ಚಿಕ್ಕಮಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಎಲ್ಲೆಡೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನು ಹಲವು ಪಕ್ಷಗಳಲ್ಲಿ ಹಾಲಿ ಸಂಸದರಿಗೆ ಸ್ವಪಕ್ಷದಿಂದಲೇ ವಿರೋಧಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್ ಅಭಿಯಾನ ನಡೆಸಿದ್ದರು. ಇದಕ್ಕೆ ಶೋಭಾ ಸಹ ತಿರುಗೇಟು ನೀಡಿದ್ದರು. ಅಲ್ಲದೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ, “ಕೆಲವರು ಶೋಭಾ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದು, ಅವರಿಗೇ ಈ ಬಾರಿಯ ಟಿಕೆಟ್” ಎಂದು ಹೇಳಿದ್ದರು. ಅಷ್ಟಾದರೂ ಭಾನುವಾರ ಮತ್ತೆ ಗೋಬ್ಯಾಕ್ ಕೂಗು ಕೇಳಿಬಂದಿದೆ. ಇನ್ನು ಮಾಜಿ ಸಚಿವ ಸಿ.ಟಿ. ರವಿ ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅವರವರ ಕರ್ಮವನ್ನು ಅವರವರು ಅನುಭವಿಸಬೇಕು. ತಮ್ಮ ತಪ್ಪಿಂದಲೇ ಸೋತಿರುವುದಾಗಿ ಹೇಳಿಕೊಂಡಿದ್ದಾರೆ.
ಚಿಕ್ಕಮಗಳೂರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದು, ಅವರಿಗೆ ಬಿಟ್ಟು ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಮಾಜಿ ಸಚಿವ ಸಿ.ಟಿ. ರವಿ ಸೋಲಿಗೆ ಶೋಭಾ ಅವರೇ ಕಾರಣ ಎಂಬುದು ಕಾರ್ಯಕರ್ತರ ಆಕ್ರೋಶವಾಗಿದೆ. ಹೀಗಾಗಿ ಗೋಬ್ಯಾಕ್ ಅಭಿಯಾನ ಮಾಡುತ್ತಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, “ನನ್ನ ಗ್ರಹಚಾರ ಸರಿ ಇರಲಿಲ್ಲ. ನನ್ನ ಸೋಲಿನಲ್ಲಿ ನನ್ನದೇ ತಪ್ಪು ಇರಬಹುದು ಎಂದು ಹೇಳಿದ್ದೇನೆ. ನನ್ನ ಅತಿಯಾದ ವಿಶ್ವಾಸದಿಂದ ಸೋತಿದ್ದೇನೆ ಎಂದು ಈಗಾಗಲೇ ಹೇಳಿದ್ದೇನೆ. ಅತಿ ವಿಶ್ವಾಸವೂ ಕೆಲವೊಮ್ಮೆ ಸೋಲಿಗೆ ಕಾರಣವಾಗುತ್ತದೆ. ನಾನು ಮತ್ತೊಬ್ಬರ ಕಡೆ ಬೊಟ್ಟು ಮಾಡಲ್ಲ, ಅವರವರ ಕರ್ಮವನ್ನು ಅವರವರು ಅನುಭವಿಸಬೇಕು. ನನ್ನ ತಪ್ಪಿಂದಲೇ ಸೋತಿದ್ದೇನೆ ಎಂದು ಹೇಳಿಕೊಂಡಿದ್ದೇನೆ. ಯಾರಾದರೂ ಪಕ್ಷ ದ್ರೋಹ ಮಾಡಿದರೆ, ಕರ್ಮ ಅವರನ್ನು ಬೆಂಬಿಡದೆ ಕಾಡುತ್ತದೆ ಎಂದು ಹೇಳಿದರು.
ಮೆಡಿಕಲ್ ಕಾಲೇಜು, ರಾಷ್ಟ್ರೀಯ ಹೆದ್ದಾರಿ, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜನ ನನ್ನನ್ನು ಕೈ ಬಿಡಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಇತ್ತು. ಅದರಿಂದ ಸೋತಿದ್ದೇನೆ ಎಂದು ಸಿ.ಟಿ. ರವಿ ಅವರು ತಮ್ಮ ಸೋಲಿಗೆ ವ್ಯಾಖ್ಯಾನ ನೀಡಿದರು.
ರದ್ದಾಯಿತು ಸಿಇಸಿ ಸಭೆ
ಭಾನುವಾರ ಚಿಕ್ಕಮಗಳೂರಿನ ಪಾಂಚಜನ್ಯದಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ (ಸಿಇಸಿ) ಸಭೆಯನ್ನು ನಡೆಸಲಾಗಿತ್ತು. ಆದರೆ, ಬಿಜೆಪಿ ಕಾರ್ಯಕರ್ತರ “ಶೋಭಾ ಗೋಬ್ಯಾಕ್” ಆಕ್ರೋಶ ಭುಗಿಲೆದ್ದಿತ್ತು. ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದರಿಂದ ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ: Lok Sabha Election 2024: ಬಿಜೆಪಿ ಸಿಇಸಿ ಸಭೆ ಮುಂದೂಡಿಕೆ; ನಾಳೆ ಮೋದಿ ಭಾಗಿ? ವಿಜಯೇಂದ್ರ ಡೆಲ್ಲಿಯಲ್ಲೇ ಉಳಿದಿದ್ದು ಏಕೆ?
ಶೋಭಾ ವಿರುದ್ಧದ ಆಕ್ರೋಶವೇಕೆ?
ಬಿಜೆಪಿ ಕಚೇರಿಯ ಬಾಗಿಲಿನ ಮುಂದೆ ಭಾನುವಾರ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಬೇಕು, ಶೋಭಾ ಕರಂದ್ಲಾಜೆ ಬೇಡ” ಬೇಡ ಎಂದು ಘೋಷಣೆ ಕೂಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಎಂ.ಎಲ್.ಎ. ಸ್ಥಾನವನ್ನು ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡೆವು. ಉಡುಪಿ ಮೂಲದವರೇ ಸಂಸದರಾಗಿದ್ದಾರೆ. ಉಡುಪಿಯಲ್ಲಿ ಐವರು ಶಾಸಕರಿದ್ದಾರೆ, ಚಿಕ್ಕಮಗಳೂರಲ್ಲಿ ಯಾರೂ ಇಲ್ಲ. ಈ ಬಾರಿ ಚಿಕ್ಕಮಗಳೂರಿನವರಿಗೆ ಟಿಕೆಟ್ ಕೊಡಬೇಕು. ಯಾರಿಗಾದರೂ ಕೊಡಿ, ಚಿಕ್ಕಮಗಳೂರು ಜಿಲ್ಲೆಯವರಿಗೆ ಕೊಡಿ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.