Site icon Vistara News

BJP Karnataka: ನೂರು ಶೆಟ್ಟರ್‌ಗಳನ್ನು ತಯಾರಿಸುವ ತಾಕತ್ತು ಬಿಜೆಪಿಗಿದೆ: ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್‌

bjp karnataka spokesperson MG Mahesh said party can produce hundred more jagadish shettar

#image_title

ಬೆಂಗಳೂರು: ಎಲ್ಲ ರೀತಿಯ ಸ್ಥಾನಗಳನ್ನೂ ನೀಡಿದ ನಂತರವೂ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿ ತೊರೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್‌, ಇಂತಹ ನೂರು ಶೆಟ್ಟರ್‌ಗಳನ್ನು ತಯಾರಿಸುವ ಶಕ್ತಿ ಪಕ್ಷಕ್ಕಿದೆ ಎಂದಿದ್ದಾರೆ.

ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್‌, ಯುವ ಜನತೆಗೆ, ಹೊಸ ಪೀಳಿಗೆಗೆ ಅವಕಾಶ ಮಾಡಿಕೊಡುವ ಪ್ರಯೋಗವನ್ನು ಬಿಜೆಪಿ ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಇದೇ ಜಗದೀಶ್ ಶೆಟ್ಟರ್ ಅವರು ಯುವ ಎಂಬ ಕಾರಣದಿಂದಲೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಅಲ್ಲದೆ, ಪಕ್ಷದ ಹಿರಿಯ ನಾಯಕ ಬಿ.ಬಿ.ಶಿವಪ್ಪ ಅವರಿಗೆ ವಿರೋಧ ಪಕ್ಷ ಸ್ಥಾನ ನೀಡದೆ ಶೆಟ್ಟರ್ ಅವರಿಗೆ ನೀಡಲಾಗಿತ್ತು.

ಈ ಪ್ರಯೋಗದ ಸಂಪೂರ್ಣ ಲಾಭ ಪಡೆದ ಶೆಟ್ಟರ್ ಅವರು ಇದೀಗ ಅದರ ವಿರುದ್ಧವಾಗಿದ್ದಾರೆ. ಹೊಸ ಪೀಳಿಗೆಯನ್ನು ಎಲ್ಲೆಲ್ಲಿ ಮುಂದೆ ತರಲು ಸಾಧ್ಯವಿದೆಯೋ ಅಂತಹ ಕಡೆ ಯುವಕರಿಗೆ ಅವಕಾಶ ನೀಡಲಾಗಿದೆ. ಇಂತಹ ನೂರು ಶೆಟ್ಟರ್ ಗಳನ್ನು ತಯಾರು ಮಾಡುವ ಶಕ್ತಿ ಬಿಜೆಪಿಗೆ ಇದೆ ಎಂದು ಹೇಳಿದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಪಕ್ಷ ಉನ್ನತ ಸ್ಥಾನ ನೀಡಿರುವುದಕ್ಕೆ ಕೇಂದ್ರ ಸಚಿವ ಸ್ಥಾನದಲ್ಲಿರುವ ತಾವೇ ನಿದರ್ಶನ. ಶೆಟ್ಟರ್ ಅವರಿಗೆ ಕಳೆದ ನಾಲ್ಕು ದಶಕಗಳಿಂದ ಪಕ್ಷದ ಕಾರ್ಯಕರ್ತರು ಸರ್ಕಾರದಲ್ಲಿ ಉನ್ನತ ಸ್ಥಾನಗಳನ್ನು ನೀಡಿದ್ದರು. ಇದೀಗ ಪಕ್ಷಕ್ಕೆ ದ್ರೋಹ ಬಗೆದು ಕಾರ್ಯಕರ್ತರನ್ನು ದೂರ ಮಾಡಿ ಬೇರೆ ಪಕ್ಷ ಸೇರಲು ಹೊರಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಸ್ವಾರ್ಥ ರಾಜಕಾರಣಕ್ಕೆ ಶೆಟ್ಟರ್ ಉದಾಹರಣೆಯಾಗಿದ್ದಾರೆ. ಬಿಜೆಪಿ, ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಕೋಟಿಗಟ್ಟಲೆ ಕಾರ್ಯಕರ್ತರು ತಮ್ಮ ಜೀವನ, ಕುಟುಂಬಗಳನ್ನು ಮರೆತು ದೇಶ ಮೊದಲು, ನಂತರ ಪಕ್ಷ, ಕೊನೆಯದಾಗಿ ತಾನು ಎಂದು ಶ್ರಮಿಸಿ ಪಕ್ಷವನ್ನು ಬಲಿಷ್ಠವಾಗಿಸಿದ್ದಾರೆ. ಶೆಟ್ಟರ್ ಸಹ ದೇಶ ಮೊದಲು ಎಂದು ರಾಜಕೀಯದಲ್ಲಿದ್ದು ಅನೇಕ ಅವಕಾಶಗಳನ್ನೂ ಪಡೆದಿದ್ದಾರೆ. ಇದೀಗ, ಯುವಕರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕ್ಷೇತ್ರ ಬಿಟ್ಟುಕೊಡುವ ವಿಚಾರ ಬಂದಾಗ ದೇಶ ಮೊದಲು ಎಂಬುದನ್ನು ಮರೆತು ಸ್ವಾರ್ಥ ತೋರಿದ್ದಾರೆ ಎಂದು ಟೀಕಿಸಿದರು.

ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಲಿಂಗಾಯತ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿದೆ. ಪ್ರಬುದ್ಧತೆ ಹೊಂದಿರುವ ಲಿಂಗಾಯತ ಸಮಾಜ ಸೇರಿದಂತೆ ಎಲ್ಲ ವರ್ಗಗಳು ಬಿಜೆಪಿಯೊಂದಿಗೆ ಇವೆ. ನರೇಂದ್ರ ಮೋದಿ ಅವರ ನೇತೃತ್ವ ಮತ್ತು ಬಿಜೆಪಿ ತತ್ವ-ಸಿದ್ಧಾಂತಗಳ ಮೇಲೆ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲ ದೊರೆಯಲಿದ್ದು, ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭಗವಂತ ಖೂಬಾ ಹೇಳಿದರು.

ಇದನ್ನೂ ಓದಿ: Karnataka Election 2023: ಪಕ್ಷ ಸ್ಥಾನಮಾನ ಕೊಟ್ಟಿದ್ದರೂ ಯಡಿಯೂರಪ್ಪ ಏಕೆ ಕೆಜೆಪಿ ಕಟ್ಟಿದ್ದರು: ಬಿಎಸ್‌ವೈಗೆ ಶೆಟ್ಟರ್‌ ತಿರುಗೇಟು

Exit mobile version