Site icon Vistara News

Akshaya Tritiya 2023 : ಪುಣ್ಯ ಸಂಗ್ರಹಣೆಯ ವಿಶೇಷ ದಿನ ಅಕ್ಷಯ ತೃತೀಯಾ

Akshaya Tritiya 2024

ಗಣೇಶ ಭಟ್ಟ
ಬೇಸಿಗೆಯ ಪ್ರಖರವಾದ ಬೇಗೆ ಎಲ್ಲೇಲ್ಲೂ ವ್ಯಾಪಿಸಿರುವ ಸಮಯವಾದ ವೈಶಾಖಮಾಸದಲ್ಲಿ ಪರಶುರಾಮ ಜಯಂತಿ, ಶಂಕರ ಜಯಂತಿ, ನೃಸಿಂಹ ಜಯಂತಿ, ಕೂರ್ಮಜಯಂತಿ, ಶನೈಶ್ಚರ ಜಯಂತಿ ಮೊದಲಾದ ಧಾರ್ಮಿಕವಾಗಿ ಮಹತ್ವ ಪಡೆದ ಹಬ್ಬಗಳಲ್ಲಿ ಬಹು ಮುಖ್ಯವಾಗಿ ವೈಶಾಖಮಾಸದ ಶುಕ್ಲ ಪಕ್ಷದ ತೃತೀಯಾದಂದು ಆಚರಿಸಲ್ಪಡುವ ಹಬ್ಬವೇ ಅಕ್ಷಯ ತೃತೀಯಾ (Akshaya Tritiya 2023) ಅಥವಾ ಅಕ್ಷಯ ತದಿಗೆ.

ಅಕ್ಷಯ ತೃತೀಯಾ ಕೃತ ಯುಗದ ಆರಂಭದ ದಿನ. ವಿಷ್ಣುವಿನ ದಶಾವತಾರಗಳಲ್ಲಿ ಆರನೇ ಅವತಾರವಾದ ಜನ್ಮತಃ ಬ್ರಾಹ್ಮಣ ಹಾಗೂ ಕರ್ಮದಿಂದ ಕ್ಷತ್ರಿಯನಾದ ಪರಶುರಾಮರ ಅವತಾರವಾದ ದಿನ, ಅಂದರೆ ಪರಶುರಾಮ ಜಯಂತಿ. ಭಗೀರಥನ ಪ್ರಯತ್ನದಿಂದ ಗಂಗೆ ಭೂಮಿಗೆ ಬಂದ ದಿನ. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನ. ಹಿಂದೂ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಜನಿಸಿದ ದಿನವೂ ಹೌದು. ಕಲ್ಯಾಣಕ್ರಾಂತಿಯ ರುವಾರಿ ಬಸವೇಶ್ವರರ ಜನ್ಮದಿನವೂ ಹೌದು.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯೆಯು ವರ್ಷದ ಮೂರುವರೇ ಶುಭದಿನಗಳಾದ ಅಕ್ಷಯ್ಯತೃತೀಯೆ, ವಿಜಯದಶಮಿ, ದೀಪಾವಳಿ ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಆ ಕಾರಣಕ್ಕಾಗಿ ಈ ದಿನದಂದು ಯಾವುದೇ ಶುಭಕಾರ್ಯವನ್ನು ಮಾಡಬಹುದು.

ಈ ದಿನದ ಮಹತ್ವವೇನು?

ನಿರ್ಣಯ ಸಿಂಧುವಿನ ಪ್ರಕಾರ ‘ವೈಶಾಖ ಶುಕ್ಲ ತೃತೀಯಾ ಅಕ್ಷಯ ತೃತೀಯೋಚ್ಯತೇ ||’ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ದಿನವೇ ಅಕ್ಷಯ ತೃತೀಯಾ. ಈ ದಿನ ಸಂಗ್ರಹಿಸಿದ ಪುಣ್ಯಗಳಿಗೆ ಕ್ಷಯ(ನಾಶ)ವೇ ಇಲ್ಲ ಎಂಬ ಕಾರಣಕ್ಕೆ ಈ ದಿನವನ್ನು ‘ಅಕ್ಷಯ ತೃತೀಯಾ’ಎಂದು ಕರೆಯಲಾಗಿದೆ. ಭವಿಷ್ಯ ಪುರಾಣದಲ್ಲಿ;
ಯತ್ಕಿಂಚಿತ್ ದೀಯತೇದಾನಂ ಸ್ವಲ್ಪಂ ವಾ ಯದಿ ವಾ ಬಹು |
ತತ್ಸರ್ವಂ ಅಕ್ಷಯಂ ಯಸ್ಮಾತ್‌ತೇನೇಯಂ ಅಕ್ಷಯಾ ಸ್ಮೃತಾ ||

ಈ ದಿನದಂದು ಸ್ವಲ್ಪವಾಗಲಿ, ಬಹಳವಾಗಲಿ ಅಥವಾ ಎಷ್ಟೇ ದಾನ ಮಾಡಿದರೂ ಅದರ ಫಲ ಅಕ್ಷಯವಾಗುವುದು.
ಯಾ ಮನ್ವಾದ್ಯಾಯುಗಾದ್ಯಾಶ್ಚ ತಿಥಿಯಸ್ತಾಸು ಮಾನವಃ |
ಸ್ನಾತ್ವಾ ಹುತ್ವಾ ಚ ದತ್ವಾ ಚ ಜಪ್ತ್ವಾ ನಂತ ಫಲಂ ಲಭೇತ್ ||
ಉದಕುಂಭಾನ್ಸಕನಕಾನ್ ಸಾನ್ನಾನ್ ಸರ್ವರಸೈಃ ಸಹ |
ಯವಗೋಧೂಮಚಣಕಾನ್ ಸಕ್ತುದಧ್ಯೋದನಂತಥಾ |
ಗ್ರೈಷ್ಮಿಕಂ ಸರ್ವಮೇವಾತ್ರ ಸಸ್ಯಂದಾನೇ ಪ್ರಶಸ್ಯತೇ ||

ಅಕ್ಷಯ ಫಲದಾಯಿನಿಯಾದ ಈ ದಿನ ದೇವ-ಪಿತೃಪೂಜೆಗೆ ಪ್ರಶಸ್ತವಾಗಿದ್ದು, ಗಂಗಾದಿ ಪುಣ್ಯ ನದಿಗಳಲ್ಲಿ, ಸಮುದ್ರದಲ್ಲಿ ಸ್ನಾನ, ಭಗವಂತನ್ನು ಉದ್ದೇಶಿಸಿ ಹೋಮ, ಬೇಸಿಗೆ ಕಾಲದಲ್ಲಿ ಹೇಚ್ಚಾಗಿ ಬಳಸಲ್ಪಡುವ ನೀರಿನ ಪಾತ್ರೆ, ಬಂಗಾರ, ಹಸಿವು ಹೋಗಲಾಡಿಸುವ ವಿವಿಧ ಬಗೆಯ ಆಹಾರಗಳು, ಬಾಯಾರಿಕೆ ನೀಗಿಸುವ ಕಬ್ಬಿನರಸ ಮುಂತಾದ ಪಾನೀಯಗಳು,ಅಕ್ಕಿ,ಗೋದಿ, ಕಡಲೆ ಮುಂತಾದ ಧಾನ್ಯಗಳು, ಹಿಟ್ಟು, ಮೊಸರು, ಅನ್ನ, ಸಸ್ಯ ಒಟ್ಟಿನಲ್ಲಿ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ಆಹಾರ, ವಸ್ತು ಮೊದಲಾದವುಗಳನ್ನು ಸತ್ಪಾತ್ರರಿಗೆದಾನ, ಇಷ್ಟದೇವತೆಯ ಜಪ-ತಪಗಳನ್ನು ಮಾಡಿದರೆ, ಅನಂತಫಲ ದೊರಕುವುದು ಎಂದು ಮಹಾಭಾರತ-ಭವಿಷ್ಯಪುರಾಣವೇ ಮೊದಲಾದ ಪುರಾಣಗಳಲ್ಲಿ ಹೇಳಿದೆ.

ಬೃಹತ್ಪರಾಶರ ಸಂಹಿತೆಯಲ್ಲಿ ; ದಾನಮೇಕಂಕಲೌಯುಗೇ’ ಎಂದು ಹೇಳಿದಂತೆ, ಯಾರಿಗೆ ಆಹಾರ, ಬಟ್ಟೆ, ಔಷಧಿ ಮುಂತಾದವುಗಳ ಸಹಾಯದ ಅವಶ್ಯಕತೆಯಿದೆಯೋ ಅವರಿಗೆ ತನು-ಮನ-ಧನಗಳ ಸಹಾಯ-ಸಹಕಾರ-ಸೇವೆ ಮಾಡಿದರೇ ಸರ್ವಪುಣ್ಯಗಳೂ ಲಭಿಸುವವು. ಅದೇ ನಿಜವಾದ ಭಗವಂತನ ಪೂಜೆಯಾಗಿದೆ. ದಾನದಿಂದಲೇ ಮನಸ್ಸಂತೋಷ, ಚಿತ್ತಶ್ಶುದ್ಧಿದೊರಕುವುದು, ‘ಅಕ್ಷಯ ಮೋಕ್ಷಸ್ಯಕಾರಣಮ್’ ಎನ್ನುವಂತೆ ಈ ದಿನ ಇವೆಲ್ಲವನ್ನು ಮಾಡುವುದರಿಂದ ಮೋಕ್ಷಕ್ಕೂ ಕಾರಣವಾಗುವುದು ಎಂದು ಪುರಾಣಗಳೂ ಸಾರಿವೆ.

ಪುರಾಣ ಕತೆಗಳಲ್ಲೇನಿದೆ?

ಅಕ್ಷಯ ತೃತೀಯಾ ವ್ರತದ ಕುರಿತಾಗಿ ಪ್ರಸಿದ್ಧ ಪುರಾಣ ಕಥೆಯೊಂದು ಹೀಗೆದೆ. ಹಿಂದೆ ಧರ್ಮದಾಸನೆಂಬ ವೈಶ್ಯನಿದ್ದ. ಅತ್ಯಂತ ಸದಾಚಾರಿಯಾದ ಆತ ದೇವತೆಗಳನ್ನು, ವಿಪ್ರರನ್ನು ಸದಾ ಶ್ರದ್ಧೆಯಿಂದ ಪೂಜಿಸುತ್ತಿದ್ದ. ಅಕ್ಯಯ ತೃತೀಯಾ ವ್ರತದ ಮಹತ್ವ ಅರಿತ ಆತ,ಅಕ್ಷಯ ತೃತೀಯಾ ಹಬ್ಬದ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡಿ, ವಿಧಿ ಪೂರ್ವಕ ಭಗವಂತನ್ನು ಪೂಜಿಸಿ, ಸತ್ಪಾತ್ರರಿಗೆ ಬಂಗಾರ,ವಸ್ತ್ರ, ಆಹಾರ ಧಾನ್ಯಗಳನ್ನು ದಾನ ಮಾಡಿದ.

ವರ್ಷ ಕಳೆದಂತೆ ಅಶಕ್ತನಾಗಿಯೂ, ವೃದ್ಧನಾಗಿಯೂ ಈ ದಿನ ಉಪವಾಸ-ದಾನ-ಧರ್ಮಗಳನ್ನು ಕೈಗೊಂಡನು. ಅದೇ ವೈಶ್ಯನು ಮುಂದಿನ ಜನ್ಮದಲ್ಲಿ ಕುಶಾವತಿ ರಾಜ್ಯದ ರಾಜನಾದನು. ರಾಜನಾದಾಗಲೂ ಹಿಂದಿನ ಜನ್ಮಸಂಸ್ಕಾರ ವಿಶೇಷದಿಂದ ಅಕ್ಷಯ್ಯ ತೃತೀಯಾ ವ್ರತವನ್ನು ಆಚರಿಸಿದ. ಅಂದು ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ಯಥೇಚ್ಛವಾಗಿ ದಾನ ಮಾಡಿದ. ಸಾಕ್ಷಾತ್‌ ದೇವೆಂದ್ರನೇ ವೇಷ ಮರೆಸಿ ವಿಪ್ರ ವೇಷತೊಟ್ಟು ಅಕ್ಷಯ ತೃತೀಯಾ ದಂದು ರಾಜನ ದಾನಯಜ್ಞದಲ್ಲಿ ಪಾಲ್ಗೊಳ್ಳುತ್ತಿದ್ದ.

ರಾಜನಿಗೆ ತನ್ನ ಶ್ರದ್ಧೆ ಮತ್ತು ಭಕ್ತಿಯಕುರಿತಾಗಿ ಸ್ವಲ್ಪವೂ ಅಹಂಕಾರ ವಿರಲಿಲ್ಲ. ಈ ವ್ರತದ ಪ್ರಭಾವದಿಂದ ರಾಜ ಅತ್ಯಂತ ವೈಭವಶಾಲಿ ಯಾಗಿ ರಾಜ್ಯವಾಳಿದರೂ ಧರ್ಮಮಾರ್ಗದಿಂದ ವಿಚಲಿತನಾಗಿರಲಿಲ್ಲ. ಅಕ್ಷಯ ತೃತೀಯಾ ದಿನದಂದು ರಾಜ ನೆಡೆಸಿದ ದೇವಪೂಜನ ಹಾಗೂ ಸತ್ಪಾತ್ರರಿಗೆ ಸುವಸ್ತುಗಳನ್ನು ನೀಡಿದ ಫಲವಾಗಿ ಧನವಂತ-ಪ್ರತಾಪಿ ರಾಜನೆನಿಸಿಕೊಂಡು ಸದ್ಗತಿ ಹೊಂದಿದ.

ಆಚರಣೆ ಹೇಗೆ ಮಾಡಬೇಕು?

ಎಲ್ಲಾ ಹಬ್ಬಗಳಂತೆ ಈ ದಿನ ಪ್ರಾತಃಕಾಲದಲ್ಲಿ ನಿತ್ಯಕರ್ಮ ಮಂಗಲಸ್ನಾನ, ನವವಸ್ತ್ರ ಧಾರಣೆ ಮಾಡಿ, ಲಕ್ಷ್ಮೀನಾರಾಯಣನನ್ನು ಸಂದರ್ಶಿಸಿ, ಪೂಜಿಸಿ ಸತ್ಪಾತ್ರರಿಗೆ ಗ್ರೀಷ್ಮಕಾಲದಲ್ಲಿ ಉಪಯೋಗಿಸುವ ವಸ್ತುಗಳನ್ನು ದಾನಮಾಡಿ, ಅಥವಾ ದಾನ ಮಾಡುವೆಎಂದು ಸಂಕಲ್ಪಿಸಬೇಕು. ಫಲಾಹಾರ ಸೇವಿಸಿ, ಅಕ್ಷಯ ತೃತೀಯಾದ ಮಹತ್ವಸಾರುವ ಪುರಾಣಕಥೆ ಶ್ರವಣ ಮಾಡಬೇಕು.
ಪುರಾಣಗಳಲ್ಲಿ ಅಕ್ಷಯ ತೃತೀಯಾದಂದು ಬಂಗಾರ ಖರೀದಿಸಿ ಎಂದು ಹೇಳಿದ್ದಾರೆಯೇ?. ಇದು ಬಹಳ ಮುಖ್ಯವಾದ ಪ್ರಶ್ನೆ. ಪದ್ಮಪುರಾಣದ 64ನೇ ಅಧ್ಯಾಯದಲ್ಲಿ;
ವೈಶಾಖ ಶುಕ್ಲಪಕ್ಷೇತು ತೃತೀಯಾಯೈರು ಪೋಷಿತಾ |
ಅಕ್ಷಯಂ ಫಲಮಾಪ್ನೋತಿ ಸರ್ವಸ್ಯ ಸುಕೃತಸ್ಯ ಚ ||
ಸಾ ತಥಾಕೃತ್ತಿಕೋಪೇತಾ ವಿಶೇಷೇಣ ಸುಪೂಜಿತಾ |
ತತ್ರದತ್ತಂ ಹುತಂಜಪ್ತಂ ಸರ್ವಮಕ್ಷಯಮುಚ್ಯತೇ ||

ಎಂದು ಹೇಳಲಾಗಿದೆ. ಯಾರು ವೈಶಾಖಮಾಸದ ಶುಕ್ಲ ಪಕ್ಷದ ತೃತೀಯಾ ದಿನ ವ್ರತೋಪವಾಸಾದಿಗಳನ್ನು ಮಾಡುವರೋ ಅವರು ತಮ್ಮ ಸಮಸ್ತ ಸತ್ಕರ್ಮಗಳಿಗೆ ಅಕ್ಷಯವಾದ (ಎಂದಿಗೂ ನಾಶವಾಗದ, ಬರಿದಾಗದ) ಪುಣ್ಯಫಲವನ್ನು ಪಡೆಯುವರು. ಈ ದಿನ ಕೃತ್ತಿಕಾ ನಕ್ಷತ್ರದಿಂದ ಕೂಡಿದರೆ ಇನ್ನೂ ವಿಶೇಷ ಪೂಣ್ಯದಿನ. ಈ ದಿನ ಮಾಡುವದಾನ, ಹವನ ಹಾಗೂ ಜಪ ಇವೆಲ್ಲವೂ ಉಳಿದ ದಿನಗಳಿಗಿಂತ ವಿಶೇಷ ಪುಣ್ಯಫಲ ನೀಡುವುದಾಗಿದೆ ಎಂದು, ಈ ದಿನ ದಾನಾದಿಗಳನ್ನು ಮಾಡಲು ಪುರಾಣಗಳಲ್ಲಿ ಹೇಳಿದ್ದಾರೆಯೇ ಹೊರತೂ ಬಂಗಾರ ಇತ್ಯಾದಿ ಸಂಗ್ರಹಿಸಲು ಎಲ್ಲಿಯೂ ಹೇಳಿಲ್ಲ.

ಬಂಗಾರ ಅಥವಾ ಯಾವುದೇ ಅಮೂಲ್ಯವಾದ ವಸ್ತುಗಳನ್ನು ಅವಶ್ಯಕತೆ ಇದ್ದಾಗ ಯಾವಾಗ ಬೇಕಾದರೂ ಖರೀದಿಸಬಹುದು. ನಮ್ಮ ಸನಾತನ ಗ್ರಂಥಗಳಲ್ಲಿ ಈ ದಿನದಂದು ಬಂಗಾರ ಇತ್ಯಾದಿ ಸುವಸ್ತುಗಳನ್ನು ದಾನ ಮಾಡಲು ಹೇಳಿದ್ದಾರೆಯೇ ಹೊರತೂ, ಎಲ್ಲಿಯೂ ಬಂಗಾರ, ಭೂಮಿ, ಮನೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಕುರಿತಾಗಲಿ, ಸಂಗ್ರಹಿಸುವುದರ ಕುರಿತಾಗಿ ಹೇಳಿಲ್ಲ.

ಈ ದಿನ, ಸುವಸ್ತುಗಳನ್ನು ಸತ್ಪಾತ್ರರಿಗೆ ದಾನ ಮಾಡಿ ಪುಣ್ಯಸಂಗ್ರಹಣೆ ಮಾಡುವ ದಿನವಾಗಿದ್ದು, ಚಿನ್ನ ಮುಂತಾದವುಗಳ ಖರೀದಿಸುವ ಅಥವಾ ಸಂಗ್ರಂಹಣೆಯ ದಿನವಲ್ಲ. ಕೊಟ್ಟರೆಕೊಟ್ಟ ಪುಣ್ಯ ಅಕ್ಷಯವಾಗುವುದು ಎಂದು ಹೇಳಲಾಗಿದೆಯೇ ಹೊರತೂ ಖರೀದಿಸಿದ, ಸಂಗ್ರಹಿಸಿದ ವಸ್ತು ಅಕ್ಷಯ್ಯವಾಗುವುದು ಎಂಬುದಕ್ಕೆ ಯಾವುದೇ ಪ್ರಾಚೀನ ಗ್ರಂಥಗಳ ಆಧಾರವಿಲ್ಲ. ಚಿನ್ನ ಖರೀದಿಸುವ ಪರಿಪಾಠ ಬಂದ್ದದ್ದು ತೀರಾಇತ್ತೀಚಿಗೆ. ಮೌಲ್ಯ ವರ್ಧನೆ ವಸ್ತುಗಳನ್ನು ಖರೀದಿಸುವುದು, ಸಂಗ್ರಹಿಸುವುದು ಕಾಲಾಂತರದಲ್ಲಿ ಆರ್ಥಿಕವಾಗಿ ಲಾಭದದೃಷ್ಟಿಯಿಂದ, ಆ ದೃಷ್ಟಿಯಿಂದ ಬೇಕಾದರೆ ಖರೀದಿಸಬಹುದು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಎಲ್ಲಾ ಹಬ್ಬಗಳೂ ನಮ್ಮಜೀವನಕ್ಕೆ ಅಮೂಲ್ಯ ಸಂದೇಶ-ಪಾಠಗಳನ್ನು ಸಾರುತ್ತವೆ. ಅಕ್ಷಯ ತೃತೀಯಾ ಕೂಡ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿ ಎನ್ನುವ ಬಹುದೊಡ್ಡ ಸಂದೇಶವನ್ನು ಹೇಳಿದೆ. ಈ ಹಿನ್ನಲೆಯಲ್ಲಿ ಹಬ್ಬವನ್ನು ಅರಿತು ಆಚರಿಸಿದಲ್ಲಿ ಇಹ-ಪರಕ್ಕೆ ಕ್ಷೇಮವಾಗುವುದು.

– ಲೇಖಕರು ಸಂಸ್ಕೃತ ಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)

ಇದನ್ನೂ ಓದಿ: Akshaya Tritiya 2023 : ಅಕ್ಷಯ ತೃತೀಯಕ್ಕೆ ಉಂಟು ಪುರಾಣದ ನಂಟು

Exit mobile version