Site icon Vistara News

ಕಟ್ಟಕಡೆಯ ವ್ಯಕ್ತಿಗಾಗಿ ಮಿಡಿಯುವ ಹೃದಯ ಶ್ರೀಮಂತಿಕೆ ಮೋದಿಯವರದ್ದು: CM ಬೊಮ್ಮಾಯಿ

ಬೆಂಗಳೂರು: ಸಮಾಜದ ಕಟ್ಟಕಡೆಯ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಎಂಟು ವರ್ಷಗಳಲ್ಲಿ ಮಾಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಮಿಡಿಯುವ ಹೃದಯ ಶ್ರೀಮಂತಿಕೆ ಮೋದಿಯವರದ್ದು. ಹಿಂದೆಂದೂ ಈ ಪ್ರಮಾಣದಲ್ಲಿ ಇಂತಹ ಕೆಲಸ ಆಗಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು, ವಿವಿಧ ಕೈಗಾರಿಕೆ, ನಿರ್ಮಾಣ ಕಾರ್ಮಿಕರು, ದುಡಿಯುವ ಮಹಿಳೆಯರು ದೇಶ ನಿರ್ಮಾಣದ ಕಾಯಕದಲ್ಲಿ ತೊಡಗಿದ್ದಾರೆ. ಈ ಸಮಾಜದ ಕಟ್ಟ ಕಡೆಯ ಜನರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ, ಅವರು ಸ್ವಾವಲಂಬಿ, ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಅನೇಕ ಯೋಜನೆಯನ್ನು ಪ್ರಧಾನಿ ಮೋದಿಯವರು ಜಾರಿಗೆ ತಂದಿದ್ದಾರೆ. ಜನಧನ, ಸ್ವಚ್ಛ ಭಾರತ್, ಪಿಎಂ ಸ್ವನಿಧಿ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ್ ಮುಂತಾದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಶೀಘ್ರ ತೀರ್ಮಾನ : CM ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿಯವರ ವಿವಿಧ ಯೋಜನೆ:

ಸರಿಯಾದ ವ್ಯಕ್ತಿಗೆ ಜನಸೇವೆಯ ಅವಕಾಶ ಕೊಟ್ಟರೆ ಏನನ್ನೂ ಸಾಧಿಸಬಹುದು ಎಂದು ನರೇಂದ್ರ ಮೋದಿಯವರು ತೋರಿಸಿದ್ದಾರೆ. ಒಬ್ಬ ದಕ್ಷ ಆಡಳಿತಗಾರನಾಗಿ ಜನರಿಗೆ ನ್ಯಾಯಸಮ್ಮತ ಹಕ್ಕುಗಳನ್ನು ಒದಗಿಸಿದ್ದಾರೆ. ಒಬ್ಬ ದಿಟ್ಟನಾಯಕನಾಗಿ ದೇಶದ ಗಡಿ ರಕ್ಷಣೆ ಮಾಡಿದ್ದಾರೆ. ದೂರ ದೃಷ್ಟಿಯ ನಾಯಕನಾಗಿ ಇತರ ರಾಷ್ಟ್ರಗಳು ಭಾರತವನ್ನು ಗೌರವದಿಂದ ಕಾಣುವಂತೆ ಮಾಡಿದ್ದಾರೆ. ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಸುಶಾಸನವನ್ನು ಸಾಧ್ಯವಾಗಿಸಿದ್ದಾರೆ. ಜನಸಂಖ್ಯೆ ದೇಶಕ್ಕೆ ಮಾರಕ ಎಂಬ ಅಭಿಪ್ರಾಯವನ್ನು ಬದಲಿಸಿ, ಮಾನವ ಸಂಪನ್ಮೂಲ ದೇಶದ ಶಕ್ತಿ ಎಂದು ತೋರಿಸಿದ್ದಾರೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ನಡೆಸುತ್ತಿರುವ ಜನಪರ ಆಡಳಿತಕ್ಕೆ ಎಂಟು ವರ್ಷಗಳು ತುಂಬಿದೆ. ಹಾಗೂ ನಾವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದ್ದೇವೆ. ಆತ್ಮಾವಲೋಕನ ಹಾಗೂ ಸಿಂಹಾವಲೋಕನ ಮಾಡಲು ಇದೊಂದು ಸುಸಂದರ್ಭ. ಕಳೆದ 75 ವರ್ಷಗಳಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿರುವುದೇ ನಮ್ಮ ದೇಶದ ದೊಡ್ಡ ಸಾಧನೆ. ಆದರೆ ತುರ್ತು ಪರಿಸ್ಥಿತಿ ಘೋಷಣೆ ನಮ್ಮ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿದಿದೆ. ತುರ್ತುಪರಿಸ್ಥಿತಿಯ ವಿರುದ್ಧ ಜನಾಂದೋಲನ ನಡೆಸಿ, ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡಿರುವುದು, ನಮ್ಮ ಪ್ರಜಾಪ್ರಭುತ್ವದ ಅಂತಃಶಕ್ತಿಗೆ ಸಾಕ್ಷಿ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಬೊಮ್ಮಾಯಿ ಸಂವಾದ ನಡೆಸಿದರು. ಸಚಿವರಾದ ಗೋವಿಂದ ಎಂ. ಕಾರಜೋಳ, ಎಸ್.ಟಿ. ಸೋಮಶೇಖರ್, ಆರಗ ಜ್ಞಾನೇಂದ್ರ, ಶಶಿಕಲಾ ಜೊಲ್ಲೆ, ವಿ. ಸೋಮಣ್ಣ, ಬಿ.ಸಿ.ನಾಗೇಶ್, ಸಂಸದ ಪಿ.ಸಿ. ಮೋಹನ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: ಸರ್ಕಾರಿ ನೌಕರರ ಆರೋಗ್ಯ ಸಂಜೀವಿನಿ ಶೀಘ್ರ ಚಾಲನೆ: CM ಬೊಮ್ಮಾಯಿ ಭರವಸೆ

Exit mobile version