Site icon Vistara News

Bangladesh Protest: ಶೇಖ್‌ ಹಸೀನಾ ಭಾರತಕ್ಕೆ ಬಂದ ಬೆನ್ನಲ್ಲೇ ಬಾಂಗ್ಲಾದಲ್ಲಿ 4 ಹಿಂದು ದೇಗುಲಗಳ ಧ್ವಂಸ; ಹಿಂದು ಕೌನ್ಸಿಲರ್‌ ಹತ್ಯೆ!

Bangladesh Protest

ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ಪ್ರಕರಣವೊಂದೇ ನಾಗರಿಕ ದಂಗೆಗೆ ಕಾರಣವಾಗಿದೆ. ಪ್ರಧಾನಿ ಶೇಖ್‌ ಹಸೀನಾ ಅವರೂ ರಾಜೀನಾಮೆ ನೀಡಿ, ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು (Bangladesh Protest) ಹುಚ್ಚಾಟ ಮಾಡಿದ್ದಾರೆ. ಗಲಾಟೆ, ಗಲಭೆ, ಹಿಂಸಾಚಾರದಿಂದ 100ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಇನ್ನು, ಶೇಖ್‌ ಹಸೀನಾ (Sheikh Hasina) ಅವರು ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂದು ವಿರೋಧಿ ದಂಗೆ ಆರಂಭವಾಗಿದೆ. ನಾಲ್ಕು ಹಿಂದು ದೇವಾಲಯಗಳನ್ನು (Hindu Temples) ಮೂಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ.

ಹೌದು, ಬಾಂಗ್ಲಾದೇಶದಲ್ಲಿರುವ ನಾಲ್ಕು ಇಸ್ಕಾನ್‌ ಹಾಗೂ ಕಾಳಿ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಕಾಳಿ ದೇವಾಲಯಕ್ಕೆ ಬೆಂಕಿ ಹಚ್ಚಿದ ಇಸ್ಲಾಮಿಕ್‌ ಮೂಲಭೂತವಾದಿಗಳು ತಮ್ಮ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಆ ಮೂಲಕ ಬಾಂಗ್ಲಾದೇಶದ ಪ್ರತಿಭಟನೆಯನ್ನು ಹಿಂದು ವಿರೋಧಿ ಪ್ರತಿಭಟನೆಯನ್ನಾಗಿ ಬದಲಿಸಿದ್ದಾರೆ.

ಅಷ್ಟೇ ಅಲ್ಲ, ರಂಗ್‌ಪುರ ಸಿಟಿ ಕಾರ್ಪೊರೇಷನ್‌ನ ಹಿಂದು ಕೌನ್ಸಿರ್‌ ಹರಧನ್‌ ರಾಯ್‌ ಹರ ಎಂಬುವರನ್ನು ಉದ್ರಿಕ್ತರು ಕೊಂದು ಹಾಕಿದ್ದಾರೆ. ಇದೇ ಪಟ್ಟಣದ ಮತ್ತೊಬ್ಬ ಹಿಂದು ಕೌನ್ಸಿಲರ್‌ ಕಾಜಲ್‌ ರಾಯ್‌ ಎಂಬವರನ್ನೂ ಕೊಲೆ ಮಾಡಿದ್ದಾರೆ. ಅಲ್ಲದೆ, ಭಾರತೀಯ ಕಲ್ಚುರಲ್‌ ಸೆಂಟರ್‌ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ, ಕಟ್ಟಡಕ್ಕೆ ಹಾನಿ ಮಾಡಿದ್ದಾರೆ.

ರೈಲು, ವಿಮಾನ ಸಂಚಾರ ರದ್ದು

ಬಾಂಗ್ಲಾದೇಶದಲ್ಲಿ ಭಾರಿ ಅರಾಜಕತೆ ಸೃಷ್ಟಿಯಾಗಿ, ಗಲಭೆಗಳು ಆರಂಭವಾದ ಹಿನ್ನೆಲೆಯಲ್ಲಿ ಕೋಲ್ಕೊತಾದಿಂದ ಢಾಕಾಗೆ ತೆರಳುವ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹೇಗೆಯೇ, ಬಾಂಗ್ಲಾದೇಶಕ್ಕೆ ತೆರಳುವ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಭಾರತೀಯರು ಮುಂದಿನ ಸೂಚನೆ ಮೇರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬಾರದು. ಬಾಂಗ್ಲಾದೇಶದಲ್ಲಿರುವ ಭಾರತೀಯರು, ವಿದ್ಯಾರ್ಥಿಗಳು ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರ ಸೂಚಿಸಿದೆ.

ಪರಿಸ್ಥಿತಿ ಅವಲೋಕಿಸಿದ ಮೋದಿ

ಭಾರತಕ್ಕೆ ಆಗಮಿಸಿರುವ ಶೇಖ್‌ ಹಸೀನಾ ಅವರನ್ನು ಘಾಜಿಯಾಬಾದ್‌ನ ಹಿಂಡನ್‌ ಏರ್‌ ಬೇಸ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಭೇಟಿಯಾಗಿದ್ದು, ಅವರ ಜತೆ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಶೇಖ್‌ ಹಸೀನಾ ಅವರು ಲಂಡನ್‌ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಶೇಖ್‌ ಹಸೀನಾ ಭಾರತಕ್ಕೆ ಬಂದಿರುವುದು, ಬಾಂಗ್ಲಾದೇಶದ ಹಿಂಸಾಚಾರ, ಗಡಿ ಬಿಕ್ಕಟ್ಟು ಸೇರಿ ಹಲವು ವಿಷಯಗಳನ್ನು ಮೋದಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೂ ಎಸ್.ಜೈಶಂಕರ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಇದನ್ನೂ ಓದಿ: Bangladesh Protests: ಬಾಂಗ್ಲಾ ಹಿಂಸಾಚಾರದ ಹಿಂದೆ ಪಾಕ್‌ ಕೈವಾಡ; ಭಾರತದ ಜತೆ ಹಸೀನಾ ಸ್ನೇಹ ಕಾರಣ?

Exit mobile version