Site icon Vistara News

ವೃದ್ಧನ ಕೈ ಕಟ್ಟಿ ಹತ್ಯೆ: ಎಂಟು ತಿಂಗಳಿಂದ ಜತೆಗಿದ್ದವನೇ ಮೂಟೆ ಮೂಟೆ ಹೊತ್ತೊಯ್ದ

ವೃದ್ಧನ ಕೈ ಹಿಂದಕ್ಕೆ ಕಟ್ಟಿ ಹತ್ಯೆ

ಚಾಮರಾಜಪೇಟೆ: ಚಾಮರಾಜಪೇಟೆಯ ನಾಲ್ಕನೇ ಕ್ರಾಸ್‌ನಲ್ಲಿರುವ ಕಿಂಗ್ಸ್ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ರಾತ್ರಿ ವೃದ್ಧನ ಕೈ ಕಟ್ಟಿ ಹತ್ಯೆ ಮಾಡಲಾಗಿರುವ ಪ್ರಕರಣ ವರದಿಯಾಗಿದೆ. ಜುಗುರಾಜ್ ಮೃತ ವ್ಯಕ್ತಿ. ಮಂಗಳವಾರ ರಾತ್ರಿ 10.30ರ ಸುಮಾರಿಗೆ ಘಟನೆ ಸಂಭವಿಸಿದೆ.

ಮೃತ ಜುಗುರಾಜ್ ಜತೆಗಿರುತ್ತಿದ್ದ ಬಿಜುರಾಮ್ ಎಂಬ ವ್ಯಕ್ತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಜುಗುರಾಜ್‌ ಇಬ್ಬರು ಮಕ್ಕಳನ್ನು ಹೊಂದಿದ್ದು, ಪ್ರಕಾಶ್ ಮತ್ತು ಆನಂದ್‌ ಬ್ಯುಸಿನೆಸ್ ಮಾಡುತ್ತಿದ್ದಾರೆ.

ಎರಡನೇ ಮಗ ಆನಂದ್, ಆತನ ಸೊಸೆ ಮತ್ತು ಜುಗುರಾಜ್ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಎಲ್ಲ ವ್ಯವಹಾರವನ್ನೂ ಜುಗುರಾಜ್ ನೋಡಿಕೊಳ್ಳುತ್ತಿದ್ದರು. ಅವರ ಬಳಿಯೇ ಲಾಕರ್ ಇದ್ದು, ಮಗ ಆನಂದ್ ಬ್ಯುಸಿನೆಸ್ ನಿಮಿತ್ತ ಗೋವಾಗೆ ಹೋಗಿದ್ದರು. ಆನಂದ್ ಪತ್ನಿ, ಶಿಕಾರಿಪುರದಲ್ಲಿರುವ ತವರು ಮನೆಗೆ ಹೋಗಿದ್ದರು.

ಇದನ್ನೂ ಓದಿ | ಅಕ್ರಮ ಗಣಿಗಾರಿಕೆ ಹಾಗೂ ಕೊಲೆ: ನರಗಲು ಗ್ರಾಮದಲ್ಲಿ ಪೊಲೀಸರ ವಿರುದ್ಧವೇ ಆಕ್ರೋಶ

ವೃದ್ದನನ್ನು ಪ್ರತಿ ದಿನ ಅಂಗಡಿಗೆ ಕರೆದುಕೊಂಡು ಹೋಗುವುದು, ಬರುವುದು ಮಾಡುತ್ತಿದ್ದ ಆರೋಪಿ ಬಿಜುರಾಮ್, ಬುಧವಾರ ರಾತ್ರಿ 8.30ರ ಸುಮಾರಿಗೆ ಅಂಗಡಿಯಿಂದ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಬಂದಿದ್ದಾನೆ. ನಂತರ ಕೃತ್ಯ ಎಸೆಗಿದ್ದಾನೆ. ವೃದ್ದನ ಕೈಗಳನ್ನು ಹಿಂದಕ್ಕೆ ಕಟ್ಟಿ, ಮುಖಕ್ಕೆ ಖಾರದ ಪುಡಿ ಹಾಕಿದ್ದಾನೆ. ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಆರೋಪಿ ಬಿಜುರಾಮ್‌

ವೃದ್ಧನ ಕೈ ಕಟ್ಟಿ ಹತ್ಯೆ ಮಾಡಿದ ನಂತರ ನಾಲ್ಕು ಬ್ಯಾಗ್‌ಗಳಲ್ಲಿ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾನೆ. ಅಷ್ಟೆ ಅಲ್ಲದೆ, ಹೊತ್ತುಕೊಂಡು ಹೋಗಲು ಸಾಧ್ಯವಾಗದೆ 25 ಕೆ.ಜಿ. ಬೆಳ್ಳಿ ವಸ್ತುಗಳನ್ನು ಅಪಾರ್ಟ್‌ಮೆಂಟ್‌ನಲ್ಲೇ ಬಿಟ್ಟು ಹೋಗಿದ್ದಾನೆ. ಬೆಳಗ್ಗೆ ಅಂಗಡಿ ಕೀ ಪಡೆದುಕೊಳ್ಳಲು ಜುಗರಾಂ ಮೊಮ್ಮಗ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್, ಬೆಳಗಿನ ಜಾವ ಘಟನೆ ಬೆಳಕಿಗೆ ಬಂದಿದೆ. ಬಿಜುರಾಮ್ ಎಂಬಾತನೇ ಕೊಲೆ ಮಾಡಿದ್ದಾನೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಎಂಟು ತಿಂಗಳಿನಿಂದ ಆತ ಇವರ ಬಳಿ ಕೆಲಸ ಮಾಡುತ್ತಿದ್ದ. ಕೊಲೆ ಮಾಡಿ‌ ನಗದು ನಾಣ್ಯ ಆಭರಣ ಕೊಂಡೊಯ್ದಿದ್ದಾನೆ. ಎರಡು ಮೂರು ತಂಡಗಳನ್ನು ಈಗಾಗಲೆ ರಚಿಸಲಾಗಿದೆ. ಈಗಾಗಲೆ ತನಿಖೆ ಆರಂಭವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಅಪರಿಚಿತ ಮಹಿಳೆಯ ಕತ್ತು ಹಿಸುಕಿ ಕೊಲೆ

Exit mobile version