Site icon Vistara News

Road Accident: ಬೈಕಿಗೆ ಟಾಟಾ ಏಸ್‌ ಡಿಕ್ಕಿ; ರಾಜಕಾಲುವೆಗೆ ಬಿದ್ದ ಬೈಕ್:‌ 2 ಅಪಘಾತಗಳಲ್ಲಿ ಮೂವರು ಸಾವು

Road Accident

ಬೆಂಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ (Road Accident) ಮೂವರು ಸಾವಿಗೀಡಾಗಿ, ಇನ್ನೊಬ್ಬ ಬೈಕ್‌ ಸವಾರ (bike rider) ತೀವ್ರವಾಗಿ (injured) ಗಾಯಗೊಂಡಿದ್ದಾರೆ. ಒಂದು ಅಪಘಾತ ಬೆಂಗಳೂರಿನಲ್ಲಿ (Bangalore news) ಹಾಗೂ ಇನ್ನೊಂದು ಶಿರಸಿಯಲ್ಲಿ (Sirsi news) ಘಟಿಸಿವೆ.

ಬೆಂಗಳೂರಿನ ರಾಜಗೋಪಾಲನಗರ ಬಳಿಯ ಹೆಗ್ಗನಹಳ್ಳಿ ಬಳಿ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಟಾಟಾ ಏಸ್‌ ಡಿಕ್ಕಿಯಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಫಾರೂಕ್‌ ಮತ್ತು ಅಬ್ರಹಾಂ ಎಂದು ಗುರುತಿಸಲಾಗಿದೆ. ಇಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ.

ಟಾಟಾ ಏಸ್‌ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಈ ದುರ್ಘಟನೆಗೆ ಕಾರಣವಾಗಿದೆ. ನಿನ್ನೆ ರಾತ್ರಿ 11 ಘಂಟೆಯ ಸುಮಾರಿಗೆ ಅಪಘಾತ ನಡೆದಿದ್ದು, ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕಾಲುವೆಗೆ ಬಿದ್ದ ಬೈಕ್‌

ಕಾರವಾರ: ನಿಯಂತ್ರಣ ತಪ್ಪಿ ರಾಜಕಾಲುವೆಗೆ (Rajakaluve) ಬೈಕ್ ಬಿದ್ದ ಪರಿಣಾಮ ಒಬ್ಬ ಸ್ಥಳದಲ್ಲೇ ಸತ್ತಿದ್ದು, ಇನ್ನೋರ್ವ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಯಲ್ಲಾಪುರ ರಸ್ತೆಯ ಪಂಚವಟಿ ಕ್ರಾಸ್‌ ಬಳಿ ಘಟನೆ ನಡೆದಿದೆ.

ಸಂದೀಪ ಛಲವಾದಿ (24) ಮೃತ ಬೈಕ್ ಸವಾರ. ಸುಭಾಷ್ ದೇವಾಡಿಗ (26) ಗಂಭೀರ ಗಾಯಗೊಂಡವನು. ಯಲ್ಲಾಪುರದ ಭರತ್ನಳ್ಳಿ ಗ್ರಾಮದ ಈ ಯುವಕರು ಸ್ನೇಹಿತನನ್ನು ಶಿರಸಿ ಬಸ್‌ ನಿಲ್ದಾಣಕ್ಕೆ ಬಿಟ್ಟು ವಾಪಸ್ಸಾಗುವಾಗ ಅಪಘಾತ ನಡೆದಿದೆ. ಇಳಿಜಾರಿನ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸುಮಾರು 20 ಅಡಿ ಆಳದ ರಾಜಕಾಲುವೆಗೆ ಬಿದ್ದಿದೆ.

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಯಿಂದ ಕಾಲುವೆಗೆ ಬಿದ್ದವರ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯಿತು. ಗಂಭೀರ ಗಾಯಗೊಂಡಿದ್ದ ಸವಾರನನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪರಂಗಿ ತೋಟಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು

ದೊಡ್ಡಬಳ್ಳಾಪುರ: ದುಷ್ಕರ್ಮಿಗಳು ಪರಂಗಿ ತೋಟಕ್ಕೆ ಬೆಂಕಿ ಇಟ್ಟು ಪರಾರಿಯಾದ ಪರಿಣಾಮ ಎರಡು ಸಾವಿರ ಪರಂಗಿ ಗಿಡಗಳು ಬೆಂಕಿಯಿಂದ ಸುಟ್ಟು ಭಸ್ಮ.ವಾಗಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಮುಕ್ಕಡಿಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ.

ಮುಕ್ಕಡಿಘಟ್ಟ ಗ್ರಾಮದ ರೈತ ನಾಗರಾಜ್ ಗೆ ಸೇರಿದ ತೋಟದಲ್ಲಿ ಹೀಗಾಗಿದ್ದು, ಪರಂಗಿ ಗಿಡದ ಜೊತೆ ಡ್ರಿಪ್ ಪೈಪ್ ಕೂಡ ಬೆಂಕಿಗಾಹುತಿಯಾಗಿದೆ. ಮಾಲಿಕರು ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದಾಗ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.

ಎರಡು ವರ್ಷಗಳಿಂದ ನಾಗರಾಜ್ ಪರಂಗಿ ತೋಟದಿಂದ ಆದಾಯ ಪಡೆಯುತ್ತಿದ್ದರು. ಪರಂಗಿ ತೋಟ ನಾಶದಿಂದ ರೈತನಿಗೆ ಸುಮಾರು 3 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ. ನಷ್ಟ ಭರಿಸುವಂತೆ ರೈತ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೋರೆ ಹೋಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bus Accident: ಬಸ್‌ ಕಂದಕಕ್ಕೆ ಉರುಳಿ 12 ಕಾರ್ಮಿಕರ ಸಾವು; ಪ್ರಧಾನಿ ಮೋದಿ ಸಂತಾಪ

Exit mobile version