Site icon Vistara News

Police Alert | ಅಂಡರ್‌ ಪಾಸ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ ಎಂಬ ಆದೇಶ ವಾಪಸ್‌ಗೆ ಒತ್ತಾಯ

Police Alert

ಬೆಂಗಳೂರು: ಮಳೆ ಬಂದಾಗ ನಗರದ ಕೆಳಸೇತುವೆ(ಅಂಡರ್‌ಪಾಸ್‌)ಗಳಲ್ಲಿ ವಾಹನ ನಿಲ್ಲಿಸಿದರೆ ವಾಹನ ಸವಾರರಿಗೆ ಇನ್ನು ಮುಂದೆ ದಂಡ ಬೀಳಲಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡ (Police Alert) ಹೇಳಿಕೆ ನೀಡಿದ್ದರು. ಈಗ ಇದೇ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಸೂಚನೆ ಹಿಂಪಡೆಯಬೇಕೆಂಬ ಕೂಗು ಕೇಳಿ ಬಂದಿದೆ.

ಕೆಳಸೇತುವೆಗಳಲ್ಲಿ ವಾಹನ ನಿಲ್ಲಿಸುವುರಿಂದ ಉಂಟಾಗುವ ಸಂಚಾರ ದಟ್ಟಣೆ ಹಾಗೂ ಅಪಘಾತಗಳನ್ನು ನಿಯಂತ್ರಿಸಲು ಬೆಂಗಳೂರು ಟ್ರಾಫಿಕ್‌ ಪೊಲೀಸ್ (Police Alert) ಕಠಿಣ ಕ್ರಮ ಕೈಗೊಂಡಿತ್ತು. ಅಂಡರ್‌ಪಾಸ್‌ಗಳಲ್ಲಿ ಅಪಘಾತಗಳಾಗುವುದನ್ನು ತಪ್ಪಿಸಲು ನಗರದ ವಿಂಡ್ಸನ್ ಮ್ಯಾನರ್ ಬ್ರಿಡ್ಜ್, ನಾಯಂಡಹಳ್ಳಿ ಬ್ರಿಡ್ಜ್ ಅಂಡರ್ ಪಾಸ್ ಸೇರಿ ನಗರದ ಕೆಳಸೇತುವೆಗಳಲ್ಲಿ ವಾಹನ ನಿಲ್ಲಿಸಿದರೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇಲಾಖೆಯ ಕ್ರಮಕ್ಕೆ ಕರ್ನಾಟಕ ವಾಹನಿಗರ ಸಂಘ ವಿರೋಧ ವ್ಯಕ್ತಪಡಿಸಿದ್ದು, ಸೂಚನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದೆ. ವಾಹನ ಸವಾರರ ಮೇಲೆ ಈ ರೀತಿಯ ಕ್ರಮ ಕೈಗೊಳ್ಳುವ ಮೊದಲು ಗುಂಡಿಭರಿತ ರಸ್ತೆಗಳನ್ನು ಸರಿಪಡಿಸಬೇಕು. ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಆಗ ಜನರೇ ಅಂಡರ್‌ಪಾಸ್‌ಗಳಲ್ಲಿ ವಾಹನ ನಿಲ್ಲಿಸದೇ ಜೀವಂತವಾಗಿ ಮನೆ ತಲಪಬಹುದು ಎಂದು ಕರ್ನಾಟಕ ಮೊಟರಿಸ್ಟ್ಸ್ಅಸೋಸಿಯೇಶನ್‌ನ ರಾಘವೇಂದ್ರ ತಿಳಿಸಿದ್ದಾರೆ.

ನಗರದ ರಸ್ತೆಗಳಲ್ಲಿ ಡಾಂಬರ್‌ಗಿಂತ ಗುಂಡಿಗಳೇ ಹೆಚ್ಚಾಗಿದೆ. ಜತೆಗೆ ಮಳೆ ಬಂದಾಗ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ನೀರು ನಿಂತಾಗ ಗುಂಡಿಗಳು ಎಲ್ಲಿದೆ ಎಂಬುದೇ ಸವಾರರಿಗೆ ಕಾಣುವುದಿಲ್ಲ. ದ್ವಿಚಕ್ರ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಿಸಬೇಕು ಎಂದು ಕಿಡಿಕಾರಿದರು.

ಇದನ್ನೂ ಓದಿ | Police Alert | ಬೆಂಗಳೂರಿನ ಅಂಡರ್‌ಪಾಸ್‌ಗಳಲ್ಲಿ ವಾಹನ ನಿಲ್ಲಿಸಿದರೆ ಇನ್ನು ಬೀಳಲಿದೆ ಕೇಸ್!

Exit mobile version