Site icon Vistara News

Nithari Killings Case: ನಿಥಾರಿ ಸರಣಿ ಹತ್ಯಾಕಾಂಡದ ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ಕ್ಲೀನ್‌ಚಿಟ್

nithari killers

ಅಲಹಾಬಾದ್:‌ ದೇಶವನ್ನೇ ನಡುಗಿಸಿದ ನಿಥಾರಿ ಸರಣಿ ಹತ್ಯಾಕಾಂಡ (Nithari Killings Case) ಪ್ರಕರಣದ ಪ್ರಮುಖ ಆರೋಪಿಗಳಾದ ಸುರಿಂದರ್ ಕೋಲಿ ಹಾಗೂ ಮೊನೀಂದರ್ ಸಿಂಗ್ ಪಂಧೇರ್‌ರನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ಸೋಮವಾರ ಖುಲಾಸೆಗೊಳಿಸಿದೆ.

ನೋಯ್ಡಾದ ನಿಥಾರಿ ಸರಣಿ ಹತ್ಯೆಗಳ ಪ್ರಕರಣ ದೇಶದಲ್ಲಿ ಸಂಚಲನ ಉಂಟುಮಾಡಿತ್ತು. ಇದೀಗ ಪ್ರಮುಖ ಆರೋಪಿಗಳಾದ ಸುರಿಂದರ್ ಕೋಲಿಯನ್ನು (Surendra Koli ) 12 ಪ್ರಕರಣಗಳಲ್ಲಿ ಹಾಗೂ ಆತನ ಉದ್ಯೋಗದಾತ ಮೊನೀಂದರ್ ಸಿಂಗ್ ಪಂಧೇರ್‌ನನ್ನು (Moninder Singh Pandher) ಎರಡು ಪ್ರಕರಣಗಳಲ್ಲಿ ಕೋರ್ಟ್‌ ಖುಲಾಸೆಗೊಳಿಸಿದೆ. ಕೆಳಗಿನ ಕೋರ್ಟ್‌ ನೀಡಿದ್ದ ಅವರ ಮರಣದಂಡನೆಯನ್ನು ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ಸೈಯದ್ ಅಫ್ತಾಬ್ ಹುಸೇನ್ ರಿಜ್ವಿ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಮರಣದಂಡನೆಗೆ ಗುರಿಯಾದ ಇಬ್ಬರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

17 ವರ್ಷಗಳ ಹಿಂದೆ ಬೆಳಕಿಗೆ ಬಂದ ಪ್ರಕರಣ ಇದಾಗಿದೆ. 2006ರಲ್ಲಿ ಆರೋಪಿ ಪಂಧೇರ್‌ ಮನೆಯ ಹಿಂದಿನ ಚರಂಡಿಯಲ್ಲಿ ನೋಯ್ಡಾ ಪೊಲೀಸರು ಮಾನವ ಅವಶೇಷಗಳನ್ನು ಪತ್ತೆ ಮಾಡಿದ್ದರು. ತನಿಖೆಯ ವೇಳೆ ಕೋಲಿಯ ಬಗ್ಗೆ ಅನುಮಾನ ಮೂಡಿತ್ತು. ಕೋಲಿ ಹಾಗೂ ಈತನ ಮಾಲಿಕ ಪಂಧೇರ್‌ರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸರಣಿ ಹತ್ಯೆಗಳ ವಿಚಾರ ಬೆಳಕಿಗೆ ಬಂದಿತ್ತು. ಮನೆಯ ಸುತ್ತಮುತ್ತಲಿನ ಭೂಮಿಯನ್ನು ಅಗೆದಾಗ ಹತ್ತಾರು ಮಕ್ಕಳ ಶವಗಳು ಪತ್ತೆಯಾಗಿದ್ದವು.

ಪ್ರಕರಣವನ್ನು ನಂತರ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ಗೆ (ಸಿಬಿಐ) ಹಸ್ತಾಂತರಿಸಲಾಗಿತ್ತು. ವಿಚಾರಣೆಯ ಬಳಿಕ, 2005 ಮತ್ತು 2006ರ ಇವರಿಬ್ಬರೂ ಹಲವಾರು ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರ ಮಾಡಿ, ಕೊಲೆ ಎಸಗಿದ್ದಾರೆ ಎಂದು ಗೊತ್ತಾಯಿತು. ಸಿಬಿಐ ಇವರ ಮೇಲೆ 16 ಪ್ರಕರಣಗಳನ್ನು ದಾಖಲಿಸಿತು. ಇವೆಲ್ಲವೂ ಅಪಹರಣ, ಅತ್ಯಾಚಾರ ಮತ್ತು ಕೊಲೆಗಳಿಗೆ ಸಂಬಂಧಿಸಿದ್ದವು.

ಇವರ ಮೇಲಿನ ಆರೋಪಗಳನ್ನು ಸಿಬಿಐ ಕೋರ್ಟ್‌ನಲ್ಲಿ ಸಾಬೀತುಪಡಿಸಲಾಗಿತ್ತು. ಇವರಿಗೆ ಮರಣದಂಡನೆ ವಿಧಿಸಲಾಗಿತ್ತು. ಇಬ್ಬರೂ ಹೈಕೋರ್ಟ್‌ಗೆ ಹೋಗಿದ್ದರು. ಈ ನಡುವೆ ಮಕ್ಕಳು ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಇಬ್ಬರು ಪೊಲೀಸರನ್ನೂ ಅಮಾನತುಗೊಳಿಸಲಾಗಿದೆ.

ನೋಯ್ಡಾದ ಡಿ-5, ಸೆಕ್ಟರ್ 31ರಲ್ಲಿ ಈ ಭಯಾನಕ ಮನೆ ಇನ್ನೂ ನಿಂತಿದೆ. 435 ಚದರ ಮೀಟರ್‌ಗಳ ಈ ಮನೆಯನ್ನು ಪೂರ್ತಿ ಲೂಟಿ ಮಾಡಲಾಗಿದೆ. ಇದರೊಳಗಿರುವ ಎಲ್ಲ ವಸ್ತುಗಳು ಕಾಣೆಯಾಗಿವೆ. ಇದರ ಸುತ್ತಮುತ್ತ ವಾಸಿಸುತ್ತಿದ್ದ ಹಲವಾರು ಕುಟುಂಬಗಳು ಈ ಮನೆಯ ಬಳಿ ವಾಸಿಸಲು ಅಂಜಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಸಂತ್ರಸ್ತ ಮಕ್ಕಳ ಕುಟುಂಬಗಳಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ಉದ್ಯೋಗಕ್ಕಾಗಿ ವಲಸೆ ಬಂದವರಾಗಿದ್ದರು.

ಇದನ್ನೂ ಓದಿ: Mass Murder: ಭಟ್ಕಳದ ಒಂದೇ ಕುಟುಂಬದ ನಾಲ್ವರ ಹತ್ಯಾಕಾಂಡದ ಕಾರಣ ಬಯಲು; ಆರೋಪಿಗಾಗಿ ಪೊಲೀಸರ ತೀವ್ರ ಶೋಧ

Exit mobile version