Site icon Vistara News

Mahadev App Scam: ಮಹದೇವ್ ಆ್ಯಪ್ ಮಾಲಿಕ ರವಿ ಉಪ್ಪಲ್‌ ದುಬೈನಲ್ಲಿ ಸೆರೆ, ಶೀಘ್ರವೇ ಭಾರತಕ್ಕೆ ಗಡೀಪಾರು

Mahadev App Scam ravi uppal

ಹೊಸದಿಲ್ಲಿ: ಕುಖ್ಯಾತ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ (Mahadev App Scam) ಪ್ರಮುಖ ಆರೋಪಿ ರವಿ ಉಪ್ಪಲ್‌ನನ್ನು (Ravi Uppal) ದುಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಶೀಘ್ರದಲ್ಲೇ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಛತ್ತೀಸ್‌ಗಡ ವಿಧಾನಸಭೆ ಚುನಾವಣೆಯ ಮೇಲೂ ಪ್ರಭಾವ ಬೀರಿದ್ದ ಈ ಹಗರಣದ ಮಹತ್ವದ ಬೆಳವಣಿಗೆ ಇದಾಗಿದೆ. ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ನೀಡಿದ ರೆಡ್ ಕಾರ್ನರ್ ನೋಟಿಸ್ (Red corner notice) ಆಧರಿಸಿ, ಆ್ಯಪ್ (Mahadev Betting App) ಇಬ್ಬರು ಮಾಲಿಕರಲ್ಲಿ ಒಬ್ಬನಾದ ರವಿ ಉಪ್ಪಲ್‌ನನ್ನು ಕಳೆದ ವಾರ ಬಂಧಿಸಲಾಗಿದೆ.

ದಿನವೊಂದಕ್ಕೆ ₹200 ಕೋಟಿ ಲಾಭ ಗಳಿಸಿದ ಮಹದೇವ ಆ್ಯಪ್ ನವೆಂಬರ್‌ನಲ್ಲಿ ಛತ್ತೀಸ್‌ಗಢದಲ್ಲಿ ನಡೆದ ಚುನಾವಣೆಗೂ ಮುನ್ನ ರಾಜಕೀಯ ಸಂಚಲನ ಮೂಡಿಸಿತ್ತು. ಆ್ಯಪ್‌ನ ಪ್ರವರ್ತಕರು ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದ ಭೂಪೇಶ್ ಬಘೇಲ್ (Bhupesh Baghel) ಅವರಿಗೆ ₹508 ಕೋಟಿ ಪಾವತಿಸಿದ್ದಾರೆ ಎಂದು ಇನ್ನೊಬ್ಬ ಆರೋಪಿ ಅಸಿಮ್ ದಾಸ್ ಆರೋಪಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು. ಆದರೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಆತ ಇದನ್ನು ಅಲ್ಲಗಳೆದಿದ್ದ.

ತನಿಖೆಯ ಸಮಯದಲ್ಲಿ, ಏಜೆನ್ಸಿಯು ಉಪ್ಪಲ್ ಪೆಸಿಫಿಕ್ ಮಹಾಸಾಗರದ ವನವಾಟು ಎಂಬ ದ್ವೀಪದೇಶದ ಪಾಸ್‌ಪೋರ್ಟ್ ಅನ್ನು ಹೊಂದಿದ್ದಾನೆ ಮತ್ತು ಅದನ್ನು ಬಳಸಿಕೊಂಡು “ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ” ಎಂದು ಕಂಡುಹಿಡಿದಿತ್ತು. ಆದರೆ ತನ್ನ ಭಾರತೀಯ ಪೌರತ್ವವನ್ನು ಬಿಟ್ಟುಕೊಟ್ಟಿಲ್ಲ. ಪಾಸ್‌ಪೋರ್ಟ್ ಬಳಸಿ ಈತ ಆಸ್ಟ್ರೇಲಿಯಾ ವೀಸಾಕ್ಕೂ ಅರ್ಜಿ ಸಲ್ಲಿಸಿದ್ದರು.

ಆ್ಯಪ್‌ನ ಇನ್ನೊಬ್ಬ ಪ್ರವರ್ತಕ ಸೌರಭ್ ಚಂದ್ರಕರ್‌ ಮದುವೆ ಫೆಬ್ರವರಿಯಲ್ಲಿ ದುಬೈನಲ್ಲಿ ₹200 ಕೋಟಿ ವೆಚ್ಚದಲ್ಲಿ ನಡೆದಿತ್ತು. ಮದುವೆಯಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅವರು ಇನ್ನೂ ತಲೆತಪ್ಪಿಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗಿನ ಇಡಿ ತನಿಖೆಯ ಪ್ರಕಾರ, ಆ್ಯಪ್‌ನ ಹಿಂದಿನ ಪ್ರಮುಖ ರೂವಾರಿಗಳು ಚಂದ್ರಕರ್ ಮತ್ತು ಉಪ್ಪಲ್. ಇವರು ಛತ್ತೀಸ್‌ಗಢದ ಭಿಲಾಯ್‌ನಿಂದ ಬಂದವರು. ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದರು. ಹಲವಾರು ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಇವರು ಮತ್ತು ಇವರ ಸಹಾಯಕರು ನಡೆಸುತ್ತಿದ್ದರು. ಭಾರತ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಯುಎಇಯ ವಿವಿಧ ನಗರಗಳಲ್ಲಿ ಕಾಲ್ ಸೆಂಟರ್‌ಗಳಿದ್ದವು. ಛತ್ತೀಸ್‌ಗಢ ಸೇರಿದಂತೆ ಭಾರತದಾದ್ಯಂತ ಕನಿಷ್ಠ 30 ಕಾಲ್ ಸೆಂಟರ್‌ಗಳನ್ನು ನಡೆಸಲಾಗಿದೆ.

ಈ ಸಂಸ್ಥೆ ನಡೆಸುತ್ತಿರುವ ಆ್ಯಪ್‌ಗಳು ಸಾವಿರಾರು ಕೋಟಿ ಮೌಲ್ಯದ ವಹಿವಾಟಿಗೆ ಸಾಕ್ಷಿಯಾಗಿದ್ದವು. ದೈನಂದಿನ ಲಾಭ ಸುಮಾರು ₹ 200 ಕೋಟಿಗಳಷ್ಟಿತ್ತು. ಚಂದ್ರಕರ್ ಮತ್ತು ಉಪ್ಪಲ್ ಪೊಲೀಸರು, ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಇವರಿಗೆ ನಿಯಮಿತವಾಗಿ ಲಂಚ ನೀಡುತ್ತಿದ್ದರು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಇಡಿ ಈ ಪ್ರಕರಣದಲ್ಲಿ ಇದುವರೆಗೆ 6 ಜನರನ್ನು ಬಂಧಿಸಿದೆ- ಸುನಿಲ್ ದಮಾನಿ, ಅನಿಲ್ ದಮಾನಿ, ಛತ್ತೀಸ್‌ಗಢ ಪೊಲೀಸ್ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಚಂದ್ರಭೂಷಣ ವರ್ಮಾ, ಕಾನ್‌ಸ್ಟೆಬಲ್ ಮತ್ತು ಸತೀಶ್ ಚಂದ್ರಕರ್.

ಇದರ ಭಾರತೀಯ ಕಾರ್ಯಾಚರಣೆಗಳನ್ನು ಸಹೋದರರಾದ ಅನಿಲ್ ಮತ್ತು ಸುನಿಲ್ ದಮಾನಿ ನಡೆಸುತ್ತಿದ್ದರು. ಹವಾಲಾ ಚಾನೆಲ್‌ಗಳನ್ನು ಬಳಸಿಕೊಂಡು ಛತ್ತೀಸ್‌ಗಢದ ದಮಾನಿ ಸಹೋದರರಿಗೆ ಹಣವನ್ನು ಕಳುಹಿಸಲಾಗುತ್ತಿತ್ತು. ಕಳೆದ ಎರಡು-ಮೂರು ವರ್ಷಗಳಲ್ಲಿ ತಾನು ಮತ್ತು ತನ್ನ ಸಹೋದರ ಹವಾಲಾ ಚಾನೆಲ್‌ಗಳ ಮೂಲಕ ₹ 60ರಿಂದ 65 ಕೋಟಿ ಲಂಚ ನೀಡಿರುವುದಾಗಿ ಅನಿಲ್‌ ದಮಾನಿ ತಿಳಿಸಿದ್ದಾನೆ.

ರಣಬೀರ್ ಕಪೂರ್, ಶ್ರದ್ಧಾ ಕಪೂರ್ ಮತ್ತು ಕಪಿಲ್ ಶರ್ಮಾ ಸೇರಿದಂತೆ ಹಲವಾರು ಬಾಲಿವುಡ್ ನಟರು ಮತ್ತು ಇತರ ಸೆಲೆಬ್ರಿಟಿಗಳು ಅಪ್ಲಿಕೇಶನ್‌ಗಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅಥವಾ ದುಬೈನಲ್ಲಿ ಸೌರಭ್ ಚಂದ್ರಕರ್ ಅವರ ಮದುವೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇಡಿಯಿಂದ ಸಮನ್ಸ್ ಪಡೆದಿದ್ದಾರೆ.

Exit mobile version