Site icon Vistara News

Bengaluru Murder : ವೈಯಾಲಿಕಾವಲ್ ಕೊಲೆ ಕೇಸ್‌; ಪರಸಂಗದ ಪೀಕಲಾಟಕ್ಕೆ ಕೊಲೆಯಾದಳಾ ಸುಂದರಿ?

Bengaluru murder case

ಬೆಂಗಳೂರು: ವೈಯಾಲಿಕಾವಲ್‌ನ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ (Bengaluru Murder) ಸಂಬಂಧಿಸಿದಂತೆ ಪರಸಂಗದ ಪೀಕಲಾಟಕ್ಕೆ ಕೊಲೆಯಾದಳಾ ಎಂಬ ಹಲವು ಅನುಮಾನ ಮೂಡಿದೆ. ಮೆನ್ಸ್ ಬ್ಯೂಟಿ ಪಾರ್ಲರ್ ವ್ಯಕ್ತಿ ಜತೆ ಮಹಾಲಕ್ಷ್ಮಿ ಆತ್ಮೀಯವಾಗಿ ಇದ್ದಳು. ಆದರೆ ಕೆಲ ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಹೀಗಾಗಿ ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಅನುಮಾನ ಮೂಡಿದೆ. ಸದ್ಯ ಎರಡು ದಿನಗಳ ಹಿಂದೆ ಮನೆಯ ಬಳಿ ಬಂದು ಬಾಗಿಲು ತೆಗೆದು ಪರಾರಿ ಆಗಿದ್ದಾನೆ. 8 ದಿನವಾದರೂ ಯಾರಿಗೂ ವಿಷಯ ತಿಳಿಯದ ಕಾರಣ, ಮನೆ ಬಾಗಿಲು ತೆಗೆದು ಪರಾರಿ ಆಗಿದ್ದಾನೆ. ಸದ್ಯ ಪಾರ್ಲರ್ ನ ವ್ಯಕ್ತಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.

ಬಾಗಿಲು ತೆರೆದಾಗ ಫ್ರಿಡ್ಜ್‌ನಿಂದ ಸೋರುತ್ತಿತ್ತು ರಕ್ತ

ವೈಯಾಲಿಕಾವಲ್ ವ್ಯಾಪ್ತಿಯಲ್ಲಿ ಮಹಾಲಕ್ಷ್ಮಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೆ ವಿಚಾರಗಳು ಹೊರಬರುತ್ತಿದೆ. ಗಂಡನ ತೊರೆದು ಬಂದಿದ್ದ ಮಹಾಲಕ್ಷ್ಮೀ ಸೋದರನೊಂದಿಗೆ ವಾಸವಾಗಿದ್ದಳು. ಸೋದರ ಉಕ್ಕುಂ ಸಿಂಗ್ ಹಾಗೂ ಆತನ ಪತ್ನಿ ದೀಪಿಕಾ ಸುಮಾರು 15 ದಿನಗಳು ಮಹಾಲಕ್ಷ್ಮಿಯೊಂದಿಗೆ ವಾಸವಿದ್ದರು. ಬಳಿಕ ಮಹಾಲಕ್ಷ್ಮೀ ನಾನು ಒಬ್ಬಳೆ ವಾಸಮಾಡಿಕೊಂಡಿರುತ್ತೇನೆಂದು ಉಕ್ಕುಂ ಸಿಂಗ್‌ನೊಂದಿಗೆ ಜಗಳ ಮಾಡಿದ್ದಳು. ಅದಕ್ಕೆ ಬೇಸರಗೊಂಡ ಸೋದರ ಉಕ್ಕುಂಸಿಂಗ್ ತನ್ನ ಪತ್ನಿಯನ್ನು ಕರೆದುಕೊಂಡು ಗಂಜೂರಿನ ಮನೆಗೆ ವಾಪಸ್ಸಾಗಿದ್ದ.

ಬಳಿಕ ಮಹಾಲಕ್ಷ್ಮಿ ತಾಯಿ ಮೀನಾ ರಾಣಾ ಆಗಾಗ ಮಗಳ ಮನೆಗೆ ಬಂದು ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು. ಸೆಪ್ಟೆಂಬರ್ 2 ರಂದು ತಂದೆಗೆ ಕರೆ ಮಾಡಿದ್ದ ಮಹಾಲಕ್ಷ್ಮಿ ಮನೆಗೆ ಬರುವುದಾಗಿ ತಿಳಿಸಿದ್ದಳು. ಆದರೆ ಅದಾದ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಎರಡು ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 20 ರಂದು ಸಂಜೆ 7 ಗಂಟೆ ಮೃತಳು ವಾಸವಾಗಿದ್ದ ಕಟ್ಟಡದಲ್ಲೆ ವಾಸವಾಗಿರುವ ಜೀವನ್ ಪ್ರಕಾಶ್ ಮನೆಯೊಳಗೆ ಏನೋ ವಾಸನೆ ಬರುತ್ತಿದೆ ಎಂದು ಮಹಾಲಕ್ಷ್ಮಿ ಸೋದರ ಉಕ್ಕುಂ ಸಿಂಗ್‌ಗೆ ಕಾಲ್ ಮಾಡಿ ಹೇಳಿದ್ದಾರೆ. ಉಕ್ಕು ಸಿಂಗ್‌ ಮತ್ತೊಬ್ಬ ಸಹೋದರಿ ಲಕ್ಷ್ಮಿಗೆ ಹೇಳಿ ಆಕೆ ತಾಯಿ ಮೀನಾ ರಾಣಾಗೆ ಕರೆ ಮಾಡಿದ್ದಾರೆ. ಫೋನ್ ಮಾಡಿ ಮಹಾಲಕ್ಷ್ಮಿ ಮನೆ ಬಳಿ ಏನೋ ವಾಸನೆ ಬರ್ತಿದೆಯಂತೆ ಎಂದು ಮಾಹಿತಿ ನೀಡಿದ್ದಳು. ಆ ದಿನ ರಾತ್ರಿಯಾದ ಕಾರಣ ಬೆಳಗ್ಗೆ ಹೋಗಿ ನೋಡೋಣ‌ ಎಂದುಕೊಂಡಿದ್ದರು.

ಅದರಂತೆ ನಿನ್ನೆ ಅಂದರೆ ಸೆ.21ರ ಬೆಳಗ್ಗೆ ನೆಲಮಂಗಲದಿಂದ ವೈಯಾಲಿಕಾವಲ್‌ಗೆ ಮಹಾಲಕ್ಷ್ಮಿ ತಾಯಿ-ತಂದೆ ಹಾಗೂ ಸೋದರಿ ಲಕ್ಷ್ಮಿ ಬಂದಿದ್ದರು. ಆಗ ಮಹಾಲಕ್ಷ್ಮೀ ವಾಸವಾಗಿರುವ ಮನೆಗೆ ಬೀಗ ಹಾಕಿದ್ದರಿಂದ ಜೀವನ್ ಪ್ರಕಾಶ್‌ಗೆ ಫೋನ್ ಮಾಡಿ ಮನೆಯ ಬೀಗವನ್ನು ಕೇಳಿದ್ದಾರೆ. ಅಲ್ಲಿಯೇ ವಾಸವಾಗಿರೋ ಪೂಜಾ ರಾವತ್‌ರವರ ಬಳಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಅವರಿಂದ ಬೀಗ ತೆಗೆದುಕೊಂಡು ಮನೆ ಬಾಗಿಲು ತೆರೆಯುತ್ತಿದ್ದಂತೆ ಬಟ್ಟೆಗಳೆಲ್ಲಾ ಮನೆಯ ತುಂಬಾ ಹರಡಿಕೊಂಡಿದ್ದ ದೃಶ್ಯ ಕಣ್ಣಿಗೆ ಬಿದ್ದಿತ್ತು. ಚಪ್ಪಲಿ, ಬ್ಯಾಗ್ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಇದ್ದವು. ಹಾಲ್‌ನಲ್ಲಿರುವ ಫ್ರಿಡ್ಜ್‌ನಲ್ಲಿ ರಕ್ತ ಸೋರುತ್ತಿತ್ತು. ಮತ್ತೊಂದೆಡೆ ಹುಳಗಳು ಹರಿದಾಡುತ್ತಿದ್ದವು. ಏನಿರಬಹುದೆಂದು ಫ್ರಿಡ್ಜ್ ತೆಗೆದು ನೋಡಿದರೆ ಮಹಾಲಕ್ಷ್ಮಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿನ ಎಲ್ಲಾ ಬಾಕ್ಸ್‌ಗಳಲ್ಲಿ ತುಂಬಲಾಗಿತ್ತು. ಬಳಿಕ ಗಾಬರಿಯಿಂದ ಮಗಳೊಂದಿಗೆ ಹೊರಗೆ ಬಂದು ಅಳಿಯ ಇಮ್ರಾನ್‌ಗೆ ತಿಳಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version