Site icon Vistara News

Murder Case: ಪೊಲೀಸರು ಬಂಧಿಸಿದರೆ ಆತ ಉಳೀತಿದ್ದ! ಕಡೂರು ಕೊಲೆ ಕೇಸ್

kaduru murder case

ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಡೂರಿನಲ್ಲಿ ನಿನ್ನೆ ನಡೆದ ದರ್ಶನ್‌ ಎಂಬಾತನ ಕೊಲೆ (Murder Case) ಪ್ರಕರಣಕ್ಕೆ, ಹಳೆ ದ್ವೇಷವೇ (old vengeance) ಹಿನ್ನೆಲೆ ಎಂದು ಗೊತ್ತಾಗಿದೆ. ಕೊಲೆಯಾದವನು ಇನ್ನೊಂದು ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈತ ಪ್ರತೀಕಾರಕ್ಕೆ ತುತ್ತಾಗಬಹುದಾದ ಕಾರಣ ಬಂಧಿಸಿಡಲು ಸೂಚಿಸಲಾಗಿತ್ತು ಎಂದು ಗೊತ್ತಾಗಿದೆ.

ತುಮಕೂರು ಜಿಲ್ಲೆ ಮಧುಗಿರಿ ಮೂಲದ ದರ್ಶನ್ (21) ಎಂಬಾತನನ್ನು ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಬಳಿ ಕತ್ತು ಸೀಳಿ ಬರ್ಬರವಾಗಿ ಕೊಲೆಗೈಯಲಾಗಿತ್ತು. ಸ್ನೇಹಿತರ ಜತೆ ಮನೆಯಿಂದ ಹೊರಗೆ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದ. ಈತ ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ಕೊಲೆ ಯತ್ನ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್ ಇತ್ತೀಚೆಗೆ ಬೇಲ್ ಪಡೆದ ಬಳಿಕ ಇಬ್ಬರು ಸ್ನೇಹಿತರ ಜತೆ ಕಡೂರು ತಾಲೂಕಿನ ಮಾಡಾಳು ಗ್ರಾಮದ ತಾತನ ಮನೆಗೆ ಬಂದಿದ್ದ. ವಾರದ ಹಿಂದೆ ಮೃತ ದರ್ಶನ್ ಸ್ನೇಹಿತರು ಬೆಂಗಳೂರಿಗೆ ವಾಪಸ್ ಹೋಗಿದ್ದರು. ಗುರುವಾರ ರಾತ್ರಿ ಕಾರಿನಲ್ಲಿ ಬಂದ ಸ್ನೇಹಿತರ ಜತೆ ದರ್ಶನ್ ಹೋಗಿದ್ದ. ಫ್ರೆಂಡ್ಸ್ ಬಂದಿದ್ದಾರೆ, ಹೊಲದ ಶೆಡ್‌ನಲ್ಲಿ ಮಲಗುತ್ತೇನೆ ಎಂದು ತಾತನಿಗೆ ಹೇಳಿ ಹೋಗಿದ್ದ. ದರ್ಶನ್ ಕಾರಿನಲ್ಲಿ ಹೋಗಿದ್ದನ್ನು ಆತನ ತಾತ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್‌ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು. ಬೆಳಗ್ಗೆ ಮಾಡಾಳು ಗ್ರಾಮದ ತುಸು ದೂರದಲ್ಲಿ ದರ್ಶನ್ ಮೃತದೇಹ ಪತ್ತೆಯಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆಗೆ ರಾಜರಾಜೇಶ್ವರಿನಗರ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಇದೀಗ ಹೇಳಲಾಗುತ್ತಿದೆ. ಕಳೆದ ತಿಂಗಳು ರೌಡಿಶೀಟರ್‌ಗಳಾದ ಶ್ರೀಕಾಂತ ಅಲಿಯಾಸ್‌ ಕಾಂತ ಮತ್ತು ಶ್ರೀಧರ ಎಂಬಿಬ್ಬರ ಮಧ್ಯೆ ಗ್ಯಾಂಗ್ ವಾರ್ ನಡೆದಿತ್ತು. ಶ್ರೀಕಾಂತ ಮತ್ತು ಶರತ್‌ ಅಲಿಯಾಸ್‌ ಸೊಳ್ಳೆ ಎಂಬವರ ಮೇಲೆ ಶ್ರೀಧರ್ ಮತ್ತು ಟೀಮ್ ಅಟ್ಯಾಕ್ ನಡೆಸಿದ್ದರು. ಈ ತಂಡದಲ್ಲಿ ದರ್ಶನ್‌ ಕೂಡ ಇದ್ದ.

ಕಾರಿನಲ್ಲಿ ಹೋಗುತ್ತಿದ್ದ ಕಾಂತನಿಗೆ ಗುದ್ದಿ, ಕಾಂತ ಮತ್ತು ಶರತನ ಮೇಲೆ ಶ್ರೀಧರ ಮತ್ತು ಟೀಂ ಲಾಂಗ್ ಬೀಸಿದ್ದರು. ಈ ಘಟನೆ ಸಂಬಂಧ ಆರ್‌ಆರ್ ನಗರ ಠಾಣೆಯಲ್ಲಿ ಕೊಲೆಯತ್ನದ ದೂರು ದಾಖಲಾಗಿತ್ತು. ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶ್ರೀಧರ್‌ನನ್ನು ಬಂಧಿಸಿ ಆರ್‌ಆರ್ ನಗರ ಪೊಲೀಸರಿಗೆ ಒಪ್ಪಿಸಿದ್ದರು. ಆ ಸಮಯದಲ್ಲಿ ಉಳಿದ ಆರೋಪಿಗಳನ್ನು ಬಂಧಿಸಿ, ಇಲ್ಲವಾದರೆ ಕಾಂತನ ಕಡೆಯವರು ಪ್ರತೀಕಾರಕ್ಕಾಗಿ ಆರೋಪಿಗಳನ್ನು ಕೊಲೆ ಮಾಡಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಆರೋಪಿಯ ಬಂಧನವಾಗಿರಲಿಲ್ಲ.

ಇದೀಗ ಆರೋಪಿ ದರ್ಶನ್ ಕೊಲೆ ಕಡೂರಿನಲ್ಲಿ ನಡೆದಿದೆ. ದರ್ಶನ್‌ನನ್ನು ಮಾತುಕತೆಗೆ ಎಂದು ತಡರಾತ್ರಿ ಕರೆದುಕೊಂಡು ಹೋದ ಹುಡುಗರು ಕತ್ತು ಕುಯ್ದು ಕೊಲೆ ಮಾಡಿದ್ದಾರೆ. ಈ ಕೊಲೆಯನ್ನು ಕಾಂತನ ಹುಡುಗರೇ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ಕಡೂರಿನಲ್ಲಿ ಕತ್ತು ಸೀಳಿ ಯುವಕನ ಬರ್ಬರ ಕೊಲೆ

Exit mobile version