗಂಭೀರವಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನಿತಾ ಗರ್ಭಿಣಿಯಾಗಿದ್ದು, ಗಂಡ ಗೋಪಾಲ ಎಂಬಾತನ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Tumkur News: ಶಿರಾದಲ್ಲಿ ಈಜಲು ಹೋದ ವಿದ್ಯಾರ್ಥಿ ಹೊಂಡದಲ್ಲಿ ಮುಳುಗಿ ಸಾವು

Exit mobile version