Site icon Vistara News

ಬೆಂಗಳೂರಿನಲ್ಲಿ ಪೊಲೀಸ್‌ ಇಲಾಖೆ ಹೆಸರು ಬಳಸಿಯೇ ವ್ಯಾಪಾರಿಯ ಕಿಡ್ನ್ಯಾಪ್‌; ಮುಂದಾಗಿದ್ದು ರೋಚಕ!

Bengaluru Kidnapers

Bengaluru Criminals Used Police Department Name To Kidnap A Businessman, 5 Arrested

ಬೆಂಗಳೂರು: ನಗರದಲ್ಲಿ ಪೊಲೀಸರು ಅಪರಾಧಗಳ ತಡೆಗೆ ಇನ್ನಿಲ್ಲದ ನಿಗಾ, ಕ್ರಮ ತೆಗೆದುಕೊಳ್ಳುತ್ತಿದ್ದರೂ ಅಪರಾಧ ನಿಲ್ಲುತ್ತಿಲ್ಲ. ಅದರಲ್ಲೂ, ಐವರು ದುಷ್ಕರ್ಮಿಗಳು ಪೊಲೀಸ್‌ ಇಲಾಖೆಯ (Police Department) ಹೆಸರನ್ನೇ ಬಳಸಿಕೊಂಡು ಉದ್ಯಮಿಯೊಬ್ಬರನ್ನು ಅಪಹರಣ (Kidnap Case) ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಎಸ್‌ಪಿ ರೋಡ್‌ನಲ್ಲಿ ಕಾಲು ಸಿಂಗ್‌ ಎಂಬುವವರು ಮೊಬೈಲ್‌ ಅಂಗಡಿಯನ್ನು ಇಟ್ಟುಕೊಂಡಿದ್ದು, ಇವರನ್ನು ಐವರು ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಏಕಾಏಕಿ ಅಂಗಡಿಗೆ ನುಗ್ಗಿದ ಆರೋಪಿಗಳು, ನೀನು ಡ್ರಗ್ಸ್‌ ಮಾರಾಟ ಮಾಡುತ್ತಿದ್ದೀಯಾ ಎಂಬ ಮಾಹಿತಿ ಇದೆ ಎಂದು ಗದರಿಸಿದ್ದಾರೆ. ಇದರಿಂದ ಕಾಲು ಸಿಂಗ್‌ ವಿಚಲಿತರಾದಾಗ ಅವರನ್ನು ಅಪಹರಣ ಮಾಡಿದ್ದಾರೆ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸುವ ಜತೆಗೆ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ.

ಖಾಸಿಂ ಸೇಠ್‌ ಎಂಬಾತನ ತಂಡವು ಕಾಲು ಸಿಂಗ್‌ ಅವರನ್ನು ಎರಡು ದಿನಗಳ ಹಿಂದೆ ಕಿಡ್ನ್ಯಾಪ್‌ ಮಾಡಿದೆ. ಆದರೆ, 5 ಲಕ್ಷ ರೂ. ನೀಡಲು ಕಾಲು ಸಿಂಗ್‌ ನಿರಾಕರಿಸಿದಾಗ ಖಾಸಿಂ ಸೇಠ್‌ ಪೊಲೀಸರಿಗೇ ಫೇಕ್‌ ಕಾಲ್‌ ಮಾಡಿದ್ದಾನೆ. ಡ್ರಗ್ಸ್‌ ಮಾರಾಟದ ಕುರಿತು ಮಾಹಿತಿ ಇದೆ ಎಂಬುದಾಗಿ ಸುಳ್ಳು ಹೇಳಿದ್ದಾನೆ. ಆಗ ಪೊಲೀಸರು ಗದರಿಸಿದ್ದು, ದುಡ್ಡು ಕೂಡ ಸಿಗದ ಕಾರಣ ಕಾಲು ಸಿಂಗ್‌ ಅವರನ್ನು ಖಾಸಿಂ ಸೇಠ್‌ ತಂಡವು ಬಿಟ್ಟುಕಳುಹಿಸಿದೆ.

ಇದನ್ನೂ ಓದಿ: Manipur Violence: ಹತ ಬಾಲಕ, ಬಾಲಕಿ ಅಪಹರಣಕಾರರ ಕೈಗೆ ಸಿಕ್ಕಿದ್ದು ಹೇಗೆ? ಹಿಂದಿದೆಯೇ ಪ್ರೇಮ ಕತೆ?

ಅಪಹರಣಕಾರರಿಂದ ಬಚಾವಾಗಿ ಬಂದ ಕಾಲು ಸಿಂಗ್‌ ಅವರು ವಿವಿ ಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಸಿಸಿಬಿ ಪೊಲೀಸರು ವಾಸಿಂ, ಶಬ್ಬೀರ್‌, ಶೊಹಿಬ್‌ ಹಾಗೂ ಮುಜಾಫರ್‌ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದಕ್ಕೂ ಮೊದಲು ಕೂಡ ಪೊಲೀಸ್‌ ಇಲಾಖೆ ಹೆಸರಲ್ಲಿ ಅಪಹರಣ ಮಾಡಿದ್ದಾರೆಯೇ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Exit mobile version