Site icon Vistara News

ರಾಷ್ಟ್ರಗೀತೆಗೆ ಅವಮಾನ | ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ, ಆದರೂ ಉಳಿದ ಅನುಮಾನ

baraguru ramachandrappa clarification

ಬೆಂಗಳೂರು: ತಮ್ಮ ಕಾದಂಬರಿಯಲ್ಲಿ ರಾಷ್ಟ್ರಗೀತೆಯನ್ನು ವಿಡಂಬನಾತ್ಮಕವಾಗಿ ರಚಿಸಿ ಅವಮಾನ ಮಾಡಲಾಗಿದೆ ಎಂಬ ಆರೋಪದ ಕುರಿತು ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸುದೀರ್ಘ ಸ್ಪಷ್ಟೀಕರಣ ನೀಡಿದ್ದಾರೆ.

ತಮ್ಮನ್ನು ʼಸದಾ ಸಾಮಾಜಿಕ ಕಾಳಜಿಯ ದೇಶನಿಷ್ಠ ಲೇಖಕʼ ಎಂದು ಹೇಳಿಕೊಂಡಿರುವ ಬರಗೂರು ರಾಮಚಂದ್ರಪ್ಪ ಅವರು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ನಲವತ್ತು ವರ್ಷಗಳ ನಂತರ ನನ್ನ ಕಾದಂಬರಿಯ ಪಾತ್ರವೊಂದು ಕಟ್ಟಿದ ‘ನಗರಿಗೀತೆ’ ಗೆ ಈಗ ಆಕ್ಷೇಪ ಕೇಳಿಬಂದಿರುವುದು ಆಶ್ಚರ್ಯ ತಂದಿದೆ. ಇದು ತೀರ ಆಕಸ್ಮಿಕವೊ, ಹುನ್ನಾರವೋ ತಿಳಿಯದು. ಆದರೂ ನನ್ನ ಸ್ಪಷ್ಟನೆ ಕೊಡುತ್ತಿದ್ದೇನೆʼʼ ಎಂದಿರುವ ರಾಮಚಂದ್ರಪ್ಪ, “ಭರತ ನಗರಿ” ಎಂಬ ಕಾದಂಬರಿಯನ್ನು ನಾನು 40 ವರ್ಷಗಳ ಹಿಂದೆ ಬರೆದಿದ್ದೆ. ಆಗ ದೇಶವನ್ನು ಕಾಂಗ್ರೆಸ್ ಪಕ್ಷ ಆಳುತ್ತಿತ್ತು. ಹದಗೆಟ್ಟ ರಾಜಕೀಯ ವ್ಯವಸ್ಥೆಯನ್ನು ವ್ಯಂಗ್ಯ ವಿಡಂಬನೆಗಳಿಂದ ಚಿತ್ರಿಸಿದ ಈ ರೂಪಕಾತ್ಮಕ ಕಾದಂಬರಿಯಲ್ಲಿ ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರವಿದೆ. ಆತನನ್ನು ಜೈಲಿಗೆ ಹಾಕಿ ಆಳುವ ವರ್ಗವು ತಮ್ಮ ಆಡಳಿತವನ್ನು ಹೊಗಳುವ ಗೀತೆ ಹಾಡಲು ಒತ್ತಾಯಿಸಿದಾಗ ಚಲನಶೀಲತೆಯನ್ನು ಕಳೆದುಕೊಂಡ ಭಾರತದ ಆಡಳಿತವನ್ನು ವಿಡಂಬಿಸಲು ‘ಜನಗಣಮನ’ದ ಲಯವನ್ನು ಬಳಸಿಕೊಳ್ಳುತ್ತಾನೆ. ಇದು ಆ ಪಾತ್ರದ ಸ್ವಭಾವ ಮತ್ತು ನಡವಳಿಕೆಯಾಗಿದೆ ಎಂದಿದ್ದಾರೆ.

ಇಷ್ಟಕ್ಕೂ ಹೀಗೆ ಗೀತೆ ಹಾಡಿದ ಆ ಯುವಕ ಗುಂಡೇಟಿಗೆ ಸಾಯುತ್ತಾನೆ. ಆಡಳಿತದ ಶಿಕ್ಷೆಗೆ ಗುರಿಯಾಗುತ್ತಾನೆ. ಕೃತಿಕಾರನಾದ ನಾನು ಕಾದಂಬರಿಯ ಎಲ್ಲ ಪಾತ್ರಗಳನ್ನೂ ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ. ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗುವುದಿಲ್ಲ. ಅದು ಆ ಪಾತ್ರದ ಅಭಿಪ್ರಾಯವೇ ಹೊರತು ನನ್ನದಲ್ಲ. ಒಟ್ಟು ಕೃತಿಯು ಹೊರಡಿಸುವ ಆಶಯ ಮಾತ್ರ ಕೃತಿಕಾರರದು ಎಂದು ಹೇಳಿದ್ದಾರೆ.

ಇದನ್ನೂ ಓದಿ | ಜನಗಣಮನವನ್ನು ಅವಮಾನಿಸಿದ ಬರಗೂರು ರಾಮಚಂದ್ರಪ್ಪ?: ಕಾದಂಬರಿಯ ಪದ್ಯ ವೈರಲ್‌

ನಾನು ಆ ಕಾಲದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯನ್ನು ವಿಡಂಬನೆಗೆ ಒಡ್ಡಿ, ಒಟ್ಟು ಬದಲಾವಣೆಗೆ ಆಶಿಸಿದ್ದೇನೆ. ಜಾತಿ, ವರ್ಗ, ಭ್ರಷ್ಟತೆಗಳನ್ನು ಮೀರಿದ ಭಾರತ ನನ್ನ ಆದರ್ಶ ಎನ್ನುವುದು ಕೃತಿಯಲ್ಲಿರುವ ಆಶಯ ಎಂದು ತಮ್ಮ ಸ್ಪಷ್ಟತೆ ನೀಡಿರುವ ಬರಗೂರು, ಸೃಜನಶೀಲ ಕೃತಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ನಾನು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದೇನೆಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಮೂಲಕ ನಾಡಗೀತೆಗೆ ಅವಮಾನ ಮಾಡಿದವರನ್ನು ಸಮರ್ಥಿಸಿಕೊಳ್ಳುವ ಹುನ್ನಾರ ವ್ಯಕ್ತವಾಗಿದೆ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ ರೋಹಿತ್‌ ಚಕ್ರತೀರ್ಥ ಅವರನ್ನು ಪರೋಕ್ಷವಾಗಿ ಕುಟುಕಿದ್ದಾರೆ.

ಗಂಗೆಯನ್ನು ಅಮಾನಿಸಲಾಗಿದೆ ಎಂಬ ಕುರಿತು ಪ್ರತಿಕ್ರಿಯಿಸಿರುವ ಪ್ರೊ. ಬರಗೂರು ರಾಮಚಂದ್ರಪ್ಪ, ಗಂಗೆಯನ್ನು ನಾನು ಅವಮಾನಿಸಿಲ್ಲ. ಗಂಗೆಯಂತಿರುವ ಸತ್ಯ, ಸಮಾನತೆಗಳನ್ನು ಕ್ಷುಲ್ಲಕ ರಾಜಕೀಯ ರಂಗವು ಅತ್ಯಾಚಾರ ಮಾಡುತ್ತಿದೆ ಎಂಬ ಅರ್ಥಕ್ಕಾಗಿ ಆ ಸಾಲುಗಳನ್ನು ಬರೆದಿದ್ದೇನೆ. ನನ್ನ ಒಟ್ಟು ಬರಹಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಹೃದಯರಿಗೆ ನನ್ನಲ್ಲಿರುವ ಸಮಾಜ ಬದಲಾವಣೆಯ ಆಶಯ ಮತ್ತು ದೇಶ ಬದ್ಧತೆ ಅರ್ಥವಾಗುತ್ತದೆ. ನಾನು ಸದಾ ಸಾಮಾಜಿಕ ಕಾಳಜಿಯ ದೇಶನಿಷ್ಠ ಲೇಖಕ. ಇಷ್ಟಾಗಿಯೂ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದರೆ, ಜನರಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ಇದು ಜನರಿಗೆ ನಾನು ಕೊಡುವ ಗೌರವ ಎಂದಿದ್ದಾರೆ.

ಪರಿಷ್ಕೃತದಲ್ಲಿ ಕೈಬಿಡಲಾಗಿದೆ

ಮೂಲ ಕಾದಂಬರಿಯಲ್ಲಿ ಬರೆದಿದ್ದ ಸಾಲುಗಳಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡುವ ಕೆಲಸವಾಗಿಲ್ಲ ಎನ್ನುತ್ತಲೇ, ಪರಿಷ್ಕೃತ ಕಾದಂಬರಿಯಲ್ಲಿ ಈ ಪಠ್ಯವನ್ನು ಕೈಬಿಡಲಾಗಿದೆ ಎನ್ನುವುದನ್ನೂ ಹೇಳಿದ್ದಾರೆ. “ಇನ್ನೊಂದು ವಿಷಯ ಹೇಳಬೇಕು. ಕೆಲವು ತಿಂಗಳ ಹಿಂದೆ ನನ್ನ ಸಮಗ್ರ ಸಾಹಿತ್ಯ ಸಂಪುಟಗಳು ಬಂದಿವೆ. ಅದರಲ್ಲಿ ಪರಿಷ್ಕರಣೆ ಕೂಡ ಮಾಡಿದ್ದೇನೆ. ಅದರಲ್ಲಿ ಭರತ ನಗರಿ ಕಾದಂಬರಿಯೂ ಒಂದು. ರಾಷ್ಟ್ರ ಗೀತೆಯ ಲಯದಲ್ಲಿದ್ದ ಗೀತೆಯನ್ನು ಬಿಟ್ಟಿದ್ದೇನೆ. ಅಂದರೆ ಹಿಂದಕ್ಕೆ ತೆಗೆದುಕೊಂಡು ಸಮತೆ ಮತ್ತು ಮಮತೆಯ ದೇಶ ಕಟ್ಟಬೇಕು ಎಂಬ ಗೀತೆ ಹಾಕಿದ್ದೇನೆ. ಹೀಗಿರುವಾಗ 40 ವರ್ಷಗಳ ಹಿಂದಿನ ಪಠ್ಯ ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುವುದೇ ಅಪ್ರಸ್ತುತ. ಈಗ ಹಿಂದಿನ ಗೀತೆ ಇಲ್ಲ. ಇದು ಮುಖ್ಯ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಬರಗೂರು ರಾಮಚಂದ್ರಪ್ಪ ವಿರುದ್ಧ BJP ದೂರು: ಸಿದ್ದರಾಮಯ್ಯ ಉತ್ತರಿಸಲಿ ಎಂದ ರವಿಕುಮಾರ್

Exit mobile version