Site icon Vistara News

Actor Darshan: ನಟ ದರ್ಶನ್ ವಿರುದ್ಧ ಕೇಸ್‌ ದಾಖಲು; ನಾಯಿಗಳು ಕಚ್ಚಿದ್ದಕ್ಕೆ ವೈದ್ಯೆ ದೂರು

Actor Darshan with dog

ಬೆಂಗಳೂರು: ವೈದ್ಯೆಯೊಬ್ಬರಿಗೆ ನಟ ದರ್ಶನ್‌ ಮನೆಯ ನಾಯಿಗಳು ಕಚ್ಚಿದ ಹಿನ್ನೆಲೆಯಲ್ಲಿ ದರ್ಶನ್‌ (Actor Darshan) ಅವರ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇರೆಡೆ ಕರೆದುಕೊಂಡು ಹೋಗುವಂತೆ ಸೂಚಿಸಿದರೂ ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ತಮಗೆ ನಾಯಿಗಳು ಕಚ್ಚಿವೆ, ಹೀಗಾಗಿ ಮಾಲೀಕ ದರ್ಶನ್ ಹಾಗೂ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೈದ್ಯೆ ಮನವಿ ಮಾಡಿದ್ದಾರೆ.

ವೈದ್ಯೆ ಅಮಿತಾ ದೂರು ನೀಡಿದವರು. ಅ.28ರಂದು ಸ್ಪರ್ಶ ಆಸ್ಪತ್ರೆಗೆ ಆಗಮಿಸಿದ ವೇಳೆ ದರ್ಶನ್ ಅವರ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕಾರು ಪಾರ್ಕಿಂಗ್‌ ಮಾಡಿದ್ದೆ. ಆಸ್ಪತ್ರೆಯಿಂದ ವಾಪಸ್‌ ಬಂದಾಗ ನಾಯಿಗಳನ್ನು ಬೇರೆಡೆ ಕರೆದುಕೊಂಡು ಹೋಗುವಂತೆ ಸೂಚಿಸಿದೆ. ಆದರೆ, ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ, ಇಲ್ಲಿ ಯಾಕೆ‌ ಪಾರ್ಕಿಂಗ್ ಮಾಡಿದ್ದೀರಿ ಎಂದು ವಾಗ್ವಾದ ನಡೆಸಿದರು. ಈ ವೇಳೆ ಏಕಾಏಕಿ ಎರಡು ನಾಯಿಗಳು ದಾಳಿ ಮಾಡಿ ಕಚ್ಚಿವೆ ಎಂದು ವೈದ್ಯೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | Medical Seat : ಮೆಡಿಕಲ್‌ ಸೀಟ್‌ ದೋಖಾ; ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ವಂಚಕ ಅರೆಸ್ಟ್‌

ಘಟನೆ ಸಂಬಂಧ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ಎರಡನೇ ಆರೋಪಿಯಾಗಿ ದರ್ಶನ್ ವಿರುದ್ಧ ದೂರು ದಾಖಲಾಗಿದೆ. ಸ್ಪರ್ಶ ಆಸ್ಪತ್ರೆಗೆ ಪಾರ್ಶ್ವವಾಯು ದಿನದ ಕಾರ್ಯಕ್ರಮಕ್ಕೆ ಬಂದಿದ್ದಾಗ ವೈದ್ಯೆ ಮೇಲೆ ನಾಯಿಗಳು ದಾಳಿ ಮಾಡಿವೆ. ಈ ವೇಳೆ ಅವುಗಳನ್ನು ಎಳೆದುಕೊಳ್ಳುವಂತೆ ವೈದ್ಯ ಸೂಚಿಸಿದ್ದರು. ಆದರೂ ವ್ಯಕ್ತಿ ನಿರ್ಲಕ್ಷ್ಯ ಮಾಡಿದ್ದರಿಂದ ವೈದ್ಯೆ ಮೇಲೆ ನಾಯಿಗಳು ದಾಳಿ ಮಾಡಿವೆ ಎನ್ನಲಾಗಿದೆ.

ಮಲಗಿದ್ದ ವೃದ್ಧನ ಮೇಲೆ ಬೀದಿ ನಾಯಿಗಳ ಅಟ್ಯಾಕ್;‌ ಸ್ಥಳದಲ್ಲೇ ಮೃತ್ಯು

ಮಂಡ್ಯ: ಮಲಗಿದ್ದ ವೃದ್ಧನ ಮೇಲೆ ಬೀದಿ ನಾಯಿಗಳು ದಾಳಿ (Street Dog Attack) ನಡೆಸಿ ಕೊಂದು ಹಾಕಿದ (Old man dead) ಭೀಕರ ಘಟನೆಯೊಂದು ಮಂಡ್ಯ ಜಿಲ್ಲೆಯ (Mandya News) ಬೆಸಗರಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಅಪರಿಚಿತನಾಗಿದ್ದು, ಇಲ್ಲಿನ ಬಾರ್‌ ಒಂದರ ಮುಂದೆ ಮಲಗಿದ್ದ ವೇಳೆ ಈ ದಾಳಿ ನಡೆದಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಗೆ ಬಂದಿದ್ದ ಅಪರಿಚಿತ ವೃದ್ಧನೊಬ್ಬ ಅಲ್ಲಿನ ಬಾರ್‌ನಲ್ಲಿ ಮದ್ಯಪಾನ ಮಾಡಿ ಹೊರಗಡೆ ರಸ್ತೆ ಬದಿಯಲ್ಲಿ ಮಲಗಿಕೊಂಡಿದ್ದ. ಈ ವೇಳೆ ಬೀದಿ ನಾಯಿಗಳು ಆತನ ಮೇಲೆ ದಾಳಿ ಮಾಡಿ ಕೊಂದು ಹಾಕಿವೆ. ವೃದ್ಧನ ಮುಖ ಮತ್ತು ತಲೆಯ ಭಾಗದ ಮೇಲೆ ಅತಿ ಹೆಚ್ಚು ಅಟ್ಯಾಕ್‌ ನಡೆದಿದ್ದು, ಆ ಭಾಗಗಳೆಲ್ಲ ಜರ್ಜರಿತವಾಗಿವೆ.

ಬೀದಿ ನಾಯಿಗಳು ರಾತ್ರಿಯ ವೇಳೆ ದಾಳಿ ಮಾಡಿದ್ದರಿಂದ ಆತನನ್ನು ರಕ್ಷಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಬಹುಶಃ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸ್ಥಿತಿಯಲ್ಲಿಯೂ ಆ ವೃದ್ಧ ಇರಲಿಲ್ಲ ಅನಿಸುತ್ತದೆ.

ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಸಗರಹಳ್ಳಿ ಪೊಲೀಸರು ಮೃತ ವೃದ್ದನ ಗುರುತು ಹಾಗೂ ವಿಳಾಸ ಪತ್ತೆಗೆ ಮುಂದಾಗಿದ್ದಾರೆ.

ಕುಣಿಗಲ್‌ನಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ದಾಳಿ ನಡೆದಿತ್ತು

ಕುಣಿಗಲ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಮಗುವಿನ ಮೇಲೆ ಏಕಾಏಕಿ ಬೀದಿನಾಯಿಯೊಂದು (Dog Attack) ದಾಳಿ ಮಾಡಿದ ಘಟನೆ ಕೆಲವು ಸಮಯದ ಹಿಂದೆ. ಸುಪೀಯಾ (4) ಬೀದಿನಾಯಿ ದಾಳಿಗೊಳಗಾದ ಮಗು. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ 17ನೇ ವಾರ್ಡ್‌ನಲ್ಲಿ ಈ ಘಟನೆ ನಡೆದಿದೆ. ಸುಪ್ರೀಯಾ ಮನೆ ಮುಂದೆ ಆಟವಾಡುತ್ತಾ ನಿಂತಿದ್ದಳು.

ಇದನ್ನೂ ಓದಿ: Street dog attack: ಬಾಲಕನ ಮೇಲೆ ಬೀದಿ ನಾಯಿಗಳ ಬರ್ಬರ ದಾಳಿ

ಈ ವೇಳೆ ಪಕ್ಕದ ರಸ್ತೆಯಿಂದ ನಾಯಿ ಓಡಿ ಬಂದಿದೆ. ನಾಯಿ ಕಂಡು ಸುಪ್ರೀಯಾ ಪಕ್ಕಕ್ಕೆ ಸರಿದು ನಿಲ್ಲಲು ಮುಂದಾಗಿದ್ದು, ಈ ವೇಳೆ ಏಕಾಏಕಿ ಆಕೆ ಮೇಲೆ ದಾಳಿ ನಡೆಸಿತ್ತು. ಮಗುವಿನ ಕೂಗಾಟ ಕೇಳಿ ಅಲ್ಲೆ ಇದ್ದ ಇತರೆ ಮಕ್ಕಳು ಹಾಗೂ ಸ್ಥಳೀಯರು ಕೂಡಲೇ ನಾಯಿಯನ್ನು ಓಡಿಸಿದ್ದಾರೆ. ನಾಯಿಯಿಂದ ಮಗುವನ್ನು ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡಿರುವ ಸುಪ್ರೀಯಾಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಈಗ ಆಕೆ ಆರೋಗ್ಯವಾಗಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version