Site icon Vistara News

ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ತಂದೆ

honour killing

ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿದೆ. ಅನ್ಯ ಜಾತಿಯ ಯುವಕನನ್ನು ಆಕೆ ಪ್ರೀತಿಸಿದ್ದೇ ಹತ್ಯೆಗೆ ಕಾರಣ ಎಂದು ಗೊತ್ತಾಗಿದೆ. ತಂದೆಯೇ ಮಗಳನ್ನು ಎಚ್‌ಎಲ್‌ಸಿ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ ಆರೋಪವಿದ್ದು, ತಂದೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಗ್ರಾಮದ ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದು ಆಕೆಯ ಕುಟುಂಬಸ್ಥರಿಗೆ ಸಿಟ್ಟು ತಂದಿತ್ತು. ಯುವಕನಿಂದ ದೂರವಿರುವಂತೆ ಮನೆಯವರು ಎಚ್ಚರಿಕೆ ಕೊಟ್ಟಿದ್ದರು. ಆದರೆ ಆಕೆ ಯುವಕನ ಜತೆಗಿನ ಒಡನಾಟ ಬಿಟ್ಟಿರಲಿಲ್ಲ.

ಇದರಿಂದ ಆಕ್ರೋಶಗೊಂಡಿದ್ದ ಯುವತಿಯ ತಂದೆ ಓಂಕಾರ ಗೌಡ, ಅ.31ರಂದು ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು. ಅಲ್ಲಿಂದ ಹೊಟೇಲ್‌ಗೆ ಕರೆದೊ‌ಯ್ದು ತಿಂಡಿ ತಿನ್ನಿಸಿದ್ದ. ನಂತರ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿ, ಆಭರಣದ ಓಲೆ, ಉಂಗುರವನ್ನು ಮಗಳಿಗೆ ಕೊಡಿಸಿದ್ದ. ನಂತರ ಕಾಲುವೆ ಬಳಿ ಕರೆದುಕೊಂಡು ಹೋಗಿದ್ದು, ಒಂದು ನಿಮಿಷ ಬರುವುದಾಗಿ ಹೇಳಿ ಹಿಂದಿನಿಂದ ಕಾಲುವೆಗೆ ತಳ್ಳಿದ್ದ.

ನಂತರ ತನ್ನ ಗೆಳೆಯನ ಮನೆ ಹತ್ತಿರ ಬೈಕ್ ನಿಲ್ಲಿಸಿ ತಿರುಪತಿಗೆ ಹೋಗಿದ್ದ. ಮಗಳು ಮತ್ತು ಗಂಡ ಕಾಣೆಯಾಗಿರುವ ಬಗ್ಗೆ ಕುಡತಿನಿ ಠಾಣೆಯಲ್ಲಿ ಮೃತಳ ತಾಯಿ ದೂರು ಸಲ್ಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಕುಡಿತಿನಿ ಠಾಣೆಯ ಪೊಲೀಸರಿಗೆ ಮರ್ಯಾದೆ ಹತ್ಯೆಯ ಸುಳಿವು ದೊರೆತಿದ್ದು, ಆರೋಪಿ ತಂದೆ ಓಂಕಾರಗೌಡನನ್ನು ಕೊಪ್ಪಳ ಬಳಿ ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಇನ್ನೋರ್ವನನ್ನೂ ಬಂಧಿಸಲಾಗಿದೆ.

ಕೊಲೆಗೂ ಮುನ್ನವೇ ಮಗಳ ಹೆಸರಿನಲ್ಲಿದ್ದ 20 ಲಕ್ಷ ರೂ.ಗಳನ್ನು ಈತ ಬೇರೆಯವರಿಗೆ ವರ್ಗಾವಣೆ ಮಾಡಿದ್ದ ಎಂಬುದೂ ತನಿಖೆಯ ವೇಳೆ ಬಹಿರಂಗವಾಗಿದೆ.

ಇದನ್ನೂ ಓದಿ | ಶೃಂಗೇರಿ ಮಸೀದಿ ಮುಂಭಾಗ ಕೇಸರಿ ಬಾವುಟ, ಯುವಕರ ಚಕಮಕಿ

Exit mobile version