Site icon Vistara News

GST ಸಭೆಯಲ್ಲಿ ಬೊಮ್ಮಾಯಿ ಸಮಿತಿಯ ವರದಿ ಮಂಡನೆ: ಯಥಾವತ್‌ ಅಂಗೀಕಾರ

ಜಿಎಸ್‌ಟಿ

ಬೆಂಗಳೂರು: ಕೆಲವು ಸರಕು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆ ಹಾಗೂ ವಿನಾಯಿತಿ ರದ್ದುಪಡಿಸುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿಯ ಮಧ್ಯಂತರ ವರದಿಗೆ ಚಂಡಿಗಢದಲ್ಲಿ ನಡೆಯುತ್ತಿರುವ GST ಸಭೆಯಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ವರದಿಯಲ್ಲಿನ ಅಂಶಗಳ ಬಗ್ಗೆ ಪ್ರತ್ಯೇಕ ಚರ್ಚೆ ನಡೆಯದೆ, ಯಥಾವತ್ತಾಗಿ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.

ಚಂಡಿಗಢದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ 47ನೇ GST ಕೌನ್ಸಿಲ್ ಸಭೆಯಲ್ಲಿ, ದರ ಬದಲಾವಣೆ ಕುರಿತು ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿ ಮಧ್ಯಂತರ ವರದಿ ಸಲ್ಲಿಸಿದೆ. ಜಿಎಸ್‌ಟಿ ದರಗಳಲ್ಲಿ ಪರಾಮರ್ಶೆ, ಕೆಳಮುಖ ತೆರಿಗೆ ರಚನೆಗಳಲ್ಲಿ ತಿದ್ದುಪಡಿ ಹಾಗೂ ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವ ಪ್ರಕ್ರಿಯೆಗಳನ್ನು ಪರಿಶೀಲಿಸಲು ಈ ಸಮಿತಿಯನ್ನು ರಚಿಸಿದ್ದು, ವರದಿಯನ್ನು ಸಲ್ಲಿಕೆ ಮಾಡಿದೆ.

ಈ ಸಮಿತಿಗೆ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾಗಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಗೋವಾ ರಾಜ್ಯಗಳ ಹಣಕಾಸು ಮಂತ್ರಿಗಳು ಸದಸ್ಯರಾಗಿದ್ದಾರೆ. ಕೆಳಮುಖ ತೆರಿಗೆ ರಚನೆಯಲ್ಲಿ ತಿದ್ದುಪಡಿ ಮತ್ತು ತೆರಿಗೆ ವಿನಾಯಿತಿಗಳನ್ನು ಕಡಿಮೆ ಮಾಡುವಂತಹ ಎರಡು ಒತ್ತಾಯದ ಶಿಫಾರಸುಗಳನ್ನು ಒಳಗೊಂಡ ಮಧ್ಯಂತರ ವರದಿಯನ್ನು ಜಿಎಸ್‌ಟಿ ಮಂಡಳಿ ಎದುರು ಬೊಮ್ಮಾಯಿ ಮಂಗಳವಾರ ಮಂಡಿಸಿದರು. ಸಚಿವರ ಸಮಿತಿಯು ತನ್ನ ವರದಿಯಲ್ಲಿ ಮಂಡಿಸಿರುವ ವಿವರವಾದ ವಿಶ್ಲೇಷಣೆಯ ಕುರಿತು ಕೌನ್ಸಿಲ್‌ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು.

ಸಮಿತಿಯ ಸಂಚಾಲಕರ ಪರಿಶ್ರಮವನ್ನು ನೆರೆದವರು ಶ್ಲಾಘಿಸಿದರು. ಅದರಲ್ಲಿನ ಅಂಶವಾರು ವಿವರಗಳನ್ನು ಚರ್ಚಿಸದೆ, ವರದಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕೆಂದು ದೆಹಲಿಯ ಸದಸ್ಯರಾಗಿರುವ ಮನೀಷ್ ಸಿಸೋಡಿಯಾ ಶಿಫಾರಸು ಮಾಡಿದರು. ಸಮತೋಲನದ ದೃಷ್ಟಿಕೋನವನ್ನು ಪ್ರದರ್ಶಿಸುತ್ತ, ಗ್ರಾಹಕರ ಸೂಕ್ಷ್ಮತೆಗಳಿಗೆ ಸಂವೇದಿಸುವ ವರದಿಯನ್ನು ಬೊಮ್ಮಾಯಿ ನೇತೃತ್ವದ ಸಚಿವರ ಸಮಿತಿಯು ಹೊರತಂದಿದೆ ಎಂದು ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳ ಸದಸ್ಯರು ತಿಳಿಸಿದರು.

ವರದಿಯ ಪ್ರತಿಯೊಂದು ಅಂಶಗಳನ್ನು ಚರ್ಚಿಸದೆ, ಸಚಿವರ ಸಮಿತಿಯು ವರದಿಯನ್ನು ಸಂಪೂರ್ಣವಾಗಿ ಜಿಎಸ್‌ಟಿ ಮಂಡಳಿ ಸರ್ವಾನುಮತದಿಂದ ಅಂಗೀಕರಿಸಿದ್ದು, ಇದೊಂದು ಅಪರೂಪದ ಘಟನೆ. ವರದಿಯ ಸಿದ್ಧಪಡಿಸುವಿಕೆಯಲ್ಲಿ ಮುಖ್ಯವಾದ ಮತ್ತು ಪ್ರಸ್ತುತವಾದ ಅಂಶಗಳನ್ನು ಒದಗಿಸಿದ್ದಕ್ಕಾಗಿ ಎಲ್ಲ ರಾಜ್ಯಗಳ ಸದಸ್ಯರುಗಳಿಗೆ CM ಬಸವರಾಜ ಬೊಮ್ಮಾಯಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ | 3 ದಿನ ಸಿಎಂ ಬೊಮ್ಮಾಯಿ ಚಂಡೀಗಢ ಪ್ರವಾಸ: ಜಿಎಸ್‌ಟಿ ಮಧ್ಯಂತರ ವರದಿ ಸಲ್ಲಿಕೆ ಸಾಧ್ಯತೆ

Exit mobile version