Site icon Vistara News

Death News : ದೆಹಲಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿ ಆಗಿದ್ದ ಹಿರಿಯ ಅಧಿಕಾರಿ ಬೈಕೆರೆ ನಾಗೇಶ್‌ ಇನ್ನಿಲ್ಲ

Nagesh Bykere No More

ಬೆಂಗಳೂರು: ದೆಹಲಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ (Karnataka Governments Representative in Delhi) ಕಾರ್ಯನಿರ್ವಹಿಸಿದ್ದ ಹಿರಿಯ ಅಧಿಕಾರಿ ಬೈಕೆರೆ ನಾಗೇಶ (Bykere Nagesh) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ (Death News). ಅವರಿಗೆ 72 ವರ್ಷ ಆಗಿತ್ತು.

ಕೇಂದ್ರ ಸಚಿವಾಲಯಗಳಲ್ಲಿ ಅತಿಹೆಚ್ಚು, ಅಂದರೆ 10 ಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಾಗೇಶ್, ರಾಜ್ಯದ ಬಹುತೇಕ ರಾಜಕಾರಣಿಗಳಿಗೆ ಆಪ್ತರಾಗಿದ್ದರು. ಹಲವಾರು ವರ್ಷ ರಾಜ್ಯದ ಪ್ರತಿನಿಧಿಯಾಗಿಯೂ ಆ ಸ್ಥಾನಕ್ಕೆ ನ್ಯಾಯ ಒದಗಿಸಿದ್ದರು.

ಹಿರಿಯ ಮುಖಂಡರಾದ ಎಚ್.‌ಡಿ ದೇವೇಗೌಡರು ಪ್ರಧಾನಿ ಆದ ಸಂದರ್ಭದಲ್ಲಿ ಅವರೊಂದಿಗೂ ಸೇವೆ ಸಲ್ಲಿಸಿದ್ದರು. ಕೇಂದ್ರ ಸಚಿವರಾಗಿದ್ದ ಜಾಫರ್‌ ಷರೀಫ್‌, ಗುರುಪಾದಸ್ವಾಮಿ, ಸಂಜಯ ಸಿಂಗ್, ರಾಮಕೃಷ್ಣ ಹೆಗ್ಡೆ, ಚಮನಲಾಲ್ ಗುಪ್ತ, ಧನಂಜಯಕುಮಾರ್, ಎಂ.ವಿ ರಾಜಶೇಖರ್, ಅನಂತಕುಮಾರ್, ಡಿ.ವಿ. ಸದಾನಂದ ಗೌಡ, ಎ. ನಾರಾಯಣಸ್ವಾಮಿ ಅವರೊಂದಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು.

ಕರ್ನಾಟಕದ ಹಲವಾರು ಅಭಿವೃದ್ಧಿ ಕಾರ್ಯಯೋಜನೆಗಳ ಅಧ್ಯಯನ ಮಾಡಿಕೊಂಡಿದ್ದ ನಾಗೇಶ್‌ ಇವುಗಳ ಜಾರಿಗೆ ಅನುಮತಿ ಮತ್ತು ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದರು. ಎಲ್ಲಕಿಂತ ಮಿಗಿಲಾಗಿ ನಾಗೇಶರ ಸೇವೆಯ ಆದ್ಯತೆ ಎಂದರೆ ರಾಷ್ಟ್ರ ರಾಜಧಾನಿ ದೆಹಲಿಗೆ ಮೊದಲ ಬಾರಿಗೆ ಬರುತ್ತಿದ್ದ ಅಸಹಾಯಕ ಕನ್ನಡಿಗರಿಗೆ ಅವರು ಮಾರ್ಗದರ್ಶನ ನೀಡುತ್ತಿದ್ದರು ಎಂದು ಹಲವರು ನೆನಪಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದವರಾಗಿರುವ ನಾಗೇಶ್ ಪತ್ನಿ ಸುಗುಣ ಮತ್ತು ಪುತ್ರಿ ಅರ್ಪಿತರನ್ನು ಅಗಲಿದ್ದಾರೆ.

ಇದನ್ನೂ ಓದಿ : Death News : ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಅಮೃತ ಸೋಮೇಶ್ವರ ಇನ್ನಿಲ್ಲ

ನಾಡಿನ ಅಪರೂಪದ ಅಧಿಕಾರಿ: ಶಿವಾನಂದ ತಗಡೂರು ಕಂಬನಿ

ಬೈಕೆರೆ ನಾಗೇಶ್ ಅವರು ನಾಡಿನ ಅಪರೂಪದ ಅಧಿಕಾರಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ನೆನಪು ಮಾಡಿಕೊಂಡಿದ್ದಾರೆ. ಅವರು ತಮ್ಮ ಫೇಸ್‌ ಬುಕ್‌ ವಾಲ್‌ನಲ್ಲಿ ಬರೆದುಕೊಂಡಿರುವ ಬರಹ ಇಲ್ಲಿದೆ.

ಸಜ್ಜನ ಸಹೃದಯಿ ಬೈಕೆರೆ ನಾಗೇಶ್ (72) ಇಷ್ಟು ಬೇಗ ನಮ್ಮನ್ನು ಅಗಲುವರು ಎಂದು ನಿರೀಕ್ಷಿಸಿರಲಿಲ್ಲ. ಸಕಲೇಶಪುರ ತಾಲ್ಲೂಕು ಕುಗ್ರಾಮ ಬೈಕೆರೆಯಿಂದ ದೆಹಲಿ ತನಕ ನಾಗೇಶ್ ಪಯಣಿಸಿದ ಹಾದಿ ನೋಡಿದರೆ ಎಂಥವರಿಗೂ ನಿಬ್ಬೆರಗಾಗುವಂತಾದ್ದು.

ಯಾರ ವೈರತ್ವವನ್ನು ಕಟ್ಟಿಕೊಳ್ಳದ ಮುಗುಳ್ನಗೆ ಸ್ನೇಹತ್ವದಲ್ಲಿಯೇ ತನ್ನವರನ್ನಾಗಿಸಿಕೊಂಡು ಎಲ್ಲರೊಳಗೂ ಸರಳ ವ್ಯಕ್ತಿತ್ವದ ಛಾಪು ಮೂಡಿಸುತ್ತಿದ್ದ ನಾಗೇಶ್ ನಾಡಿನ ಅಪರೂಪದ ಕ್ರಿಯಾಶೀಲ ಅಧಿಕಾರಿ. ಜಾಫರ್ ಷರೀಫ್ ಬಳಿ ಆಪ್ತ ಕಾರ್ಯದರ್ಶಿಯಾಗಿ ದೆಹಲಿಯತ್ತ ಮುಖ ಮಾಡಿದವರು ಮತ್ತೆ ರಾಜ್ಯ ಸೇವೆಗೆ ಹಿಂತಿರುಗಲಿಲ್ಲ.

ದೆಹಲಿಯನ್ನು ಕಾರ್ಯಚಟುವಟಿಕೆ ಕೇಂದ್ರವನ್ನಾಗಿಸಿಕೊಂಡು ಅಲ್ಲಿಯೇ ಗಟ್ಟಿ ನೆಲೆ‌ ನಿಂತವರು ನಾಗೇಶ್. ದೆಹಲಿಯಲ್ಲಿ ಕನ್ನಡಿಗರ ಸ್ಟಾರ್ ಐಕಾನ್ ಆಗಿ ಕೆಲಸ ಮಾಡಿದ ನಾಗೇಶ್ ಅವರನ್ನು ಪಕ್ಷಾತೀತವಾಗಿ ಬಹುತೇಕ ಎಲ್ಲಾ ರಾಜಕಾರಣಿಗಳು ಪ್ರೀತಿಸಿದವರೇ.

ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಬಗೆಬಗೆದು ರಾಜ್ಯದ ಕಡೆಗೆ ಹರಿಸಿದ್ದರಲ್ಲಿ ನಾಗೇಶ್ ಪಾತ್ರ ದೊಡ್ಡದು. ಸದಾ ರಾಜ್ಯದ ಪರವಾಗಿ ವಕಾಲತ್ತು ವಹಿಸಿ ಕೆಲಸ ಮಾಡುತ್ತಿದ್ದ ಅವರನ್ನು ಎಲ್ಲಾ ಮುಖ್ಯಮಂತ್ರಿಗಳು ಇಷ್ಟಪಟ್ಟು ಹಲವು ಕೆಲಸವನ್ನು ಅವರ ಹೆಗಲಿಗೆ ಹಾಕಿಬಿಡುತ್ತಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ವಿಶೇಷ ಕರ್ತವ್ಯಧಿಕಾರಿಯಾಗಿ ಕೆಲಸ ಮಾಡಿದವರು.

ತವರು ಪ್ರೇಮದಿಂದ ಸಕಲೇಶಪುರಕ್ಕೆ ಅಭಿವೃದ್ಧಿ ಹೊಳೆಯನ್ನೆ ಹರಿಸಿದ್ದ ನಾಗೇಶ್ ಶಾಸಕರಾಗುವ ಅವಕಾಶವನ್ನು ನಯವಾಗಿ ನಿರಾಕರಿಸಿ ದೆಹಲಿಯಲ್ಲಿ ಗಟ್ಟಿಯಾಗಿ ನಿಂತವರು. ದೆಹಲಿಗೆ ಸಹಾಯ ಕೇಳಿ ಹೋದವರಿಗೆ ಯಾವುದಾದರೂ ರೂಪದಲ್ಲಿ ನೆರವಾದವರು ನಾಗೇಶ್. ಇಂತಹ ನೂರಾರು ಅನುಭವಗಳು ಕನ್ನಡಿಗರಲ್ಲಿದೆ. ಪತ್ರಕರ್ತರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಇದರಿಂದ ಹೊರತಲ್ಲ. ಸೇವೆಯಲ್ಲಿಯೂ ಒಂದು ರೀತಿಯ ತಾಯ್ತನ ಮೈಗೂಡಿಸಿಕೊಂಡಿದ್ದ ನಾಗೇಶ್ ವ್ಯಕ್ತಿತ್ವಕ್ಕೆ ಮಾರುಹೋಗದವರಿಲ್ಲ.

ರಾಜ್ಯಕ್ಕೆ ಬರಬೇಕಾದ ಯೋಜನೆ ಎಲ್ಲಿ ಬಾಕಿಯಾಗಿದೆ? ಎಂದು ಫೈಲ್ ಹಿಡಿದು ಕೇಂದ್ರ ಸರ್ಕಾರದ ಕಂಬ ಸುತ್ತಿ ಕೆಲಸ ಮಾಡಿಸುತ್ತಿದ್ದ ನಾಗೇಶ್ ಕಾರ್ಯವೈಖರಿ ಎಲ್ಲರಿಗಿಂತ ವಿಭಿನ್ನ. ಹಲವಾರು ವರ್ಷ ರಾಜ್ಯದ ಪ್ರತಿನಿಧಿಯಾಗಿಯೂ ಆ ಸ್ಥಾನಕ್ಕೆ ನ್ಯಾಯ ಒದಗಿಸಿದವರು ನಾಗೇಶ್ ಎನ್ನುವುದು ಅತಿಶೋಯಕ್ತಿ ಅಲ್ಲ.

ನಿವೃತ್ತಿ ಜೀವನ ಬೆಂಗಳೂರಿನಲ್ಲಿ ಕಳೆಯಲು ನಿರ್ಧರಿಸಿ ಬಂದ ಅವರಿಗೆ ಯಾಕೊ ಆರೋಗ್ಯ ಆಗಿಂದಾಗ್ಗೆ ಕೈಕೊಡುತ್ತಲೇ ಇತ್ತು.

ಇದೇ ಜ.6 ರಂದು ಪೋನ್ ಮಾಡಿ ಬಹಳ ಹೊತ್ತು ಮಾತನಾಡಿದ್ದರು. ನಿಮ್ಮನ್ನು ನೋಡಬೇಕು ಎಂದು ವಿಡಿಯೋ ಕಾಲ್ ಕೂಡ ಮಾಡಿದ್ದರು. ಅದೇ ಅವರ ಕೊನೆಯ ಪೋನ್ ಕರೆ ಆಗಿದ್ದು ವಿಧಿವಿಪರ್ಯಾಸ. ನಾಗೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಶಿವಾನಂದ ತಗಡೂರು ಕಂಬನಿ ಮಿಡಿದಿದ್ದಾರೆ.

Exit mobile version