Site icon Vistara News

Karnataka Election 2023: ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್‌ ಶೋ; ಪ್ರಚಾರದ ಅಬ್ಬರಕ್ಕೆ ಕಿಚ್ಚು ಹಚ್ಚಿದ ಸುದೀಪ್

CM Basavaraj Bommai holds roadshow in Shiggaon Sudeep entry into the campaign Karnataka Election 2023 updates

ಹಾವೇರಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣಾ (Karnataka Election 2023) ಕಣ ಕಾವೇರತೊಡಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೊಂದೇ ದಿನ ಬಾಕಿ ಇರುವುದರಿಂದ ಅಭ್ಯರ್ಥಿಗಳು ಭರದಿಂದ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಬುಧವಾರ ಸಹ ರಾಜ್ಯದ ಹಲವು ಕಡೆ ಘಟಾನುಘಟಿ ನಾಯಕರು ನಾಮಪತ್ರವನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಇದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಲ್ಲಿ ನಾಮಪತ್ರವನ್ನು ಸಲ್ಲಿಕೆಗೂ ಮೊದಲು ಭರ್ಜರಿ ರೋಡ್‌ ಶೋದೊಂದಿಗೆ ಬಲಪ್ರದರ್ಶನ ಮಾಡಿದ್ದಾರೆ. ಇವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಖ್ಯಾತ ನಟ ಕಿಚ್ಚ ಸುದೀಪ್‌ ಸೇರಿದಂತೆ ಹಲವು ನಾಯಕರು ಸಾಥ್‌ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದೀಪ್‌ ಅವರನ್ನು ಬರಮಾಡಿಕೊಂಡ ಜೆ.ಪಿ. ನಡ್ಡಾ ಮತ್ತಿತರರು.

ಇದಕ್ಕೂ ಮೊದಲು ಸವಣೂರಿನ ಕಾರಡಗಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರಡಗಿಯ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Karnataka Elections : ಸಿದ್ದು ಮೊಮ್ಮಗನ ನೋಡಲು ಮನೆಗೆ ಜನರ ಲಗ್ಗೆ; ಮುಂದೆ ರಾಜಕೀಯಕ್ಕೆ ಬರ್ತೀನಿ ಅಂದ ಧವನ್‌ ರಾಕೇಶ್‌!

ಹುಬ್ಬಳ್ಳಿಗೆ ಬಂದು ಬಂದ ಕಿಚ್ಚ

ಇದಕ್ಕೂ ಮೊದಲು ಹುಬ್ಬಳ್ಳಿಗೆ ವಿಮಾನದ ಮೂಲಕ ಆಗಮಿಸಿದ ಕಿಚ್ಚ ಸುದೀಪ್‌, ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವು ಮುಖಂಡರನ್ನು ಭೇಟಿ ಮಾಡಿದರು. ಈ ವೇಳೆ ಸುದೀಪ್‌ ಅವರನ್ನು ಸನ್ಮಾನಿಸಲಾಯಿತು. ಅಲ್ಲಿಂದ ನಡ್ಡಾ, ಸುದೀಪ್‌ ಸೇರಿದಂತೆ ಹಲವು ನಾಯಕರು ಹೆಲಿಕಾಪ್ಟರ್‌ ಮೂಲಕ ಶಿಗ್ಗಾಂವಿಗೆ ತೆರಳಿದರು.

ಶಿಗ್ಗಾಂವಿಯಲ್ಲಿನ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ನಟ ಸುದೀಪ್‌ ಮತ್ತಿತರರು.

ಸಾರ್ವಜನಿಕರತ್ತ ಕೈಬೀಸಿದ ಸುದೀಪ್‌

ನಡ್ಡಾ , ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ನಳಿನ್‌ ಕುಮಾರ್‌ ಕಟೀಲ್ ಹಾಗೂ ಸುದೀಪ್‌ ಅವರು ಶಿಗ್ಗಾಂವಿ ಹೆಲಿಪ್ಯಾಡ್‌ಗೆ ಬಂದಿಳಿದರು. ಅಲ್ಲಿ ಸ್ಥಳೀಯ ಮುಖಂಡರು ಸೇರಿ ಸುದೀಪ್‌ಗೆ ಕೇಸರಿ ಶಾಲು ಹಾಕಿ‌ ಸ್ವಾಗತ ಕೋರಿದರು. ಹೆಲಿಪ್ಯಾಡ್‌ನಲ್ಲಿ ಸುದೀಪ್‌ ಅವರನ್ನು ನೋಡಲು ಅಪಾರ ಪ್ರಮಾಣದಲ್ಲಿ ಸಾರ್ವಜನಿಕರು ಸೇರಿದ್ದರು. ಈ ವೇಳೆ ಜನರ ಬಳಿ ಸುದೀಪ್‌ ಕೈ‌ಬೀಸಿದರು.

ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ

ಅಲ್ಲಿಂದ ನೇರವಾಗಿ ಶಿಗ್ಗಾಂವಿಯ ಚನ್ನಮ್ಮ ವೃತ್ತಕ್ಕೆ ನಡ್ಡಾ, ಸುದೀಪ್ ಹಾಗೂ ಮತ್ತಿತರರು ತೆರಳಿದರು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆ.ಪಿ. ನಡ್ಡಾ ಹಾಗೂ ಸುದೀಪ್‌ ಸೇರಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಬೃಹತ್‌ ರೋಡ್‌ ಶೋ

ನಾಮಪತ್ರ ಸಲ್ಲಿಕೆಗೂ ಮುನ್ನ ಸಿಎಂ ಬೊಮ್ಮಾಯಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಜೆ.ಪಿ. ನಡ್ಡಾ, ಪ್ರಲ್ಹಾದ್‌ ಜೋಶಿ, ಕಿಚ್ಚ ಸುದೀಪ್‌ ಸೇರಿದಂತೆ ಅನೇಕರ ಜತೆ ತೆರೆದ ವಾಹನದಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ್ದಾರೆ. ಈ ವೇಳೆ ಇವರಿಗೆ ಬೃಹತ್ ಕಿತ್ತಳೆ ಹಣ್ಣಿನ ಹಾರ ಹಾಕಿ‌ ಸ್ವಾಗತ ಕೋರಲಾಯಿತು. ರಸ್ತೆಯುದ್ದಕ್ಕೂ ಕಾರ್ಯಕರ್ತರ ಜತೆ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಈ ವೇಳೆ ಸಿಎಂ, ಸುದೀಪ್, ನಡ್ಡಾ ಅವರು ಜನರತ್ತ ಕೈ ಬೀಸುತ್ತಾ ಸಾಗಿದರು. ಈ ವೇಳೆ ಕಿಚ್ಚ ಸುದೀಪ್‌ರನ್ನು ನೋಡಲು ಜನರು ಮುಗಿಬಿದ್ದರು.

ಇದನ್ನೂ ಓದಿ: Karnataka Election 2023: ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ನಾಮಪತ್ರ ಸಲ್ಲಿಕೆ; ಊರ ಹಬ್ಬದಂತೆ ಸಂಭ್ರಮಿಸಿದ ಜನ

ಬೊಮ್ಮಾಯಿ ಕೈ ಹಿಡಿದು ಎತ್ತಿದ ಸುದೀಪ್

ರೋಡ್‌ ಶೋ ವೇಳೆ ಸಿಎಂ ಬೊಮ್ಮಾಯಿ ಪಕ್ಕದಲ್ಲಿದ್ದ ಕಿಚ್ಚ ಸುದೀಪ್‌ ಅವರು ಬೊಮ್ಮಾಯಿ ಅವರ ಕೈಯನ್ನು ಹಿಡಿದೆತ್ತಿ ಜನರತ್ತ ಕೈ ಬೀಸಿದರು. ಈ ವೇಳೆ ಸಾರ್ವಜನಿಕರೂ ಸಹ ಖುಷಿಯಿಂದ ಸಂಭ್ರಮಿಸಿದರು. ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಬಿ.ಸಿ. ಪಾಟೀಲ್‌ ಹಾಗೂ ಮತ್ತಿತರರು ಭಾಗಿಯಾಗಿದ್ದಾರೆ. ಈ ವೇಳೆ ಬೃಹತ್‌ ಸಮಾವೇಶ ನಡೆಸಲಿದ್ದು, ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ.

Exit mobile version