Site icon Vistara News

ವಿಜ್ಞಾನಿಗಳು ಸಾಮಾಜಿಕ ಮಾರ್ಗವನ್ನು ಅನುಸರಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ

President draupadi murmu 1

ಬೆಂಗಳೂರು: ವಿಜ್ಞಾನಿಗಳು ತಮ್ಮ ಸಂಶೋಧನೆ ಹಾಗೂ ಪರಿಶ್ರಮಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರೆ ನೀಡಿದ್ದಾರೆ.

ಎಚ್‍ಎಎಲ್‍ನ ಏರೋಸ್ಪೇಸ್ ವಿಭಾಗದಲ್ಲಿ ಇಂಟಿಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ (ಐಎಮ್‍ಎಫ್) ಹಾಗೂ ಏರೋಸ್ಪೇಸ್ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಬ್ದುಲ್‌ ಕಲಾಂ ಅವರು ತಂತ್ರಜ್ಞಾನವನ್ನು ಸಾಮಾಜಿಕ ಒಳಗೊಳ್ಳುವಿಕೆಗೆ ಬಳಸಿದರು. ವಿಜ್ಞಾನವು ಅಭಿವೃದ್ಧಿಯಲ್ಲಿ ಬಹಳ ಬದಲಾವಣೆ ತರಬಲ್ಲದು. ದೇಶೀಯವಾಗಿ ಅಭಿವೃದ್ಧಿಪಡಿಸುವ ತಂತ್ರಜ್ಞಾನಕ್ಕೆ ನಮ್ಮ ವಿಜ್ಞಾನಿಗಳ, ತಂತ್ರಜ್ಞಾನಿಗಳ ಶ್ರಮದ ಅವಶ್ಯಕತೆಯಿದೆ. ನಮ್ಮ ದೇಶದ ವಿಜ್ಞಾನಿಗಳು ಸಾಮಾಜಿಕ ಮಾರ್ಗವನ್ನು ಅನುಸರಿಸಲು ಕರೆ ನೀಡುತ್ತೇನೆ ಎಂದರು.

ಕೊರೊನಾ ಸಮಯದಲ್ಲಿ ವೈದ್ಯರು ಹಾಗೂ ವಿಜ್ಞಾನಿಗಳ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಬೇಕಿದೆ ಎಂದ ರಾಷ್ಟ್ರಪತಿ, ಕೇವಲ ಸಾಂಪಸ್ರದಾಯಿಕ ಮಾತ್ರವಲ್ಲ, ಭವಿಷ್ಯದ ಸವಾಲುಗಳಿಗೂ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡುತ್ತಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಭಾರತಕ್ಕೆ ಬಾಹ್ಯಾಕಾಶವನ್ನು ಜಯಿಸಲು ವಿಪುಲ ಅವಕಾಶಗಳಿವೆ. ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸಲು ಅನುವಾಗುವಂತೆ ಸಂಶೋಧನೆಗಳಾಗಬೇಕು ಎಂದರು.

ರಾಜ್ಯದಲ್ಲಿ ಏರೋಸ್ಪೇಸ್ , ಆರ್.ಅಂಡ್ ಡಿ, ರಕ್ಷಣಾ ನೀತಿಗಳು ಜಾರಿಯಲ್ಲಿದ್ದು, ಸರ್ಕಾರದ ವತಿಯಿಂದ ಈ ಎಲ್ಲಾ ಸಂಶೋಧನೆ ಗಳಿಗೆ ಅಗತ್ಯ ಸಹಕಾರವನ್ನು ನೀಡಲಿದೆ.ಕರ್ನಾಟಕ ಹೊಸ ವಿಜ್ಞಾನ, ಆವಿಷ್ಕಾರ ಹಾಗೂ ಹೊಸ ಪಥದತ್ತ ನಡೆಯುತ್ತಿದೆ. ನಮ್ಮ ಸರ್ಕಾರದ ಘೋಷವಾಕ್ಯವೂ ‘ನವ ಭಾರತಕ್ಕಾಗಿ ನವ ಕರ್ನಾಟಕ’ ಎಂದಿದೆ ಎಂದರು.

ಬೆಂಗಳೂರು ಬಾಹ್ಯಾಕಾಶ ತಂತ್ರಜ್ಞಾನದ ಹಬ್ಪ
ನಾವು ಇಂದು ನೂರಾರು ಉಪಗ್ರಹಗಳನ್ನು ಬ್ಯಾಹ್ಯಾಕಾಶಕ್ಕೆ ಹಾರಿಸಿದ್ದೇವೆ. ಈಗ ನಾವು ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ಘಟ್ಟಕ್ಕೆ ಬಂದಿದ್ದೇವೆ. ಕಳೆದ 4-5 ದಶಕಗಳಿಂದ ಕ್ರಯೋಜೆನಿಕ್ ಇಂಜಿನ್ ಪ್ರಪಂಚದಲ್ಲಿ ಚರ್ಚೆಯಾಗುತ್ತಿರುವ ವಿಷಯ ಎಂದು ಬೊಮ್ಮಾಯಿ ಹೇಳಿದರು.

ಕೆಲವೇ ದೇಶಗಳಲ್ಲಿ ಇದರ ಅಭಿವೃದ್ದಿ ಸಾಧ್ಯವಾಗಿದೆ. ಬಾಹ್ಯಾಕಾಶ ತಂತ್ರಜ್ಞಾನ ಕೆಲವೇ ದೇಶಗಳಲ್ಲಿದ್ದುದರಿಂದ ಅದರ ಅಭಿವೃದ್ಧಿಯೂ 4-5 ದೇಶಗಳಿಗೆ ಸೀಮಿತವಾಗಿಯೇ ಇತ್ತು. ಕ್ರಯೋಜೆನಿಮ್ ಇಂಜಿನ್‌ಗೆ ಬಳಸುವ ಸಾಮಾಗ್ರಿಗಳ ಬಗ್ಗೆ ಮುಖ್ಯವಾಗಿ ಚರ್ಚೆಯಾಗುತ್ತಿತ್ತು. ಅದರ ಸಂಶೋಧನೆಯೇ ಒಂದು ಸಾಧನೆ. ನಂತರದಲ್ಲಿ ಇಂಧನವನ್ನು ಹಾಕುವ ಸಾಧನವನ್ನು ಕಂಡುಹಿಡಿಯಲಾಗಿದೆ. ಇಂಧನದ ಸ್ಥಿರತೆಯನ್ನು ನಿರ್ವಹಿಸಬೇಕು ಎಂದರು.

ಇಸ್ರೋ ಮತ್ತು ಹೆಚ್.ಎ.ಎಲ್ ಎರಡರ ಸಂಯೋಜನೆಯಿಂದಾಗಿ ದೇಶದ ಬಾಹ್ಯಾಕಾಶದ ನಗರವೆಂದು ಬೆಂಗಳೂರನ್ನು ಪರಿಗಣಿಸಲಾಗಿದೆ. ಶೇ.65 ರಷ್ಟು ಏರೋಸ್ಪೇಸ್ ಭಾಗಳನ್ನು ಬೆಂಗಳೂರಿನಿಂದ ರಪ್ತು ಮಾಡಲಾಗುತ್ತಿದೆ. ಶೇ 60 ರಷ್ಟು ರಕ್ಷಣಾ ಸಾಮಾಗ್ರಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಶೇ 25 ರಷ್ಟಿ ಏರೋಸ್ಪೇಸ್ ಭಾಗಗಳು ಬೆಂಗಳೂರಿನಲ್ಲಿ ಉತ್ಪಾದನೆ ಯಾಗುತ್ತಿದೆ. ಆದ್ದರಿಂದ ಬೆಂಗಳೂರು ಬಾಹ್ಯಾಕಾಶ ತಂತ್ರಜ್ಞಾನದ ತಾಯಿ ಹಾಗೂ ಹಬ್ ಎಂದು ಖ್ಯಾತಿ ಪಡೆದಿದೆ ಎಂದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್, ಹೆಚ್.ಎ. ಎಲ್ ಅಧ್ಯಕ್ಷ ಅನಂತಕೃಷ್ಣ, ಇಸ್ರೋ ಅಧ್ಯಕ್ಷ ಸೋಮನಾಥ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | ಯುವಜನತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳೆಯಬೇಕು: IIIT ಕ್ಯಾಂಪಸ್‌ ಉದ್ಘಾಟಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು

Exit mobile version