Site icon Vistara News

Cauvery water dispute :‌ ಮಳೆ ಬಾರದೇ ಇದ್ದರೆ ಸರ್ಕಾರದಿಂದ ಮೋಡ ಬಿತ್ತನೆ!

DCM DK Shivakumar infront of KRS Dam

ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಹೀಗಾಗಿ ಈ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಇನ್ನು ಮೋಡ ಬಿತ್ತನೆ (cloud seeding) ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಅಭಿಪ್ರಾಯಗಳನ್ನೂ ಪಡೆಯಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ. ಅಲ್ಲದೆ, ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಸೆಪ್ಟೆಂಬರ್‌ 26ರಂದು ಬೆಂಗಳೂರು ಬಂದ್ (Bengaluru bandh) ಹಾಗೂ ಸೆಪ್ಟೆಂಬರ್‌ 28ರಂದು ಕರ್ನಾಟಕ ಬಂದ್‌ (Karnataka bandh) ನಡೆಯುತ್ತಿದೆ. ಈ ವಿಚಾರವಾಗಿ ಜನರು ಪ್ರತಿಭಟನೆ ಮಾಡಲು ನಾವು ಎಲ್ಲ ರೀತಿಯ ಸಹಕಾರವನ್ನು ಕೊಡುತ್ತೇವೆ. ಆದರೆ, ಜನರು ಸಹಕಾರ ಕೊಡಲಿಲ್ಲ ಅಂದರೆ ಆ ಬಂದ್‌ಗೆ ಮರ್ಯಾದೆ ಹೋಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಈಗ ಎರಡು ಮೂರು ದಿನಗಳಿಂದ ಮಳೆ ಆಗಿ ಒಳ ಹರಿವು ಉತ್ತಮವಾಗಿ ಆಗಿದೆ. ಮೋಡ ಬಿತ್ತನೆ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಏನಾದರೂ ಮಾಡಲು ಸಾಧ್ಯ ಇದೆಯೇ ಅಂತ ಚರ್ಚೆ ಮಾಡಿದ್ದೇವೆ. ಈ ಸಂಬಂಧ ಎರಡು-ಮೂರು ಅಭಿಪ್ರಾಯಗಳು ಬಂದಿವೆ. ಈಗ ಇರುವ ಪರಿಸ್ಥಿತಿಯಲ್ಲಿ ಮುಂದೆ ನೀರು ಬಿಡೋದು ಕಷ್ಟ ಆಗುತ್ತದೆ ಎಂದು ಹೇಳಿದರು.

ಕೋರ್ಟ್‌ ವಿಚಾರ ನೋಡಿಕೊಂಡು ನಿರ್ಧರಿಸಲಿ

ಎರಡೆರಡು ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಪ್ರತಿಭಟನೆ ಸಂಬಂಧ ನಾವು ಜನರ ಜತೆ ಇದ್ದೇವೆ. ಜನಕ್ಕೆ ತೊಂದರೆ ಆಗಬಾರದು. ಜನರು ಸಹಕಾರ ಕೊಡಲಿಲ್ಲ ಅಂದರೆ ಆ ಬಂದ್‌ಗೆ ಮರ್ಯಾದೆ ಹೋಗುತ್ತದೆ. ಅವರಲ್ಲಿಯೇ ಚರ್ಚೆಗಳು ಆಗುತ್ತಿದೆ. ಅದರಲ್ಲಿ ‌ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಕೋರ್ಟ್ ವಿಚಾರವೂ ಅವರಿಗೆ ಗೊತ್ತಿದೆ. ಅದನ್ನು ಅವರು ನೋಡಲಿ ಎಂದು ಹೇಳಿದರು.

ಹೋರಾಟಕ್ಕೆ ನಮ್ಮ ಅಡಚಣೆ ಇಲ್ಲ

ರಾಜ್ಯದ ಹಿತ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ನೆಲ, ಜಲ, ಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಯಾವುದೇ ಪಕ್ಷದವರಾದರೂ ಉಳಿಸಿಕೊಳ್ಳಬೇಕು. ಜನರ ಹೋರಾಟಕ್ಕೆ ನಾವು ಅಡಚಣೆ ಮಾಡೋದಿಲ್ಲ. ಆದರೆ, ಎಲ್ಲರೂ ಶಾಂತಿ ಕಾಪಾಡಬೇಕು. ಜನರಿಗೆ ತೊಂದರೆ ಆಗಬಾರದು. ಜನ ಹೋರಾಟ ಮಾಡಲಿ. ಅದು ಅವರ ಹಕ್ಕು. ಆದರೆ ಶಾಂತಿ ಕಾಪಾಡಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಯಾರಿಗೂ ನಾವು ತೊಂದರೆ ಕೊಡೋಕೆ ಹೋಗುವುದಿಲ್ಲ. ನಾವು ನಮ್ಮ ರಾಜ್ಯದ ಹಕ್ಕು ಉಳಿಸಲು ಕೆಲಸ‌ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ (Supreme Court), ಹೈಕೋರ್ಟ್ (High Court) ತೀರ್ಪು ‌ಇದೆ. ಅದನ್ನು ಅರಿತುಕೊಳ್ಳಬೇಕು. ಟಿವಿಯವರು ಕರೆಯುತ್ತಾರೆ, ಹೆಸರು ಕೊಡುತ್ತಾರೆ ಅಂತ ಮಾತನಾಡಿ ನಾಳೆ ಕೋರ್ಟ್‌ನಲ್ಲಿ ಸಮಸ್ಯೆ ಆಗೋದು ಬೇಡ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಂದ್ ಮಾಡೋರು ತೀರ್ಮಾನ ಮಾಡಲಿ ಎಂದು ಡಿ.ಕೆ. ಶಿವಕುಮಾರ್ ಪರೋಕ್ಷ ಎಚ್ಚರಿಕೆಯನ್ನು ನೀಡಿದರು.

ಇದನ್ನೂ ಓದಿ: Camphor Benefits: ಮನೆಯ ಯಾವೆಲ್ಲ ಭಾಗಗಳಲ್ಲಿ ಕರ್ಪೂರವನ್ನಿಡುವುದು ಶುಭದಾಯಕ ಗೊತ್ತೇ?

ನಾನು ಒಬ್ಬ ಮಂತ್ರಿಯಾಗಿ ಏನೂ ಮಾತನಾಡಲು ಆಗುತ್ತಿಲ್ಲ. ನಾನು ಕೋರ್ಟ್‌ಗೂ ಗೌರವ ಕೊಡಬೇಕು. ಜನರನ್ನೂ ಉಳಿಸಿಕೊಳ್ಳಬೇಕು. ಡೆವಿಲ್ ಆ್ಯಂಡ್ ದಿ ಡೀಪ್ ಸೀ ಅನ್ನೋ ರೀತಿ ನನ್ನ ಮತ್ತು ನಮ್ಮ ಸರ್ಕಾರದ ಪರಿಸ್ಥಿತಿ ಆಗಿದೆ. ಏನೇ ಆದರೂ ನಮ್ಮ ರಾಜ್ಯದ ಹಿತವನ್ನು ನಾವು ಕಾಪಾಡಬೇಕು. ಇದು ನಮ್ಮ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

Exit mobile version