Site icon Vistara News

ಜಯನಗರದಲ್ಲಿ ಮಹಿಳೆಯ ಕೊಲೆ; ಇಸ್ಲಾಂ ಸ್ವೀಕರಿಸಿ, ಹಿಂದು ಧರ್ಮಕ್ಕೆ ಮರಳಿದ್ದ ವ್ಯಕ್ತಿ ಕೊಂದಿದ್ದೇಕೆ?

Murder Case

Man Stabs Woman To Death In Jayanagar Of Bengaluru

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಜಯನಗರದಲ್ಲಿ ಫರೀದಾ ಖಾನ್‌ (42) ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಓಯೋ ರೂಮ್‌ಗೆ (Oyo Room) ಕರೆದಕೊಂಡು ಹೋಗಿ, ಬಳಿಕ ಶಾಲಿನಿ ಗ್ರೌಂಡ್‌ನಲ್ಲಿ ಫರೀದಾ ಖಾನ್‌ ಅವರನ್ನು ಕೊಲೆ ಮಾಡಿದ ಆರೋಪಿ ಗಿರೀಶ್‌ ಇದಕ್ಕೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಬಳಿಕ ಹಿಂದು ಧರ್ಮಕ್ಕೆ ಮರಳಿದ್ದ. ಈತನನ್ನು ಮದುವೆಯಾಗಲು ಫರೀದಾ ಖಾನ್‌ (Farida Khan) ಒಪ್ಪದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

2011ರಲ್ಲಿ ಇಸ್ಲಾಂಗೆ ಮತಾಂತರ

ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ 32 ವರ್ಷದ ಗಿರೀಶ್‌ 2011ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಹಿಂದು ಧರ್ಮದ ಮೂರ್ತಿ ಪೂಜೆ ಆಚರಣೆ ವಿರೋಧಿಸಿ ಈತನು ಇಸ್ಲಾಂಗೆ ಮತಾಂತರಗೊಂಡು ರಿಹಾನ್‌ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದ. ಆದರೆ, ಈತನು ಮತಾಂತರಗೊಂಡಿದ್ದ ಕಾರಣ ತಂಗಿಗೆ ವರ ಸಿಕ್ಕಿರಲಿಲ್ಲ. ಹಾಗಾಗಿ, ಈತನು ಮತ್ತೆ ಹಿಂದು ಧರ್ಮಕ್ಕೆ ಮರಳಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

20 ಬಾರಿ ಇರಿದು ಕೊಂದಿದ್ದೇಕೆ?

ಇಸ್ಲಾಂ ಧರ್ಮದಿಂದ ಘರ್‌ ವಾಪ್ಸಿಯಾಗಿದ್ದ ಗಿರೀಶ್‌ ಹಾಗೂ ಕೋಲ್ಕೊತಾ ಮೂಲದ ಫರೀದಾ ಖಾನ್‌ ಮಧ್ಯೆ 2022ರಲ್ಲಿ ಪರಿಚಯವಾಗಿರುತ್ತದೆ. ಕೋಲ್ಕೊತಾದಿಂದ ಬೆಂಗಳೂರಿಗೆ ಬಂದು, ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಫರೀದಾ ಖಾನ್‌ ಹಾಗೂ ಗಿರೀಶ್‌ ಮಧ್ಯೆ ಪ್ರೇಮಾಂಕುರವಾಗಿರುತ್ತದೆ. ಇಬ್ಬರ ಮಧ್ಯೆ ಪ್ರೀತಿ ಮೂಡಿ, ಮದುವೆಯಾಗಲು ತೀರ್ಮಾನಿಸಿದರೂ ಸುಮಾರು 20 ಬಾರಿ ಚಾಕು ಇರಿದು ಫರೀದಾ ಖಾನ್‌ ಅವರನ್ನು ಗಿರೀಶ್‌ ಕೊಂದಿರುವುದು ಭೀಕರವಾಗಿದೆ.

Murder Case

ಪಿಜಿಯಲ್ಲಿ ತಂಗಿದ್ದ ಫರೀದಾ ಖಾನ್‌ ಮಾರ್ಚ್‌ 6ರಂದು ಕೋಲ್ಕೊತಾಗೆ ತೆರಳಿದ್ದಾರೆ. ಆಸ್ಪತ್ರೆಗೆ ಹೋಗಬೇಕು ಎಂಬದಾಗಿ ಹೇಳಿ ಅವರು ಕೋಲ್ಕೊತಾಗೆ ಹೋಗಿದ್ದರು. ಈಗಾಗಲೇ ಮದುವೆಯಾಗಿ, ಪತಿ ತೀರಿಕೊಂಡಿರುವ ಕಾರಣ ಏಕಾಂಗಿಯಾಗಿದ್ದ ಫರೀದಾ ಖಾನ್‌ ಬರುವಾಗ ಮಗಳನ್ನು ಕೂಡ ಕರೆದುಕೊಂಡು ಬಂದಿದ್ದರು. ಫರೀದಾ ಖಾನ್‌ ಬೆಂಗಳೂರಿಗೆ ಬಂದಾಗ ಆಕೆ ಸುಳ್ಳು ಹೇಳಿ ಕೋಲ್ಕೊತಾಗೆ ಹೋಗಿರುವುದು ಗೊತ್ತಾಗಿತ್ತು.

ರೀಮಾ ರಾಯ್‌ ಎಂಬ ಮಹಿಳೆ ಜತೆ ಫರೀದಾ ಖಾನ್‌ ಕೋಲ್ಕೊತಾಗೆ ಬೇರೆ ಕಾರಣಕ್ಕೆ ಹೋಗಿದ್ದಾರೆ ಎಂಬುದು ಗಿರೀಶ್‌ಗೆ ಗೊತ್ತಾಗಿದೆ. ರೀಮಾ ರಾಯ್‌ ಪತಿ ಕರೆ ಮಾಡಿ ಗಿರೀಶ್‌ಗೆ ಮಾಹಿತಿ ನೀಡಿದ್ದಾನೆ. ಇದೇ ವಿಚಾರಕ್ಕಾಗಿ ಫರೀದಾ ಖಾನ್‌ ಹಾಗೂ ಗಿರೀಶ್‌ ಮಧ್ಯೆ ಜಗಳವಾಗಿದೆ. ಪ್ರೀತಿಸುತ್ತಿದ್ದಾಕೆ ಮೋಸ ಮಾಡಿದಳು ಎಂದು ಆತನು ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ.

ಇದನ್ನೂ ಓದಿ: Murder case : ತಲಘಟ್ಟಪುರದಲ್ಲಿ ಚಾಕು ಇರಿದು ವ್ಯಕ್ತಿ ಹತ್ಯೆ; ಕೊಲೆಗಾರ ಎಸ್ಕೇಪ್‌

ಏನದು ಕೊಲೆ ಪ್ಲಾನ್?‌

ಮಾರ್ಚ್‌ 28ರಂದು ಗಿರೀಶ್‌ ಬರ್ತ್‌ಡೇ ಇದ್ದು, ಪಾರ್ಟಿ ಆಯೋಜಿಸಿದ್ದಾನೆ. ಜಗಳ ಎಲ್ಲ ಬಿಟ್ಟು ಮಾರ್ಚ್‌ 29ರಂದು ಫರೀದಾ ಖಾನ್‌ ಹಾಗೂ ಗಿರೀಶ್‌ ಪಾರ್ಟಿ ಮಾಡಿದ್ದಾರೆ. ಜೆಪಿ ನಗರದ ಓಯೋ ರೂಮ್‌ನಲ್ಲಿ ಇಬ್ಬರೂ ರಾತ್ರಿ ಕಳೆದು, ಮಾರ್ಚ್‌ 30ರಂದು ಫರೀದಾ ಖಾನ್‌ ಅವರನ್ನು ಶಾಲಿನಿ ಗ್ರೌಂಡ್ಸ್‌ಗೆ ಕರೆದುಕೊಂಡು ಬಂದಿದ್ದಾನೆ. ಆಗ, ನನ್ನನ್ನು ಮದುವೆಯಾಗು ಎಂದು ಗಿರೀಶ್‌ ಆಕೆಯನ್ನು ಕೇಳಿದ್ದಾನೆ. ಇದನ್ನು ಫರೀದಾ ಖಾನ್‌ ನಿರಾಕರಿಸಿದ್ದಾರೆ. ಆಗ ಇನ್ನಷ್ಟು ರೊಚ್ಚಿಗೆದ್ದ ಗಿರೀಶ್‌, ಫರೀದಾ ಖಾನ್‌ ಅವರಿಗೆ 20 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version