Site icon Vistara News

Ram Navami 2023 : ಆದಿಕಾವ್ಯದ ಮಹಾನಾಯಕ ಶ್ರೀ ರಾಮಚಂದ್ರ; ದೇವತಾ ಮನುಷ್ಯನ ದೇದೀಪ್ಯಮಾನ ಬದುಕು !

Sri Ramachandra

#image_title

ರಾಜೇಂದ್ರ ಭಟ್ ಕೆ. ಕಾರ್ಕಳ
ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಈ ಭೂಮಿಗೆ ಶ್ರೀ ರಾಮದೇವರ ಆಗಮನ ಆಯಿತು. ಅದು ಜನವರಿ ತಿಂಗಳ ಹತ್ತನೇ ತಾರೀಕು, ಕ್ರಿಸ್ತಪೂರ್ವ 5114ನೇ ಇಸವಿ. ಸಮಯ ಮಧ್ಯಾಹ್ನ 12-30. ಹುಟ್ಟಿದ್ದು ಸರಯೂ ನದಿ ತೀರದ ಅಯೋಧ್ಯೆಯಲ್ಲಿ. ಇವೆಲ್ಲವೂ ಪುರಾಣದ ಕಟ್ಟು ಕತೆಗಳು ಅಲ್ಲ! ಎಲ್ಲವೂ ಐತಿಹಾಸಿಕ ಘಟನೆಗಳು ಅನ್ನಿಸುವ ಹಾಗಿದೆ. ಎಲ್ಲಕ್ಕೂ ಆಧಾರ ದೊರೆತಿದೆ. ರಾಮಸೇತುವು ಅದರಲ್ಲಿ ಅತೀ ದೊಡ್ಡ ಆಧಾರ. ಹಿಂದೂ ಮಹಾಸಾಗರದ ಗರ್ಭದಲ್ಲಿ ಮೈಚಾಚಿ ಮಲಗಿರುವ ರಾಮಸೇತುವನ್ನು ಅಮೆರಿಕದ ನಾಸಾದ ವಿಜ್ಞಾನಿಗಳು ಪತ್ತೆ ಹಚ್ಚುವಾಗ ಇಡೀ ಭಾರತವು ರೋಮಾಂಚನ ಪಟ್ಟಿತ್ತು. ಅದರ ಕಾರ್ಬನ್ ಡೇಟಿಂಗ್ ಪರೀಕ್ಷೆ ಮಾಡಿದಾಗ ಅದು ರಾಮಾಯಣದ ಕಾಲಮಾನಕ್ಕೆ ಸರಿಯಾಗಿ ಹೊಂದಿತು ಅಂದರೆ ಅದು ವೈಜ್ಞಾನಿಕ ಆಯಾಮವೇ ಆಯಿತು. ಅದು ಮಾನವನಿರ್ಮಿತ ಅಲ್ಲ, ಯಾವುದೋ ವಾನರ ಸೇನೆ ಕಟ್ಟಿರಬೇಕು ಎಂದು ಕೂಡ ನಾಸಾ ಅಭಿಪ್ರಾಯಪಟ್ಟದ್ದು ಅದ್ಭುತ! ಸಾಗರದಲ್ಲಿ ತೇಲುವ ಕಲ್ಲುಗಳ ಬಗ್ಗೆ ನಾಸಾದ ವಿಜ್ಞಾನಿಗಳು ಆಶ್ಚರ್ಯಪಟ್ಟದ್ದು ಕೂಡ ನಮ್ಮ ರಾಮಾಯಣದ ಬಗ್ಗೆ ನಮ್ಮ ಹೆಮ್ಮೆಯನ್ನು ಹೆಚ್ಚು ಮಾಡುತ್ತದೆ!

ಹೆಮ್ಮೆ ಮೂಡಿಸುವ ಶ್ರೀ ರಾಮದೇವರ ವ್ಯಕ್ತಿತ್ವ

ಆದಿಕವಿ ವಾಲ್ಮೀಕಿ ಶ್ರೀ ರಾಮದೇವರನ್ನು ಸರ್ವ ಸತ್ವ ಮನೋಹರಃ ಎಂದು ಸುಮ್ಮನೆ ಹೇಳಿದ್ದಲ್ಲ! ರಾಮಚಂದ್ರ ದೇವರು ಜಗತ್ತಿನ ಎಲ್ಲ ಸದ್ಗುಣಗಳ ಒಟ್ಟು ಮೊತ್ತ ಎಂಬುದು ಈ ವಾಕ್ಯದ ಅರ್ಥ. ಶ್ರೀರಾಮನು ಪಟ್ಟಾಭಿಷೇಕ ಆಗುತ್ತಾನೆ ಎಂದಾಗ ಅಯೋಧ್ಯೆಯ ಜನರು ಸಂಭ್ರಮಿಸಿದ್ದು, ಕೈಕೇಯಿ ಮಾತೆಯ ಮಾತಿಗೆ ಕಟ್ಟುಬಿದ್ದು ದಶರಥ ಮಹಾರಾಜನು ಸಂದಿಗ್ಧಕ್ಕೆ ಸಿಲುಕಿದಾಗ ಶ್ರೀರಾಮನು ಎರಡನೇ ಯೋಚನೆ ಮಾಡದೆ ನಾರುಮುಡಿ ತೊಟ್ಟು ಕಾಡಿಗೆ ಹೊರಟಾಗ ಇಡೀ ಅಯೋಧ್ಯೆಯ ಜನರು ಕಣ್ಣೀರು ಸುರಿಸಿದ್ದು, ತಮ್ಮ ಮನೆಯ ಮಗನನ್ನು ಕಳೆದುಕೊಂಡ ಹಾಗೆ ದುಃಖಪಟ್ಟದ್ದು ಆತನ ವ್ಯಕ್ತಿತ್ವದ ಒಂದು ಅನನ್ಯ ದರ್ಶನವೇ ಆಗಿದೆ. ಅಂತಹ ಅಯೋಧ್ಯೆಯಲ್ಲಿ ಒಬ್ಬ ಪ್ರಜೆಯಾದ ಆಗಸನು ಅರಸನ ನಿಷ್ಠೆಯನ್ನು ಪ್ರಶ್ನೆ ಮಾಡಿದಾಗ ತಾನು ಎಲ್ಲರಿಗಿಂತ ಹೆಚ್ಚು ಪ್ರೀತಿ ಮಾಡುವ ಸೀತೆಯನ್ನು ತ್ಯಾಗ ಮಾಡಲು ಹೊರಟದ್ದು ಪ್ರಜಾಪ್ರಭುತ್ವದ ಆಡಿಗಲ್ಲು ಆಗಿದೆ. ಆಗೆಲ್ಲ ಸೀತಾರಾಮನ ಕಲ್ಪನೆಯನ್ನು ಮೀರಿ ರಾಜಾರಾಮ ಸ್ಥಾಪನೆ ಆದದ್ದು ರಾಮರಾಜ್ಯದ ಒಂದು ಸುಂದರವಾದ ಪರಿಕಲ್ಪನೆ.

ಶ್ರೀರಾಮನ ಪ್ರಭಾವಕ್ಕೆ ಒಳಗಾಗಿ ಸ್ವತಃ ಆದಿಕವಿ ವಾಲ್ಮೀಕಿ ತನ್ನ ರಾಮಾಯಣದ ಉದ್ದಕ್ಕೂ ಬರೆದಿರುವ ವಾಕ್ಯಗಳು ರೋಮಾಂಚನ ಹುಟ್ಟಿಸುತ್ತವೆ. ಆತನು ರಾಮಾಯಣದಲ್ಲಿ ಎಲ್ಲಿಯೂ ರಾಮನನ್ನು ದೇವರಾಗಿ ಚಿತ್ರಿಸದೆ ಇಂದ್ರಿಯಗಳಿಗೆ ನಿಲುಕುವ ಒಬ್ಬ ಸಾಮಾನ್ಯ ಮನುಷ್ಯನಾಗಿ ಚಿತ್ರಿಸಿದ್ದು ಇನ್ನೊಂದು ಸುಂದರ ಕಲ್ಪನೆ. ವಾಲ್ಮೀಕಿಯು ರಾಮಾಯಣವನ್ನು ಬರೆದಾದ ನಂತರ ಭಾರತದಲ್ಲಿ ಅದನ್ನು ಆಧಾರಿತವಾದ ಸಾವಿರಾರು ಕಾವ್ಯಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿವೆ. ಅವೆಲ್ಲದರಲ್ಲಿ ಶ್ರೀರಾಮನ ಪಾತ್ರದ ಬಗ್ಗೆ ಸಾವಿರಾರು ಸುಂದರವಾದ ಉಪಮೆಗಳು, ರೂಪಕಗಳು ದೊರೆಯುತ್ತವೆ! ಆತನ ವ್ಯಕ್ತಿತ್ವದಲ್ಲಿ ಒಂದೆಳೆಯಷ್ಟು ದೋಷಗಳು ಬಾರದ ಹಾಗೆ ಶ್ರೀರಾಮನು ಚಿತ್ರಿಸಲ್ಪಟ್ಟ ಎಂಬಲ್ಲಿಗೆ ಶ್ರೀರಾಮನು ವಿಶ್ವವಿಜಯೀ, ವಿಶ್ವವಂದ್ಯ ಎಂಬ ತೀರ್ಮಾನಕ್ಕೆ ಬರಬಹುದು.

ಇಂದು ರಾಮನವಮಿ. ಅಂತಹ ಶ್ರೀರಾಮ ದೇವರು ಹುಟ್ಟಿದ ಹಬ್ಬ. ಭಾರತೀಯರ ಆರಾಧ್ಯ ದೇವರಾದ ಶ್ರೀರಾಮನಿಗೆ ಜಗತ್ತೇ ಮೆಚ್ಚುವಂತಹ ಮಂದಿರವನ್ನು ಕಟ್ಟಲು ಹೊರಟಿರುವ ಭಾರತೀಯರಿಗೆ ಅದು ಅಸದೃಶ ಸೌಂದರ್ಯದ ಪರಾಕಾಷ್ಠೆ. ಅಂತಹ ಶ್ರೀರಾಮ ದೇವರ ಅನುಗ್ರಹ ಎಲ್ಲರಿಗೂ ದೊರೆಯಲಿ.

ಇದನ್ನೂ ಓದಿ : Ram Navami 2023 : ರಾಮಾ ಮನೋಹರನೆ ದೀನ ಪತಿತಪಾವನ…

Exit mobile version