Site icon Vistara News

ಶ್ರೀಕೃಷ್ಣ ಜನ್ಮಾಷ್ಟಮಿ ದಿನ ವ್ರತದ ಆಚರಣೆ ಹೇಗೆ?

krishna

ಭಾರತದಲ್ಲಷ್ಟೇ ಅಲ್ಲ, ಸಂಪೂರ್ಣ ವಿಶ್ವದಲ್ಲೇ ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ಶ್ರೀಕೃಷ್ಣ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂಗಳ ಪ್ರೀತಿಯ ಹಬ್ಬ, ವ್ರತ ಮತ್ತು ಉತ್ಸವ ಎಲ್ಲವೂ ಆಗಿರುವ ಇದರ ಆಚರಣೆ ಕೂಡ ಆನಂದದಾಯಕವಾದುದು.

ಗೋಕುಲ, ಮಥುರಾ, ಬೃಂದಾವನ, ದ್ವಾರಕಾ, ಪುರಿ ಇವು ಶ್ರೀಕೃಷ್ಣನ ಉಪಾಸನೆಗೆ ಸಂಬಂಧಿಸಿದ ಪವಿತ್ರಸ್ಥಾನಗಳು. ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ವಿಶೇಷ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಬೃಂದಾವನದಲ್ಲಿ ಡೋಲೋತ್ಸವವಾಗುತ್ತದೆ. ಅದು ನೋಡಲು ಆನಂದದಾಯಕ. ಇತರ ಕ್ಷೇತ್ರಗಳಲ್ಲೂ ಶ್ರೀಕೃಷ್ಣನ ದೇವಾಲಯಗಳಲ್ಲೂ ಈ ಉತ್ಸವಕ್ಕೆ ಹೆಚ್ಚಿನ ವಿಜೃಂಭಣೆ. ಕೆಲವರು ತಮ್ಮ ಮನೆಯಲ್ಲಿಯೇ ಗೋಕುಲ-ಬೃಂದಾವನದಂತೆ ಪ್ರತಿರೂಪ ಮಾಡಿ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸುತ್ತಾರೆ.

ವೈಷ್ಣವ ಪಂಥೀಯರು ಈ ದಿನವನ್ನು ಅತೀವ ಭಕ್ತಿಭಾವದಿಂದ ಆಚರಿಸುತ್ತಾರೆ. ಅನೇಕ ವೈಷ್ಣವ ದೇವಾಲಯಗಳಲ್ಲಿ ದೀಪಾರಾಧನೆ, ಶೋಭಾಯಾತ್ರೆ, ಕೃಷ್ಣಲೀಲೆ, ಭಾಗವತ ಪಠಣ, ಕೀರ್ತನೆ, ಭಜನೆ, ನೃತ್ಯ-ಗಾಯನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮವು ಶ್ರಾವಣ ಕೃಷ್ಣ ಪಾಡ್ಯದಿಂದ ಶ್ರಾವಣ ಕೃಷ್ಣಾಷ್ಟಮಿಯವರೆಗೂ ನಡೆಯುತ್ತದೆ.

ಶ್ರೀಕೃಷ್ಣಜನ್ಮಾಷ್ಟಮಿ ವ್ರತ

ಈ ವ್ರತವನ್ನು ಅಷ್ಟಮಿಯಂದು ಮಾಡಲಾಗುತ್ತದೆ ಮತ್ತು ಎರಡನೆಯ ದಿನ ಅರ್ಥಾತ್ ಶ್ರಾವಣ ಕೃಷ್ಣ ನವಮಿಯಂದು ಪಾರಾಯಣ ಮಾಡಿ ವ್ರತವನ್ನು ಸಂಪನ್ನಗೊಳಿಸುತ್ತಾರೆ. ಈ ವ್ರತವು ಎಲ್ಲರೂ ಮಾಡುವಂತಹದ್ದಾಗಿದೆ. ಈ ವ್ರತವನ್ನು ಮಕ್ಕಳು, ಯುವಕರು, ವೃದ್ಧರು, ಸ್ತ್ರೀ- ಪುರುಷರು ಎಲ್ಲರೂ ಮಾಡಬಹುದು. ಪಾಪನಾಶ, ಸೌಖ್ಯವೃದ್ಧಿ, ಸಂತತಿ-ಸಂಪತ್ತಿ ಮತ್ತು ವೈಕುಂಠ ಪ್ರಾಪ್ತಿಯು ಈ ವ್ರತದ ಫಲವಾಗಿದೆ.

ಅಷ್ಟಮಿ ವ್ರತಕ್ಕೆ ಸಂಬಂಧಿಸಿದ ಉಪವಾಸ
ಈ ದಿನ ದಿನವಿಡೀ ಉಪವಾಸವನ್ನು ಮಾಡಲಾಗುತ್ತದೆ. ನಿರಾಹಾರ ಉಪವಾಸವು ಸಾಧ್ಯವಿಲ್ಲದಿದ್ದರೆ ಫಲಾಹಾರ ಮಾಡಬಹುದು. ಇದಕ್ಕೆ ಒಂದು ದಿನ ಮುಂಚೆ ಅರ್ಥಾತ್ ಶ್ರಾವಣ ಕೃಷ್ಣ ಸಪ್ತಮಿಯಂದು ಅಂಶಾತ್ಮಕ ಭೋಜನವನ್ನು ಮಾಡುತ್ತಾರೆ.ʼ

ಇದನ್ನೂ ಓದಿ: Krishna Janmashtami 2022 | ಶ್ರೀಕೃಷ್ಣ ಜನ್ಮಾಷ್ಟಮಿ ಎಂದು? ವಿಶೇಷತೆ ಏನು?

ಶ್ರೀಕೃಷ್ಣಜನ್ಮಾಷ್ಟಮಿಯ ಪೂಜಾವಿಧಿ

ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಭಗವಾನ್‌ ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ್ದನು. ಆದುದರಿಂದ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುತ್ತದೆ. ಮಧ್ಯರಾತ್ರಿ ಸ್ನಾನವನ್ನು ಮಾಡಿ ಪೂಜೆಯನ್ನು ಆರಂಭಿಸಲಾಗುತ್ತದೆ. ‘ಭಗವಾನ್‌ ಶ್ರೀಕೃಷ್ಣನ ಜನ್ಮವಾಗಿದೆ’ ಎಂಬ ಭಾವದಿಂದ ಪೂಜೆಯನ್ನು ಮಾಡಬೇಕು.

ಶ್ರೀಕೃಷ್ಣಜನ್ಮಾಷ್ಟಮಿಯಂದು ಇವುಗಳನ್ನು ಮಾಡಿ!

೧. ನಿತಮ್ಮ ಬಂಧು ಮಿತ್ರರಿಗೆ ಕಿರುಸಂದೇಶಗಳನ್ನು ಕಳುಹಿಸಿ ಅವರಿಗೆ ಶ್ರೀಕೃಷ್ಣನ ನಾಮಜಪವನ್ನು ಮಾಡಲು ಹೇಳಿ.

೨. ಶ್ರೀಕೃಷ್ಣನ ದೇವಸ್ಥಾನದಲ್ಲಿ ಸ್ವಚ್ಛತೆಯ ಸೇವೆಯನ್ನು ಮಾಡಿ.

೩. ಶ್ರೀಕೃಷ್ಣನ ಕುರಿತು ಎಲ್ಲರಲ್ಲಿ ತಿಳಿವು ಜ್ಞಾನಗಳು ಹೆಚ್ಚುವಂತೆ ಮಾಡಿ. ಕೃಷ್ಣವಿರೋಧ ಕಂಡರೆ ವಿರೋಧಿಸಿ.

೪. ಈ ದಿನ ಕೃಷ್ಣತತ್ತ್ವವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಅದನ್ನು ಗ್ರಹಿಸಲು ‘ಓಂ ನಮೋ ಭಗವತೇ ವಾಸುದೇವಾಯ’ ನಾಮಜಪವನ್ನು ಮಾಡಿ.

ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣತತ್ತ್ವವು ಇತರ ದಿನಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಅಂದರೆ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದುದರಿಂದ ಶ್ರೀಕೃಷ್ಣನ ಚೈತನ್ಯದಾಯಕ ತತ್ತ್ವಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಈ ಲಹರಿಗಳಿಂದ ಜೀವಕ್ಕೆ ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಈ ಎರಡೂ ಸ್ತರಗಳಲ್ಲಿ ಲಾಭವಾಗುತ್ತದೆ. ಈ ಕಾರ್ಯನಿರತ ತತ್ತ್ವಲಹರಿಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಈ ದಿನ ‘ಓಂ ನಮೋ ಭಗವತೇ ವಾಸುದೇವಾಯ|’ ಈ ನಾಮಜಪವನ್ನು ಹೆಚ್ಚೆಚ್ಚು ಮಾಡಿರಿ.

ಇದನ್ನೂ ಓದಿ: Krishna Janmashtami̇ 2022 | ಕೃಷ್ಣ ಜನ್ಮಾಷ್ಟಮಿ ಶಾಪಿಂಗ್‌ ಮೇನಿಯಾ

ಕೃಷ್ಣಗಾಯತ್ರಿ

ದೇವಕೀನಂದನಾಯ ವಿದ್ಮಹೇ | ವಾಸುದೇವಾಯ ಧೀಮಹಿ | ತನ್ನೋ ಕೃಷ್ಣಃ ಪ್ರಚೋದಯಾತ್ ||

ಅರ್ಥ: ನಾವು ದೇವಕೀಪುತ್ರ ಕೃಷ್ಣನನ್ನು ಅರಿತಿದ್ದೇವೆ. ವಾಸುದೇವನ ಧ್ಯಾನ ಮಾಡುತ್ತೇವೆ. ಆ ಕೃಷ್ಣನು ನಮ್ಮ ಬುದ್ಧಿಗೆ ಸತ್‌ಪ್ರೇರಣೆ ಕೊಡಲಿ.

ಸಂಗ್ರಹ: ವಿನೋದ್ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ

Exit mobile version