Site icon Vistara News

Bike Accident | ಪ್ರತ್ಯೇಕ ಕಡೆಗಳಲ್ಲಿ ಬೈಕ್‌ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು/ಚಿಕ್ಕೋಡಿ: ಇಲ್ಲಿನ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ಬೈಕ್‌ಗೆ ಬಿಎಂಟಿಸಿ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ (Bike Accident) ಮೃತಪಟ್ಟಿದ್ದಾರೆ. ಹಂದೇನಹಳ್ಳಿಯ ನಾಗರಾಜ್ ಮೃತ ದುರ್ದೈವಿ.

ಎಚ್‌ಎಸ್ಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್‌ ಗುರುವಾರ ಬೆಳಗ್ಗೆ ಎಂದಿನಂತೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುವಾಗ ಅಪಘಾತ ಸಂಭವಿಸಿದೆ. ಯಮರೆ ಬಳಿ ಅತಿವೇಗವಾಗಿ ಬಂದ ಬಿಎಂಟಿಸಿ ಬಸ್, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ನಾಗರಾಜ್‌ ತಲೆಯ ಮೇಲೆ ಬಸ್ ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ನಾಗರಾಜ್ ಮೃತಪಟ್ಟಿದ್ದಾರೆ. ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂಬದಿ ಸವಾರರು ಸ್ಥಳದಲ್ಲಿಯೇ ಸಾವು

ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಬಳಿ ಅತಿ ವೇಗದ ಚಾಲನೆಯಿಂದ ಬೈಕ್‌ ಸ್ಕಿಡ್‌ ಆಗಿ ಹಿಂಬದಿ ಸವಾರರೊಬ್ಬರು ಮೃತಪಟ್ಟಿದ್ದಾರೆ. ಬೈಕ್‌ನಿಂದ ಬಿದ್ದ ರಭಸಕ್ಕೆ ರಕ್ತಸ್ರಾವವಾಗಿ ಸಂಗೀತಾ ಶಿಂಧೆ (೪೦) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Viral Video | ಅಪಘಾತದಿಂದ ಗಾಯಗೊಂಡು ನರಳುತ್ತಿದ್ದ ವ್ಯಕ್ತಿ; ಆ್ಯಂಬುಲೆನ್ಸ್​ ಕೆಲಸ ಮಾಡಿದ ಬುಲ್ಡೋಜರ್​ !

Exit mobile version