Site icon Vistara News

ಕದ್ದ ಮೊಬೈಲ್‌ ಕೊಂಡೊಯ್ಯಲು ಕಾರನ್ನೇ ಕಳ್ಳತನ ಮಾಡಿದರು !

ಬೆಂಗಳೂರು: ಕ್ಲಬ್‌ನಲ್ಲಿ ಮೊಬೈಲ್‌ ದೋಚಿದ್ದ ದರೋಡೆಕೋರರು ಅದನ್ನು ಕೊಂಡೊಯ್ಯಲು ಕಾರನ್ನೇ ಕಳ್ಳತನ ಮಾಡಿದ ಪ್ರಕರಣ ಶಿವರಾಮ ಕಾರಂತ ನಗರದಲ್ಲಿ ನಡೆದಿದೆ.

ಶಿವರಾಮ ಕಾರಂತ ನಗರದ ಕ್ಲಬ್‌ಗೆ ಆರೋಪಿಗಳಾದ ಹೃತಿಕ್ ಗೌಡ, ನಿತೀನ್ ಗೌಡ, ಸುಮಂತ್ , ದರ್ಶನ್ ಗುಂಪು ನುಗ್ಗಿತು. ಈ ವೇಳೆ ಕ್ಲಬ್‌ನಲ್ಲಿ ಇದ್ದವರಿಂದ ಮೊಬೈಲ್‌ ಫೋನ್‌ ದೋಚಿದ್ದರು. ಕೆಲವರಿಂದ ನಗದು, ಚಿನ್ನದ ಸರವನ್ನೂ ಕಸಿದರು. ಅಲ್ಲಿಂದ ಮನೆಗೆ ತೆರಳಲು ಆರೋಪಿಗಳು ಊಬರ್‌ ಕ್ಯಾಬ್‌ ಬುಕ್‌ ಮಾಡಿದ್ದಾರೆ.

ತಮ್ಮನ್ನು ಕರೆದೊಯ್ಯಲು ಸ್ವಿಫ್ಟ್‌ ಕಾರನ್ನು ಚಲಾಯಿಸಿಕೊಂಡು ಚಾಲಕ ಬಂದಿದ್ದಾನೆ. ದಾರಿಯಲ್ಲಿ ಸಾಗುತ್ತ ಚಾಲಕನಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿಗಳು ಚಾಲಕನನ್ನು ಮಧ್ಯದಲ್ಲೆ ಇಳಿಸಿ ಕಾರನ್ನು ಕದ್ದು ಪರಾರಿಯಾಗಿದ್ದಾರೆ.

ಠಾಣೆಯಲ್ಲಿ ದೂರು ದಾಖಲಾದ ನಂತರ ವಿಚಾರಣೆ ಆರಂಭಿಸಿದ ಪೊಲೀಸರಿಗೆ, ಈ ಆರೋಪಿಗಳ ವಿರುದ್ಧ ಬೆಂಗಳೂರಿನ ಸಂಪಿಗೆಹಳ್ಳಿ, ಬೆಳ್ಳಂದೂರು, ಹನುಮಂತನಗರದಲ್ಲಿ ಅನೇಕ ದೂರುಗಳು ದಾಖಲಾಗಿರುವುದು ಪತ್ತೆಯಾಯಿತು. ಇಷ್ಟೆ ಅಲ್ಲದೆ ಈ ಆರೋಪಿಗಳ ವಿರುದ್ಧ ಹಾಸನ, ಕೊಣನೂರು ಪೊಲೀಸ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿರುವುದು ತಿಳಿಯಿತು.

ಈ ಬಗ್ಗೆ ಕಾರ್ಯಪ್ರವೃತ್ತರಾದ ಸಂಪಿಗೆಹಳ್ಳಿ ಪೊಲೀಸರು ಹೃತಿಕ್‌ ಗೌಡ, ನಿತಿನ್‌ ಗೌಡ, ಸುಮಂತ್‌, ದರ್ಶನ್‌ನನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಮೊಬೈಲ್‌ ಫೋನ್‌, ₹5 ಲಕ್ಷದ ಸ್ವಿಫ್ಟ್ ಕಾರು, 18 ಗ್ರಾಂ ಚಿನ್ನದ ಸರ, ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಓದಿಗಾಗಿ | ‘ತೆಲುಗಿನ ಕ್ರೈಮ್ ಸಿನೆಮಾಗಳೇ ಪ್ರೇರಣೆ’; ನಿವೃತ್ತ ಯೋಧ ಸುರೇಶ್ ಕೊಲೆ ಆರೋಪಿಗಳು ಅರೆಸ್ಟ್

Exit mobile version