Site icon Vistara News

ಬೆಳಗಾವಿಯ ಮನೆಯೊಂದರಲ್ಲಿ ಅಸ್ತಿಪಂಜರ ಪತ್ತೆ: 8 ತಿಂಗಳ ಹಿಂದೆಯೇ ಮೃತಪಟ್ಟಿರುವ ಶಂಕೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಶಿವಾಪುರ ಗ್ರಾಮದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬನ ಅಸ್ತಿಪಂಜರ ಪತ್ತೆಯಾಗಿದೆ. ಮಲಗಿದ ಸ್ಥಿತಿಯಲ್ಲೆ ಇರುವ ಅಸ್ತಿಪಂಜರ ಇದೀಗ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗ್ರಾಮದ ಹಳೆಯ ಕಟ್ಟಡವೊಂದರಲ್ಲಿ ಪತ್ತೆಯಾಗಿರುವ ಈ ಅಸ್ತಿಪಂಜರವು ಶಿವಾಪುರ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂಬುವರದ್ದು ಎಂಬ ಶಂಕೆ ಮೂಡಿದೆ. ಅಲ್ಲದೆ, ಇವರು ಕಳೆದ 8 ಅಥವಾ 9 ತಿಂಗಳ ಹಿಂದೆ ಸಾವನ್ನಪಿರಬಹುದು ಎಂದು ಹೇಳಲಾಗುತ್ತಿದೆ.

ಸ್ಥಳೀಯರು ಹೇಳುವ ಪ್ರಕಾರ ಪ್ರಕಾಶ್‌ ಎಂಬುವವರು ವಿದ್ಯಾವಂತ ಹಾಗೂ ಯಾವುದೇ ತಕರಾರುಗಳಲ್ಲಿ ಭಾಗಿಯಾಗದೆ ತಮ್ಮ ಪಾಡಿಗೆ ತಾವಿದ್ದವರು. ಆದರೆ ಕೆಲ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರಿಂದ, ಕುಳಿತ ಸ್ಥಳದಲ್ಲಿಯೇ ಗಂಟೆಗಟ್ಟಲೆ ಸುಮ್ಮನೆ ಇರುತ್ತಿದ್ದರು. ಸುತ್ತಮುತ್ತ ನಡೆಯುವ ಘಟನೆಗಳ ಬಗ್ಗೆ ಅರಿವೇ ಇರುತ್ತಿರಲಿಲ್ಲ. ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಪ್ರಕಾಶ್‌ ಅವರೇ ನಿಧನರಾಗಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾವಿಗೆ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ಇದು ಕೊಲೆಯೂ ಆಗಿರಬಹುದು ಅಥವಾ ಪ್ರಕಾಶ್‌ ಹಸಿವು-ಕಾಯಿಲೆಯಿಂದ ಬಳಲಿ ಮೃತಪಟ್ಟಿರಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕಾಶ್‌ ಬಗ್ಗೆ ಗ್ರಾಮಸ್ಥರು ಯಾರೂ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಅವರು ಕಾಣದಾದಾಗ ಯಾರಿಗೂ ಅನುಮಾನ ಬಂದಿಲ್ಲ. ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Accident | ಬೆಳಗಾವಿಯಲ್ಲಿ ಭೀಕರ ಅಪಘಾತ, ಕ್ರೂಸರ್‌ ಪಲ್ಟಿಯಾಗಿ 7 ಜನ ಸಾವು, ಹಲವರ ಸ್ಥಿತಿ ಗಂಭೀರ

Exit mobile version