Site icon Vistara News

Cauvery water dispute : ಕಾವೇರಿ ಪರ ಧ್ವನಿ ಎತ್ತಿದ ಸ್ಟಾರ್‌ ನಟರು; ದರ್ಶನ್‌, ಸುದೀಪ್‌ ಹೇಳಿದ್ದೇನು?

Darshan Thoogdeep and kichcha sudeep

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಜಲ ವಿವಾದ (Cauvery water dispute) ಭುಗಿಲೆದ್ದಿದೆ. ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ನೀರಿನ ಕೊರತೆ ಎದುರಾಗಿದೆ. ಇನ್ನು ತಮಿಳುನಾಡಿಗೆ ಹೇಗೆ ನೀರು ಬಿಡುವುದು ಎಂಬ ಚಿಂತೆಯ ಮಧ್ಯೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು (ಸಿಡಬ್ಲ್ಯೂಎಂಎ – Cauvery Water Management Authority – CWMA) 15 ದಿನಗಳವರೆಗೆ ಪ್ರತಿ ದಿನ 5 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸಲು ಸೂಚನೆ ನೀಡಿತ್ತು. ಇದಕ್ಕೆ ರಾಜ್ಯದಲ್ಲಿ ಅಪಸ್ವರಗಳು ಕೇಳಿ ಬಂದಿದ್ದಲ್ಲದೆ, ಪ್ರತಿಭಟನೆಗಳೂ ನಡೆಯುತ್ತಿವೆ. ಆದರೆ, ಈ ಬಗ್ಗೆ ಇನ್ನೂ ಸಹ ಸ್ಯಾಂಡಲ್‌ವುಡ್‌ (Sandalwood actors) ಯಾವೊಬ್ಬ ನಟರೂ ಧ್ವನಿ ಎತ್ತದೇ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಮುಂದೆ ಪ್ರತಿಭಟನೆ (Protest against Kannada Actors) ನಡೆಸಲಾಗಿತ್ತು. ಈಗ ಕಾವೇರಿ ವಿಚಾರವಾಗಿ ನಟರಾದ ದರ್ಶನ್‌ (Darshan Thoogudeep), ಕಿಚ್ಚ ಸುದೀಪ್‌ (Kichcha Sudeep‌), ರಾಘವೇಂದ್ರ ರಾಜಕುಮಾರ್‌ (Raghavendra Rajkumar) ಹಾಗೂ ಪ್ರಮೋದ್‌ ಶೆಟ್ಟಿ ಧ್ವನಿ ಎತ್ತಿದ್ದಾರೆ. ಆದಷ್ಟು ಬೇಗ ಕನ್ನಡಿಗರಿಗೆ ನ್ಯಾಯ ಸಿಗುವಂತಾಗಲಿ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಬುಧವಾರ (ಸೆಪ್ಟೆಂಬರ್‌ 20) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕನ್ನಡ ನಟರು ಒಬ್ಬೊಬ್ಬರಾಗಿ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ: ‌Cauvery water dispute : ಕಾವೇರಿ ಧ್ವನಿ ಎತ್ತದ ಕನ್ನಡ ನಟರ ವಿರುದ್ಧ ಬೆಂಗಳೂರಲ್ಲಿ ಪ್ರತಿಭಟನೆ

ಕನ್ನಡಪರ ಸಂಘಟನೆಗಳವರು ಕನ್ನಡ ನಟರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ನಟರಾದ ಶಿವರಾಜಕುಮಾರ್‌, ಯಶ್‌, ದರ್ಶನ್‌, ಸುದೀಪ್‌ ಅವರುಗಳ ಭಾವಚಿತ್ರವನ್ನು ಹಾಕಿ ಅವರ ಬಾಯಿಗೆ ಟೇಪ್‌ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಜತೆಗೆ “ಕಾವೇರಿಯ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ” ಎಂದು ಬರೆದುಕೊಂಡಿದ್ದರು.

ಈಗ ಈ ಎಲ್ಲ ಬೆಳವಣಿಗೆಗಳ ಬಳಿಕ ದರ್ಶನ್‌ ತೂಗುದೀಪ್‌ ಟ್ವೀಟ್‌ ಮಾಡಿ ಕಾವೇರಿ ನದಿ ವಿಚಾರವಾಗಿ ರಾಜ್ಯದ ಜನತೆ ಪರವಾಗಿ ನಿಂತಿದ್ದಾರೆ.

ದರ್ಶನ್‌ ಟ್ವೀಟ್‌ನಲ್ಲೇನಿದೆ?

“ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಕಾವೇರಿ ನೀರಿಗೆ ಕತ್ತರಿ ಹಾಕಿ ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ” ಎಂದು ಟ್ವೀಟ್‌ ಮೂಲಕ ಕನ್ನಡಿಗರ ಬೆಂಬಲಕ್ಕೆ ದರ್ಶನ್ ನಿಂತಿದ್ದಾರೆ.

ಕಿಚ್ಚ ಸುದೀಪ್‌ ಟ್ವೀಟ್‌

ನಟ ದರ್ಶನ್ ಟ್ವೀಟ್‌ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಸಹ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. “ನಮ್ಮ ಕಾವೇರಿ ನಮ್ಮ ಹಕ್ಕು” ಎಂದು ಅಭಿನಯ ಚಕ್ರವರ್ತಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Caste Census Report : ಜಾತಿ ಗಣತಿ ವರದಿ ಸ್ವೀಕಾರಕ್ಕೆ ಡಿಸಿಎಂ ಡಿಕೆಶಿ ವಿರೋಧ; ಸಿಎಂಗೆ ಪತ್ರ

“ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ. ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ. ನೆಲ-ಜಲ- ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ” ಎಂದು ಕಿಚ್ಚ ಸುದೀಪ್ ಟ್ವೀಟ್​ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಘವೇಂದ್ರ ರಾಜಕುಮಾರ್ ಬೆಂಬಲ

ಕಾವೇರಿ ವಿಚಾರವಾಗಿ ಸ್ಯಾಂಡಲ್‌ವುಡ್‌ ನಟರು ಒಬ್ಬೊಬ್ಬರಾಗಿ ಮೌನ ಮುರಿಯುತ್ತಿದ್ದಾರೆ. ಮೈಸೂರಿನಲ್ಲಿ ನಟ ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದು, ನೆಲ, ಜಲ, ಭಾಷೆ ವಿಚಾರಕ್ಕೆ ನಮ್ಮ ಪ್ರಾಣ ಕೊಡಲೂ ಸಿದ್ಧ ಎಂದು ನಮ್ಮ ತಂದೆ ಡಾ. ರಾಜಕುಮಾರ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ, ಸಿನಿಮಾ ಇಂಡಸ್ಟ್ರಿ ರೈತರ ಜತೆ ನಿಲ್ಲುತ್ತದೆ. ಇದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜನರು ಎಲ್ಲೆಲ್ಲಿ ಕರೆಯುತ್ತಾರೋ ಅಲ್ಲಿಗೆ ನಾವು ಹೋಗಾಬೇಕಾಗುತ್ತದೆ. ನಾವು ಬರಿ ಸಿನಿಮಾ ತೋರಿಸಲಿಕ್ಕೆ ಅಲ್ಲ.
ನೆಲ, ಜಲ, ಭಾಷೆಗೆ ಕಷ್ಟ ಬಂದಾಗ ನಾವು ಹೋಗಲೇಬೇಕು. ಫಿಲ್ಮ್ ಚೇಂಬರ್‌ನಿಂದ ಕರೆ ಬಂದಾಗ ನಾವು ಹೋರಾಟಕ್ಕೆ ದುಮುಕುತ್ತೇವೆ ಎಂದು ಹೇಳಿದ್ದಾರೆ.

ಫಿಲ್ಮ್‌ ಚೇಂಬರ್‌ನಿಂದ ಬರುವ ಕರೆಗೆ ನಾವು ಕಾಯುತ್ತಿದ್ದೇವೆ. ಅಲ್ಲಿ ಹೋರಾಟದ ರೂಪುರೇಷೆ ಸಿದ್ಧ ಪಡಿಸುತ್ತೇವೆ. ಆ ದಿನಕ್ಕೆ ಕಾಯುತ್ತಿದ್ದೇವೆ‌. ರೈತರು ಹೋರಾಟಕ್ಕೆ ಕರೆದರೆ ಹೋಗುವುದಲ್ಲ, ಹೋಗಲೇಬೇಕು. ಇದು ನಮ್ಮ ಧರ್ಮ. ಫಿಲ್ಮ್ ಅಸೋಸಿಯೇಷನ್‌ನಿಂದ ಇನ್ನೂ ಯಾವುದೇ ಕರೆ ಬಂದಿಲ್ಲ. ರೈತರು ಹೋರಾಟಕ್ಕೆ ನಮ್ಮನ್ನು ಕರೆದಿಲ್ಲ. ಕರೆದ ತಕ್ಷಣ ನಾವು ಬರುತ್ತೇವೆ. ನಿಯಮದ ಪ್ರಕಾರವೇ ನಾವು ಹೋರಾಟದಲ್ಲಿ ಭಾಗಿಯಾಗುತ್ತೇವೆ. ಒಬ್ಬೊಬ್ಬರೇ ಹೋರಾಟದಲ್ಲಿ ಭಾಗಿಯಾಗಬಾರದು ಎಂದು ರಾಘವೇಂದ್ರ ರಾಜಕುಮಾರ್ ಹೇಳಿದರು.

ಏಕಾಏಕಿ ನಾವು ಹೋರಾಟಕ್ಕೆ ಧುಮುಕಲು ಸಾಧ್ಯವಿಲ್ಲ: ನಟ ಪ್ರಮೋದ್ ಶೆಟ್ಟಿ

ಕಾವೇರಿ ಹೋರಾಟಕ್ಕೆ ನಾವು ಏಕಾಏಕಿ ಹೋರಾಟಕ್ಕೆ ಧುಮುಕಲು ಸಾಧ್ಯವಿಲ್ಲ. ಪ್ರಚಾರಕ್ಕೋಸ್ಕರ ಹೋರಾಟಕ್ಕೆ ಧುಮುಕಿದ್ದಾರೆ ಎನ್ನುತ್ತಾರೆ. ನಾವು ಚಿಕ್ಕವರು ಇತ್ತೀಚೆಗಷ್ಟೇ ಬಂದವರು. ನಾವು ಹೋರಾಟ ಮಾಡಿದರೆ ಯಾರೋ ಮೀನು ಹಿಡಿಯುತ್ತಿದ್ದವರು ಬಂದಿದ್ದಾರೆ ಅಂತಾರೆ. ಒಂದೆರಡು ಸಿನಿಮಾ ಹಿಟ್ ಆದ ತಕ್ಷಣ ಅಧಿಕ ಪ್ರಸಂಗ ಮಾಡುತ್ತಿದ್ದಾರೆ ಅಂತ ಹೇಳುತ್ತಾರೆ. ಹಾಗಾಗಿ ಚಿತ್ರರಂಗ ಕರೆ ನೀಡದೆ ಹೋರಾಟಕ್ಕೆ ಧುಮುಕಲು ಸಾಧ್ಯವಿಲ್ಲ. ಚಿತ್ರರಂಗ ಕರೆ ನೀಡಿದರೆ ಖಂಡಿತ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದು ನಟ ಪ್ರಮೋದ್ ಶೆಟ್ಟಿ ಹೇಳಿದರು.

ಇದನ್ನೂ ಓದಿ: Gift Politics : ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಗಿಫ್ಟ್‌ ಪಾಲಿಟಿಕ್ಸ್‌; ಯತೀಂದ್ರ ಹೇಳಿಕೆ ವಿರುದ್ಧ ಬಿಜೆಪಿ ದೂರಿಗೆ ಸಜ್ಜು

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ವಿಚಾರದಲ್ಲಿ ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರು ಶಾಶ್ವತ ಪರಿಹಾರ ಸಿಕ್ಕಿಲ್ಲ. ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರಲ್ಲೇ ಕಾಲ ವಿಳಂಬವಾಗುತ್ತದೆ. ಕಾವೇರಿ ವಿಚಾರ ನಮಗೆ ಕೋಪ ಬರಿಸುತ್ತದೆ. ಎಲ್ಲ ಪಕ್ಷಗಳು ತಮ್ಮ ಪಕ್ಷಗಳ ಸಿದ್ಧಾಂತವನ್ನ ಬದಿಗಿಟ್ಟು ಒಟ್ಟಾಗಿ ಹೋರಾಟ ಮಾಡಬೇಕಿದೆ. ಆಗ ಮಾತ್ರ ಶಾಶ್ವತ ಪರಿಹಾರ ಸಿಗುತ್ತದೆ ಎಂದು ನಟ ಪ್ರಮೋದ್ ಶೆಟ್ಟಿ ಮೈಸೂರಿನಲ್ಲಿ ಹೇಳಿದ್ದಾರೆ.

Exit mobile version