Site icon Vistara News

ಇಂಡಿಯಾಗೇಟ್‌ನಲ್ಲಿ ಸ್ಥಾಪಿಸಲಾಗುವ ಸುಭಾಶ್ಚಂದ್ರ ಬೋಸ್‌ ಪ್ರತಿಮೆ ಕೆತ್ತನೆಗೆ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌

ಅರುಣ್‌ ಯೋಗಿರಾಜ್

ಮೈಸೂರು: ಕಳೆದ ವರ್ಷ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಕೆತ್ತಿದ ನಗರದ ಶಿಲ್ಪಕಲಾವಿದ ಅರುಣ್‌ ಯೋಗಿರಾಜ್ ಈಗ ಮತ್ತೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ.

ನವ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಪ್ರತಿಷ್ಠಾಪಿಸಲಾಗುವ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಕೆತ್ತುವ ಜವಾಬ್ದಾರಿಯನ್ನು ಅರುಣ್‌ ಯೋಗಿರಾಜ್‌ ಅವರಿಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ವಹಿಸಿದೆ.

ಸುಭಾಶ್ಚಂದ್ರ ಬೋಸ್‌ ಪ್ರತಿಮೆಯೊಂದಿಗೆ ಅರುಣ್‌

ಈಗಾಗಲೇ 12 ಅಡಿ ಎತ್ತರದ ಶಂಕರಾಚಾರ್ಯರ ಆಕರ್ಷಕ ಪ್ರತಿಮೆ ನಿರ್ಮಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮನಗೆದ್ದಿರುವ ಅರುಣ್‌ ಯೋಗಿರಾಜ್‌ ಅವರಿಗೆ ಅವರ ಸೂಚನೆಯಂತೆಯೇ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆ ನಿರ್ಮಿಸುವ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರತಿಮೆಯ ಕೆತ್ತನೆಯನ್ನು ಆಗಸ್ಟ್‌ 15ರೊಳಗೆ ಪೂರ್ಣಗೊಳಿಸುವಂತೆ ಸಚಿವಾಲಯ ಸೂಚಿಸಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಲ್ಲಿ ಅರುಣ್‌ ಯೋಗಿರಾಜ್‌ ನಿರಾತರಾಗಿದ್ದಾರೆ.

ರಾಷ್ಟ್ರ ರಾಜಧಾನಿಯ ಐತಿಹಾಸಿಕ ಸ್ಥಳ ಇಂಡಿಯಾ ಗೇಟ್‌ನ ಅಮರ ಜವಾನ್ ಜ್ಯೋತಿ ಹಿಂಭಾಗದಲ್ಲಿನ ಬೃಹತ್ ಮಂಟಪದಲ್ಲಿ ಬೋಸ್‌ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ. ಬೋಸ್‌ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ ಬಳಿ ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿರುವ ಕೊಡುಗೆಯನ್ನು ಗೌರವಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು, ಬೋಸ್‌ ಅವರ 125ನೇ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಘೋಷಿಸಿದ್ದರು.

ಕಳೆದ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದ ಅರುಣ್‌ ಯೋಗಿರಾಜ್‌ ಸುಭಾಶ್ಚಂದ್ರ ಬೋಸ್‌ ಅವರ ಪ್ರತಿಮೆಯ ಮಾದರಿಯನ್ನು ಕೊಟ್ಟು, ಅವರ ಒಪ್ಪಿಗೆ ಪಡೆದಿದ್ದರು. ಒಂದೇ ಕಪ್ಪು ಗ್ರ್ಯಾನೆಟ್‌ ಕಲ್ಲಿನಲ್ಲಿ 30 ಅಡಿ ಎತ್ತರದ ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಕಲ್ಲನ್ನು ತೆಲ್ಲಂಗಾಣ ರಾಜ್ಯದಲಿ ಗುರುತಿಸಲಾಗಿದ್ದು, ಅದನ್ನು ದೆಹಲಿಗೆ ತರಲಾಗುತ್ತಿದೆ. ದೆಹಲಿಯಲ್ಲಿಯೇ ನಿರ್ಮಾಣ ಕಾರ್ಯ ನಡೆಯಲಿದೆ.

ಬುಧವಾರ ಅರುಣ್‌ ಯೋಗಿರಾಜ್‌ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಅವರು ನ್ಯಾಷನಲ್‌ ಗ್ಯಾಲರಿ ಆಫ್‌ ಮಾರ್ಡನ್‌ ಆರ್ಟ್‌ (ಎನ್‌ಜಿಎಂಎಂ) ಜತೆಗೂಡಿ ಈ ಪ್ರತಿಮೆಯನ್ನು ನಿರ್ಮಿಸಲಿದ್ದಾರೆ. ಆಗಸ್ಟ್‌ 15ರ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. 20 ರಿಂದ 25 ಶಿಲ್ಪಿಗಳು ಅರುಣ್‌ ಅವರಿಗೆ ಈ ಕಾರ್ಯದಲ್ಲಿ ನೆರವಾಗಲಿದ್ದಾರೆ.

ಯಾರು ಈ ಅರಣ್‌ ಯೋಗಿರಾಜ್‌?

ಮೈಸೂರಿನ ಖ್ಯಾತ ಶಿಲ್ಪಿಗಳ ಕುಟುಂಬದಿಂದ ಬಂದವರು ಅರುಣ್‌ ಯೋಗಿರಾಜ್‌. ಅವರ ತಂದೆ ಯೋಗಿರಾಜ್‌ ಕೂಡ ನುರಿತ ಶಿಲ್ಪಿಯಾಗಿದ್ದಾರೆ. ಅರುಣ್‌ ಅವರ ಅಜ್ಜ ಬಸವಣ್ಣ ಶಿಲ್ಪಿ ಅವರು ಮೈಸೂರಿನ ರಾಜಾಶ್ರಯ ಪಡೆದಿದ್ದರು. 37 ವರ್ಷದ ಅರುಣ್‌, ಬಾಲ್ಯದಿಂದಲೇ ಕೆತ್ತನೆಯಲ್ಲಿ ತೊಡಗಿಕೊಂಡವರು. ಆದರೆ ಎಂಬಿಎ ಮಾಡಿದ ನಂತರ ಅವರು ಕೆಲ ಕಾಲ ಖಾಸಗಿಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಆದರೆ ಕೆತ್ತನೆಯ ವೃತ್ತಿಯ ಸೆಳೆತದಿಂದ ಅವರಿಗೆ ಬಿಡಿಸಿಕೊಳ್ಳಲಾಗಲಿಲ್ಲ. ಹೀಗಾಗಿ 2008 ರಿಂದ ಮತ್ತೆ ಕೆತ್ತನೆಯ ವೃತ್ತಿಯನ್ನು ಮುಂದುವರಿಸಿದ್ದರು.

ಇದನ್ನೂ ಓದಿ| 31 ಅಡಿ ಎತ್ತರದ ಬೃಹತ್‌ ಹನುಮಾನ್‌ ವಿಗ್ರಹ ಪ್ರತಿಷ್ಠಾಪನೆಗೆ ಸಿದ್ಧ

ಮೈಸೂರಿನಲ್ಲಿನ ಸ್ವಾಮಿ ರಾಮಕೃಷ್ಣ ಪರಮಹಂಶರ ಬಿಳಿ ಅಮೃತ ಶಿಲೆಯ ಮೂರ್ತಿ, ಆರು ಅಡಿ ಎತ್ತರದ ಬೃಹತ್‌ ನಂದಿಯ ಏಕಶಿಲೆಯ ಪ್ರತಿಮೆ, ಆರು ಅಡಿ ಎತ್ತರದ ಬನಶಂಕರಿ ದೇವಿ ಮೂರ್ತಿ, ಮೈಸೂರಿನ ಅರಸು ಜಯಚಾಮರಾಜೇಂದ್ರ ವಡೇಯರ್‌ ಅವರ 14.5 ಅಡಿ ಎತ್ತರದ ಬಿಳಿ ಅಮೃತ ಶಿಲೆಯ ಪ್ರತಿಮೆ, ಮೈಸೂರು ವಿವಿ ಸೋಪ್‌ ಸ್ಟೋನ್‌ ಕಲಾಶಿಲ್ಪ ಹೀಗೆ ಹಲವಾರು ಮೂರ್ತಿ, ಪ್ರತಿಮೆಗಳನ್ನು ನಿರ್ಮಿಸಿದ ಅವರಿಗೆ ಕಳೆದ ವರ್ಷ ಶ್ರೀ ಶಂಕರರ ಪ್ರತಿಮೆ ನಿರ್ಮಿಸುವ ಅವಕಾಶ ದೊರೆತಿತ್ತು. ದೇಶದ ಬೇರೆ ಬೇರೆ ಶಿಲ್ಪಿಗಳೊಂದಿಗೆ ಸ್ಪರ್ಧಿಸಿ ಅರುಣ್‌ ಈ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದರು.
ಈಗಾಗಲೇ ಹಲವಾರು ಸಂಘಸಂಸ್ಥೆಗಳು ಅರುಣ್‌ ಅವರನ್ನು ಸನ್ಮಾನಿಸಿವೆ, ಗೌರವಿಸಿದೆ. ಮೈಸೂರಿನ ರಾಜ ಮನೆತನ ಕೂಡ ವಿಶೇಷ ಗೌರವ ಸಲ್ಲಿಸಿದೆ.

Exit mobile version