Site icon Vistara News

BJP Janasankalpa yatre | ಕೇಂದ್ರದ ಅಕ್ಕಿ ಚೀಲಕ್ಕೆ ಸಿದ್ದು ಫೋಟೊ, ಮಣ್ಣಿನಲ್ಲೂ ಕಾಂಗ್ರೆಸ್‌ ಲೂಟಿ ಎಂದ ಬೊಮ್ಮಾಯಿ

bommai

ಬೆಳಗಾವಿ(ರಾಯಬಾಗ): ಕೇಂದ್ರ ಸರ್ಕಾರದ ಅಕ್ಕಿ ಚೀಲದ ಮೇಲೆ ಸಿದ್ದರಾಮಯ್ಯ ತಮ್ಮ ಫೋಟೊ ಹಾಕಿಸಿಕೊಂಡರು. ಅನ್ನದಲ್ಲಿ ಕನ್ನ ಹಾಕುವ ಮೂಲಕ ಅದರಲ್ಲೂ ಲೂಟಿ ಮಾಡಿದರು. ಸಣ್ಣ ನೀರಾವರಿ ಯೋಜನೆಯಲ್ಲಿ ಕಾಮಗಾರಿ ಮಾಡದೇ ಬಿಲ್ ತೆಗೆದರು. ಬೆಂಗಳೂರು, ಮಂಗಳೂರು, ಬಳ್ಳಾರಿಯಲ್ಲಿ ಮಣ್ಣಿನಲ್ಲೂ ತಿಂದರು. ಅವರ ಆಡಳಿತಾವಧಿಯಲ್ಲಿ ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂದು ಹೋದರು: ಹೀಗೆಂದು ನೇರಾನೇರ ಆರೋಪ ಮಾಡಿದರು ಸಿಎಂ ಬಸವರಾಜ ಬೊಮ್ಮಾಯಿ.

ಅವರು ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಬುಧವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಯಬಾಗದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ನಾಯಕರು

60 ವರ್ಷ ಕಾಂಗ್ರೆಸ್ ನವರ ಆಡಳಿತವನ್ನು ಜನ ನೋಡಿದ್ದಾರೆ. ಯಾವ ಭಾಗ್ಯವೂ ಜನರನ್ನು ಮುಟ್ಟಲಿಲ್ಲ. ಕಾಂಗ್ರೆಸ್ ನ ದುರಾಡಳಿತ ಮತ್ತು ಅವರ ದೌರ್ಭಾಗ್ಯ ಜನರಿಗೆ ಬೇಡವಾಗಿದೆ‌. ಕಾಂಗ್ರೆಸ್ ನವರು ಅಧಿಕಾರದಲ್ಲಿ ‌ಇದ್ದಾಗ ಸ್ವಂತ ಲಾಭಕ್ಕಾಗಿ ಹಾಗೂ ಸ್ವಾರ್ಥಕ್ಕಾಗಿ ಮಾಡಿಕೊಳ್ಳುತ್ತಾರೆ.‌ ಹೀಗಾಗಿ ಜನರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದು ಸಿಎಂ ಹೇಳಿದರು.

ಹಿಂದೂ ಧರ್ಮದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ ಸತೀಶ್‌
ʻʻಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ನಡುವಿನ ಜಗಳವೇ ಇನ್ನೂ ಮುಗಿದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿಯ ಮುಳುಗುವ ದೋಣಿಯ ಅಧ್ಯಕ್ಷರಾದ ತಕ್ಷಣ, ಬೆಳಗಾವಿ ಶಾಸಕರಾದ ಸತೀಶ್ ಜಾರಕಿಹೊಳಿ ಹಿಂದೂ ಅಂದರೆ ಹೊಲಸು ಅಂತ ಹೇಳ್ತಾರೆ. ಅವರಿಗೆ ಈ ರೀತಿಯ ಮಾತನಾಡಲು ಮನಸ್ಸು ಹೇಗೆ ಬಂತೋ ತಿಳಿಯುತ್ತಿಲ್ಲ. ನಮ್ಮ ಸನಾತನ ಧರ್ಮ ಯಾವುದೇ ಜಗತ್ತಿನಲ್ಲಿ ಯಾವುದೇ ಧರ್ಮ ಹುಟ್ಟಿರಲಿಲ್ಲ. ಆಗಲೇ ಸಿಂಧೂ ಸಂಸ್ಕೃತಿ ಹಿಂದು ಧರ್ಮವಾಗಿ ಬೆಳೆದಿದೆ. ಇಡೀ ಮನುಕುಲವೊಂದೇ ಎಂದು ಸಾರುವ ಹಿಂದೂ ಧರ್ಮದ ಬಗ್ಗೆ ಕ್ಲುಲ್ಲಕವಾಗಿ ಮಾತನಾಡಿದ್ದಾರೆʼʼ ಎಂದು ಹೇಳಿದರು ಬೊಮ್ಮಾಯಿ.

ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಗದೆಯನ್ನು ನೀಡಿ ಗೌರವಿಸಲಾಯಿತು.

ಕಾಂಗ್ರೆಸ್‌ಗೆ ಕೆಟ್ಟ ಕಾಲ ಬಂದಿದೆ
ʻʻರಾಹುಲ್ ಗಾಂಧಿ ಚುನಾವಣೆ ಬಂದಾಗ ದೇವಸ್ಥಾನಕ್ಕೆ ಹೋಗುತ್ತಾರೆ.‌ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತಾರೆ. ನಮ್ಮದು ಸಮಾಜವನ್ನು ಜೋಡಿಸುವ ಕೆಲಸವಾದರೆ, ಕಾಂಗ್ರೆಸ್ ಅವರದು ಅಧಿಕಾರಕ್ಕಾಗಿ ದೇಶ ಒಡೆಯುವ ಕೆಲಸ, ಕರ್ನಾಟಕದ ಅಧಿಕಾರಕ್ಕಾಗಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ ಜೋಡೊ ಯಾತ್ರೆ ಎನ್ನುತ್ತಾರೆ. ಆದರೆ ಭಾರತ ಈಗಾಗಲೇ ಒಂದಾಗಿದೆ. ನೀವು ಜೋಡೊ ಅಂತಿರಿ ಇಲ್ಲಿ ಸತೀಶ್ ಜಾರಕಿಹೊಳಿ ತೋಡೊ ಮಾಡಿದ್ದಾರೆ‌. ಹೀಗಾಗಿ ಕಾಂಗ್ರೆಸ್ ಗೆ ಕೆಟ್ಟ ಕಾಲ ಬಂದಿದೆʼʼ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ದುರ್ಯೋಧನ ಐಹೊಳೆ, ಪಿ. ರಾಜೀವ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ರವಿಕುಮಾರ್, ಮಾಜಿ ಸಂಸದರಾದ ರಮೇಶ್ ಕತ್ತಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ | BJP Janasankalpa Yatre | ರಾಜ್ಯಕ್ಕೆ ಬಂಡೆ ಬೇಕಾಗಿಲ್ಲ, ಬಾಹುಬಲಿ ಬೊಮ್ಮಾಯಿ ಬೇಕಿದೆ: ಶ್ರೀರಾಮುಲು

Exit mobile version