Site icon Vistara News

CM Siddaramaiah: ಸಿಎಂ ಅವರಿಂದ ಪ್ರಧಾನಿ ನಿದ್ರಿಸುವ ಪೋಸ್ಟರ್‌ ಟ್ವೀಟ್‌, ವಿಜಯೇಂದ್ರ ಕಿಡಿ

pm modi poster

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿದ್ರಿಸುತ್ತಿರುವಂತೆ ತೋರಿಸುವ ಪೋಸ್ಟರ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (BY vijayendra) ಕಿಡಿ ಕಾರಿದ್ದಾರೆ. ʼಇಂಥ ಪೋಸ್ಟರ್‌ ಹಂಚಿ ಸಿಎಂ ವಿಕೃತಿ ಮೆರೆದಿದ್ದಾರೆʼ ಎಂದು ಟೀಕಿಸಿದ್ದಾರೆ.

ನಿನ್ನೆ ಸಿಎಂ ಅವರು ಪ್ರಧಾನಿ ಮೋದಿ ನಿದ್ರಿಸುತ್ತಿರುವಂತೆ ಸೃಷ್ಟಿಸಲಾದ ಎಐ ಚಿತ್ರಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ʼಕರ್ನಾಟಕಕ್ಕೆ ಅನುದಾನ ಕೊಡದೆ ಗಾಢ ನಿದ್ರೆ ಮಾಡುತ್ತಿದ್ದಾರೆʼ ಎಂದು ಟೀಕಿಸಿದ್ದರು.

“ಪ್ರಧಾನಿಯ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ. ತನಗೆ ತಾನೇ ಪ್ರಚಾರ ಕೊಟ್ಟುಕೊಳ್ಳಲು ಹಾಗೂ ಬಿಜೆಪಿಗಾಗಿ ಪ್ರಚಾರ ಮಾಡಲು ಸದಾ ಎದ್ದಿರುವ ನರೇಂದ್ರ ಮೋದಿ ಅವರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವಾಗಲೂ ತೂಕಡಿಸುತ್ತಿರುತ್ತಾರೆ. ಕರ್ನಾಟಕದ ಕಟು ವಾಸ್ತವಕ್ಕೆ ಸ್ಪಂದಿಸದ ಮೋದಿಯಿಂದ ಸದಾ ಪಲಾಯನ. ಕೇಂದ್ರವು ಸರಿಯಾಗಿ ಅನುದಾನ ಕೊಡುತ್ತಿಲ್ಲ, ಕನ್ನಡಿಗರ ಮಹತ್ವಾಕಾಂಕ್ಷೆಗಳಿಗೆ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ, ಕೇಂದ್ರದ ಪರಿಹಾರ ಹಣ ಇನ್ನೂ ರೈತರ ಕೈಗೆ ತಲುಪಿಲ್ಲ…”

“ಮೋದಿ ಮಂತ್ರವಿಷ್ಟೇ, ಕಡೆಗಣಿಸು. ನಿರ್ಲಕ್ಷಿಸು. ನಿದ್ರಿಸು. ಮತ್ತದನ್ನೇ ಪುನರಾವರ್ತಿಸು! ಇನ್ನು ಬಿಜೆಪಿ ಸಂಸದರ ಮಂತ್ರ- ಬಾಯಿಗೆ ಬೀಗ ಹಾಕಿಕೊಂಡಿರು. ಮೋದಿಯದ್ದೇ ಜಪ ಮಾಡಿಕೊಂಡಿರು. ಕನ್ನಡಿಗರ ನಂಬಿಕೆಗೆ ದ್ರೋಹ ಬಗೆಯುತ್ತಿರು. ಮೋದಿ ನಿಶ್ಚಿಂತೆಯಿಂದ ನಿದ್ರಿಸಲು ಮತ್ತದನ್ನೇ ಪುನರಾವರ್ತಿಸು! ಎದ್ದೇಳಿ, ಪ್ರಧಾನಮಂತ್ರಿಯವರೇ! ಕರ್ನಾಟಕದ ನ್ಯಾಯಯುತ ಪಾಲನ್ನು ಕೊಡಬೇಕಾದ ಸಮಯವಿದು” ಎಂದು ಅವರ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಇದನ್ನು ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಕಟುವಾಗಿ ಟೀಕಿಸಿದ್ದಾರೆ.

“ಸೂರ್ಯ ಮುಳುಗಿದರೆ ಕತ್ತಲೆ, ಚಂದ್ರ ಮೇಲೆದ್ದು ಬಂದರೆ ನಿದ್ರೆ. ಸೂರ್ಯ- ಚಂದ್ರರಿಬ್ಬರೂ ವಿಶ್ರಾಂತಿ, ಸುಖ ನಿದ್ರೆಗಳನ್ನು ಅನುಭವಿಸಿರಬಹುದು, ಆದರೆ ತಮ್ಮ ಬದುಕಿನ ಪುಟದಲ್ಲಿ ವಿರಮಿಸುವ ಪದವನ್ನೇ ಕಾಣದ, ನಿದ್ರೆ ಸುಖವೇನೆಂದು ಅರಿಯದ ಒಬ್ಬ ತಪಸ್ವಿ ಆಡಳಿತಗಾರನನ್ನು ಈ ದೇಶ ಕಂಡಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ, ಎನ್ನುವುದು ಅವರ ಜೀವನ ಚರಿತ್ರೆ ಹಾಗೂ ಹತ್ತು ವರ್ಷದ ಅವರ ಆಡಳಿತವನ್ನು ಕಣ್ಣಾರೆ ಕಂಡಿರುವ ಶತಕೋಟಿ ಭಾರತೀಯರು ಎದೆ ತಟ್ಟಿ ಹೇಳುತ್ತಾರೆ.ʼʼ

“ಮೋದಿಯವರ ನಡೆ, ನುಡಿ, ಕ್ರಿಯಾಶೀಲತೆ ಶ್ರೀರಾಮಚಂದ್ರನ ಅನುಗ್ರಹದ ನೆರಳಿನಂತಿದೆ. ‘ರಾಮ ರಾಜ್ಯದ ಪರಿಕಲ್ಪನೆ ಮೋದಿಯವರ ಕಾಲದಲ್ಲಿ ಮಾತ್ರ ಸಾಧ್ಯ’ ಎನ್ನುವುದು ಜನವರಿ 22ರಂದು ಲೋಕಾರ್ಪಣೆಗೊಳ್ಳುತ್ತಿರುವ ಶ್ರೀರಾಮ ಮಂದಿರ ಹಾಗೂ ಬಾಲರಾಮನ ಪ್ರತಿಷ್ಠಾಪನೆಯ ಕ್ಷಣಗಳು ಸಾಕ್ಷಿ ಹೇಳಲಿವೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ’ ನಿದ್ರೆ ಸಾಮ್ರಾಜ್ಯದ @siddaramaiah ಅವರು ಮೋದಿಯವರ ಹೆಗಲ ಮೇಲೆ ತಮ್ಮ ನಿದ್ರೆ ಸುಖದ ಚಿತ್ರಣ ಸೃಷ್ಟಿಸಿ ವಿಕೃತ ಆನಂದ ಪಡೆಯಲು ಹೊರಟಿದ್ದಾರೆ” ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಇದನ್ನೂ ಓದಿ: CM Siddaramaiah : ಶೀಘ್ರವೇ ಸರ್ಕಾರಿ ನೌಕರರ ವೇತನ ಪರಿಷ್ಕರಣೆ?: ಸಿದ್ದರಾಮಯ್ಯ ಭರವಸೆ ಏನು?

Exit mobile version