Site icon Vistara News

ಬರಗೂರು ರಾಮಚಂದ್ರಪ್ಪ ವಿರುದ್ಧ BJP ದೂರು: ಸಿದ್ದರಾಮಯ್ಯ ಉತ್ತರಿಸಲಿ ಎಂದ ರವಿಕುಮಾರ್

BJP Complaint over baraguru ramachandrappa

ಬೆಂಗಳೂರು: ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿ ʼಭರತನಗರಿʼ ಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ. ವಿಡಂಬನೆ ಮಾಡಿದ್ದಲ್ಲದೆ ಭಾರತವನ್ನು ಜಡಭಾರತ ಎಂದು ಕರೆದಿದ್ದಾರೆ. ಗಂಗಾನದಿಯನ್ನು ಹಾದರ ಎಂದು ಕರೆದಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಬರಗೂರು ರಾಮಚಂದ್ರಪ್ಪ ಅವರು ದೊಡ್ಡ ಸಾಹಿತಿಯಾಗಿದ್ದು, ಅಂಥವರು ನಾಡಿಗೆ ಮತ್ತು ದೇಶಕ್ಕೆ ಅವಹೇಳನ ಮಾಡಿದ್ದಾರೆ. ಇದೊಂದು ತಲೆ ತಗ್ಗಿಸಬೇಕಾದ ವಿಚಾರ. ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಇಂಥ ಅಪಮಾನ ಆಗಿದೆ. ಯಾಕೆ ಅವರು ಕ್ರಮ ಕೈಗೊಂಡಿಲ್ಲ? ಅಥವಾ ಸಿದ್ದರಾಮಯ್ಯನವರು ಹೋಗಲಿ ಬಿಡಿ ಎಂದು ಉದಾಸೀನ ಮಾಡಿದರೇ? ಭಾರತ ಮತ್ತು ರಾಷ್ಟ್ರಗೀತೆ ಬಗ್ಗೆ ಅಭಿಮಾನ ಇರುವವರು ಇದನ್ನು ಸಹಿಸಿಕೊಂಡು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ | ಜನಗಣಮನವನ್ನು ಅವಮಾನಿಸಿದ ಬರಗೂರು ರಾಮಚಂದ್ರಪ್ಪ?: ಕಾದಂಬರಿಯ ಪದ್ಯ ವೈರಲ್‌

ಇವತ್ತು ಬರಗೂರು ರಾಮಚಂದ್ರಪ್ಪ ಅವರ ಈ ಬರಹದ ಬಗ್ಗೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ರವಿಕುಮಾರ್‌, ರಾಷ್ಟ್ರಗೀತೆಗೆ ಆದ ಅವಮಾನದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಭರತನಗರಿ ಕಾದಂಬರಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ನಾಡಿನ ಕಲೆ, ಸಂಸ್ಕೃತಿ, ದೇಶ, ಅಂಬೇಡ್ಕರ್ ಮತ್ತು ಸಾಹಿತ್ಯದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬರಗೂರು ರಾಮಚಂದ್ರಪ್ಪ ಅವರು, ಹೀಗೆ ಬರೆದುದಾದರೂ ಹೇಗೆ? ಎಂದು ರವಿಕುಮಾರ್‌ ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರು ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ವಿಕೃತಿ ಮೆರೆದಿರುವುದು ಗೊತ್ತಾಗಿದೆ. ಬರಗೂರರಿಗೆ ರಾಷ್ಟ್ರಗೀತೆ ಬಗ್ಗೆ ಇರುವ ವಿಕೃತ ಮನಸ್ಸು ಈಗ ಅರಿವಿಗೆ ಬಂದಿದೆ. ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಮಜಾಪೇಯಿ ಬಿಹಾರಿ ಎಂದು ಕರೆದು ಅವಮಾನ ಮಾಡಿದ್ದಾರೆ. ಚಂದ್ರಶೇಖರ, ಮೊರಾರ್ಜಿ, ಸಿಂಹಚರಣ್ (ಚರಣ್ ಸಿಂಗ್) ಎಂದು ವಿಕೃತಿಯ ಹೆಸರುಗಳನ್ನು ಬಳಸಿದ್ದಾರೆ. ಓದುವವರ ತಲೆ ಕೆಡಬೇಕೆಂದು ಹೀಗೆ ಮಾಡಿದ್ದಾರಾ? ಅಥವಾ ಅವರು ತಲೆಕೆಟ್ಟು ಬರೆದಿದ್ದಾರಾ ಗೊತ್ತಿಲ್ಲ ಎಂದು ಆಕ್ಷೇಪಿಸಿದರು

ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ಚಾಮರಾಜಪೇಟೆ ಕಾನೂನು ಪ್ರಕೋಷ್ಠದ ಮಂಡಲ ಸಹ ಸಂಚಾಲಕ ಹಾಗೂ ದೂರುದಾರ ವಿ.ಎಲ್. ಜಗದೀಶ್ ಈ ಸಂದರ್ಭದಲ್ಲಿ ಇದ್ದರು.

ಇದನ್ನೂ ಓದಿ | ಸಚಿವ ಅಶೋಕ್‌ ಹೇಳಿದ್ದು ಅಸತ್ಯ: ಪಠ್ಯ ಪರಿಷ್ಕರಣೆ ಕುರಿತು ಬರಗೂರು ರಾಮಚಂದ್ರಪ್ಪ ಉತ್ತರ

Exit mobile version