Site icon Vistara News

Online Gaming: ಆನ್‌ಲೈನ್‌ ಗೇಮಿಂಗ್‌ ಚಟ; ಸಾಲ ತೀರಿಸಲು ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

Theft in the BJP programme 13 accused arrested

ಲಕ್ನೋ: ಆನ್‌ಲೈನ್‌ ಗೇಮ್‌ನ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಸಂಬಂಧಿಸಿದ ಒಂದಲ್ಲ ಒಂದು ಅಪರಾಧ ಪ್ರಕರಣ ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಆನ್‌ಲೈನ್‌ ಗೇಮ್‌ನ (Online Gaming) ಚಟ ಹೊಂದಿದ್ದ ಯುವಕನೊಬ್ಬ ಸಾಲ ತೀರಿಸಲು ಇನ್ಶೂರೆನ್ಸ್‌ ಹಣಕ್ಕಾಗಿ (Life insurance) ಹೆತ್ತ ತಾಯಿಯನ್ನೇ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫತೇಹ್‌ಪುರದಲ್ಲಿ ನಡೆದಿದೆ (Crime News).

ಆರೋಪಿಯನ್ನು ಹಿಮಾಂಶು ಎಂದು ಗುರುತಿಸಲಾಗಿದೆ. ಈತ 50 ಲಕ್ಷ ರೂ.ಗಳ ವಿಮೆ ಹಣವನ್ನು ಪಡೆಯಲು ತನ್ನ ತಾಯಿಯನ್ನು ಕೊಂದು ನಂತರ ಶವವನ್ನು ಸೆಣಬಿನ ಚೀಲದಲ್ಲಿ ತುಂಬಿ ಯಮುನಾ ನದಿಯ ದಂಡೆಯಲ್ಲಿ ಎಸೆದಿದ್ದ. ಹಿಮಾಂಶು ಜನಪ್ರಿಯ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ ಒಂದರಲ್ಲಿ ಗೇಮಿಂಗ್‌ ಆಡುವ ಚಟ ಹೊಂದಿದ್ದ. ಇದಕ್ಕಾಗಿ ಆತನ ಸುಮಾರು 4 ಲಕ್ಷ ರೂ. ಸಾಲ ಮಾಡಿದ್ದ. ಇದನ್ನು ತೀರಿಸಲು ಆತ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಚಿನ ವಿವರ

ಘಟನೆಯ ಬಗ್ಗೆ ಫತೇಪುರದ ಹೆಚ್ಚುವರಿ ಎಸ್‌ಪಿ ವಿವರಿಸಿದ್ದಾರೆ. ʼʼಆನ್‌ಲೈನ್‌ ಗೇಮಿಂಗಿಗಾಗಿ ಕಂಡ ಕಂಡವರ ಬಳಿ ಹಿಮಾಂಶು ಸಾಲ ಮಾಡಿದ್ದ. ಹೀಗೆ ಸಾಲದ ಮೊತ್ತ 4 ಲಕ್ಷ ರೂ. ತಲುಪಿತ್ತು. ಇದನ್ನು ತೀರಿಸಲು ಸಂಚು ರೂಪಿಸಿದ್ದ ಆತ ತನ್ನ ಚಿಕ್ಕಮ್ಮನ ಆಭರಣಗಳನ್ನು ಕದ್ದು ಅದರಿಂದ ಬಂದ ಹಣದಿಂದ ತನ್ನ ಹೆತ್ತವರಿಗೆ ತಲಾ 50 ಲಕ್ಷ ರೂ.ಗಳ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಿದ್ದ. ತನ್ನ ತಂದೆ ರೋಷನ್‌ ಸಿಂಗ್‌ ಮನೆಯಿಂದ ಹೊರ ಹೋಗಿದ್ದ ಸಂದರ್ಭ ನೋಡಿ ತಾಯಿ ಪ್ರಭಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದ. ಬಳಿಕ ಶವವನ್ನು ಸೆಣಬಿನ ಚೀಲದಲ್ಲಿ ಅಡಗಿಸಿ ಟ್ರ್ಯಾಕ್ಟರ್ ಮೂಲಕ ಸಾಗಿಸಿ ಯಮುನಾ ನದಿಯ ದಡದಲ್ಲಿ ವಿಲೇವಾರಿ ಮಾಡಿದ್ದʼʼ ಎಂದು ತಿಳಿಸಿದ್ದಾರೆ.

ರೋಷನ್ ಸಿಂಗ್ ಚಿತ್ರಕೂಟ ದೇವಸ್ಥಾನದಿಂದ ಹಿಂದಿರುಗಿದಾಗ ಪತ್ನಿ ಮತ್ತು ಮಗ ಮನೆಯಲ್ಲಿರಲಿಲ್ಲ. ಇದರಿಂದ ಅನುಮಾನಗೊಂಡ ಅವರು ನೆರೆಹೊರೆಯವರ ಬಳಿ ವಿಚಾರಿಸಿದ್ದರು. ಸಮರ್ಪಕ ಉತ್ತರ ದೊರೆಯದೆ ಅವರು ಸಮೀಪದ ತನ್ನ ಸಹೋದರನ ನಿವಾಸಕ್ಕೆ ಭೇಟಿ ನೀಡಿದ್ದರು. ಅವರಿಗೂ ವಿಷಯ ತಿಳಿದಿರಲಿಲ್ಲ. ಈ ವೇಳೆ ಕೆಲವರು ನದಿಯ ಬಳಿ ಟ್ರ್ಯಾಕ್ಟರ್‌ನಲ್ಲಿ ಹಿಮಾಂಶು ಇರುವುದಾಗಿ ತಿಳಿಸಿದ್ದರು. ಇದರಿಂದ ಅನುಮಾನಗೊಂಡ ರೋಷನ್ ಸಿಂಗ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: Murder Case : ಕಲ್ಲಿನಿಂದ ಜಜ್ಜಿ ಅತ್ತೆಯನ್ನೇ ಕೊಂದ ಅಳಿಯ

ಕೂಡಲೇ ಪೊಲೀಸರು ನದಿ ದಂಡೆಯಲ್ಲಿ ಶೋಧ ನಡೆಸಿದರು. ಆಗ ಪ್ರಭಾ ಅವರ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಿಮಾಂಶುವನ್ನು ಬಂಧಿಸಲಾಯಿತು. ವಿಚಾರಣೆಯ ವೇಳೆ ಆತ ಸಾಲದ ಹೊರೆಯನ್ನು ನಿವಾರಿಸುವ ಉದ್ದೇಶದಿಂದ ತನ್ನ ತಾಯಿಯನ್ನು ಕೊಲ್ಲಲು ರೂಪಿಸಿದ ಆಘಾತಕಾರಿ ಯೋಜನೆಯನ್ನು ಬಹಿರಂಗಪಡಿಸಿದ್ದಾನೆ. ಕೊಲೆ ಮಾಡಿ ಪರಾರಿಯಾಗಲು ಆತ ಸಂಚು ರೂಪಿಸಿದ್ದ. ಆದರೆ ಪೊಲೀಸರು ತ್ವರಿತವಾಗಿ ಕಾರ್ಯ ಪ್ರವೃತ್ತರಾಗಿ ಆತನನ್ನು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version