Site icon Vistara News

ವಾಣಿಜ್ಯೋದ್ಯಮ ಘಟಕಗಳಿಗೆ ಸ್ವಯಂಘೋಷಿತ ತೆರಿಗೆ ಪದ್ಧತಿ ಜಾರಿ; ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕೈಗಾರಿಕೆಗಳ ಉತ್ತೇಜನಕ್ಕೆ ತೆರಿಗೆ ಪದ್ಧತಿ ಸರಳೀಕರಣಗೊಳಿಸಲು ಸ್ವಯಂ ತೆರಿಗೆ ಪದ್ಧತಿ ಜಾರಿಗೊಳಿಸುತ್ತೇವೆ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ (ಆರ್ ಆ್ಯಂಡ್ ಡಿ ನೀತಿ) ಪ್ರಕಟಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, 21ನೇ ಶತಮಾನದಲ್ಲಿ ಕೈಗಾರಿಕಾ ರಂಗದಲ್ಲಿ ಮತ್ತೊಮ್ಮೆ ಮಹತ್ತರ ಬದಲಾವಣೆಗಳಾಗುತ್ತಿವೆ. ರಾಜ್ಯದಲ್ಲಿಯೂ ತೆರಿಗೆ ಸರಳೀಕರಣ ಮಾಡಿ, ಸ್ವಯಂ ಘೋಷಿತ ತೆರಿಗೆ ಪದ್ಧತಿ ಜಾರಿಗೊಳಿಸಲಾಗುವುದು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಫಿಟ್‌ಮೆಂಟ್ ಅಂತಿಮಗೊಳಿಸಲಾಗುವುದು ಎಂದರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ನಡುವೆ ಅಂತಃಕರಣ ಪುನಃ ಸ್ಥಾಪನೆಯಾಗಬೇಕು. ಹಿಂದೆಂದಿಗಿಂತಲೂ ಇಂದು ಉದ್ಯಮಶೀಲತೆ ಬಹಳ ಮುಖ್ಯವಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯದ ಪರಿಭಾಷೆ, ಸರ್ಕಾರದ ಚಿಂತನೆ ಎರಡೂ ಬದಲಾಗಿವೆ. ಜಾಗತೀಕರಣ ಮುಕ್ತ ಆರ್ಥಿಕ ನೀತಿಗಳು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿವೆ. ಉದ್ಯಮಿಗಳು ಲಾಭ ನಷ್ಟದ ಜತೆಗೆ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನೂ ಅರಿತು ಹೆಜ್ಜೆಯಿಡಬೇಕು ಎಂದರು.

೨-೩ನೇ ಹಂತದಲ್ಲಿನ ಪ್ರತಿಭೆಗಳ ಸದ್ಬಳಕೆ ಆಗಲಿ

ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಗಳು ಪರಸ್ಪರ ಪೂರಕವಾಗಿ ಸಾಗಬೇಕು. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭೆಗಳಿದ್ದು, ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ಪ್ರತಿಭೆಯ ಸದ್ಬಳಕೆ ಮಾಡಿಕೊಳ್ಳಬೇಕು. ಮೈಸೂರು ಮಹಾರಾಜರು ಸೇರಿ ನಮ್ಮ ಅನೇಕ ಪೂರ್ವಜರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಿ, ಅಭಿವೃದ್ಧಿಯ ಬುನಾದಿ ಹಾಕಿ, ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಿದ್ದರು. ಈ ಕಾರಣದಿಂದಾಗಿಯೇ ಈಗ ಐಟಿ-ವಬಿಟಿ ರಂಗದಲ್ಲಿ ಸಾಧನೆ ಸಾಧ್ಯವಾಗಿದೆ ಎಂದರು.

ಇದನ್ನೂ ಓದಿ | Chief Minister Tour | ಮುಂದಿನ ವಾರ ಉತ್ತರ ಕರ್ನಾಟಕ ಪ್ರವಾಸ: ಸಿಎಂ ಬಸವರಾಜ ಬೊಮ್ಮಾಯಿ

ಆರ್ ಆ್ಯಂಡ್‌ ಡಿ ಹಾಗೂ ಉದ್ಯೋಗ ನೀತಿ ಅಂಗೀಕಾರ

ಜನಸಾಮಾನ್ಯರ ಚಟುವಟಿಕೆ ಹಾಗೂ ಕೆಲಸಗಳನ್ನು ಆಧರಿಸಿ ಆರ್ಥಿಕತೆ ಚಲನಶೀಲವಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸ್ಥಾನ, ಜೀವನ ಗೌರವಿಸುವ ಕಾರ್ಯವಾಗಬೇಕು. ನವೀಕರಿಸಬಹುದಾದ ಇಂಧನಗಳ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ.43ರಷ್ಟಿದೆ. ಎಥೆನಾಲ್ ಉತ್ಪಾದನೆ, ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಆರ್ ಆ್ಯಂಡ್‌ ಡಿ ನೀತಿ ಹಾಗೂ ಉದ್ಯೋಗ ನೀತಿ ಅಂಗೀಕರಿಸಲಾಗುವುದು. ಹೆಚ್ಚು ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಪ್ರೋತ್ಸಾಹ ಹೆಚ್ಚಿಸಲಾಗುವುದು ಎಂದು ಹೇಳಿದರು.

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಕೃಷಿ ಸಚಿವ ಬಿ.ಸಿ‌. ಪಾಟೀಲ್‌, ಕೈಮಗ್ಗ, ಜವಳಿ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್.ಪ್ರಸಾದ್, ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ‌ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಹೊಸ ಆರು ಟೌನ್‌ಷಿಪ್ ಅಭಿವೃದ್ಧಿ- ಬೊಮ್ಮಾಯಿ
ಮಹಿಳೆಯರಿಗೆ ಹೆಚ್ಚು ಉದ್ಯೋಗ ನೀಡಬೇಕು. ಧನಾತ್ಮಕ ಆಲೋಚನೆ, ಸಾಹಸಿ ಮನೋಭಾವದೊಂದಿಗೆ ಜಾಗತಿಕ ತಂತ್ರಜ್ಞಾನದ ಪ್ರಯೋಜನ ಪಡೆಯಬೇಕು. ವಾಣಿಜ್ಯೋದ್ಯಮ ಸಂಸ್ಥೆಗಳು ಸರ್ಕಾರ, ಉದ್ಯಮ ಹಾಗೂ ಉದ್ಯೋಗ ಸೃಜನೆಯ ನಡುವೆ ಕೊಂಡಿಗಳಾಗಬೇಕು. ಸರ್ಕಾರ ಎಲ್ಲ ನೆರವು, ಪ್ರೋತ್ಸಾಹ ನೀಡಲಿದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಘೋಷಣೆಯಂತೆ ರಾಜ್ಯದಲ್ಲಿ ಹೊಸ ಆರು ಟೌನ್‌ಷಿಪ್ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ | ಸಿಎಂ ಬೊಮ್ಮಾಯಿ ಗಮನಕ್ಕೇ ತಾರದೆ ಫೋಟೊ, ವಿಡಿಯೊ ನಿಷೇಧ ಮಾಡಿದ ಅಧಿಕಾರಿಗಳು?

Exit mobile version