Site icon Vistara News

Brand Bangalore : ಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು; ಕಸ ಡಂಪಿಂಗ್‌ಗೆ ಎಚ್‌ಡಿಕೆ ಕೆಂಡ

DK Shivakumar and HD Kumaraswamy

ಬೆಂಗಳೂರು: ರಾಮನಗರ ಜಿಲ್ಲೆ ಸೇರಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಾಜಧಾನಿಯ ಕಸ (Bangalore garbage) ತಂದು ಸುರಿಯುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಕಿಡಿಕಾರಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು (Brand Bangalore) ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರ್ಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ‌ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ (Social Media X) ಪೋಸ್ಟ್‌ ಮಾಡಿರುವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಸಿಕ್ಕಸಿಕ್ಕ ಕಡೆ ಬಾಯಿ ಹಾಕುತ್ತಿರುವ ‘ಪರ್ಸಂಟೇಜ್ ಪಟಾಲಂ’ ಈಗ ಕಸಕ್ಕೂ ಬಾಯಿ ಹಾಕಿದೆ! ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ!! ಅದರ ಒಳಗುಟ್ಟು ರಟ್ಟಾಗಿದೆ!! ‘ಬ್ರ್ಯಾಂಡ್’ ಹೆಸರಿನಲ್ಲಿ ಕೊಳ್ಳೆ ಹೊಡೆಯಲು, ಕಂಡ ಕಂಡ ಕಡೆ ಬೇಲಿ ಹಾಕಲು ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಕಸದ ಡಂಪಿಂಗ್ ಯಾರ್ಡ್‌ಗಳನ್ನು (Garbage dumping yard) ಸೃಷ್ಟಿ ಮಾಡುತ್ತಿರುವುದು ದಿಟ. ದಿನವೊಂದಕ್ಕೆ 1,630 ಟನ್ ಕಸ ಸುರಿದರೆ ಅಲ್ಲಿನ ಜನರ ಪಾಡೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿನ ದಿಬ್ಬ ನಿರ್ಮಿಸಲು ಹುನ್ನಾರ

ಮಂಡೂರು ಜನ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಯಶವಂತಪುರ ಕ್ಷೇತ್ರದ ಜನ ಈ ನರಕದಲ್ಲೇ ಬೇಯುತ್ತಿದ್ದಾರೆ. ದೊಡ್ಡಬಳ್ಳಾಪುರದ ಜನರೂ ಕಸದ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ರಾಮನಗರದ ಸರದಿ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳನ್ನು ʼಕಸದ ತೊಟ್ಟಿʼಗಳನ್ನಾಗಿ ಮಾಡಿ ʼಸಾವಿನ ದಿಬ್ಬʼಗಳನ್ನು ನಿರ್ಮಿಸಲು ʼಬ್ರ್ಯಾಂಡ್ ಬೆಂಗಳೂರುʼ ಹೆಸರಿನಲ್ಲಿ ಹುನ್ನಾರ ಹೂಡಲಾಗಿದೆ. ಇದು ಘೋರ ಅಕ್ಷಮ್ಯ ಹಾಗೂ ರಾಜಧಾನಿಯ ಆಸುಪಾಸಿನಲ್ಲಿ ಈಗಾಗಲೇ ಕೆಟ್ಟಿರುವ ಪರಿಸರವನ್ನು ಮತ್ತಷ್ಟು ಹಾಳು ಮಾಡುವ ದುಷ್ಟ ತಂತ್ರವಷ್ಟೇ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ದೂರಿದ್ದಾರೆ.

ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳು ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಸಮೃದ್ಧವಾಗಿವೆ. ಅಲ್ಲಿನ ಪರಿಸರ, ಜೀವ ವೈವಿಧ್ಯಕ್ಕೆ ಹಾನಿ ಮಾಡಿ, ಜನಜೀವನವನ್ನು ಸರ್ವನಾಶ ಮಾಡುವುದು ಒಂದೆಡೆಯಾದರೆ, ಹೊಸ ಡಂಪಿಂಗ್ ಯಾರ್ಡ್‌ಗಳ ಮೂಲಕ ಕೋಟಿಗಟ್ಟಲೇ ಹಣವನ್ನು ಜೇಬಿಗೆ ಡಂಪ್ ಮಾಡಿಕೊಳ್ಳುವ ಖತರ್ನಾಕ್ ಐಡಿಯಾ ಇನ್ನೊಂದೆಡೆ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಅಂತರ್ಜಲವೂ ಕಲುಷಿತ

ಜಗತ್ತಿನಲ್ಲಿಯೇ ಉತ್ಕೃಷ್ಟ ಮಾವು, ರೇಷ್ಮೆ, ಹಣ್ಣು, ತರಕಾರಿ ಬೆಳೆಯುತ್ತಿರುವ ರಾಮನಗರ, ಬಿಡದಿ ಬಳಿ ನೂರು ಎಕರೆ ಪ್ರದೇಶದಲ್ಲಿ ಕಸ ಸುರಿಯಲು ಉಪ ಮುಖ್ಯಮಂತ್ರಿಗಳ ದೊಡ್ಡ ಹುನ್ನಾರದ ಒಳ ಉದ್ದೇಶ ಸ್ಪಷ್ಟ. ಈಗಾಗಲೇ ವೃಷಭಾವತಿ ಸೇರಿ ರಾಮನಗರ ಜಿಲ್ಲೆಯ ಜಲಮೂಲಗಳು ಪೂರ್ಣ ಹಾಳಾಗಿ ಅಂತರ್ಜಲವೂ ಕಲುಷಿತವಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.‌

ಇದನ್ನೂ ಓದಿ: Mysore dasara : 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಹಂಸಲೇಖರಿಂದ ಅದ್ಧೂರಿ ಚಾಲನೆ

ಜನರು ಬೀದಿಗೆ ಇಳಿದಾರು!

ನೂರು ಎಕರೆ ಸರ್ಕಾರಿ ಭೂಮಿಯನ್ನು ಅನಾಮತ್ತಾಗಿ ಎಗರಿಸಿಬಿಡುವ ರಿಯಲ್ ಎಸ್ಟೇಟ್ ಬ್ರ್ಯಾಂಡೆಡ್ ಪರಿಕಲ್ಪನೆ ಇದಲ್ಲದೆ ಮತ್ತೇನು? ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿಯ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಕಾಂಗ್ರೆಸ್ ಸರ್ಕಾರವು ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Exit mobile version