Site icon Vistara News

Fire Accident : ಬೆಂಕಿ ಆರಿಸಲು ಹೋಗಿ ಸುಟ್ಟು ಕರಕಲಾದ ರೈತ

Farmer dies after trying to douse fire in farm

ಹಾಸನ: ಬೆಂಕಿ ಆರಿಸಲು ಹೋದ ರೈತ ಬೆಂಕಿಗಾಹುತಿಯಾದ ದಾರುಣ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದಲ್ಲಿ ನಡೆದಿದೆ. ಕೃಷ್ಣೇಗೌಡ (62) ಮೃತ ದುರ್ದೈವಿ.

ಮಂಗಳವಾರ ಸಂಜೆ ಕೃಷ್ಣೇಗೌಡ ತಮ್ಮ ಜಮೀನಿಗೆ ತೆರಳಿದ್ದಳು. ಈ ವೇಳೆ ಜಮೀನಿನ ಬದುವಿನಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿತ್ತು. ತೋಟಕ್ಕೆಲ್ಲಾ ಬೆಂಕಿ ವ್ಯಾಪಿಸುತ್ತದೆ ಎಂದು ಆತಂಕಗೊಂಡ ಕೃಷ್ಣೇಗೌಡರು ಬೆಂಕಿ ನಂದಿಸಲು ಹೋಗಿದ್ದರು.

ಜೋರಾಗಿ ಉರಿಯುತ್ತಿದ್ದ ಬೆಂಕಿಗೆ ಸಿಲುಕಿ ಕೃಷ್ಣೇಗೌಡರು ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಗ್ರಾಮಸ್ಥರು ಗಾಯಾಳುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೃಷ್ಣೇಗೌಡರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Fraud Case : ಬಾಳು ಕೊಡುವುದಾಗಿ ನಂಬಿಸಿ ಹಣ ಲೂಟಿ; ತಮಟೆ ಹಿಡಿದು ನೊಂದ ಮಹಿಳೆಯ ಧರಣಿ

ಅನಿಲ ಸೋರಿಕೆಯಿಂದ ಬೆಂಕಿ; ಅಡುಗೆ ಮನೆಯಲ್ಲೇ ಸುಟ್ಟು ಕರಕಲಾದ ಮಹಿಳೆ

ಧಾರವಾಡ: ಅಡುಗೆ ಮನೆಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ (Gas leakage from cylinder) ಮನೆಗೆ ಬೆಂಕಿ ಹತ್ತಿಕೊಂಡು (Fire Accident at House) ಆ ಬೆಂಕಿಯಲ್ಲಿ ಮಹಿಳೆಯೊಬ್ಬರು ದಹಿಸಿ (Woman Burnt Alive) ಹೋದ ಭೀಕರ ಘಟನೆ ಧಾರವಾಡ (Dharwad News) ತಾಲೂಕಿನ ಕಲ್ಲೆ ಗ್ರಾಮದಲ್ಲಿ ನಡೆದಿದೆ.

ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಈ ಮನೆಯ ಅಡುಗೆ ಮನೆಯಲ್ಲಿ ಇದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಗ್ಯಾಸ್‌ ಸ್ಟವ್‌ನಿಂದ ಬೆಂಕಿ ಹತ್ತಿಕೊಂಡಿತು. ಆಗ ಅಡುಗೆ ಮನೆಯಲ್ಲಿದ್ದ ಮಹಾದೇವಿ ಒಗೆನ್ನವರ(28) ಅವರಿಗೆ ಬೆಂಕಿ ಹತ್ತಿಕೊಂಡಿತು. ಬೆಳಗ್ಗೆ ಬೆಳಗ್ಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಅವರಿಗೆ ತುಂಬಾ ಸುಟ್ಟ ಗಾಯಗಳಾದವು.

ಈ ನಡುವೆ, ಆಕೆಯನ್ನು ರಕ್ಷಿಸಲು ಇನ್ನೂ ಕೆಲವು ಮಹಿಳೆಯರು ಮುಂದಾಗಿದ್ದು, ಅವರಿಗೂ ಸುಟ್ಟ ಗಾಯಗಳಾಗಿವೆ. ಮಹಾದೇವಿ ಸೇರಿದಂತೆ ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾದೇವಿ ಅವರು ಮೃತಪಟ್ಟರೆ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ಆರಿಸುವಲ್ಲಿ ನೆರವಾದರು.

ಚಾರ್ಜ್‌ ಹಾಕಿದ್ದ ವೇಳೆ ಶಾರ್ಟ್‌ ಸರ್ಕ್ಯೂಟ್; ಹೊತ್ತಿ ಉರಿದ ವಾಹನಗಳು

ಬೇಸಿಗೆ ಶುರುವಾಗುತ್ತಿದ್ದಂತೆ ಅಗ್ನಿ ಅವಘಡಗಳು ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ಬೈಕ್‌ಗೆ ಚಾರ್ಜ್ ಹಾಕಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ನಂತರೆ ಪಕ್ಕದಲ್ಲೇ ಇದ್ದ ಮತ್ತೊಂದು ಬೈಕ್, ಕಾರಿಗೂ ಬೆಂಕಿ ಆವರಿಸಿ ಭಸ್ಮವಾಗಿದೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಘಟನೆ ನಡೆದಿದೆ. ಗುಂಡಪ್ಪ ಎಂಬುವವರಿಗೆ ಸೇರಿದ ವಾಹನ ಸುಟ್ಟು ಕರಕಲಾಗಿದೆ. ಬೆಂಕಿಯು ಒಮ್ಮೆಲೆ ಆವರಿಸಿದ ಕಾರಣಕ್ಕೆ ಮನೆಗೂ ಹಾನಿಯಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version