Site icon Vistara News

Dacoity Case: ಡಕಾಯಿತಿ ಮಾಡಲೆಂದೇ ವಾಟ್ಸ್ಯಾಪ್‌ ಗ್ರೂಪ್‌ ಮಾಡಿಕೊಂಡಿದ್ದ ಖದೀಮರು ಅಂದರ್!

dacoity case belagavi

ಬೆಳಗಾವಿ: ಡಕಾಯಿತಿ ಮಾಡಲೆಂದೇ (dacoity case) ವಾಟ್ಸ್ಯಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದ 9 ಮಂದಿ ಖದೀಮರನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ.

ಈ ಖತರ್‌ನಾಕ್‌ ಖೂಳರು ವಾಟ್ಸ್ಯಾಪ್‌ನಲ್ಲಿ ಗ್ರೂಪ್ ಕ್ರಿಯೇಟ್ ಮಾಡಿಕೊಂಡಿದ್ದರು. ಅದರ ಮೂಲಕ ಇಂದು ಯಾವ ಮನೆಗೆ ನುಗ್ಗುವುದು, ಎಲ್ಲಿ ಹೇಗೆ ದರೋಡೆ ಮಾಡುವುದು ಎಂಬುದನ್ನು ಮೆಸೇಜ್‌ಗಳ ಮೂಲಕ ಕಮ್ಯೂನಿಕೇಟ್ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ವಿವಿಧ ಠಾಣೆಗಳ ಒಟ್ಟು 6 ಪ್ರಕರಣಗಳಲ್ಲಿ ಈ ದರೋಡೆಕೋರರು ಭಾಗಿಯಾಗಿದ್ದು, ಒಟ್ಟು 9 ಜನ ಖದೀಮರನ್ನು ಗೋಕಾಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ, ವಾಹನ, ದ್ವಿಚಕ್ರವಾಹನ ಸೇರಿ 7,89,700 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಣಚಿನಮರಡಿ ಗ್ಯಾಂಗ್ ಹಾಗೂ ಎಸ್ಪಿ ಗ್ಯಾಂಗ್ ಎಂಬ ಹೆಸರಿನಲ್ಲಿ ಇವರು ಎರಡು ಗ್ರೂಪ್ ಮಾಡಿಕೊಂಡಿದ್ದರು. ಬೆಣಚಿನಮರಡಿ ಗ್ಯಾಂಗ್‌ನ 7 ಹಾಗೂ ಎಸ್ಪಿ ಗ್ಯಾಂಗ್‌ನ 2 ಖದೀಮರನ್ನು ಹೆಡೆಮುರಿ ಕಟ್ಟಲಾಗಿದೆ. ಈ ಆರೋಪಿಗಳನ್ನು ದುರ್ಗಪ್ಪ ವಡ್ಡರ್, ನಾಗಪ್ಪ ಮಾದರ್, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ದ ತಸ್ಪಿ, ‌ಬೀರಸಿದ್ದ ಗುಂಡಿ, ಉದ್ದಪ್ಪ ಖಿಲಾರಿ, ಪರಶುರಾಮ್ ಗೊಂದಳಿ, ಆಕಾಶ ತಳವಾರ ಎಂದು ಗುರುತಿಸಲಾಗಿದೆ. ಗೋಕಾಕ ನಗರ, ಗೋಕಾಕ ಗ್ರಾಮೀಣ ಹಾಗೂ ಅಂಕಲಗಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ‌

ಕಿಡ್‌ನ್ಯಾಪ್‌, ಕಳವಿಗೆ ಆರ್‌ಎಸ್‌ಎಸ್‌ ಹೆಸರು ಬಳಕೆ!

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಕಿಡ್ನಾಪ್ ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹೆಸರು ದುರ್ಬಳಕೆ ಮಾಡಿದ ಪ್ರಕರಣ ವರದಿಯಾಗಿದೆ. ಮೂವರನ್ನು ಬಂಧಿಸಲಾಗಿದೆ. ದೂರು ದಾಖಲಾದ ಬಳಿಕ ಕಾರ್ಯಾಚರಣೆ ವೇಳೆ ದನದ ಮಾಂಸ ಕಳ್ಳತನದ ಅಸಲಿ ಕಹಾನಿ ಬಯಲಾಗಿದೆ. ಇದೇ ತಿಂಗಳ 10ರಂದು ಕಿಡ್ನಾಪ್ ನಡೆದಿತ್ತು. ಜಾವಿದ್ ಬೇಗ್ ಎಂಬಾತನನ್ನು ಕಾರ್‌ನಲ್ಲಿ ಬಂದಿದ್ದ ಮೂವರು ವಾಹನ ಸಮೇತ ಕಿಡ್ನಾಪ್ ಮಾಡಿದ್ದರು.

ಜಾವೀದ್‌ ರಾಮನಗರದಿಂದ ತಿಲಕನಗರಕ್ಕೆ ಬರುತ್ತಿದ್ದು, ದನದ ಮಾಂಸ ಗಾಡಿಯಲ್ಲಿಟ್ಟುಕೊಂಡು ಅಂಗಡಿ ಡೆಲಿವರಿಗೆಂದು ತರುತ್ತಿದ್ದರು. ಈ ವೇಳೆ ಮೈಕೊ ಸಿಗ್ನಲ್ ಬಳಿ ಮೂವರು ಕಿಡ್ನಾಪರ್ಸ್ ಅಡ್ಡ ಹಾಕಿದ್ದರು. ತಾವು ಆರ್‌ಎಸ್‌ಎಸ್‌ನವರೆಂದು ತಡೆದು ವಾಹನ ಸಮೇತ ಜಾವಿದ್‌ರನ್ನು ಕರೆದೊಯ್ದಿದ್ದರು.

ಬಳಿಕ ಬಿಟ್ಟು ಕಳುಹಿಸಬೇಕಾದರೆ ಒಂದು ಲಕ್ಷ ರೂ. ಹಣ ಕೊಡು ಎಂದು ಡಿಮ್ಯಾಂಡ್ ಮಾಡಿದ್ದರು. ಕೊನೆಗೆ ಹತ್ತು ಸಾವಿರ ಪಡೆದು ಬಿಟ್ಟು ಕಳುಹಿಸಿದ್ದರು. ದನದ ಮಾಂಸ ಸಾಗಿಸುತಿದ್ದ ತನ್ನ ಗಾಡಿಯನ್ನು ಕೇಳಿದಾಗ, ಸೇಂಟ್ ಜಾನ್ ಸಿಗ್ನಲ್ ಬಳಿ ಬಿಟ್ಟಿರುವುದಾಗಿ ಹೇಳಿದ್ದರು. ಸಿಗ್ನಲ್ ಬಳಿ ಹೋದಾಗ ಕೇವಲ ಗಾಡಿ ಇದ್ದು, ಅದರಲ್ಲಿ ಮಾಂಸ ಇರಲಿಲ್ಲ. ನಂತರ ಜಾವೀದ್‌ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದಾಗ ಅಸಲಿ ಕಹಾನಿ ಹೊರಬಿದ್ದಿದೆ.

ಮಾಂಸ ಡೆಲಿವರಿಯಾಗಬೇಕಿದ್ದ ಅಂಗಡಿಯ ಮಾಲೀಕ ಮಹಮದ್‌ ಎಂಬಾತನಿಂದಲೇ ಕಿಡ್ನಾಪ್ ನಡೆದಿದ್ದು ಬಯಲಿಗೆ ಬಂದಿದೆ. ಚಾಲಕನನ್ನು ಬೆದರಿಸಲು ಈತ ಆರ್‌ಎಸ್‌ಎಸ್ ಹೆಸರು ಬಳಸಿದ್ದ. ಮೂವರು ಯುವಕರನ್ನು ಬಿಟ್ಟು ಕಿಡ್ನಾಪ್ ಕೃತ್ಯ ಮಾಡಿಸಿದ್ದ. ದನದ ಮಾಂಸ ಕದಿಯಲೆಂದೇ ಈ ಕೃತ್ಯ ನಡೆಸಿದ್ದು, ರಾಮನಗರದಿಂದಲೇ ಫಾಲೋ ಮಾಡಿಸಿದ್ದ. ಬಳಿಕ ಮಾಂಸ ತನ್ನ ಅಂಗಡಿಗೆ ತರಿಸಿಕೊಂಡು ಗಾಡಿ ಕಳುಹಿಸಿದ್ದ. ನಂತರ ಮಾಂಸ ಡೆಲಿವರಿಯಾಗಿಲ್ಲ ಎಂದು ಕಥೆ ಕಟ್ಟಿದ್ದ. ಸದ್ಯ ಅಂಗಡಿ ಮಾಲೀಕ ಮಹಮದ್ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Viral News : ಏನೋ ಮಾಡಲು ಹೋಗಿ..; ಗಂಡನಿಗೆ ಬುದ್ಧಿ ಕಲಿಸಲೆಂದು ಗೆಳೆಯರಿಂದ ಚಿನ್ನ ಕಳವು ಮಾಡಿಸಿ ಸಿಕ್ಕಿಬಿದ್ಳು!

Exit mobile version