Site icon Vistara News

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ಕಸದಿಂದಲೇ ರಸ ಎಂಬುದ ಅರಿಯಿರಿ!

ಪೂರ್ವಾಪರ ವಿಚಾರಗಳ ಬಗೆಗೆ ಸೂಕ್ತವಾಗಿ ತಿಳಿದು ಹೆಜ್ಜೆ ಇರಿಸುವ ಪ್ರಯತ್ನ ಮಾಡಿ. ಎಂತದೇ ಕ್ಲಿಷ್ಟ ಸಂದರ್ಭಗಳಲ್ಲೂ ಶನೈಶ್ವರನೇ ನಿಮ್ಮನ್ನು ಕಾಯುವ ರುದ್ರ ಶಕ್ತಿಯಾಗಿ ಮಾರ್ಪಾಡುಗೊಳ್ಳುತ್ತಾನೆ. ದುಡಿಯುವ ಶಕ್ತಿಯನ್ನು ಕೈಗಳಿಗೆ ಒದಗಿಸುತ್ತಾನೆ. ಮನಸ್ಸನ್ನು ನಿಯಂತ್ರಿಸಿ. ಯುದ್ಧದ ಮುನ್ನವೇ ಸೋಲಲು ತಯಾರಾಗಲು ಮುಂದಾಗದಿರಿ. ಕಸದಿಂದಲೇ ರಸ ಎಂಬುದನ್ನು ಅರಿತಿರಿ. ಚಿನ್ನ, ಬೆಳ್ಳಿ, ಮುತ್ತು ರತ್ನ ವ್ಯಾಪಾರಗಳಿಗಿಂತ ರದ್ದಿ ಸಾಮಾನು, ಕಬ್ಬಿಣದ ವಸ್ತುಗಳು ಭಾಗ್ಯ ತರಬಹುದಾಗಿದೆ. ಶ್ರೀ ಹರಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪೂರ್ವ

ವೃಷಭ: ಶನೈಶ್ವರನಿಂದ ಬದುಕು ಬಂಗಾರ

ಸುಖದ ದಾರಿಯು ಜರೂರಾಗಿ ಸಿಕ್ಕಿದರೆ ದುಡಿದು ಕೋಟಿ ಕೋಟಿ ಸಂಪಾದಿಸಬಲ್ಲೆ ಎಂಬ ಯೋಚನೆಯಲ್ಲೇ ಇರಬೇಡಿ. ಜೀವನದ ಓಟದಲ್ಲಿ ಕಟ್ಟ ಕಡೆಗೆ ನೂರಕ್ಕೆ ನೂರು ಸುಖಿ ತಾನು ಎಂದು ತಿಳಿಯುವ ವ್ಯಕ್ತಿ ಇಲ್ಲವೇ ಇಲ್ಲ. ಜಗತ್ತಿನಲ್ಲಿ ಇರುವ ಸುಖವೇ ಅದ್ಭುತ ಎಂದರಿತು ಮುಂದಡಿ ಇರಿಸಿ. ನಿಮ್ಮ ಬದುಕನ್ನು ಬಂಗಾರವಾಗಿಸುವ ಶನೈಶ್ವರ ಹಾಗೂ ಕೇತು ಗ್ರಹಗಳು ಅಮಿತ ಉತ್ಸಾಹವನ್ನು, ಲವಲವಿಕೆಯನ್ನು ನಿಮ್ಮಲ್ಲಿ ತುಂಬಿ ಅಗಾಧವಾದುದನ್ನು ಸಾಧಿಸುವ ದಾರಿ ತೋರಬಲ್ಲರು. ಗಣೇಶನನ್ನು ಸ್ತುತಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ನೈಋತ್ಯ

ಮಿಥುನ: ಗೊಂದಲ ಬಿಡಿ, ಗುರಿಯತ್ತ ಮುನ್ನೆಡೆಯಿರಿ

ಅಗಾಧವಾದ ಗುರು ಬಲ, ಕೃಷ್ಣವೇಣಿ ತಟಿನೀ ತೀರದಲ್ಲಿ ಸಂಸ್ಥಾಪಿತಳಾದ ಮಾಯಿ ದುರ್ಗಾಂಬಾ ನಿಮಗೆ ಸಂಭ್ರಮ ತರುವ ವಿಚಾರದಲ್ಲಿ ಕಟಿಬದ್ಧ ಎನ್ನಬಹುದು. ನಿಮ್ಮ ದ್ವಿಸ್ವಭಾವದ ರೀತಿ ನೀತಿಗಳಾಗಿರುವ, ಅದು, ಇದು, ಹಾಗೆ, ಹೀಗೆ ಎಂದು ಬದಲಾಗುವ ಯೋಚನೆಗಳ ಕಾರಣದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ವಿಷಕಕ್ಕುವ ರಾಹುವೇ ಲಾಭ ಒದಗಿಸುವ ಶ್ರೀ ಮನ್ನಾರಾಯಣನಾಗಿರುವಾಗ ನಿಮ್ಮ ಗುರಿ ತಲುಪಲು ಪ್ರಯತ್ನಿಸಿ. ಗೆಲುವಿಗೆ ಶ್ರೀ ದೇವಿಯ ಸಹಾಯವಿದೆ. ಅವಳನ್ನು ಸ್ತುತಿಸಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಉತ್ತರ

ಕಟಕ: ಕಾಲಾಯ ತಸ್ಮೈ ನಮಃ ಎಂಬುದ ತಿಳಿದಿರಿ

ಮನೆಯಲ್ಲಿಯೇ ಶಾಂತಿ ಸಿಗದು ಎಂದಾದರೆ ಮನಸ್ಸು ರೋಸಿ ಹೋಗುತ್ತದೆ. ನಿರಂತರವಾದ ಶೂಲದಿಂದ ಶನೈಶ್ವರ ತಿವಿದು ತತ್ತರಿಸುವಂತೆ ಮಾಡುತ್ತಿದ್ದಾನೆ ಎಂಬುದು ಸರಿಯೇ. ಅಷ್ಟಮ ಶನಿ ಕಾಟದಿಂದ ಒದ್ದಾಟದಲ್ಲಿ ಇದ್ದೀರಿ. ಬಿರುಗಾಳಿಯಾಗುವ ಮನದ ಸ್ಥಿತಿಗತಿಗಳನ್ನು ನಿಯಂತ್ರಿಸಿ. ಮಾತು ಕಡಿಮೆ ಮಾಡಿ. ನೀವು ಬುದ್ಧಿವಂತರೇ ಸರಿ. ಆದರೆ ಕಾಲ ಘಟ್ಟದ ಈ ಬಿಂದುವಿನಲ್ಲಿ ಮಹಾ ದಡ್ಡನೊಬ್ಬ ವಿದ್ವಾಂಸ ಎಂದು ಪೂಜಿತನಾಗಬಹುದು. ಕಾಲ ಹಾಗಿದೆ. ಕಾಲಾಯ ತಸ್ಮೈ ನಮಃ ಎಂಬುದನ್ನು ತಿಳಿದಿರಿ. ಮಾರುತಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ

ಸಿಂಹ: ಹೊಸ ಕೆಲಸ, ಪ್ರಮೋಷನ್‌ ಪಡೆಯಲು ಸಕಾಲ

ನಿಮ್ಮಲ್ಲಿ ಸಿಂಹ ಶಕ್ತಿಯೂ ಯುಕ್ತಿಯೂ ಇದೆ. ಬಿರುಸಾಗಿ ಇರುವ ಧೂರ್ತರನ್ನು ನಿಗ್ರಹಿಸುವ ಒರಟುತನವೂ ಇದೆ. ಆದರೆ ಒರಟುತನ ಬೇಡ. ನುಡಿದರೆ ಮುತ್ತಿನ ಹಾರದಂತಿರಬೇಕು. ಬಸವಣ್ಣನವರ ಈ ವಚನವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಧೈರ್ಯ, ಸಾಹಸ, ಬೌದ್ಧಿಕ ಶಕ್ತಿ ಇತ್ಯಾದಿ ಸರ್ವ ಸಂಪನ್ನತೆಗಳನ್ನು ಹೊಂದಿದ ನೀವು ಈಗ ಹೊಸ ಕೆಲಸವನ್ನು ಸಂಪಾದಿಸಿಕೊಳ್ಳಬಲ್ಲಿರಿ. ಇರುವಲ್ಲೇ ಪ್ರಮೋಷನ್‌ ಪಡೆಯಬಲ್ಲಿರಿ. ವಿದೇಶಕ್ಕೆ ಹೋಗಿ ಕೆಲಸ ಮಾಡುವ ಯೋಚನೆ ಕೈ ಬಿಡದಿರಿ. ದುರ್ಗಾಳನ್ನು ಸ್ತುತಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ದಕ್ಷಿಣ

ಕನ್ಯಾ: ಆಳಾಗಿ ದುಡಿದರೆ ಅರಸನಾಗಿ ಆಳುವಿರಿ!

ನಿಮ್ಮ ಮನೆಯಂಗಳದಲ್ಲಿ ಪಂಡಿತರು, ವಿದ್ವಾಂಸರು ಸೇರಿ ನಿಮ್ಮ ಜತೆಗಿನ ಸ್ನೇಹ ಬಯಸುವ ಕಾಲ ಇದು. ಯಾಕೆಂದರೆ ನಿಮಗೀಗ ಚುನಾವಣೆಯಿರಲಿ, ಯಾರನ್ನೇ ದೊರೆಯಾಗಿಸುವ ಕಿಂಗ್‌ ಮೇಕರ್‌ ಶಕ್ತಿ ಇರಲಿ, ನಿಯಂತ್ರಣ ಸಾಧಿಸಿ ಸೊಗಸಾಗಿ ಮಾತನಾಡಿ ಜನಮನ ಗೆಲ್ಲುವ ಪ್ರತಿಭೆಯೇ ಇರಲಿ, ಒಳ್ಳೆಯ ವರ್ಚಸ್ಸನ್ನು ಒದಗಿಸುವ ಸಂಪನ್ನತೆಯನ್ನು ಪಡೆದಿದೆ. ಆಳಾಗಿ ದುಡಿಯುವ ಉತ್ಸಾಹ ತೋರಿದರೆ ಅರಸನಾಗಿ ಉಣ್ಣುವ ಅದೃಷ್ಟವೂ ಘನವಾಗಿದೆ. ಶ್ರೀ ಲಕ್ಷ್ಮೀ ವಲ್ಲಭ ವೇಣುಗೋಪಾಲಸ್ವಾಮಿಯನ್ನು ಆರಾಧಿಸಿ, ಒಳಿತಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ವಾಯವ್ಯ

ತುಲಾ: ಆತ್ಮವಿಶ್ವಾಸವೇ ಗೆಲುವಿನ ಮೆಟ್ಟಿಲು

ಮಾತು ತೂಕಬದ್ಧವಾಗಿರಲಿ. ಮೌನವೂ ತೊಂದರೆ ತರಬಹುದು. ಪಂಚಮಶನಿ ಕಾಟದಿಂದಾಗಿ ನಿಮಗೆ ರಾಹು, ಕೇತು, ಚಂದ್ರ, ಶನೈಶ್ವರರು ಹಲವು ತೊಂದರೆಗಳಿಗೆ ಕಾರಣರಾಗುವ ಸಂದರ್ಭ ಅಧಿಕವೇ ಆದರೂ ಆತ್ಮವಿಶ್ವಾಸವಿರಲಿ. ಯಾವುದೋ ಕಿವಿಗಳು ಎಷ್ಟೇ ಗೋಗರೆದರೂ ನಿಮ್ಮ ನೋವಿನ ಮಾತುಗಳನ್ನು ಕೇಳಿಸಿಕೊಳ್ಳಲಾರವು. ಕೇಳಿಸಿಕೊಳ್ಳುವ ಹೃದಯವಂತಿಕೆ ದೇವರಿಂದ ಮಾತ್ರ ಸಾಧ್ಯ. ಮನೆದೇವರು, ಮಾರುತಿ, ದುರ್ಗಾ ಹಾಗೂ ಗಣೇಶರನ್ನು ಆರಾಧಿಸಿ. ಅನಿರೀಕ್ಷಿತ ಸಹಾಯ ನಿಮಗೆ ಪ್ರಾಪ್ತವಾಗುತ್ತದೆ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ವೃಶ್ಚಿಕ: ವಿವಾಹಾಪೇಕ್ಷಿಗಳಿಗೆ ಶುಭ ಕಾಲ

ಎಂದೂ ಸಹಕಾರಿಯಾಗದ ಶನೈಶ್ವರ ನಿಮಗೆ ಅತುಳ ಬಲವನ್ನು ಒದಗಿಸುತ್ತಾನೆ. ನಂಬಿಕೆ ಇಡಿ. ಅಂದುಕೊಂಡಿದ್ದು ತುಸು ವಿಳಂಬ ನೆರವೇರಿದರೆ ತಾಳ್ಮೆ ಕಳಕೊಳ್ಳದಿರಿ. ವಿಳಂಬವಾದರೂ ಸರಿ ಪರಿಪೂರ್ಣವಾದ ಯಶಸ್ಸು ಶತಃಸಿದ್ಧ. ದಾಂಪತ್ಯದ ವಿಷಯದಲ್ಲಿ ಸಹಕಾರ, ಹೊಂದಾಣಿಕೆ ನಿಮಗೆ ಲಭ್ಯವಾಗಲಿದೆ. ವಿವಾಹಾಪೇಕ್ಷಿಗಳಿಗೆ ಇದು ಕನಸು ಈಡೇರಲು ಶುಭ ಸಂದರ್ಭವೂ ಆಗಿದೆ. ಹಠತ್ತಾದ ಆರೋಗ್ಯದಲ್ಲಿನ ಏರುಪೇರುಗಳ ಬಗೆಗೆ ನಿಗಾ ಇರಲಿ. ನಿರ್ಜಲೀಕರಣದ ತೊಂದರೆ ಎದುರಾದೀತು. ದುರ್ಗಾಳ ಆರಾಧನೆಯಿಂದ ಒಳಿತು.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ

ಧನಸ್ಸು: ಬಾಳ ಸಂಗಾತಿಯೊಂದಿಗೆ ಆಪ್ತವಾಗಿರಿ!

ನಿಮ್ಮ ಬೆಂಬಲಕ್ಕೆ ಘನವಾದ ಶಕ್ತಿಯ ಮೂಲ ನಿಧಿಯೇ ಶನೈಶ್ವರನಾಗಿದ್ದಾನೆ. ವೈರಿಗಳನ್ನು ಹಣಿಯುವ ಶಕ್ತಿ ಪಡೆಯುತ್ತೀರಿ. ದೈವ ಬಲ ನಿಮ್ಮ ದೊಡ್ಡ ಆಸ್ತಿ. ಗಣೇಶನ ಆರಾಧನೆ ಮುಖ್ಯವಾಗಲಿ. ಹಿರಿಯರ ಆಸ್ತಿಯೇ ಇರಲಿ. ಇನ್ನೇನೋ ವಿಧದ ಪ್ರಾಪ್ತಿಗಳೇ ಇರಲಿ ನಿಮಗೆ ಲಭ್ಯವಾಗಲು ಇದು ಸಕಾಲ. ಬಾಳ ಸಂಗಾತಿಯ ಜತೆ ಆಪ್ತವಾಗಿ ಮಾತನಾಡಿ. ಹಲವು ರೀತಿಯ ಒತ್ತಡಗಳಿಂದ ದೂರ ಸರಿಯಲು ಇದು ಸಂಜೀವಿನಿಯಾಗಿದೆ. ರಾಹು ಪೀಡೆಯಿಂದಾಗಿ ಕಿರಿಕಿರಿ ಇದೆ. ಮಕ್ಕಳನ್ನು ಮೃದುಮಾತುಗಳಿಂದ ಸಂತೈಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪೂರ್ವ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಎಲ್ಲರನ್ನೂ ಯೋಚಿಸದೇ ನಂಬಬೇಡಿ!

ಹೊಸ ಹೊಸ ಅನುಭವ ಪಡೆಯಲಿದ್ದೀರಿ. ʻʻದುಷ್ಮಾನ್‌ ಕಹಾ ಹೈʼʼ ಎಂದು ಕೇಳಿದರೆ ʻʻದುಷ್ಮನ್‌ ಬಗಲ್‌ ಮೇ ಹೈʼʼ ಎಂಬ ಆಶ್ಚರ್ಯ ಚಕಿತ ಉದ್ಗಾರ ನಿಮ್ಮ ಬಾಯಿಂದ ಹೊರಬರಬಹುದು. ಹೀಗಾಗಿ ಎಲ್ಲರನ್ನೂ ಸರ್ರನೆ ನಂಬದಿರಿ. ಬೆನ್ನಿಗೆ ಚೂರಿ ಹಾಕುವ ಜನ ಧೂರ್ತತನ ತೋರಬಲ್ಲ, ದರಿದ್ರತನದಿಂದ ನಿಮ್ಮ ಮನಸ್ಸಿಗೆ ಖೇದ ತರುವ ಸಂದರ್ಭ ಆಪ್ತರಿಂದಲೇ ನಿರ್ಮಾಣವಾಗುತ್ತದೆ. ಆರ್ಥಿಕ ಬಲಾಢ್ಯತೆ ನಿಮಗೆ ಒದಗಿದರೂ ಟೋಪಿ ಹಾಕುವವರಿದ್ದಾರೆ ಎಚ್ಚರ. ರಾಮರಕ್ಷಾಸ್ತ್ರೋತ್ರ ಓದಿ. ಬಿರುಗಾಳಿಯನ್ನು ತಡೆಯಿರಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಆಗ್ನೇಯ

ಕುಂಭ: ತಪ್ಪು ಆಗದಂತೆ ಎಚ್ಚರಿಕೆ ವಹಿಸಿ

ಶುಕ್ರ ಹಾಗೂ ಬುಧರಿಂದ ಸಮಾಧಾನದ ನಿಟ್ಟುಸಿರು ಬಿಡಬಲ್ಲಿರಿ. ಬಿಟ್ಟರೆ ಕುಜ, ಕೇತು, ರಾಹು, ರವಿ ಕಾಡಬಲ್ಲರು. ಯಾಕೆಂದರೆ ಸಾಡೇಸಾತಿ ದಿನಗಳಿವು. ಶತ್ರುಗಳು ಮಾನಸಿಕ ಹಿಂಸೆ ಕೊಡುತ್ತಾರೆ. ಹೀಗಾಗಿ ವೈರಿಗಳನ್ನು ಸೃಷ್ಟಿಸಿಕೊಳ್ಳಬೇಡಿ. ವಾದವಿವಾದಗಳು ಬೆಳೆಯದಂತೆ ಜಾಣ್ಮೆ ತೋರಿ. ತಪ್ಪು ಸಂಭವಿಸಲಿ ನಿಮ್ಮಿಂದ ಎಂದು ಸೂಕ್ತ ಸಂದರ್ಭಕ್ಕಾಗಿ ಕಾದಿರುವ ಜನ ಸರತಿ ಸಾಲಲ್ಲಿ ನಿಂತಿದ್ದಾರೆ. ನೀವು ಅಯೋಗ್ಯರು ಎಂದು ಪ್ರಚಾರ ಮಾಡುತ್ತಾರೆ. ಎಚ್ಚರ ಇರಲಿ. ಹನುಮಾನ್‌ ಚಾಲೀಸಾ ಓದಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಮೀನ: ಮಕ್ಕಳಿಂದ ಕಿರಿಕಿರಿ ಸಾಧ್ಯತೆ

ಹಲವಾರು ಹಸಿರು ಫಲವಂತಿಕೆಯ ದೊಡ್ಡ ಅಂಗಳ ಕಂಡರೂ ವಾಸ್ತವದಲ್ಲಿ ಅದು ಬರಡು ಭೂಮಿಯಾಗಿ ಬಿಡುತ್ತದೆ. ಗುರು ಬಲ ಇದ್ದರೂ ರಾಹುವು ಗುರುವಿನ ಕೈ ಕಟ್ಟಿದ್ದಾನೆ. ಉತ್ತಮವಾದರೂ ಚಂದ್ರನ ಬಲ ಸಾಕಾಗದು. ಮಕ್ಕಳು ಕಿರಿಕಿರಿ ತರಬಹುದಾಗಿದೆ. ಕುಜನಿಂದ ಒಂದು ದೃಢ ಚಿತ್ತವು ಒದಗಿ ಬರಲು ಸಾಧ್ಯವಿದೆ. ಆದರೆ ಇದೊಂದೇ ಬಲ ಸಾಕಾಗದು. ಆದರೂ ಕೆಲಸದ ಸ್ಥಳದಲ್ಲಿ ಕೆಲವು ಸಹೃದಯರು ಸಿಗಲು ಸಾಧ್ಯತೆ ಇದೆ. ದಶರಥರಾಜ ವಿರಚಿತ ಶನೈಶ್ವರ ಸ್ತ್ರೋತ್ರ ಪಠಿಸಿದರೆ ಕ್ಷೇಮ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version