Site icon Vistara News

Bangalore Mysore Expressway : ದಶಪಥದಲ್ಲಿ ಬೈಕ್‌ ಮಾತ್ರವಲ್ಲ ಇನ್ನೂ ಹಲವು ವಾಹನಕ್ಕೆ ನಿಷೇಧ; ಆ. 1ರಿಂದ ಜಾರಿ

Vehicle ban on Express way

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore mysore Expressway) ಅಪಘಾತಗಳ ಹೆದ್ದಾರಿಯಾಗುತ್ತಿದೆ ಎಂಬ ಆರೋಪಗಳ ನಡುವೆ ಅವಘಡಗಳನ್ನು ತಪ್ಪಿಸಲು ಪೊಲೀಸ್‌ ಇಲಾಖೆ (Police Department) ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಹೆದ್ದಾರಿ ಇಲಾಖೆ (National High way Authority) ಕೆಲವೊಂದು ವಾಹನಗಳಿಗೆ ನಿಷೇಧ (Restriction on vehicle) ಹೇರಿದ್ದು, ಈ ವಾಹನಗಳು ಹೆದ್ದಾರಿ ಪ್ರವೇಶಿಸುವಂತಿಲ್ಲ (Vehicle Ban) ಎಂಬ ಸೂಚನೆಯನ್ನು ನೀಡಿದೆ. ಆಗಸ್ಟ್‌ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಅತ್ಯಂತ ವೇಗವಾಗಿ ವಾಹನಗಳು ಸಾಗುವ, ಮಲ್ಟಿ ಆಕ್ಸಿಸ್‌ ಕಂಟ್ರೋಲ್‌ (Multi axis Control) ಇರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಇನ್ನು ಮುಂದೆ ಬೈಕ್‌ ಮಾತ್ರವಲ್ಲ, ಆಟೊ, ಟ್ರ್ಯಾಕ್ಟರ್‌ ಸೇರಿದಂತೆ ಹಲವು ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.

ಯಾವೆಲ್ಲಾ ವಾಹನಗಳು ನಿಷೇಧ?

ಬೈಕ್‌, ಸ್ಕೂಟರ್‌ ಮತ್ತು ಇತರೆ ದ್ವಿಚಕ್ರವಾಹನಗಳು
ಆಟೋರಿಕ್ಷಾ ಸೇರಿದಂತೆ ಎಲ್ಲ ತ್ರಿಚಕ್ರವಾಹನಗಳು
ಮೋಟಾರು ಎಂಜಿನ್‌ ಇಲ್ಲದ ವಾಹನಗಳು
ಕೃಷಿ ಬಳಕೆ ಸೇರಿದಂತೆ ಯಾವುದೇ ಟ್ರ್ಯಾಕ್ಟರ್‌ಗಳು
ಮಲ್ಟಿ ಆಕ್ಸೆಲ್‌ ಹೈಡ್ರಾಲಿಕ್‌ ವಾಹನಗಳು
ಕ್ವಾಡ್ರಿ ಚಕ್ರಗಳು

ಜು.12ರಂದು ಆದೇಶ ಹೊರಡಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ಮಾಡಿದ ದಿನದಿಂದಲೂ ಈ ಸಂಚಾರ ನಿಷೇಧದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಬೈಕ್‌ಗಳಿಗೆ ಪ್ರವೇಶವಿಲ್ಲ, ರಿಕ್ಷಾ ಇಲ್ಲ ಎಂಬೆಲ್ಲ ಸುದ್ದಿಗಳಿದ್ದವು. ಹಾಗಿದ್ದರೂ ಕೆಲವು ಕಡೆ ಈ ವಾಹನಗಳು ಹೆದ್ದಾರಿ ಪ್ರವೇಶ ಮಾಡುತ್ತಿದ್ದವು. ಇದೀಗ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದಕ್ಕಾಗಿ ಹೆದ್ದಾರಿ ಪ್ರಾಧಿಕಾರವೇ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೆದ್ದಾರಿ ಪ್ರಾಧಿಕಾರವು ಕಳೆದ ಜು.12ರಂದೇ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.. ಒಮ್ಮೆ ಆದೇಶವಾದ ಬಳಿಕ ಈ ಸಣ್ಣ ಮತ್ತು ನಿಧಾನವಾಗಿ ಚಲಿಸುವ ವಾಹನಗಳಿಗೆ ಹೆದ್ದಾರಿ ಸಂಚಾರವೂ ನಿಷೇಧ ಬೀಳಲಿದೆ.

ಸರ್ವಿಸ್‌ ರಸ್ತೆಯಲ್ಲೇ ಸಾಗಬೇಕು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೋಟಾರು ವಾಹನ ಕಾಯಿದೆ ಅನ್ವಯ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದು ದ್ವಿಚಕ್ರ, ತ್ರಿಚಕ್ರವಾಹನ ಸೇರಿದಂತೆ ಕೆಲವು ವಾಹನಗಳು ಇನ್ನು ಸವೀಸ್‌ ರಸ್ತೆಯಲ್ಲಿಯೇ ಪ್ರಯಾಣ ಬೆಳೆಸಬೇಕಾಗುತ್ತದೆ.

ವಾಹನ ಸಂಚಾರಕ್ಕೆ ವೇಗ ಮಿತಿ ಪ್ರಕಟ

ಇದೇ ವೇಳೆ ಹೆದ್ದಾರಿ ಪ್ರಾಧಿಕಾರವು ಎಕ್ಸ್‌ಪ್ರೆಸ್‌ ವೇನಲ್ಲಿ ವಾಹನಗಳ ಸಂಚರಿಸುವ ಗರಿಷ್ಠ ವೇಗಕ್ಕೆ ಮಿತಿ ಹಾಕಿದೆ. ಅಧಿಸೂಚನೆಯ ಪ್ರಕಾರ ವಾಹನಗಳು ಪ್ರತಿ ಗಂಟೆಗೆ 80ರಿಂದ 100 ಕಿಲೋಮೀಟರ್‌ ವೇಗದಲ್ಲಿ ಮಾತ್ರ ಸಂಚರಿಸಬೇಕು. ಪ್ರಾಧಿಕಾರ ವೇಗ ಮಿತಿ ಆದೇಶ ಹೊರಡಿಸುವ ಮುನ್ನವೇ ಹೆದ್ದಾರಿಯಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಪೊಲೀಸರೇ ಸಂಚಾರ ನಿಯಂತ್ರಣಕ್ಕೆ ವೇಗ ಮಿತಿ ಅಳವಡಿಸಿದ್ದರು ಮತ್ತು ಅತಿ ವೇಗದಲ್ಲಿ ಚಲಾಯಿಸುವ ವಾಹನಗಳಿಗೆ ದಂಡ ವಿಧಿಸಿದ್ದರು.

ಕಳೆದ ತಿಂಗಳಿನಿಂದ ಸಾವಿನ ಪ್ರಮಾಣ ಕಡಿಮೆ ಆಗಿದೆ: ಎಡಿಜಿಪಿ

ರಾಮನಗರ: ಆ.1 ರಿಂದಲೇ ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧ ಜಾರಿಯಾಗಲಿದೆ ಎಂದು ರಸ್ತೆ ಸುರಕ್ಷಾ ಮತ್ತು ಸಂಚಾರಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಅವರು ಹೆದ್ದಾರಿ ಪರಿಶೀಲನೆಗಾಗಿ ಆಗಮಿಸಿದ ಸಂದರ್ಭದಲ್ಲಿ ಮಂಗಳವಾರ ಈ ವಿಷಯ ತಿಳಿಸಿದರು.

ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಕ್ಕೆ ಸಂಬಂಧಿಸಿ ಕಳೆದ ಜು.12ರಂದು ಗೆಜಟ್ ನೋಟಿಫಿಕೇಷನ್ ಆಗಿದೆ. ಆಗಸ್ಟ್‌ 1ರಿಂದಲೇ ಜಾರಿಗೆ ಬರಲಿದೆ. ಅಪಘಾತ ಪ್ರಕರಣಗಳ ಕಡಿಮೆ ಮಾಡಲು ಎಲ್ಲಾ ರೀತಿಯ ಕ್ರಮ ವಹಿಸಿದ್ದೇವೆ. ಈಗಾಗಲೇ ದಂಡಹಾಕುವ ಮೂಲಕ ನಿಯಮ ಉಲ್ಲಂಘನೆ ಆಗದಂತೆ ಎಚ್ಚರಿಕೆ ನೀಡಲಾಗ್ತಿದೆ. 27 ಮಂದಿಯ ಡಿಎಲ್ ಕ್ಯಾನ್ಸಲ್ ಗೆ ಶೀಪಾರಸ್ಸು ಮಾಡಿದ್ದೇವೆ ಎಂದು ತಿಳಿಸಿದರು.

ಸದ್ಯ ಕಳೆದ ಒಂದು ತಿಂಗಳಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಹೆದ್ದಾರಿ ಪ್ರಾಧಿಕಾರ ಇನ್ನೂ ಕೆಲ ನ್ಯೂನತೆಗಳನ್ನ ಸರಿಪಡಿಸಬೇಕು. ಈ ಬಗ್ಗೆ ಅವರಿಗೆ ಅಗತ್ಯ ಸೂಚನೆ ನೀಡಲಾಗಿದೆ. ಪೊಲೀಸ್ ಎಲ್ಲಾ ಕೆಲಸ‌ ಮಾಡಲು ಆಗಲ್ಲ. ಸಾಕಷ್ಟು ಅಪಘಾತ ರಾತ್ರಿ ಸಮಯ ಆಗುತ್ತಿದೆ. ವಾಹನ ಚಾಲನೆ ವೇಳೆ ಸಾರ್ವಜನಿಕರ ಪಾತ್ರ ಮುಖ್ಯ ಎಂದರು.

ಇದನ್ನೂ ಓದಿ: Bangalore Mysore Expressway : ಏನ್ರೀ ಇದು ಗೋಳು-ಸಿಕ್ಕಾಪಟ್ಟೆ ಟೋಲು; ಟ್ಯಾಕ್ಸಿ ಪಯಣವೀಗ ದುಬಾರಿ!

Exit mobile version