Site icon Vistara News

Road Accident: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್ ಸಾವು; ಬೈಕ್‌ ಅಪಘಾತದಲ್ಲಿ ಸವಾರರಿಬ್ಬರು ಮೃತ್ಯು

Road Accident

ಬೆಂಗಳೂರು/ಕೊಡಗು: ಬೆಂಗಳೂರಿನ ಚಿಕ್ಕಬಾಣವಾರ ಸಮೀಪದ ಬ್ಯಾಲಕೆರೆ ರಸ್ತೆಯಲ್ಲಿ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಕ್ಲೀನರ್‌ರೊಬ್ಬರು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಲಾರಿ ಕ್ಲೀನರ್‌ ರಾಮನಂದ್ ಸಿಂಗ್ (42) ಮೃತ ದುರ್ದೈವಿ.

ಲಾರಿ ರಿವರ್ಸ್ ತೆಗೆಯಬೇಕಾದರೆ ಈ ದುರ್ಘಟನೆ ನಡೆದಿದೆ. ಸದ್ಯ ಲಾರಿ ಹಾಗೂ ಚಾಲಕನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident : ಬಲ ತಿರುವು ಪಡೆಯುವಾಗ ಬೈಕ್‌ ಸವಾರನ ಮೇಲೆ ಹರಿದ ಕೆಎಸ್‌ಆರ್‌ಟಿಸಿ ಬಸ್‌; ಸಿಸಿ ಕ್ಯಾಮೆರಾದಲ್ಲಿ ಅಪಘಾತ ಸೆರೆ

ಧರ್ಮಸ್ಥಳಕ್ಕೆ ಹೊರಟಿದ್ದ ಯುವಕರು ಬೈಕ್‌ ಅಪಘಾತದಲ್ಲಿ ಸಾವು

ಕೊಡಗು: ಕೊಡಗಿನ ಮಡಿಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 275ರ ಕೊಯನಾಡು ಬಳಿ ಬೈಕ್ ಅಪಘಾತ ಸಂಭವಿಸಿದೆ. ಮೈಸೂರು ಮೂಲದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ವೇಗವಾಗಿ ಬಂದ ಸವಾರರು ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ್ದಾರೆ.

ಗುದ್ದಿದ ರಭಸಕ್ಕೆ ಬೈಕ್‌ನಿಂದ ಹಾರಿ ಬಿದ್ದಿದ್ದಾರೆ. ಗಂಭೀರ ಗಾಯಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಸ್ಥಳೀಯರು ನೋಡಿದಾಗ ಅಪಘಾತ ಪ್ರಕರಣ ಬೆಳಕಿಗೆ ಬಂದಿದೆ. ಮೋರಿ ಬಳಿ ಬೈಕ್ ಮತ್ತು ಎರಡು ಮೃತದೇಹಗಳು ಪತ್ತೆಯಾಗಿವೆ.

ಮೈಸೂರಿನ ಪವನ್ ಮತ್ತು ಮನೋಜ್ ಮೃತ ದುರ್ದೈವಿಗಳು. ಬೈಕ್‌ ಮೂಲಕ ಮೈಸೂರಿನಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದರು. ಆದರೆ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version