Site icon Vistara News

ಸಿಎಂ ಇಬ್ರಾಹಿಂ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಆಗಸ್ಟ್​​ 11ಕ್ಕೆ ಚುನಾವಣೆ

Karnataka Election Results- 217 Crorepatis In 224 Member Karnataka Assembly

ಬೆಂಗಳೂರು: ಕಾಂಗ್ರೆಸ್​​​​ ಸದಸ್ಯರಾಗಿ ಆಯ್ಕೆಯಾಗಿದ್ದ ಸಿಎಂ ಇಬ್ರಾಹಿಂ ರಾಜಿನಾಮೆಯಿಂದ ತೆರವಾದ ವಿಧಾನ ಪರಿಷತ್​​​ ಸ್ಥಾನಕ್ಕೆ ಆಗಸ್ಟ್​​ 11ರಂದು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

ವಿಧಾನಪರಿಷತ್​​​ನಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆಯನ್ನು ಸಿಎಂ ಇಬ್ರಾಹಿಂ ಹೊಂದಿದ್ದರು. ಆದರೆ ಬಿ.ಕೆ. ಹರಿಪ್ರಸಾದ್​​ ಅವರನ್ನು ಪ್ರತಿಪಕ್ಷ ನಾಯಕರಾಗಿ ನೇಮಕ ಮಾಡಲಾಯಿತು. ಇದರಿಂದ ಬೇಸತ್ತು ಕಾಂಗ್ರೆಸ್​​​ ಪಕ್ಷಕ್ಕೆ ಹಾಗೂ ಪರಿಷತ್​​ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು.

ಇಬ್ರಾಹಿಂ ಅವರು ವಿಧಾನಸಭೆಯಿಂದ ಆಯ್ಕೆಯಾಗಿದ್ದವರು. 2024 ರ ಜೂನ್​ 17ರವರೆಗೆ ಈ ಸ್ಥಾನದ ಅವಧಿ ಇದೆ. ಅಂದರೆ ಇನ್ನೆರಡು ವರ್ಷ ಉಳಿದಿರುವ ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಿದೆ.

ಜುಲೈ 25ಕ್ಕೆ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಆಗಸ್ಟ್​ 1ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನಾಮಪತ್ರ ಹಿಂಪಡೆಯಲು ಆಗಸ್ಟ್​ 4 ಕೊನೆಯ ದಿನ. ಅಗತ್ಯಬಿದ್ದರೆ ಆಗಸ್ಟ್​​ 11ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ರಾಜ್ಯದ ಎಲ್ಲ ಶಾಸಕರೂ ಮತದಾನಕ್ಕೆ ಅರ್ಹರಾಗಿರುತ್ತಾರೆ. ಅದೇ ದಿನ ಸಂಜೆ 5 ಗಂಟೆ ನಂತರ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ನಡೆಯುವುದು ಅನುಮಾನ

ಪ್ರಕ್ರಿಯೆಯ ಪ್ರಕಾರ ಚುನಾವಣಾ ಆಯೋಗ ಘೋಷಣೆ ಮಾಡಿದೆಯಾದರೂ ಈ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಕ ಅನುಮಾನ. ರಾಜ್ಯದ ಎಲ್ಲ ಶಾಸಕರೂ ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಒಂದೇ ಸ್ಥಾನ ಇರುವುದರಿಂದ, ಇದೀಗ ಬಹುಮತ ಹೊಂದಿರುವ ಬಿಜೆಪಿ ಅಭ್ಯರ್ಥಿಯೇ ಜಯಗಳಿಸುತ್ತಾರೆ. ಈ ಚುನಾವಣೆಗೆ ವಿಪ್​​ ನೀಡಲಾಗುವುದು ಹಾಗೂ ಮತವನ್ನು ಪಕ್ಷದ ಏಜೆಂಟ್​​ಗೆ ತೋರಿಸಬೇಕಿರುವುದರಿಂದ ಅಡ್ಡಮತದಾನದ ಸಾಧ್ಯತೆಯೂ ಕಡಿಮೆ. ಸದ್ಯದಲ್ಲೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದೆ. ಚುನಾವಣೆ ನಡೆಯದೆಯೇ ಘೋಷಣೆಯಾಗುವ ಸಾಧ್ಯತೆಯೇ ಹೆಚ್ಚಾಗಿದೆ.

ಇದನ್ನೂ ಓದಿ | Murmu vs Sinha | ರಾಷ್ಟ್ರಪತಿ ಚುನಾವಣೆ ಮತದಾನ ಅಂತ್ಯ; ಸಂಸತ್ತಿನಲ್ಲಿ ಶೇ.99.18 ರಷ್ಟು ಮತ ಚಲಾವಣೆ

Exit mobile version