Site icon Vistara News

ಬೆಂಗಳೂರು-ಮೈಸೂರು ಹೆದ್ದಾರಿ ಪ್ಲಾನ್ ಮಾಡಿದ ಇಂಜಿನಿಯರ್‌ಗಳಿಗೆ ಪದ್ಮಭೂಷಣ ಕೊಡಿ ಎಂದ ಡಿ.ಕೆ. ಶಿವಕುಮಾರ್‌

DK Shivakumar rains

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯೊಂದನ್ನು ಯೋಜನೆ ಮಾಡುವಾಗ ಯಾವ ಪ್ರಾಥಮಿಕ ಸಂಗತಿಗಳನ್ನೂ ಗಮನಿಸದೇ ಮುಂದಾಗಿರುವುದೇ ಬೆಂಗಳೂರು-ಮೈಸೂರು ಹೆದ್ದಾರಿ ಆಸುಪಾಸಿನಲ್ಲಿ ಹೆದ್ದಾರಿ ಅವಾಂತರಕ್ಕೆ ಕಾರಣ ಎಂದು ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮಾಡುವಾಗ ಎತ್ತರ ಪ್ರದೇಶದಲ್ಲಿ ನೀರು ಯಾವ ರೀತಿ ಹೋಗಬೇಕು ಎಂಬುದರ ಬಗ್ಗೆ ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಆದರೆ ಈ ರಸ್ತೆಯ ಟೋಲ್ ಜಾಗ ಈಗ ಕೆರೆಯಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಈ ವಿಚಾರದಲ್ಲಿ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.

ಈ ಹೆದ್ದಾರಿಯನ್ನು ಪ್ಲಾನ್ ಮಾಡಿರುವ ಇಂಜಿನಿಯರ್‌ಗಳಿಗೆ ಮುಖ್ಯಮಂತ್ರಿಗಳು ಪದ್ಮಭೂಷಣ ಅಥವಾ ಬೇರೆ ಪ್ರಶಸ್ತಿ ಕೊಡಿಸಬೇಕು ಎಂದು ವ್ಯಂಗ್ಯವಾಡಿರುವ ಶಿವಕುಮಾರ್‌, ರಸ್ತೆ ನಿರ್ಮಾಣ ಎಂದರೆ ಜಲ್ಲಿ, ಟಾರು ಅಥವಾ ಕಾಂಕ್ರೀಟ್ ಹಾಕಿ ಹಣ ಪಡೆಯುವುದಲ್ಲ. ಮಳೆ ಬಂದಾಗ ನೀರು ಹೇಗೆ ಹೋಗಬೇಕು, ಎಲ್ಲಿ ಕಾಲುವೆ ತೆಗೆಯಬೇಕು ಎಂದು ಯೋಜನೆ ರೂಪಿಸುವುದು ಸರ್ಕಾರ ಹಾಗೂ ಇಂಜಿನಿಯರ್‌ಗಳ ಕರ್ತವ್ಯ.

ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಹೀಗಾದರೆ ಹಳ್ಳಿ ರಸ್ತೆಗಳ ಪರಿಸ್ಥಿತಿ ಏನಾಗಬೇಕು? ಒಬ್ಬಿಬ್ಬರ ಪ್ರಾಣ ಹಾನಿಯಾಗಿರುವ ಮಾಹಿತಿ ಬಂದಿದ್ದು, ರಾಮನಗರ, ಚನ್ನಪಟ್ಟಣ, ಕನಕಪುರದ ಕೆಲವು ಭಾಗಗಳಿಗೆ ಹೋಗಿ ಪರಿಸ್ಥಿತಿ ಪರಿಶೀಲಿಸುತ್ತೇನೆ. ಅವರಿಗೆ ಧೈರ್ಯ ತುಂಬುತ್ತೇನೆ. ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ ಎಂದರು.

ಈ ಸಮಯದಲ್ಲಿ ಆಡಳಿತ ವ್ಯವಸ್ಥೆ ಚುರುಕಾಗಿ ಕೆಲಸ ಮಾಡಬೇಕು. ಒಂದು ವಾರ ಅಥವಾ 10 ದಿನಗಳಲ್ಲಿ ಪರಿಹಾರ ನೀಡುತ್ತೇನೆ ಎಂದು ಹೇಳುವುದಲ್ಲ. ತಕ್ಷಣ ಸ್ಥಳದಲ್ಲೇ ಚೆಕ್ ಮೂಲಕ ಪರಿಹಾರ ನೀಡಲು ಸಮಸ್ಯೆ ಏನು? ಹಾನಿಗೆ ಒಳಗಾದವರನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. ರೈತನ ಮಗನಾಗಿ, ರೈತನಾಗಿ, ಇಂಧನ ಸಚಿವನಾಗಿ, ಜಲಸಂಪನ್ಮೂಲ ಸಚಿವನಾಗಿ ಮಳೆಯ ಅವಶ್ಯಕತೆ ಎಷ್ಟಿದೆ ಎಂಬುದು ನನಗೆ ಅರಿವಿದೆ. ಹೀಗಾಗಿ ಮಳೆ ಬರಬಾರದು ಎಂದು ಹೇಳುವುದಿಲ್ಲ. ಇಷ್ಟು ಮಳೆ ಬಂದು ಪ್ರವಾಹದ ಸ್ಥಿತಿ ನಿರ್ಮಾಣವಾದ ನಂತರ ಎಲ್ಲಾ ನೀರು ಸಮುದ್ರ ಸೇರುತ್ತಿದೆ. ಈ ನೀರನ್ನು ತಡೆಹಿಡಿದು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಮಾಡಿದೆವು ಎಂದರು.

ರೈತರ ಪಂಪ್‌ಸೆಟ್‌ಗಾಗಿ ನಮ್ಮ ಸರ್ಕಾರ 12 ರಿಂದ 15 ಸಾವಿರ ಕೋಟಿ ನೀಡಿತ್ತು. ಸರ್ಕಾರ ವಿದ್ಯುತ್ ಕಂಪನಿಗಳಿಂದ ಕರೆಂಟ್ ಖರೀದಿ ಮಾಡಿ ಅದನ್ನು ಕಡಿಮೆ ಬೆಲೆಗೆ ರೈತರಿಗೆ ನೀಡುತ್ತದೆ. ಅಣೆಕಟ್ಟುಗಳು ತುಂಬಿದಾಗ ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ದಿನ ಮಳೆ ಹೆಚ್ಚಾಗಿ ಸುರಿದರೆ ರೈತರ ಪಂಪ್‌ಸೆಟ್ ಆನ್ ಮಾಡದೆ, ಜನ ಎಸಿ ಬಳಸದೆ ಇದ್ದರೆ ಹಾಗೂ ಇತರ ಮಾರ್ಗಗಳಿಂದ ಸರ್ಕಾರದ ಬೊಕ್ಕಸಕ್ಕೆ 1 ಸಾವಿರ ಕೋಟಿ ರೂ. ಉಳಿಯುತ್ತದೆ. ಹೀಗಾಗಿ ಮಳೆಯಿಂದ ಈ ಎಲ್ಲಾ ಲಾಭದಾಯಕ ಅಂಶಗಳು ಇವೆ. ಆದರೆ ನೋವಿನ ಸಂಗತಿ ಎಂದರೆ ಅತಿಯಾದ ಮಳೆಗೆ ಆಸ್ತಿಪಾಸ್ತಿಗಳು ನಷ್ಟವಾಗುತ್ತಿವೆ. ಹೀಗಾಗಿ ಸರ್ಕಾರ ಸಂತ್ರಸ್ತರ ನೆರವಿಗೆ ನಿಲ್ಲಬೇಕು. ತಗ್ಗು ಪ್ರದೇಶದಲ್ಲಿ ಇರುವ ಜನರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Rain News | ಬೆಂಗಳೂರು-ಮೈಸೂರು ಹೆದ್ದಾರಿ ಕಾಲುವೆಗಳು ಮುಚ್ಚಿದ್ದಕ್ಕೆ ಪ್ರವಾಹ; ಸಿಎಂ ಬೊಮ್ಮಾಯಿ

Exit mobile version