Site icon Vistara News

ದಶಮಾನೋತ್ಸವದ ಸಂಭ್ರಮದಲ್ಲಿ ಚಲನಚಿತ್ರ ವಿತರಣಾ ಸಂಸ್ಥೆ ಗಲ್ಫ್ ಕನ್ನಡ ಮೂವೀಸ್

ಗಲ್ಫ್ ಕನ್ನಡ ಮೂವೀಸ್

| ನೇರಂಬಳ್ಳಿ ಸುರೇಶ್ ರಾವ್, ಕುವೈತ್
ಕೊಲ್ಲಿ ರಾಷ್ಟ್ರಗಳಲ್ಲಿ ಮಾತೃಭಾಷೆಯ ಚಲನಚಿತ್ರವನ್ನು ವೀಕ್ಷಿಸಬೇಕೆಂಬ ಕನ್ನಡಿಗರ ಆಶಯದಂತೆ ಪ್ರಪ್ರಥಮ ಬಾರಿಗೆ ಬೆಳ್ಳಿ ತೆರೆಯ ಇತಿಹಾಸದಲ್ಲಿ ಕನ್ನಡ ಚಲನಚಿತ್ರಗಳನ್ನು ಬಿಡುಗಡೆ ಮಾಡಿ ಇತಿಹಾಸ ಸೃಷ್ಟಿಸಿರುವ ಚಲನಚಿತ್ರ ವಿತರಣಾ ಸಂಸ್ಥೆ ಗಲ್ಫ್ ಕನ್ನಡ ಮೂವೀಸ್ ದಶಮಾನೋತ್ಸವದ ಸಂಭ್ರಮದಲ್ಲಿದೆ.

ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅನ್ಯ ಭಾಷೆಗಳ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ಏಕಸ್ವಾಮ್ಯವಾಗಿ ನಡೆಯುತ್ತಿದೆ. ಕನ್ನಡ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ನಡೆಯುತ್ತಲೇ ಇರಲಿಲ್ಲ. ಕನ್ನಡ ಭಾಷೆಯ ಸೇವೆ ಹಾಗೂ ಚಲನಚಿತ್ರರಂಗದ ಸೇವೆಗಾಗಿ, ಕನ್ನಡ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನಗಳ ಅವಶ್ಯಕತೆಯನ್ನು ಮನಗಂಡು, ಕನ್ನಡ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನಗಳ ಅವಶ್ಯಕತೆಯನ್ನು ಮನಗಂಡು ಗಲ್ಫ್ ಕನ್ನಡ ಮೂವೀಸ್ ಸ್ಥಾಪನೆಯಾಗಿದೆ.

ಇದನ್ನೂ ಓದಿ | Rupee-riyal trade | ಡಾಲರ್‌ ಕೈಬಿಟ್ಟು ರೂಪಾಯಿ-ರಿಯಾಲ್‌ ಬಳಸಲು ಭಾರತ-ಸೌದಿ ಅರೇಬಿಯಾ ಚರ್ಚೆ

ಕನ್ನಡ ಅಭಿಮಾನಿಗಳು, ಸಮಾನ ಮನಸ್ಕ ಸ್ನೇಹಿತರು ಗಲ್ಫ್ ರಾಷ್ಟ್ರಗಳಿಂದ ತಮ್ಮ ಪ್ರಾತಿನಿಧ್ಯತೆ ವಹಿಸಿಕೊಂಡು, ದಶಕದ ಹಿಂದೆ ಗಲ್ಫ್ ಕನ್ನಡ ಮೂವೀಸ್ ಸಂಸ್ಥೆಯ ಹುಟ್ಟಿಗೆ ಹಾಗೂ ಕಾರ್ಯಾಚರಣೆಗೆ ಕಾರಣೀಭೂತರಾದರು. ದುಬೈನಿಂದ ದೀಪಕ್ ಸೋಮಶೇಖರ್, ಸದನ್ ದಾಸ್, ಬೆಂಗಳೂರಿನಿಂದ ಸಹೋದರ ದರ್ಶನ್ ಸೋಮಶೇಖರ್, ರಾಜಾಕುಳ್ಳ ಖ್ಯಾತಿಯ ಕನ್ನಡ ನಟ ದ್ವಾರಕೀಶ್ ಅವರ ಪುತ್ರ ಸುಖೀಶ್ ದ್ವಾರಕೀಶ್ ಸಹಕಾರ ನೀಡಿದರೆ, ಸಂಸ್ಥೆಗಳ ಸಹವರ್ತಿಗಳಾಗಿ ಕುವೈತ್ ರಾಷ್ಟ್ರದ ಪ್ರತಿನಿಧಿಯಾಗಿ ಸುರೇಶ್ ರಾವ್ ನೇರಂಬಳ್ಳಿ ಹಾಗೂ ಖತಾರ್‌ನಲ್ಲಿ ಸುಬ್ರಹ್ಮಣ್ಯ ಹೆಬ್ಬಾಗಿಲು ಸಹಕಾರ ನೀಡುತ್ತ ಒಂದೇ ತಂಡವಾಗಿ ಕಾರ್ಯಾಚರಿಸುತ್ತಿದ್ದಾರೆ.

ಗಲ್ಫ್ ಕನ್ನಡ ಮೂವೀಸ್ ಸಂಸ್ಥೆ ಮೂಲಕ ಈವರೆಗೆ 48 ಚಲನಚಿತ್ರಗಳನ್ನು ಬಿಡುಗಡೆಗೊಳಿಸಿದ್ದರೆ ಕೊಲ್ಲಿ ರಾಷ್ಟ್ರಗಳಲ್ಲಿ ತಮ್ಮ ಭಾಷೆಯ ಚಲನಚಿತ್ರವನ್ನು ವೀಕ್ಷಿಸಬೇಕೆಂಬ ಆಶಯದಂತೆ ಕನ್ನಡಿಗರ ಕೋರಿಕೆಯ ಮೇರೆಗೆ ಪ್ರಪ್ರಥಮ ಬಾರಿಗೆ ಬೆಳ್ಳಿ ತೆರೆಯ ಇತಿಹಾಸದಲ್ಲಿ ಕನ್ನಡ ಚಲನಚಿತ್ರಗಳನ್ನು ಬಿಡುಗಡೆ ಮಾಡಿ, ಇತಿಹಾಸ ಸೃಷ್ಟಿಸಿದ್ದಾರೆ. ನಂತರದ ದಿನಗಳಲ್ಲಿ, ತುಳು ಭಾಷೆಯ ಚಲನಚಿತ್ರಗಳ ಬೇಡಿಕೆ ಕೂಡ ಬರುತ್ತಿದ್ದರಿಂದ, ತುಳು ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ಕೈಗೊಂಡಿದ್ದು, ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ತುಳು ಚಲನಚಿತ್ರ ಕೂಡ ಬೆಳ್ಳಿ ತೆರೆಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಬಿಡುಗಡೆಗೊಂಡು ಇತಿಹಾಸ ಸೃಷ್ಟಿಸಿದ್ದು, ನಮ್ಮ ಗಲ್ಫ್ ಕನ್ನಡ ಮೂವೀಸ್ ಸಂಸ್ಥೆಗೆ ಹಾಗೂ ಎಲ್ಲ ಗಲ್ಫ್ ರಾಷ್ಟ್ರಗಳ ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಮೊತ್ತಮೊದಲ ಬಾರಿಗೆ ಗಲ್ಫ್‌ನಲ್ಲಿ ಕನ್ನಡ ಚಲನಚಿತ್ರದ ಪ್ರೀಮಿಯರ್ ಶೋ (ಪ್ರಧಾನ ದೇಖಾವೆ)ಯನ್ನು ಡಾ.ಶಿವರಾಜ್ ಕುಮಾರ್ ಅವರು ಅಭಿನಯಿಸಿದ ಚಿತ್ರ ತಂಡದ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಹಾಗೆಯೇ ಗಲ್ಫ್‌ನಲ್ಲಿ ಮೊತ್ತಮೊದಲ ಬಾರಿಗೆ ತುಳು ಚಲನಚಿತ್ರದ ಪ್ರೀಮಿಯರ್ ಶೋ ಅನ್ನು ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ತಾರಾಗಣದೊಂದಿಗೆ ಪ್ರದರ್ಶಿಸಲಾಯಿತು. ಹಿಂದಿಯೂ ಸೇರಿ ಹಲವು ಬಹು ಭಾಷಾ ಚಲನಚಿತ್ರಗಳನ್ನು ಬಿಡುಗಡೆ, ವಿತರಣೆಗೊಳಿಸಿದ ಕೀರ್ತಿ ಸಂಸ್ಥೆಗಿದೆ.

ನೆಚ್ಚಿನ ಅಪ್ಪು (ಪುನೀತ್ ರಾಜ್ ಕುಮಾರ್) ಅಗಲಿದಾಗ ಅವರ ಸಮಾಜ ಸೇವೆಯ ನೆನಪಿಗಾಗಿ, ಅವರ ಶೃದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ, ಸಂಸ್ಥೆಯ ಪರವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಕೋವಿಡ್ ಸಮಯದಲ್ಲಿ ಎರಡು ವರ್ಷ ಗಲ್ಫ್ ರಾಷ್ಟ್ರಗಳಲ್ಲಿ ಅತಂತ್ರರಾದ ಕನ್ನಡಿಗರಲ್ಲಿ ಧೈರ್ಯ, ವಿಶ್ವಾಸ ತುಂಬಲು, ಮನೋಸ್ಥೈರ್ಯ ಹೆಚ್ಚಿಸಲು ಕನ್ನಡ ಚಲನಚಿತ್ರರಂಗದ ಮೇರು ನಟರಾದ ಡಾ.ಶಿವರಾಜ್ ಕುಮಾರ್, ದ್ವಾರಕೀಶ್, ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ ಮುಂತಾದವರ ಜತೆಗೆ ಜೂಮ್ ಸಂವಾದವನ್ನು ಏರ್ಪಡಿಸಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ | Avatar Re Release | ಬಾಕ್ಸ್​​ ಆಫೀಸ್​​ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ ‘ಅವತಾರ್​ -1’

Exit mobile version